ಹೆಚ್ಚಿನವರು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿರುತ್ತೀರಿ. ಕೆಲವರು ಮಂಜುನಾಥನ ದರ್ಶನ ಪಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಂಜುನಾಥನ ದರ್ಶನ ಪಡೆಯಬೇಕೆಂಬ ಆಲೋಚನೆಯಲ್ಲಿರುತ್ತಾರೆ. ನೀವೂ ಕೂಡಾ ಧರ್ಮಸ್ಥಳಕ್ಕೆ ಹೋಗಬೇಕೆಂದಿದ್ದರೆ ಈ ಸಮಯ ಬೆಸ್ಟ್ ಎನ್ನಬಹುದು. ಯಾಕೆಂದರೆ ಈ ಬಾರಿ ಧರ್ಮಸ್ಥಳದಲ್ಲಿ ಬಾಹುಬಲಿಯ ಮಜ್ಜನ ನಡೆಯುತ್ತಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಮಜ್ಜನದಲ್ಲಿ ನೀವೂ ನಿಮ್ಮ ಫ್ಯಾಮಿಲಿ ಜೊತೆ ಪಾಲ್ಗೊಳ್ಳಬಹುದು. ಧರ್ಮಸ್ಥಳಕ್ಕೆ ಭೇಟಿ ನೀಡಲು ಇದಕ್ಕಿಂತ ಒಳ್ಳೆಯ ಸಮಯ ಬೇರೊಂದಿಲ್ಲ ಅಂತಾನೇ ಹೇಳಬಹುದು.
4ನೇ ಮಹಾ ಮಸ್ತಕಾಭೀಷೇಕ
ಧರ್ಮಸ್ಥಳವು 4ನೇ ಮಹಾ ಮಸ್ತಕಾಭೀಷೇಕಕ್ಕೆ ತಯಾರಾಗಿಗೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಫೆ.8 ರಿಂದ 18 ರವರೆಗೆ ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೇಲಿರುವ ಬಾಹುಬಲಿಯ ಮೂರ್ತಿಗೆ ಮಹಾಮಸ್ತಕಾಭೀಷೇಕ ಬಹಳ ಅದ್ದೂರಿಯಿಂದ ನಡೆಯಲಿದೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವವು ಈ ಬಾರಿ ೪ನೇ ಯ ಉತ್ಸವವಾಗಿದೆ. ಇದಕ್ಕೂ ಮೊದಲು1982 ಜ.25 ರಿಂದ ಫೆ.4ರವರೆಗೆ ಮೊತ್ತ ಮೊದಲ ಬಾರಿಗೆ ನಡೆಸಲಾಗಿತ್ತು. ಆ ನಂತರ 1995ರಲ್ಲಿ, ನಂತರ 2007ರಲ್ಲಿ ಇದೀಗ 2019ರಲ್ಲಿ ನಡೆಯುತ್ತಲಿದೆ.
39 ಅಡಿ ಎತ್ತರದ ಬಾಹುಬಲಿ ವಿಗ್ರಹ
ದೇವಸ್ಥಾನ ಪಟ್ಟಣ ಧರ್ಮಸ್ಥಳದಲ್ಲಿ ಮಂಜುನಾಥ ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ರತ್ನಗಿರಿ ಬೆಟ್ಟದ ಮೇಲೆ 39 ಅಡಿ ಎತ್ತರದಲ್ಲಿ ಬಾಹುಬಲಿಯ ಭವ್ಯವಾದ ಮೂರ್ತೀ ಇದೆ. ಇದನ್ನು 1973 ರಲ್ಲಿ ಪ್ರಸಿದ್ಧ ಶಿಲ್ಪಿ ರಂಜಲಾ ಗೋಪಾಲ್ಕೃಷ್ಣ ಶೆಣೈ ಅವರು ಶ್ರೀ ರತ್ನಾವರ್ಮ ಹೆಗ್ಡೆ ಅವರ ನೇತೃತ್ವದಲ್ಲಿ ಕೆತ್ತಿದರು. 1982 ರ ಫೆಬ್ರವರಿಯಲ್ಲಿ ರತ್ನಾಗಿರಿ ಬೆಟ್ಟದ ಮೇಲೆ ಡಾ. ವೀರೇಂದ್ರ ಹೆಗ್ಡೆ ಅವರು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು.
1008 ಕಲಶಗಳ ಮಜ್ಜನ
10 ದಿನಗಳ ಕಾಲ ನಡೆಯಲಿರುವ ಈ ಉತ್ಸವವದಲ್ಲಿ ಮೂರು ದಿನಗಳು ಮಸ್ತಕಾಭಿಷೇಕ ನಡೆಯಲಿದೆ. ಮೊದಲಿಗೆ ಬಾಹುಬಲಿಯ ಪಾದಕ್ಕೆ 24ಕಲಶ, 54 ಕಲಶ, 108 ಕಲಶ ಹಾಗೂ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ. ಫೆ. 16 ರಂದು ಬೆಳಗ್ಗೆ 8.45ಕ್ಕೆ 1008ಕಲಶಗಳ ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆ.17 ಹಾಗೂ 18 ರಂದು 1008 ಕಲಶಗಳ ಮಜ್ಜನ ನಡೆಯಲಿದೆ.
ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳಿವೆ
PC: veerendraheggade.in
274 ಮೆಟ್ಟಿಲುಗಳನ್ನು ಏರಿ ಬೆಟ್ಟದ ಮೇಲಿರುವ ಬಾಹುಬಲಿಯನ್ನು ತಲುಪಬಹುದು. ಇಲ್ಲವಾದಲ್ಲಿ ಸುಮಾರು 20 ನಿಮಿಷಗಳವರೆಗೆ ರಸ್ತೆಯ ಮೂಲಕ ಪ್ರಯಾಣ ಮಾಡಿ ಇಲ್ಲಿಗೆ ತಲುಪಬಹುದು. ಬೆಟ್ಟದ ತುದಿಯು ಬೆಳಗ್ಗೆ ಹಚ್ಚ ಹಸಿರಿನ ನೋಟವನ್ನು ನೀಡುತ್ತದೆ. ಈ ಪ್ರತಿಮೆಯನ್ನು ಭೇಟಿ ಮಾಡಲು ಪ್ರವಾಸಿಗರಿಗೆ ಉತ್ತಮ ಸಮಯವೆಂದರೆ ಬೆಳಗ್ಗೆ. ಬಿಸಿಲು ಕಡಿಮೆ ಇರುತ್ತದೆ. ಬೆಟ್ಟದ ಮೇಲೆ, ಯಾತ್ರಾರ್ಥಿಗಳಿಗೆ ಆಶ್ರಯ ಪಡೆಯಲು ಮತ್ತು ಕುಡಿಯುವ ನೀರಿನ ಸೌಲಭ್ಯಗಳು ಇವೆ.
ಬಾಹುಬಲಿಯ ಮಹಾಮಸ್ತಕಾಭಿಷೇಕ
PC: veerendraheggade.in
ಬಾಹುಬಲಿಯ ಮಹಾಮಸ್ತಕಾಭಿಷೇಕವು ಅನೇಕ ಜೈನ ಸನ್ಯಾಸಿಗಳನ್ನು ಮತ್ತು ದೇಶದಾದ್ಯಂತ ಭಕ್ತರನ್ನು ಒಟ್ಟುಗೂಡಿಸುವ ಒಂದು ಅದ್ಭುತ ಪ್ರದರ್ಶನವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುತ್ತಾರೆ. ಚಂದನ, ಶ್ರೀಗಂಧ, ಹಳದಿ, ಹಾಲು, ಕೇಸರಿ ಹೀಗೆ ವಿವಿಧ ಅಭಿಷೇಕಗಳನ್ನು ಬಾಹುಬಲಿಗೆ ಅರ್ಪಿಸಲಾಗುತ್ತದೆ
ಮೂರ್ತಿಯ ವಿಶೇಷತೆ ಏನು
PC: veerendraheggade.in
ಈ ಮೂರ್ತಿಯು 39 ಅಡಿ ಎತ್ತರವನ್ನು ಹೊಂದಿದೆ. ಇದರ ಮುಖ ಆರು ಅಡಿ ಎತ್ತರವಿದೆ, ಕಿವಿ 3.5 ಅಡಿ ಉದ್ದವಿದೆ, ಮೂಗು 1.10 ಅಡಿ ಉದ್ದವಿದೆ. ತೋಳುಗಳು 23.3 ಅಡಿ ಉದ್ದವಿದೆ. ಹೆಬ್ಬೆರಳು 1 ಅಡಿ ಉದ್ದವಿದೆ, ಪಾದ 14ಅಡಿ ಎತ್ತರವಿದೆ. ಎದೆಯ ಸುತ್ತಳತೆ 13.5ಅಡಿ ಉದ್ದ ಹಾಗೂ ಸೊಂಟದ ಸುತ್ತಳತೆ 19.5ಅಡಿ ಇದೆ.
ತಲುಪುವುದು ಹೇಗೆ?
ಧರ್ಮಸ್ಥಳಕ್ಕೆ ತೆರಳುವ ಪ್ರವಾಸಿಗರಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಮೊದಲಿಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ನೀವು ಧರ್ಮಸ್ಥಳವನ್ನು ತಲುಪಬಹುದು. ಇದು ಧರ್ಮಸ್ಥಳದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ವಿಮಾನಗಳು ದುಬೈ, ಅಬು ಧಾಬಿ ಮುಂತಾದ ಪ್ರಮುಖ ಮಧ್ಯ ಪ್ರಾಚ್ಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಜೊತೆಗೆ, ಮುಂಬೈ, ಬೆಂಗಳೂರು, ಗೋವಾ, ಕೊಚ್ಚಿ, ಕ್ಯಾಲಿಕಟ್ ಮತ್ತು ಇತರ ಪ್ರಮುಖ ಭಾರತೀಯ ಸ್ಥಳಗಳಿಂದ ಬರುವ ಪ್ರಯಾಣಿಕರಿಗೆ ಇದು ಸೂಕ್ತವಾಗಿದೆ.
ರೈಲು ಮೂಲಕ ತಲುಪುವುದು ಹೇಗೆ?
ಮಂಗಳೂರಿನ ರೈಲು ನಿಲ್ದಾಣ 74 ಕಿ.ಮೀ ದೂರದಲ್ಲಿರುವ ಧರ್ಮಸ್ಥಳಕ್ಕೆ ಸಮೀಪದ ರೈಲ್ವೆ ಜಂಕ್ಷನ್ ಆಗಿದೆ. ರೈಲ್ವೆ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಗಳು / ಕ್ಯಾಬ್ಗಳನ್ನು ಬಾಡಿಗೆಗೆ ಪಡೆದು ಮಂಗಳೂರಿನಿಂದ ಧರ್ಮಸ್ಥಳಕ್ಕೆ ತಲುಪಬಹುದು. ಬೆಂಗಳೂರಿನಿಂದ ಮಂಗಳೂರಿಗೆ ಕಣ್ಣೂರು ಎಕ್ಸ್ಪ್ರೆಸ್ ರೈಲು ಹಾಗೂ ಮುಂಬೈಯಿಂದ ಮಂಗಳೂರಿಗೆ ನೇತ್ರಾವತಿ ಎಕ್ಸ್ಪ್ರೆಸ್ ರೈಲು ಇದೆ.
ರಸ್ತೆ ಮೂಲಕ
PC: veerendraheggade.in
ಪ್ರವಾಸಿಗರು ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್ಸುಗಳಿಂದ ರಾಜ್ಯದಾದ್ಯಂತ ಧರ್ಮಸ್ಥಳಕ್ಕೆ ತಲುಪಬಹುದು. ಖಾಸಗಿ ಬಸ್ಸುಗಳು ಅಥವಾ ತಮ್ಮ ಸ್ವಂತ ವಾಹನಗಳು, ಟ್ಯಾಕ್ಸಿ, ಕ್ಯಾಬ್ ಮೂಲಕ ಧರ್ಮಸ್ಥಳಕ್ಕೆ ತಲುಪಲು.