ದಕ್ಷಿಣ ಭಾರತದ ವಿಶಾಲ ರಾಜ್ಯವಾದ ಕರ್ನಾಟಕವು ಪ್ರವಾಸಿ ದೃಷ್ಟಿಯಿಂದ ನೋಡಿದಾಗ ಒಂದು ಸುಂದರ ರಾಜ್ಯವಾಗಿರುವುದರಲ್ಲಿ ಸಂಶಯವೆ ಇಲ್ಲ. ಎಲ್ಲ ರೀತಿಯ, ಎಲ್ಲ ವಿಭಾಗಗಳ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳು ಈ ರಾಜ್ಯದ ಎಲ್ಲ ಉದ್ದಗಲಗಳಲ್ಲೂ ಕಂಡುಬರುತ್ತವೆ.
ಇನ್ನೊಂದು ವಿಷಯವೆಂದರೆ, ಉತ್ತರ ಭಾರತಕ್ಕೆ ಹೋಲಿಸಿದಾಗ ದಕ್ಷಿಣ ಭಾರತವು ಸಾಕಷ್ಟು ವಾಸ್ತುಶೈಲಿ ಹಾಗೂ ಶಿಲ್ಪಕಲೆಯ ಶ್ರೀಮಂತಿಕೆಯನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯದ್ಭುತ ಶಿಲ್ಪಕಲೆಗಳಿರುವ ನೂರಾರು ಸ್ಮಾರಕ ರಚನೆಗಳಾಗಲಿ ಅಥವಾ ದೇವಾಲಯಗಳಾಗಲಿ ಕಂಡುಬರುತ್ತವೆ.
ಹಾಸನದ ಬೇಲೂರು, ಹಳೆಬೀಡುಗಳಾಗಲಿ ಅಥವಾ ಮೈಸೂರು ಬಳಿಯ ಸೋಮನಾಥಪುರವಾಗಲಿ ಇಲ್ಲವೆ ಹಂಪಿಯ ಅದ್ಭುತ ದೇವಾಲಯ ಸಂಕೀರ್ಣವಾಗಲಿ ಎಲ್ಲವೂ ತಮ್ಮ ಅದ್ವಿತೀಯ ಕಲಾತ್ಮಕತೆಯಿಂದ ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತವೆ. ಅಷ್ಟಾಗ್ಯೂ ಈ ದೇವಾಲಯಗಳು ಸಾವಿರ ಸಾವಿರ ವರ್ಷಗಳಷ್ಟು ಹಳೆಯವಾದವುಗಳೆಂದರೆ ಅಚ್ಚರಿಯಾಗದೆ ಇರಲಾರದು.
ದೈತ್ಯ ನಂದಿ ವಿಗ್ರಹಗಳು ಹಾಗೂ ಮಹಿಮೆ!
ಪ್ರಸ್ತುತ ಲೇಖನದಲ್ಲಿ ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯದ ಕುರಿತು ತಿಳಿಸಲಾಗಿದೆ. ಇದರ ಸೌಂದರ್ಯವನ್ನು ನೋಡುತ್ತಿದ್ದರೆ ಅಂದಿನ ಕಾಲದ ಶಿಲ್ಪಿಗಳಿಗೆ, ನಿರ್ಮಾಣಗಾರರಿಗೆ ಖಂಡಿತವಾಗಿಯೂ ಮನಃಪೂರ್ವಕವಾಗಿ ಧನ್ಯವಾದಗಳನ್ನು ಹೇಳಬೇಕೆನಿಸುತ್ತದೆ. ನೀವೆ ಊಹಿಸಿ, ಯಾವ ವೈಜ್ಞಾನಿಕ, ಆಧುನಿಕ ಪರಿಕರಗಳು ಹಾಗೂ ಸೌಲಭ್ಯಗಳಿಲ್ಲದೆಯೆ ಇಷ್ಟೊಂದು ಅದ್ಭುತ ಶಿಲ್ಪಕಲೆ ಹಾಗೂ ಸದೃಢವಾದ ರಚನೆ ಮಾಡಿದ್ದಾರೆ.
ಕ್ರೌಂಚಗಿರಿ ನಿಜವಾಗಿಯೂ ಇದೆಯಾ?
ಇದೊಂದು ಹಳೆಯ ದೇವಾಲಯ, ಬರಿ ಕೆತ್ತನೆಗಳು, ಶಿಲ್ಪಕಲೆಗಳು ಎಂದು ನಿರ್ಲಕ್ಷಿಸದಿರಿ. ನಮ್ಮ ನಾಡಿನ ಶ್ರೀಮಂತಿಕೆಯನ್ನು ಇಂದಿಗೂ ಸಾರುತ್ತಿರುವ ಅದ್ಭುತ ರಚನೆಗಳಾಗಿವೆ. ಇಂದು ಬದುಕುತ್ತಿರುವ ನಾವು ಮುಂದೊಂದು ದಿನ ಇರುವುದಿಲ್ಲ ಆದರೆ ಈ ರಚನೆಗಳು ಮಾತ್ರ ಇರುವಂತಿದ್ದು ನಮ್ಮ ಮುಂದಿನ ಪೀಳಿಗೆಯವರಿಗೂ ಸಹ ನಮ್ಮ ಶ್ರೀಮಂತಿಕೆ ಪರಿಚಯಿಸುವ ಉದ್ದೇಶದಿಂದ ಇವುಗಳನ್ನು ಸಂರಕ್ಷಿಸಬೇಕಾಗಿದೆ.
ಕಿಕ್ಕೇರಿ
ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ ಬ್ರಹ್ಮೇಶ್ವರ ದೇವಾಲಯವು ಒಂದೊಮ್ಮೆಯಾದರೂ ಕರ್ನಾಟಕದಲ್ಲಿ ನೋಡಲೇಬೇಕಾದ ಐತಿಹಾಸಿಕ ಪ್ರವಾಸಿ ಸ್ಥಳವಾಗಿದೆ. ಹಾಸನ ಜಿಲ್ಲೆಯ ಪ್ರಖ್ಯಾತ ತಾಣ ಶ್ರವಣಬೆಳಗೋಳದಿಂದ ಕಿಕೇರಿಯು ಕೇವಲ ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲೆ ಸ್ಥಿತವಿದೆ.
ಚಿತ್ರಕೃಪೆ: Bikashrd
ಇಲ್ಲಿಗೂ ಭೇಟಿ ನೀಡಿ
ಹಾಗಾಗಿ ಶ್ರವಣಬೆಳಗೋಳಕ್ಕೆ ಭೇಟಿ ನೀಡುವವರು ಅಥವಾ ಭೇಟಿ ನೀಡಲು ಯೋಜಿಸಿದ್ದಲ್ಲಿ ಕಿಕ್ಕೇರಿ ಭೇಟಿಯನ್ನೂ ಸಹ ನಿಮ್ಮ ಪ್ರವಾಸದಲ್ಲಿ ಸೇರಿಸಿಕೊಂಡರೆ ನಿಮಗಿನ್ನೂ ಸುಂದರ ಅನುಭವ ದೊರೆಯಬಹುದು. ಚಳಿಗಾಲದಲ್ಲಿ ಇಂತಹ ತಾಣಗಳಿಗೆ ಭೇಟಿ ನೀಡುವುದರ ಆನಂದವೆ ಬೇರೆ.
ಚಿತ್ರಕೃಪೆ: Bikashrd
ಇರುವ ತಾಣ
ಮಂಡ್ಯ ಜಿಲ್ಲೆಯ ಕಿಕ್ಕೇರಿಯು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಸ್ಥಳ. ಹೊಯ್ಸಳರ ಕಾಲಮಾನದ ಹಲವಾರು ಶಾಸನಗಳು ಇಲ್ಲಿ ದೊರೆತಿವೆ. ಕೆಲವು ಶಾಸನಗಳ ಪ್ರಕಾರ ಇಲ್ಲಿರುವ ಕೆಲ ದೇವಾಲಯ ಬ್ರಹ್ಮೇಶ್ವರ ದೇವಾಲಯಕ್ಕಿಂತಲೂ ಪುರಾತನವಾದುದೆಂದು ತಿಳಿದುಬರುತ್ತದೆ.
ಚಿತ್ರಕೃಪೆ: Bikashrd
ಬರಲು ಕಾರಣ
ಕಿಕ್ಕೇರಿಗೆ, ಕಿಕ್ಕೇರಿ ಎಂದು ಹೆಸರು ಬರಲು ಮೂಲ ಕಾರಣ ಇಲ್ಲಿ ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದ ಕಾಡು ಜನಾಂಗದ ನಾಯಕನಾದ ಕೀಕ ಎಂಬಾತನಿಂದ ಹೇಳಲಾಗುತ್ತದೆ. ನಂತರ ಕ್ರಮೇಣವಾಗಿ ಈ ಪ್ರದೇಶ ಹೊಯ್ಸಳರ ವಶವಾಯಿತು ಹಾಗೂ ಹೊಯ್ಸಳರು ತಮ್ಮ ಶೈಲಿಯ ದೇವಾಲಯಗಳನ್ನು ಇಲ್ಲಿ ನಿರ್ಮಿಸತೊಡಗಿದರು. ಕಿಕ್ಕೇರಿಯಮ್ಮ ಇಂದು ಈ ಗ್ರಾಮದ ಅಧಿದೇವತೆ.
ಚಿತ್ರಕೃಪೆ: Dineshkannambadi
ನಿರ್ಮಾಣ
ಹೊಯ್ಸಳರ ವಾಸ್ತುಶೈಲಿಯಲ್ಲಿ ಎರಡು ಮುಖ್ಯ ಗುಣ ಲಕ್ಷಣಗಳನ್ನು ಕಾಣಬಹುದು. ಒಂದು ಹೊಯ್ಸಳರು ದೇವಾಲಯವನ್ನು ಸಾಮಾನ್ಯವಾಗಿ ಕಟ್ಟೆ (ಜಗತಿ) ಯೊಂದನ್ನು ನಿರ್ಮಿಸಿ ಅದರ ಮೇಲೆ ದೇವಾಲಯ ನಿರ್ಮಾಣ ಮಾಡುತ್ತಿದ್ದರು.
ಚಿತ್ರಕೃಪೆ: Bikashrd
ಎರಡು ಅಂಶಗಳು
ಎರಡನೇಯದಾಗಿ ಹೊಯ್ಸಳರ ವಾಸ್ತುಶೈಲಿಯು ಸಾಕಷ್ಟು ಸುಂದರ ಹಾಗೂ ಸೂಕ್ಷ್ಮವಾದ ಕೆತ್ತನೆಗಳನ್ನು ಒಳಗೊಂಡಿರುತ್ತದೆ. ಇವೆರಡು ಅಂಶಗಳಲ್ಲಿ ಒಂದು ಅಂಶವನ್ನು ಮಾತ್ರ ಬ್ರಹ್ಮೇಶ್ವರ ದೇವಾಲಯದಲ್ಲಿ ಕಾಣಬಹುದಾಗಿದೆ. ಅಪವಾದ ಎಂಬಂತೆ ದೇವಾಲಯದ ನಿರ್ಮಾಣವು ಜಗತಿಯ ಮೇಲಿಲ್ಲದೆ ನೇರವಾಗಿ ಭೂಮಿಯಲ್ಲಿ ಅಡಿಪಾಯ ಹಾಕಿ ನಿರ್ಮಿಸಲಾಗಿದೆ.
ಚಿತ್ರಕೃಪೆ: Dineshkannambadi
ಅನನ್ಯ
ಹಾಗಾಗಿ ಹೊಯ್ಸಳ ಶೈಲಿಯಲ್ಲಿ ಇದನ್ನು ಒಂದು ವಿಶೇಷ ಅಥವಾ ಅನನ್ಯವಾದ ದೇವಾಲಯವೆಂದೆ ಹೇಳಬಹುದು. ಇದೊಂದು ಏಕಕೂಟಾಚಲ ದೇವಾಲಯವಾಗಿದೆ. ಅಂದರೆ ಒಂದೆ ಗೋಪುರವಿರುವ ದೇವಾಲಯ ರಚನೆಯಾಗಿದೆ.
ಚಿತ್ರಕೃಪೆ: Bikashrd
ಮಂಟಪಗಳು
ದೇವಾಲಯವು ನಂದಿ ಮಂಟಪ, ಗರ್ಭಗೃಹ, ಸುಖನಾಸಿ ಹಾಗೂ ನವಗೃಹ ಮಂಟಪಗಳನ್ನು ಒಳಗೊಂಡಿದ್ದು ಅದ್ಭುತವಾದ ಕೆತ್ತನೆಯುಳ್ಳ ಖಂಬಗಳಿಂದ ಕೂಡಿದೆ. ಅಲ್ಲದೆ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಸಾಕಷ್ಟು ಸೂಕ್ಷ್ಮತೆಗಳಿರುವುದನ್ನೂ ಸಹ ಗಮನಿಸಬಹುದಾಗಿದೆ.
ಚಿತ್ರಕೃಪೆ: Bikashrd
ಆಕರ್ಷಕ
ಈ ದೇವಾಲಯದ ಕೆತ್ತನೆಗಳಲ್ಲಿ ವಿಶೇಶವಾಗಿ ಗಮನಸೆಳೆಯುವ ಶಿಲ್ಪಕಲೆಗಳೆಂದರೆ ಸುಂದರ ಶಿಲಾ ಬಾಲಿಕೆಯರು. ಹೌದು ಬೇಲೂರಿನಲ್ಲಿ ಕಂಡುಬರುವಂತೆ ಇಲ್ಲಿಯೂ ಸಹ ಶಿಲಾ ಬಾಲಿಕೆಯರ ಶಿಲ್ಪಗಳನ್ನು ಬಃಅಳಷ್ಟು ಸೊಗಸಾಗಿ ಕೆತ್ತಲಾಗಿರುವುದನ್ನು ಕಾಣಬಹುದು.
ಚಿತ್ರಕೃಪೆ: Dineshkannambadi
ವಿಚಾರ
ಇಲ್ಲಿ ದೊರೆತಿರುವ ಶಾಸನಗಳ ಪ್ರಕಾರ ತಿಳಿದು ಬರುವ ವಿಚಾರವೆಂದರೆ, ಹನ್ನೆರಡನೇಯ ಶತಮಾನದಲ್ಲಿ ಅಂದರೆ 1171 ರಲ್ಲಿ ಹೊಯ್ಸಳ ದೊರೆ ಒಂದನೇಯ ನರಸಿಂಹನ ಆಡಳಿತವಿದ್ದ ಸಂದರ್ಭದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎಂದು.
ಚಿತ್ರಕೃಪೆ: Bikashrd
ಚೆನ್ನಮ್ಮ
ಆ ಸಮಯದಲ್ಲಿ ಪ್ರಸ್ತುತ ಕಿಕ್ಕೇರಿ ಪ್ರಾಂತದ ದಳವಾಯಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚೆನ್ನಮ್ಮ (ಬಮ್ಮಾರೆ ನಯಕಿತಿ) ನಾಯಕಿ ಈ ದೇವಾಲಯದ ಹಿಂದಿರುವ ನಿರ್ಮಾತೃ. ಸ್ಥಳ ಪುರಾಣದ ಪ್ರಕಾರ, ಆಕೆಗೆ ಬ್ರಹ್ಮ ದೇವರಿಗೆಂದು ಮುಡಿಪಾದ ದೇವಾಲಯವೊಂದನ್ನು ನಿರ್ಮಿಸುವ ಬಯಕೆಯಿತ್ತು.
ಚಿತ್ರಕೃಪೆ: Bikashrd
ಅಹಿತಕರ ಘಟನೆಗಳು
ತನ್ನ ಬಯಕೆಯಂತೆ ನಾಯಕಿಯು ತನ್ನ ಇಚ್ಛೆ ಪೂರೈಸಿಕೊಳ್ಳುವ ದೃಷ್ಟಿಯಿಂದ ಈ ದೇವಾಲಯದ ನಿರ್ಮಾಣಕ್ಕೆ ಕೈಹಾಕಿದಳು. ಕ್ರಮೇಣ ದೇವಾಲಯ ಕಟ್ಟಿದಂತೆ ಕೆಲವು ಅಪ್ರಿಯಕರ ಘಟನೆಗಳು ಜರುಗಿ ಆಸ್ಥಾನದ ಪಂಡಿತರು ಆಕೆಗೆ ಬ್ರಹ್ಮನನ್ನು ಯಾರೂ ಪೂಜಿಸದ ಕಾರಣ ಆ ದೇವಾಲಯ ನಿರ್ಮಾಣ ಮಾಡದಿದ್ದರೆ ಒಳಿತು ಎಂದು ಹೇಳಿದರು.
ಚಿತ್ರಕೃಪೆ: Bikashrd
ಶಿವನ ದರ್ಶನ
ಆದರೆ ನಾಯಕಿಗೆ ಬ್ರಹ್ಮ ಹೆಸರಿನಲ್ಲಿ ಸಾಕಷ್ಟು ಆಸಕ್ತಿಯಿತ್ತು. ಅದಕ್ಕಾಗಿ ಅವಳೆ ದೇವರನ್ನು ಪ್ರಾರ್ಥಿಸಿದಳು. ಒಂದೊಮ್ಮೆ ಕನಸಿನಲ್ಲಿ ಶಿವನು ಆಕೆಗೆ ದರ್ಶನ ನೀಡಿ ಆ ದೇವಾಲಯದಲ್ಲಿ ತನ್ನನ್ನು ಪ್ರತಿಷ್ಟಾಪಿಸಬೇಕೆಂದು ಹೇಳಿದನು.
ಚಿತ್ರಕೃಪೆ: Bikashrd
ಹೆಸರು ಬದಲಾವಣೆ
ಇದರಿಂದ ಸಂತಸಗೊಂಡ ನಾಯಕಿ ತಕ್ಷಣವೆ ತಾನು ಕಟ್ಟುತ್ತಿದ್ದ ದೇವಾಲಯವನ್ನು ಶಿವನಿಗೆ ಮುಡಿಪಾಗುವಂತೆ ಮಾಡಿದಳಲ್ಲದೆ ಶಿವನನ್ನೆ ಬ್ರಹ್ಮೇಶ್ವರನನ್ನಾಗಿ ಪ್ರತಿಷ್ಠಾಪಿಸಿದಳು. ಆ ರೀತಿಯಾಗಿ ಈ ದೇವಾಲಯವು ಬ್ರಹ್ಮೇಶ್ವರ ದೇವಾಲಯವಾಗಿ ಹೆಸರುವಾಸಿಯಾಯಿತು.
ಚಿತ್ರಕೃಪೆ: Bikashrd
ಎಷ್ಟು ದೂರ?
ಕಿಕ್ಕೇರಿಯು ಮಂಡ್ಯದಿಂದ 50 ಕಿ.ಮೀ, ಶ್ರವಣಬೆಳಗೋಳದಿಂದ 15 ಕಿ.ಮೀ, ಕೃಷ್ಣರಾಜಪೇಟೆಯಿಂದ 14 ಕಿ.ಮೀ ಹಾಗೂ ಬೆಂಗಳೂರಿನಿಂದ ಸುಮಾರು 170 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಬೆಂಗಳೂರಿನಿಂದ ಬಾಡಿಗೆ ಟ್ಯಾಕ್ಸಿಗಳ ಮೂಲಕವೂ ಕಿಕ್ಕೇರಿಗೆ ಭೇಟಿ ನೀಡಬಹುದಾಗಿದೆ.
ಚಿತ್ರಕೃಪೆ: Bikashrd