ಹಿಂದು ಪರಂಪರೆಯಲ್ಲಿ ಅದೇಷ್ಟೊ ದೇವರುಗಳಿದ್ದಾರೆ. ಸಚಿವ ಸಂಪುಟದಂತೆ ಎಲ್ಲರಿಗೂ ಅವರದೆ ಆದ ವಿಶೇಷ ಖಾತೆಗಳಿವೆ! ಒಬ್ಬರು ಮೋಕ್ಷವನ್ನು ಕರುಣಿಸುವವರಾದರೆ, ಇನ್ನೊಬ್ಬರು ಸಂಪತ್ತನ್ನು ಕರುಣಿಸುವವರು ಮತ್ತೊಬ್ಬರು ಬುದ್ಧಿಯನ್ನು ಕರುಣಿಸುವವರು ಹೀಗೆ ಪಟ್ಟಿ ಬೆಳೆಯುತ್ತಲೆ ಸಾಗುತ್ತದೆ. ಸಾಮಾನ್ಯವಾಗಿ ಯಾವುದೆ ಮನುಷ್ಯನ ಬದುಕಿನಲ್ಲಿ ಕಷ್ಟಗಳು, ವಿಘ್ನಗಳು ಆಗಾಗ ಭೇಟಿ ನೀಡುತ್ತಲೆ ಇರುತ್ತವೆ. ಅಂತಹ ವಿಘ್ನಗಳನ್ನು ನಾಶ ಮಾಡಿ ಬದುಕನ್ನು ಹಸನು ಮಾಡುವ ವಿಶೀಷ್ಟ ದೇವರೇ ಶ್ರೀ ಮಹಾಗಣಪತಿ.
ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚಿನ ದೇವರಾದ ಗಣಪತಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ದೇಶದಾದ್ಯಂತ ಗಣಪತಿಯ ಉತ್ಸವವನ್ನು ಪ್ರತಿ ವರ್ಷಕ್ಕೊಮ್ಮೆ ಅತಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಬಹುಶಃ ದೇಶದ ತುಂಬೆಲ್ಲ ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಪೂಜಿಸಲ್ಪಡುವ ದೇವ ಗಣಪನೊಬ್ಬನೆ ಇರಬಹುದು ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲದೆ ಎಲ್ಲೆಡೆಯು ಗಣೇಶನಿಗೆ ಸಮರ್ಪಿತವಾದ ಹಲವು ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ ಮಹಾರಾಷ್ಟ್ರದ ಅಷ್ಟ ವಿನಾಯಕರ ದೇವಸ್ಥಾನಗಳು ಅತಿ ಪ್ರಸಿದ್ಧಿಯನ್ನು ಪಡೆದಿವೆ. ವಿಶೇಷವೆಂದರೆ ಒಂದೆ ದಿನದಲ್ಲಿ ವಿವಿಧೆಡೆ ನೆಲೆಸಿರುವ ಈ ಅಷ್ಟ ವಿನಾಯಕರ ದರುಶನವನ್ನು ಸುಲಭವಾಗಿ ಮಾಡಬಹುದು. ಹಾಗಾದರೆ ಬನ್ನಿ, ಈ ಲೇಖನದ ಮೂಲಕ ಮಹಾರಾಷ್ಟ್ರದ ಅಷ್ಟವಿನಾಯಕರ ದರುಶನ ಮಾಡೋಣ.

ಮೋರೇಶ್ವರ ದೇವಾಲಯ:
ಪುಣೆ ಜಿಲ್ಲೆಯ ಮೋರ್ಗಾಂವ್ ನಗರದಲ್ಲಿದೆ ಗಣಪತಿಗೆ ಸಮರ್ಪಿತವಾದ ಮೋರೇಶ್ವರ ದೇವಾಲಯ. ಪುಣೆ ನಗರದಿಂದ 80 ಕಿ.ಮೀ ದೂರದಲ್ಲಿರುವ ಮಯೂರೇಶ್ವರ ಎಂತಲೂ ಕರೆಯಲ್ಪಡುವ ಈ ದೇವಾಲಾಯವು ಅಷ್ಟ ವಿನಾಯಕ ದೇವಾಲಯಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Palaviprabhu

ಸಿದ್ಧಿವಿನಾಯಕ ದೇವಾಲಯ:
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸಿದ್ಧತೇಕ್ ನಲ್ಲಿ ಅಷ್ಟವಿನಾಯಕ ದೇವಾಲಯಗಳ ಪೈಕಿ ಒಂದಾದ ಈ ಸಿದ್ಧಿ ವಿನಾಯಕನ ಮಂದಿರವಿದೆ. ಭೀಮಾ ನದಿಯ ಉತ್ತರ ದಿಕ್ಕಿನ ದಂಡೆಯಲ್ಲಿ ನೆಲೆಸಿರುವ ಈ ದೇವಾಲಯವು ಕರ್ಜಾತ್ ತಾಲೂಕಿನಲ್ಲಿದೆ.
ಚಿತ್ರಕೃಪೆ: Borayin Maitreya Larios

ಬಲ್ಲಾಳೇಶ್ವರ ದೇವಾಲಯ:
ಮಹಾರಾಷ್ಟ್ರದ ಕರ್ಜಾತ್ ನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಪಾಲಿ ಎಂಬ ಹಳ್ಳಿಯಲ್ಲಿ ಗಣಪತಿಗೆ ಸಮರ್ಪಿತವಾದ ಹಾಗು ಅಷ್ಟವಿನಾಯಕರಲ್ಲೊಬ್ಬನಾದ ಬಲ್ಲಾಳೇಶ್ವರ ದೇವಾಲಯವಿದೆ.
ಚಿತ್ರಕೃಪೆ: Borayin Maitreya Larios

ವರದವಿನಾಯಕ ದೇವಾಲಯ:
ಅಷ್ಟವಿನಾಯಕರಲ್ಲಿ ಒಬ್ಬನಾದ ವರದವಿನಾಯಕನ ದೇವಸ್ಥಾನವು ಕರ್ಜಾತ್ ಬಳಿಯಿರುವ ಮಹಾಡ್ ಎಂಬ ಹಳ್ಳಿಯಲ್ಲಿ ಸ್ಥಿತವಿದೆ. ಭಕ್ತಿಯಿಂದ ಬೇಡಿದವರಿಗೆ ವರವನ್ನು ಕರುಣಿಸುವ ಈ ವಿನಾಯಕನ ದೇವಸ್ಥಾನವು ಮಾಘಿ ಉತ್ಸವದ ಸಮಯದಲ್ಲಿ ಭಕ್ತಾದಿಗಳಿಂದ ತುಂಬಿರುತ್ತದೆ.

ಚಿಂತಾಮಣಿ ದೇವಾಲಯ:
ಪುಣೆಯಿಂದ 25 ಕಿ.ಮೀ ದೂರದಲ್ಲಿರುವ ತಿಯೂರ್ ಎಂಬಲ್ಲಿ ಈ ಗಣೇಶನ ದೇವಸ್ಥಾನವಿದೆ. ಇಷ್ಟಾರ್ಥಗಳನ್ನು ಪೂರೈಸುವ ಚಿಂತಾಮಣಿ ಎಂಬ ರತ್ನವನ್ನು ಗಣ ಎಂಬ ಕ್ರೂರ ರಾಜನಿಂದ ಯಾವ ರೀತಿ ಗಣೆಶನು ಹಿಂಪಡೆದ ಹಾಗು ತನ್ನ ಭಕ್ತನಾದ ಋಷಿ ಕಪಿಲನಿಗೆ ಪ್ರದಾನಿಸಿದ ಕುರಿತು ವಿಷಯವನ್ನು ಈ ದೇವಾಲಯ ಹೊಂದಿದೆ.
ಚಿತ್ರಕೃಪೆ: Borayin Maitreya Larios

ಗಿರಿಜಾತ್ಮಜ ದೇವಾಲಯ:
ಪುಣೆ ನಗರದಿಂದ 94 ಕಿ.ಮೀ ದೂರವಿರುವ ನಾರಾಯಣಗಾಂವ್ ನಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಲೇನ್ಯಾದ್ರಿ ಎಂಬಲ್ಲಿ ಕಂಡುಬರುವ 18 ಬೌದ್ಧ ಗುಹೆಗಳಲ್ಲಿ ಎಂಟನೆಯ ಗುಹೆಯಲ್ಲಿ ಈ ಗಣಪತಿಯ ದೇವಸ್ಥಾನವನ್ನು ಕಾಣಬಹುದು.
ಚಿತ್ರಕೃಪೆ: Palaviprabhu

ವಿಘ್ನಹರ ಗಣಪತಿ:
ಅಷ್ಟವಿನಾಯಕರಲ್ಲಿ ಒಬ್ಬನಾದ ವಿಘ್ನ ವಿನಾಶಕನ ಈ ದೇವಸ್ಥಾನವಿರುವುದು ಒಜರ್ ಎಂಬ ಪ್ರದೇಶದಲ್ಲಿ. ಇದು ಪುಣೆಯಿಂದ 85 ಕಿ.ಮೀ ದೂರವಿದ್ದು ಪುಣೆ-ನಾಶಿಕ್ ರಸ್ತೆಯಲ್ಲಿರುವ ನಾರಾಯಣಗಾಂವ್ ನ ಉತ್ತರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: Borayin Maitreya Larios

ಮಹಾಗಣಪತಿ ದೇವಸ್ಥಾನ:
ಅಷ್ಟ ವಿನಾಯಕನ ದೇವಸ್ಥಾನಗಳ ಪೈಕಿ ಒಂದಾದ ಈ ಮಹಾಗಣಪತಿ ದೇವಸ್ಥಾನವು ಮಹಾರಾಷ್ಟ್ರದ ರಂಜನಗಾಂವ್ ಎಂಬಲ್ಲಿ ಸ್ಥಿತವಿದೆ. ಇದು ಪುಣೆಯಿಂದ 50 ಕಿ.ಮೀ ದೂರವಿದ್ದು, ಪುಣೆಯಿಂದ ಕೋರೇಗಾಂವ್ ಗೆ ಹೋಗುವ ಹಾದಿಯಲ್ಲಿ ಶಿಕ್ರಾಪುರ್ ಮೂಲಕ ಇದನ್ನು ತಲುಪಬಹುದು.
ಚಿತ್ರಕೃಪೆ: Palaviprabhu


Click it and Unblock the Notifications
















