ಒಂದಕ್ಕಿಂತ ಒಂದು ಎತ್ತರ ಇರುವ ಗುಡ್ಡಗಳ ಸಾಲು, ಸುತ್ತಲೂ ದಟ್ಟ ಹಸಿರು ವನ, ಕಣ್ ತಿರುಗುವಂತಹ ಕಣಿವೆಗಳು... ನಿಜಕ್ಕೂ ಇದೊಂದು ಪ್ರಕೃತಿಯ ಸ್ವರ್ಗ ತಾಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬರುವ ಈ ತಾಣ ಎಲೆ ಮರೆಯ ಕಾಯಂತೆ ಇದೆ. ಹೆಚ್ಚು ಜನ ಪರಿಚಯ ವಿರದ ಈ ಬೆಟ್ಟದಲ್ಲಿ ಸೂರ್ಯಾಸ್ತದ ಸೌಂದರ್ಯವನ್ನು ನೋಡಲೇ ಬೇಕು.
ಶಿರಸಿಯಿಂದ 30 ಕಿ.ಮೀ. ದೂರದಲ್ಲಿರುವ ಈ ಗುಡ್ಡದ ಆರಂಭದಲ್ಲೇ ವಾಹನ ನಿಲುಗಡೆ ಮಾಡಬೇಕು. ನಂತರ ಬೆಟ್ಟದ ತುದಿಯವರೆಗೂ ನಡೆದೇ ಸಾಗಬೇಕು. ಗುಡ್ಡದ ತುದಿಯಲ್ಲಿ ನಿಂತರೆ ಬೀಸುವ ತಂಪಾದ ಗಾಳಿ ನಮ್ಮೆಲ್ಲಾ ಮಾನಸಿಕ ಒತ್ತಡಗಳನ್ನು ಹಾಗೇ ಕೊಂಡೊಯ್ಯುತ್ತದೆ. ಈ ತುದಿಯಲ್ಲಿ ನಿಂತರೆ ಸುಮಾರು 35 ಕ್ಕಿಂತಲೂ ಹೆಚ್ಚು ಬೆಟ್ಟಗಳು ಒಂದರ ಹಿಂದೆ ಒಂದರಂತೆ ಸಾಲಲ್ಲಿ ನಿಂತಿರುವ ಹಾಗೆ ಕಾಣುತ್ತವೆ.

PC: flickr.com
ಈ ಕಣಿವೆಗಳ ಮಧ್ಯೆ ಹಾವಿನಂತೆ ಹರಿದು ಬರುವ ಅಘನಾಶಿನಿ ನದಿಯ ದೃಶ್ಯ ನಯನ ಮನೋಹರ. ಸೂರ್ಯಾಸ್ತದ ಸಂದರ್ಭದಲ್ಲಿ ಹಸಿರು ಗಿಡ-ಮರಗಳೆಲ್ಲಾ ಒಮ್ಮೆಲೇ ಕೇಸರಿ ಬಣ್ಣಕ್ಕೆ ತಿರುಗಿದಂತೆ ಶೋಭಿಸುತ್ತವೆ. ಇಲ್ಲಿಯ ಈ ಸೊಬಗು ಸುಂದರ ಸೂರ್ಯಾಸ್ತದ ತಾಣಗಳಲ್ಲಿ ಒಂದು ಎಂದರೆ ತಪ್ಪಾಗಲಾದರು.

PC: flickr.com
ಇಲ್ಲಿಗೆ ಹೋಗಬೇಕೆಂದರೆ ಸ್ಥಳೀಯರನ್ನು ಒಮ್ಮೆ ವಿಚಾರಿಸಿಕೊಳ್ಳಬೇಕು. ಹೋಗುವಾಗ ಬಾಯಿ ಚಪ್ಪರಿಸಲು ಬೇಕಾದ ತಿಂಡಿ ಹಾಗೂ ನೀರನ್ನು ಕೊಂಡೊಯ್ಯಬೇಕು. ಗುಡ್ಡದ ತುದಿ ಬಹಳ ದೂರ ಇರುವುದರಿಂದ ಸಂಜೆ ಆರು ಘಂಟೆಯ ಒಳಗಾಗಿಯೇ ತುದಿಯಲ್ಲಿ ನಿಂತಿರಬೇಕು. ಇಲ್ಲವಾದರೆ ಸೂರ್ಯಾಸ್ತದ ದೃಶ್ಯ ನೋಡಲು ಸಾಧ್ಯವಿಲ್ಲ. ಇದು ನಗರದಿಂದ ಸ್ವಲ್ಪ ಒಳಪ್ರದೇಶದಲ್ಲಿ ಇರುವುದರಿಂದ ಸ್ವಂತ ವಾಹನದಲ್ಲಿ ಸಾಗುವುದು ಸೂಕ್ತ. ಹತ್ತಿರದ ಆಕರ್ಷಣೆಯೆಂದರೆ ಶಿರಸಿ ಮಾರಿಕಾಂಬ ದೇಗುಲ, ಬನವಾಸಿ ದೇಗುಲ, ಉಂಚಳ್ಳಿ ಜಲಪಾತ ಮತ್ತು ಬೆಣ್ಣೆ ಹೊಳೆ.


Click it and Unblock the Notifications
















