ಹಿಮಾಚಲ ಪ್ರದೇಶವು ಸುಂದರವಾದ ಗುಡ್ಡಗಾಡುಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ನೈಸರ್ಗಿಕ ಅದ್ಭುತಗಳು, ಶ್ರೀಮಂತ ಸಂಸ್ಕೃತಿ, ಸುಂದರವಾದ ಮನೆಗಳು, ಪ್ರಾಚೀನ ರಚನೆಗಳು ಹೀಗೆ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಇಂದು ನಾವು ನಿಮಗೆ ಧಾರ್ಮಿಕ ಮಹತ್ವವನ್ನು ಹೊಂದಿರುವ ಕುಲು ಜಿಲ್ಲೆಯ ವಿಶಿಷ್ಟ ಮತ್ತು ನಿಗೂಢ ದೇವಾಲಯದ ಕುರಿತು ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳಲಿದ್ದೇವೆ. ಈ ದೇವಾಲಯವನ್ನು ಬಿಜಲಿ ಮಹಾದೇವ್ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಕುಲು ಕಣಿವೆಯಲ್ಲಿರುವ ಕಾಶ್ವರಿ ಎಂಬ ಸುಂದರ ಹಳ್ಳಿಯಲ್ಲಿದೆ. ಇದು 2460 ಮೀಟರ್ ಎತ್ತರದಲ್ಲಿದೆ.
ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದು, ಇದು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ ಅನೇಕ ಅದ್ಭುತವಾದ ಶಿವ ದೇವಾಲಯಗಳಿವೆ. ಅವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಬಿಜಲಿ ಮಹಾದೇವ್ ದೇವಾಲಯವು ಇಂತಹ ಒಂದು ಪವಿತ್ರ ದೇವಸ್ಥಾನಾಗಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಸಿಡಿಲು ಬಡಿಯುತ್ತದೆ. ಇದರ ಹಿಂದಿನ ರಹಸ್ಯವನ್ನು ಜನರು ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಲ್ಲಿ ದೇವಸ್ಥಾನದ ಕುರಿತು ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಸಿಡಿಲು ಬಡಿತಕ್ಕೆ ಒಳಗಾಗುವ ಶಿವಲಿಂಗ
ಬಿಜಿಲಿ ಮಹಾದೇವ್ ದೇವಾಲಯವು ಭಾರತದಲ್ಲಿ ಪ್ರಾಮುಖ್ಯತೆಯನ್ನು ಪಡೆಯಲು ಕಾರಣ ದೇವಾಲಯದ ಒಳಗಿರುವ ಪವಿತ್ರ ಶಿವಲಿಂಗ. ಮೂಲಗಳ ಪ್ರಕಾರ, ದೇಶದ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದಾದ ಬಿಜಲಿ ಮಹಾದೇವ್ ದೇವಾಲಯಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿದು ಶಿವಲಿಂಗ ಒಡೆಯುತ್ತದೆ ಎಂದು ನಂಬಲಾಗಿದೆ. ಈ ಘಟನೆಯೂ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದ್ದು, ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಬಿಜಲಿ ಮಹಾದೇವನ ಮೇಲೆ ಸಿಡಿಲು ಏಕೆ ಬೀಳುತ್ತದೆ ಎಂಬುದು ಇಂದಿಗೂ ನಿಗೂಢವಾಗಿದೆ.
ಅಂದಹಾಗೆ ಈ ಸಿಡಿಲಿನ ಘಟನೆಯಿಂದಾಗಿ, ಶಿವಲಿಂಗವು ತುಂಡು ತುಂಡಾಗುತ್ತದೆ. ದೇವಾಲಯದ ಅರ್ಚಕರು ಪ್ರತಿಯೊಂದು ತುಂಡುಗಳನ್ನು ಸಂಗ್ರಹಿಸಿ ನಾಜ್, ಬೇಳೆ ಹಿಟ್ಟು ಮತ್ತು ಸ್ವಲ್ಪ ಉಪ್ಪುರಹಿತ ಬೆಣ್ಣೆಯಿಂದ ಮಾಡಿದ ಪೇಸ್ಟ್ ಅನ್ನು ಬಳಸಿ ಜೋಡಿಸುತ್ತಾರೆ ಎಂದು ನಂಬಲಾಗಿದೆ. ಕೆಲವು ತಿಂಗಳ ನಂತರ ಶಿವಲಿಂಗವು ಮೊದಲಿನಂತೆಯೇ ಕಾಣಲು ಪ್ರಾರಂಭಿಸುತ್ತದೆ.
ಬಿಜಿಲಿ ಮಹಾದೇವನ ಕಥೆ
ಒಮ್ಮೆ ಕುಲು ಕಣಿವೆಯಲ್ಲಿ ಕುಲಂತಕ ಎಂಬ ರಾಕ್ಷಸನು ಸಾವಿರ ವರ್ಷಗಳ ಕಾಲದಿಂದ ಇಲ್ಲಿ ವಾಸಿಸುತ್ತಿದ್ದನೆಂದು ನಂಬಲಾಗಿದೆ. ಈ ಡ್ರ್ಯಾಗನ್ ತರಹದ ದೈತ್ಯ, ಬಿಯಾಸ್ ನದಿಯ ಹರಿವನ್ನು ನಿಲ್ಲಿಸಿ ಕಣಿವೆಯನ್ನು ಮುಳುಗಿಸಲು ಪ್ರಯತ್ನಿಸಿದಾಗ, ಶಿವನು ತನ್ನ ತ್ರಿಶೂಲದಿಂದ ಅವನನ್ನು ಕೊಂದನು.
ಶಿವನಿಂದ ಕೊಲ್ಲಲ್ಪಟ್ಟ ನಂತರ ಕುಲಂತಕನ ದೇಹವು ಪರ್ವತವಾಗಿ ಮಾರ್ಪಟ್ಟಿತು ಎಂದು ನಂಬಲಾಗಿದೆ. ಅದರ ನಂತರ ಭಗವಾನ್ ಶಿವನು ಇಂದ್ರ ದೇವನಿಗೆ ಪ್ರತಿ 12 ವರ್ಷಗಳ ನಂತರ ಈ ರಾಕ್ಷಸ-ಸದೃಶ ಪರ್ವತದ ಮೇಲೆ ಆಕಾಶದ ಮಿಂಚನ್ನು ಬೀಳಿಸಲು ಆದೇಶಿಸಿದನು. ಅಂದಿನಿಂದ ಇಂದಿನವರೆಗೆ ಪ್ರತಿ 12 ವರ್ಷಗಳಿಗೊಮ್ಮೆ ಈ ಅದ್ಭುತ ಘಟನೆ ನಡೆಯುತ್ತಿದೆಯಂತೆ.
ಮಖನ್ ಮಹಾದೇವ
ಪ್ರತಿ 12 ವರ್ಷಗಳಿಗೊಮ್ಮೆ ಬಿಜಿಲಿ ಮಹಾದೇವ ದೇವಸ್ಥಾನದಲ್ಲಿ ಸಿಡಿಲು ಬಡಿದ ನಂತರ ಶಿವಲಿಂಗ ಒಡೆಯುತ್ತದೆ. ಆಗ ಅಲ್ಲಿ ಶಿವಭಕ್ತರು ಯಾರನ್ನು ಪೂಜಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ವಾಸ್ತವವಾಗಿ, ಶಿವ ಭಕ್ತರು ಅದೇ ಶಿವಲಿಂಗವನ್ನು ಪೂಜಿಸುತ್ತಾರೆ, ಶಿವಲಿಂಗ ಒಡೆದ ನಂತರ, ದೇವಾಲಯದ ಅರ್ಚಕರು ಅದನ್ನು ಮಜ್ಜಿಗೆಯೊಂದಿಗೆ ಜೋಡಿಸಿ ಅದನ್ನು ಪುನಃ ಸ್ಥಾಪಿಸುತ್ತಾರೆ. ಬೆಣ್ಣೆಯನ್ನು ಸೇರಿಸಿ ಪುನಃ ಪ್ರತಿಷ್ಠಾಪಿಸುವುದರಿಂದ ಸ್ಥಳೀಯರು ಇದನ್ನು ಮಖನ್ ಮಹಾದೇವ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ದೈವಿಕ ಆಶೀರ್ವಾದ
ಶಿವಲಿಂಗದ ಮೇಲೆ ಸಿಡಿಲು ಏಕೆ ಬಡಿಯುತ್ತದೆ ಎಂಬುದಕ್ಕೆ ವಿವಿಧ ಮೂಲಗಳು ವಿಭಿನ್ನ ನಂಬಿಕೆಗಳನ್ನು ಹೊಂದಿವೆ. ಮಿಂಚಿನ ಹೊಡೆತವು ಸಂಪೂರ್ಣ ದೈವಿಕ ಅನುಗ್ರಹವಾಗಿದೆ ಎಂದು ಸ್ಥಳೀಯರು ನಂಬುತ್ತಾರೆ. ಹಾಗೆಯೇ ದೇವರು ಎಲ್ಲಾ ರೀತಿಯ ದುಷ್ಟರಿಂದ ನಿವಾಸಿಗಳನ್ನು ರಕ್ಷಿಸಲು ಬಯಸುತ್ತಾನೆ ಎಂದು ನಂಬಿದ್ದಾರೆ. ಮಿಂಚು ಅಲೌಕಿಕ ಶಕ್ತಿಯನ್ನು ಹೊಂದಿರುವ ದೇವತೆಯ ರೂಪವಾಗಿದೆ ಎಂದು ಇತರರು ನಂಬುತ್ತಾರೆ. ಬಿಜಲಿ ಮಹಾದೇವ ದೇವಾಲಯದ ಮೂಲ ಮತ್ತು ನಿಜವಾದ ಕಥೆ ಇನ್ನೂ ತಿಳಿದಿಲ್ಲ, ಆದರೆ ಮೇಲಿನ ನಂಬಿಕೆಗಳಿಂದಾಗಿ, ಇದು ಭಾರತದಲ್ಲಿ ಹೆಚ್ಚು ಪೂಜಿಸಲ್ಪಡುವ ದೇವಾಲಯಗಳಲ್ಲಿ ಒಂದಾಗಿದೆ.
ಅಚ್ಚರಿಯೆಂದರೆ, ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿರುವ ಶಿವಲಿಂಗವು ಸಿಡಿಲಿನ ಹೊಡೆತಕ್ಕೆ ಒಡೆಯುತ್ತದೆ. ಆದರೆ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಯಾವುದೇ ಹಾನಿಯಾಗುವುದಿಲ್ಲ. ಶಿವನು ವಿಷ ಕುಡಿದು ಪ್ರಾಣಿಗಳನ್ನು ಸಂರಕ್ಷಿಸಿ ನೀಲಕಂಠನಾದ ಹಾಗೆ ಇಲ್ಲಿಯೂ ಆಕಾಶದ ಮಿಂಚನ್ನು ತನ್ನ ಮೇಲೆ ಹೊತ್ತುಕೊಂಡು ಬಿಜಿಲಿ ಮಹಾದೇವನ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೆ ಎಂಬುದು ಜನರ ನಂಬಿಕೆ.
ದೇವಸ್ಥಾನಕ್ಕೆ ಹೋಗುವುದು ಹೇಗೆ?
ಈ ದೇವಾಲಯವು ಕುಲುವಿನಿಂದ ಸುಮಾರು 20 ಕಿಮೀ ದೂರದಲ್ಲಿದ್ದು, 3 ಕಿಮೀ ಟ್ರೆಕ್ಕಿಂಗ್ ಮೂಲಕ ದೇವಸ್ಥಾನವನ್ನು ತಲುಪಬಹುದು. ಈ ಟ್ರೆಕ್ಕಿಂಗ್ ಪ್ರವಾಸಿಗರಿಗೆ ತುಂಬಾ ಖುಷಿ ಕೊಡುತ್ತದೆ. ಕಣಿವೆಗಳು ಮತ್ತು ನದಿಗಳ ಕೆಲವು ಸುಂದರವಾದ ನೋಟಗಳನ್ನು ಆನಂದಿಸುವವರಿಗೆ ಈ ದೇವಾಲಯಕ್ಕೆ ಹೋಗುವ ಸ್ಥಳವು ಅತ್ಯುತ್ತಮವಾಗಿದೆ.
ಪೈನ್ ಮರಗಳಿಂದ ಆವೃತವಾದ 3 ಕಿ.ಮೀ ಉದ್ದದ ಹಾದಿಯ ಮೂಲಕ ಸಾಗಿದರೆ ಬಿಜಿಲಿ ಮಹಾದೇವ್ ದೇವಸ್ಥಾನ ತಲುಪಬಹುದು. ಧಾರ್ಮಿಕ ಮತ್ತು ಸಾಹಸಿ ಪ್ರಿಯ ಜನರು ಸಾಮಾನ್ಯವಾಗಿ ಕುಲುವಿನಿಂದ ಚಾರಣ ಮಾಡಲು ಬಯಸುತ್ತಾರೆ ಮತ್ತು ಆಹ್ಲಾದಕರ ವಾತಾವರಣವನ್ನು ಆನಂದಿಸುತ್ತಾರೆ.
ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ
ಪವಿತ್ರ ಬಿಜಿಲಿ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಲು ಮಾರ್ಚ್ ನಿಂದ ಸೆಪ್ಟೆಂಬರ್ ಸೂಕ್ತ. ಈ ಸಮಯದಲ್ಲಿ ಆಹ್ಲಾದಕರ ಹವಾಮಾನವಿರುತ್ತದೆ. ಚಳಿಗಾಲದಲ್ಲಿ ಕುಲು ಹಿಮದಿಂದ ಆವೃತವಾಗುತ್ತದೆ. ಹಾಗೆಯೇ ಆ ಸಮಯದಲ್ಲಿ ನಿರಂತರ ಮಳೆಯೂ ಕಂಡುಬರುತ್ತದೆ. ಆದರೆ ಮಹಾಶಿವರಾತ್ರಿಯ ಸಮಯದಲ್ಲಿ ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಿರುವುದರಿಂದ ಭೇಟಿ ನೀಡಲು ಶಿಫಾರಸು ಮಾಡಲಾಗುತ್ತದೆ.