ಮನುಷ್ಯನಿಗಿರುವ ವೈವಿಧ್ಯತೆಯ ರುಚಿಗಳೆ ವಿಚಿತ್ರ. ಕೆಲವರು ಶಾಂತದಿಂದ ಹಾಯಾಗಿ ಬದುಕಲು ಇಷ್ಟಪಟ್ಟರೆ, ಮತ್ತೆ ಕೆಲವರು ಇರುವ ಜೀವನದಲ್ಲಿ ಏನಾದರೂ ಸಾಧಿಸ ಬೇಕೆಂಬ ಹಂಬಲದಿಂದ ಸಾಹಸಮಯ ಚಟುವಟಿಕೆಗಳನ್ನು ಮಾಡುತ್ತ ಬದುಕುತ್ತಾರೆ.
ಬುಕ್ಕಿಂಗ್ಖಜಾನಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ
ಕೆಲವರು ಕುಟುಂಬದವರೊಡನೆ, ಸ್ನೇಹಿತರೊಂದಿಗೆ ಗಿರಿಧಾಮವೊ ಅಥವಾ ತೀರ್ಥಕ್ಷೇತ್ರಗಳಿಗೊ ಪ್ರವಾಸ ಹೊರಡಲು ಬಯಸಿದರೆ ಇನ್ನೂ ಕೆಲವರು ಒಬ್ಬಂಟಿಗರಾಗಿ ಇಲ್ಲವೆ ಒಂದೆ ಗುಣಲಕ್ಷಣ ಇರುವವರೊಂದಿಗೆ ವಿಚಿತ್ರ ಹಿನ್ನಿಲೆಯುಳ್ಳ, ಕಳಂಕ ಕಟ್ಟಿಕೊಂಡಿರುವ ಸ್ಥಳಗಳಿಗೆ ಭೇಟಿ ನೀಡಲು ಅಪೇಕ್ಷಿಸುತ್ತಾರೆ.
ವಿಶೇಷ ಲೇಖನ : ಭಾರತದ ರಹಸ್ಯಮಯ ಹಾಗು ಪಿಶಾಚಗ್ರಸ್ತ ಸ್ಥಳಗಳು
ಇಂತಹ ಸಾಕಷ್ಟು ಸ್ಥಳಗಳು ಭಾರತದಲ್ಲೆ ಏಕೆ ಜಗತ್ತಿನಾದ್ಯಂತ ಎಲ್ಲೆಡೆ ಇರುವುದನ್ನು ನೋಡಬಹುದು. ನಿಮಗೂ ಈ ರೀತಿಯ ವಿಚಿತ್ರ ಹಿನ್ನಿಲೆಯುಳ್ಳ, ಪ್ರಸ್ತುತ ಕೈಬಿಟ್ಟ ಅಥವಾ ಕಾರಣಾಂತರಗಳಿಂದ ಪರಿತ್ಯಕ್ತ ಮಾಡಲಾದ ಭಾರತದ ಕೆಲ ಸ್ಥಳಗಳ ಕುರಿತು ತಿಳಿಯಬೇಕೆ? ಹಾಗಾದರೆ ಈ ಲೇಖನವನ್ನೊಮ್ಮೆ ಓದಿ.
ಅದ್ಭುತ ಪರಿತ್ಯಕ್ತ ಸ್ಥಳಗಳು:
ಭಾನಗಡ್ ಕೋಟೆ : ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳ ಒಂದು ಬೆಟ್ಟದ ತಪ್ಪಲಿನಲ್ಲಿ ನೆಲೆಸಿದ ಭಾನಗಡ್ ಕೋಟೆ ಹಾಗೂ ಪಟ್ಟಣವು ಒಂದು ಪರಿತ್ಯಕ್ತ ಸ್ಥಳವಾಗಿದೆ. ಕೋಟೆಯು ಭೂತಗ್ರಸ್ಥವಾಗಿದೆ ಎಂದು ನಂಬಲಾಗಿದ್ದು ಸಂಜೆಯ ನಂತರ ಈ ಕೋಟೆಯೊಳಗೆ ಪ್ರವೇಶಿಸಲು ಯಾರಿಗೂ ಅನುಮತಿಯಿಲ್ಲ.
ಚಿತ್ರಕೃಪೆ: Shahnawaz Sid
ಅದ್ಭುತ ಪರಿತ್ಯಕ್ತ ಸ್ಥಳಗಳು:
ರಾಸ್ ನಡುಗಡ್ಡೆ, ಅಂಡಮಾನ್ : 1941 ರಲ್ಲುಂಟಾದ ಭೂಕಂಪನವೊಂದು ಇಲ್ಲಿದ್ದ ಬ್ರಿಟೀಷ್ ಅಧಿಕಾರಿಗಳನ್ನು ಬಲವಂತವಾಗಿ ತೊರೆಯುವಂತೆ ಮಾಡಿ ನಂತರ ಇದು ಕಾಲದ ಗರ್ಭದಲ್ಲಿ ಅಡಗಿ ಹೋಯಿತು. ಇಂದು ಇಲ್ಲಿ ಹಲವು ಪುರಾತನ ಕಟ್ಟಡಗಳು ಗಿಡ, ಬಳ್ಳಿ ಗಂಟಿಗಳಿಂದ ಆವರಿಸಿಕೊಂಡು ಶಿಥಿಲಗೊಂಡಿವೆ. ಶಾಂತ ಪರಿಸರ ಹೊಂದಿರುವ ಈ ನಡುಗಡ್ಡೆ ಈಗ ಕೇವಲ ಪ್ರವಾಸಿ ಆಕರ್ಷಣೆಯಾಗಿ ಮಾತ್ರವೆ ಉಳಿದುಕೊಂಡಿದೆ.
ಚಿತ್ರಕೃಪೆ: Stefan Krasowski
ಅದ್ಭುತ ಪರಿತ್ಯಕ್ತ ಸ್ಥಳಗಳು:
ಧನುಷ್ಕೋಡಿ, ತಮಿಳುನಾಡು : ಧನುಷ್ಕೋಡಿ, ರಾಮೇಶ್ವರ ದ್ವೀಪದಲ್ಲಿ ನೆಲೆಸಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಹಳ್ಳಿಯು ಸುತ್ತಲೂ ನೀರಿನಿಂದ ಆವೃತವಾಗಿದ್ದು ಒಂದು ವಿಶಿಷ್ಟ ರೀತಿಯ ಅನುಭವ ನೀಡುತ್ತದೆ. ಕೆಲವರಿಗೆ ಇಲ್ಲಿರುವ ನಿರ್ಜನ ವಾತಾವರಣ ಕಂಡು ಭಯವಾದರೂ ಅಚ್ಚರಿ ಪಡಬೇಕಾಗಿಲ್ಲ. ಹಿಂದೆ ಇಲ್ಲಿದ್ದ ರೈಲು ಮಾರ್ಗದ ಮುಖಾಂತರ ರೈಲೊಂದು ಮಕ್ಕಳನ್ನು ಒಯ್ಯುತ್ತಿರುವಾಗ ಸಮುದ್ರದ ಭಾರಿ ಅಲೆಗಳಿಗೆ ಸಿಲಿಕಿ ಅದರಲ್ಲಿದ್ದ ಮಕ್ಕಳು ಜಲಸಮಾಧಿಯಾದರು. ಸ್ಥಳೀಯವಾಗಿ ಕೆಲವರು ಹೇಳುವಂತೆ ಇಲ್ಲಿ ಇನ್ನೂ ಆತ್ಮಗಳ ಪ್ರಭಾವವಿದೆಯಂತೆ! ಆದ್ದರಿಂದ ಇದೊಂದು ವಸತಿರಹಿತ ಪ್ರದೇಶವಾಗಿದ್ದು ಕೇವಲ ಬೆಳಿಗ್ಗೆಯಿಂದ ಸಂಜೆಯವರೆಗೂ ಮಾತ್ರ ಭೇಟಿ ಮಾಡಬಹುದಾದ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Nataraja
ಅದ್ಭುತ ಪರಿತ್ಯಕ್ತ ಸ್ಥಳಗಳು:
ಫತೇಪುರ್ ಸಿಕ್ರಿ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿರುವ ಫತೇಪುರ್ ಸಿಕ್ರಿ ಇಂದು ಮಹತ್ತರ ಐತಿಹಾಸಿಕ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಮುಘಲ್ ವಾಸ್ತುಶೈಲಿಯ ಅದ್ಭುತ ಉದಾಹರಣೆಯಾಗಿರುವ ಇಲ್ಲಿನ ವಿಶಾಲವಾದ ಕಟ್ಟಡ ರಚನೆಗಳು ಅಂದಿನ ಇದರ ವೈಭವತೆಯನ್ನು ಸೂಚಿಸುತ್ತದೆ. ಅಕ್ಬರ್ ದೊರೆ ಇದರ ನಿರ್ಮಾತೃವಾಗಿದ್ದು ಇದನ್ನು ತನ್ನ ರಾಜಧಾನಿಯನ್ನಾಗಿ ಕೆಲ ಕಾಲ ಮಾಡಿಕೊಂಡಿದ್ದನು. 1585 ರ ನಂತರ ಇಲ್ಲಿ ಬಂದೊದಗಿದ ನೀರಿನ ಕ್ಷಾಮ ಹಾಗೂ ರಜಪೂತರ ಸಾಮ್ರಾಜ್ಯದೊಂದಿಗೆ ಇದಕ್ಕಿದ್ದ ಸನೀಹತೆ ಸೇರಿ ಈ ಸ್ಥಳವನ್ನುಅಕ್ಬರನು ಪರಿತ್ಯಜಿಸುವಂತೆ ಮಾಡಿದವು. ನಂತರ ಇದು ವಾಸರಹಿತ ತಾಣವಾಗಿ ಕೇವಲ ಐತಿಹಾಸಿಕ ಕಟ್ಟಡಗಳ ಆಕರ್ಷಣೆಯಾಗಿ ಮುಂದುವರಿಯಿತು.
ಚಿತ್ರಕೃಪೆ: Sanyam Bahga
ಅದ್ಭುತ ಪರಿತ್ಯಕ್ತ ಸ್ಥಳಗಳು:
ವಿಜಯನಗರ ಸಾಮ್ರಾಜ್ಯ : ದಕ್ಷಿಣದೆಡೆ ಹೆಚ್ಚಾಗ ತೊಡಗಿದ ಇಸ್ಲಾಮಿಕ್ ಪಡೆಗಳ ನುಸುಳುವಿಕೆಗೆ ತಡೆ ಒಡ್ಡುವ ಉದ್ದೇಶದಿಂದಾಗಿ ದಖ್ಖನ್ ಪ್ರಸ್ಥ ಭೂಮಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಸಾಮ್ರಾಜ್ಯವೆ ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯವು 1336 ರಲ್ಲಿ ಹರಿಹರ ಹಾಗೂ ಬುಕ್ಕರಿಂದ ಸ್ಥಾಪನೆಯಾಯಿತು. ನಂತರ ಕೆಲ ವರ್ಷಗಳ ಕಾಲ ಅದ್ಭುತವಾದ ಸುವರ್ಣಯುಗವನ್ನು ಕಂಡು ನಂತರ ದಖ್ಖನ್ ಸುಲ್ತಾನರ ಸತತ ದಾಳಿಯಿಂದ ಅವನತಿಯೆಡೆ ಸಾಗಿತು ಹಾಗೂ ಪರಿತ್ಯಜಿಸಲ್ಪಟ್ಟಿತು. ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯು ಅಂದಿನ ವಿಜಯ ನಗರದ ವೈಭವಯುತ ಸಾಮ್ರಾಜ್ಯವನ್ನು ನೆನಪಿಸುತ್ತದೆ.
ಚಿತ್ರಕೃಪೆ: Leon Yaakov
ಅದ್ಭುತ ಪರಿತ್ಯಕ್ತ ಸ್ಥಳಗಳು:
ಚಿಕ್ತಾನ್ ಕೋಟೆ : ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿರುವ ಚಿಕ್ತಾನ್ ಎಂಬ ಗ್ರಾಮದ ನಿರ್ಜನ ಬೆಟ್ಟವೊಂದರ ಮೇಲಿರುವ ಚಿಕ್ತಾನ್ ಕೋಟೆಯು ಪರಿತ್ಯಜಿಸಲ್ಪಟ್ಟ ಸ್ಥಳವಾಗಿದೆ. ಆಂಗ್ಲದ ಡ್ರ್ಯಾಕುಲಾ, ವ್ಯಾಂಪೈರ್ ನಂತಹ ಭಯಾನಕ ಚಿತ್ರಗಳಲ್ಲಿ ಕಂಡುಬರುವ ಕೋಟೆಗಳಂತೆ ಗೋಚರಿಸುವ ಕೋಟೆಯನ್ನು ನೋಡಿದಾಗ ಕಿಂಚಿತ್ತಾದರೂ ಭಯವಾಗದೆ ಇರಲಾರದು. ಕಾರ್ಗಿಲ್ ಪ್ರದೇಶದ ಒಂದು ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Debajit Bose
ಅದ್ಭುತ ಪರಿತ್ಯಕ್ತ ಸ್ಥಳಗಳು:
ಸಾವಿನ ಹಳ್ಳಿ ಕುಲ್ಧಾರಾ : ರಾಜಸ್ಥಾನದ ಜೈಸಲ್ಮೇರ್ ದಿಂದ ಪಶ್ಚಿಮಕ್ಕೆ 15 ಕಿ.ಮೀ ದೂರದಲ್ಲಿರುವ ಕುಲ್ಧಾರಾ ಎಂಬ ಹಳ್ಳಿಯು ಸಾವಿನ ಹಳ್ಳಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಮೂಲತಃ ಈ ಹಳ್ಳಿಯು ಪಲಿವಾಲ ಬ್ರಾಹ್ಮಣ ಸಮುದಾಯದವರಿಂದ 1291 ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಬ್ರಾಹ್ಮಣ ಸಮುದಾಯದವರು ಕೃಷಿಗೆ ಸಂಬಂಧಿಸಿದಂತೆ ಅದ್ಭುತವಾದ ಜ್ಞಾನವನ್ನು ಹೊಂದಿದ್ದರು. ಅಂತೆಯೆ ಮರಭೂಮಿಯಲ್ಲೂ ಸಹ ಹೆಚ್ಚಿನ ಪ್ರಮಾಣದ ಫಸಲನ್ನು ತೆಗೆಯುತ್ತಿದ್ದರು. ಹಲವು ಶತಮಾನಗಳ ಕಾಲ ವಾಸಿಸಿದ್ದ ಈ ಸಮುದಾಯದವರು 1825 ರ ಒಂದು ರಾತ್ರಿಯಲ್ಲಿ ಇದಕ್ಕಿದ್ದಂತೆ ಪಟ್ಟಣವನ್ನು ತೊರೆದರು ಹಾಗೂ ಇಲ್ಲಿ ಯಾರೆ ಬಂದು ನೆಲೆಸಿದರೂ ಸಾವು ಖಚಿತ ಎಂಬ ಶಾಪವನಿತ್ತರು. ಇಂದು ಅಳಿದುಳಿದ ಮನೆಗಳು ಹಾಗೂ ಇತರೆ ಕಟ್ಟಡಗಳನ್ನು ಇಲ್ಲಿ ನೋಡಬಹುದಾಗಿದೆ. ರಾಜಸ್ಥಾನ ಸರ್ಕಾರವು ಇದನ್ನು ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ.
ಚಿತ್ರಕೃಪೆ: Tomas Belcik
ಅದ್ಭುತ ಪರಿತ್ಯಕ್ತ ಸ್ಥಳಗಳು:
ಶೆಟ್ಟಿ ಹಳ್ಳಿ ಚರ್ಚ್ : ಹಾಸನದ ಬಳಿಯಿರುವ ಶೆಟ್ಟಿ ಹಳ್ಳಿ ಚರ್ಚ್ ಒಂದು ವಿಸ್ಮಯಕರ ಪರಿತ್ಯಜಿಸಲ್ಪಟ್ಟ ಅಥವಾ ತೊರೆದ ಪ್ರದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿರುವ ಚರ್ಚ್ ಒಂದು ವಿಸ್ಮಯಕಾರಿ ಪ್ರವಾಸಿ ಆಕರ್ಷಣೆಯಾಗಿದೆ. 1860 ರಲ್ಲಿ ಫ್ರೆಂಚರಿಂದ ಈ ಚರ್ಚ್ ನಿರ್ಮಾಣವಾಯಿತು. 1960 ರಲ್ಲಿ ತುಂಬಿ ಹರಿಯುವ ಹೇಮಾವತಿ ನದಿಯ ನೀರನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಪರಿಣಾಮ ಇಲ್ಲಿದ್ದ ಜನರು ಗ್ರಾಮವನ್ನು ಬೇರೆಡೆ ವಾಸಮಾಡಬೇಕಾಯಿತು. ಆದರೆ ಈ ಚರ್ಚ್ ಮಾತ್ರ ಅಂದಿನಿಂದ ಇಂದಿನವರೆಗೂ ಸದೃಢವಾಗಿಯೆ ನಿಂತಿರುವುದು ವಿಸ್ಮಯ. ಕಾರಣ ಮಳೆಗಾಲದ ಸಂದರ್ಭದಲ್ಲಿ ಹೇಮಾವತಿ ತುಂಬಿದಾಗ ಈ ಚರ್ಚ್ ಸಹ ಮುಳುಗುತ್ತದೆ. ನೀರು ಕಡಿಮೆಯಾದಂತೆ ಮತ್ತೆ ಗೋಚರಿಸುತ್ತದೆ. ಇದೊಂದು ಆಕರ್ಷಕ ಪ್ರವಾಸಿ ಕೇಂದ್ರವೂ ಸಹ ಆಗಿದೆ.
ಚಿತ್ರಕೃಪೆ: Pal.guru
ಅದ್ಭುತ ಪರಿತ್ಯಕ್ತ ಸ್ಥಳಗಳು:
ಸಂಜಯ ವನ್ : ಇಂದು ಸಾಕಷ್ಟು ಆಧುನಿಕ ನಗರಗಳಲ್ಲಿಯೂ ಸಹ ನಾವು ಭೂತ-ಪಿಶಾಚಗ್ರಸ್ಥ ರೋಚಕ ತಾಣಗಳನ್ನು ಕಾಣುತ್ತೇವೆ. ಇಂತಹ ರೋಚಕ ತಾಣಕ್ಕೆ ಉದಾಹರಣೆಯಾಗಿದೆ ದೆಹಲಿಯ ವಸಂತ ಕುಂಜದಲ್ಲಿರುವ ಸಂಜಯ ವನ್ ಅಥವಾ ಉದ್ಯಾನ. ಗದ್ದಲದ ನಗರದಲ್ಲಿ ಚಿರಶಾಂತಿಯಿಂದ ಕೂಡಿರುವ, ದಟ್ಟ ಗಿಡ ಮರ ಬಳ್ಳಿಗಳಿಂದ ಆವೃತವಾಗಿರುವ ಈ ಉದ್ಯಾನವು ಇತರೆ ಉದ್ಯಾನಗಳಂತಿರದೆ ಸಾಕಷ್ಟು ನಿರ್ಜನತೆಯನ್ನು ಅನುಭವಿಸುತ್ತದೆ ಕಾರಣ ಇಲ್ಲಿ ಆತ್ಮಗಳು ಸೇರಿವೆಯಂತೆ! ಇಲ್ಲಿ ಸೂಫಿ ಸಂತರ ಹಾಗೂ ಇತರೆ ಅನೇಕ ಸಮಾಧಿಗಳು ಇರುವುದರಿಂದ ಒಮ್ಮೊಮ್ಮೆ ವಿಚಿತ್ರವಾದ ಸದ್ದು ಕೇಳಿಸುತ್ತದೆಂದು ಹಲವಾರು ಜನ ಹೇಳಿಕೊಂಡಿದ್ದಾರೆ. ಇಷ್ಟಾಗಿಯೂ ಇಲ್ಲಿ ಆಗಾಗ ಜನರು ವಿಶ್ರಾಮಕ್ಕೆಂದು, ಇಲ್ಲವೆ ಸುಂದರವಾದ ಪಕ್ಷಿಗಳ ವೀಕ್ಷಣೆಗೆಂದು ಬರುತ್ತಿರುತ್ತಾರೆ. ಆದರೆ ಸಂಜೆಯಾಗುವುದರೊಳಗೆ ಹೊರಟು ಬಿಡುತ್ತಾರೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Brian Holland
ಅದ್ಭುತ ಪರಿತ್ಯಕ್ತ ಸ್ಥಳಗಳು:
ಗಂಡಿಕೋಟಾ : ಆಂಧ್ರದ ಕಡಪ ಜಿಲ್ಲೆಯ ಜಮ್ಮಾಲಮಡುಗು ಬಳಿಯಿರುವ ಗಂಡಿಕೋಟಾ ಕೋಟೆಯು ಜನರಹಿತ ಅಥವಾ ತೊರೆದ ತಾಣವಾಗಿದ್ದು ಇಂದು ಕೇವಲ ಪ್ರವಾಸಿ ಆಕರ್ಷಣೆಯಾಗಿ ಮಾತ್ರ ಉಳಿದಿದೆ. ಪೆನ್ನಾರ್ ನದಿ ಹರಿದಿರುವ ಈ ತಾಣವು ಕಂದಕ ಪ್ರದೇಶವನ್ನು ಹೊಂದಿದ್ದು ಅಂದಿನ ಸಮಯದಲ್ಲಿ ಉತ್ತಮ ರಕ್ಷಣಾತ್ಮಕ ತಾಣವಾಗಿತ್ತು. ಅಂತೆಯೆ ಇಲ್ಲಿ ಕೋಟೆಯನ್ನು ನಿರ್ಮಿಸಲಾಗಿದ್ದು ಅದರ ಪ್ರಾಂಗಣದಲ್ಲಿ ಮಾಧವರಾಯ ಹಾಗೂ ರಘುನಾಥನ ದೇವಾಲಯಗಳನ್ನು ನೋಡಬಹುದು. ಬೆಟ್ಟದ ಕೋಟೆಯಿಂದ ನದಿಯ ತಟದವರೆಗೆ ಇಳಿಮುಖವಾದ ಟ್ರೆಕ್ಕಿಂಗ್ ಬಲು ಜನಪ್ರೀಯವಾಗಿದೆ. ಜಮ್ಮಾಲಮಡುಗುವಿನಿಂದ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Harish Aluru
ಅದ್ಭುತ ಪರಿತ್ಯಕ್ತ ಸ್ಥಳಗಳು:
ಜುಕೌ ಕಣಿವೆ : ಮಣಿಪುರ ಹಾಗೂ ನಾಗಾಲ್ಯಾಂಡ್ ಗಡಿಗಳಲ್ಲಿ ಆವರಿಸಿರುವ ಈ ಕಣಿವೆಯು ಅತ್ಯದ್ಭುತವಾದ ಹಸಿರಿನಿಣ್ದ ಸಂಪದ್ಭರಿತವಾಗಿರುವ ಅಷ್ಟೊಂದಾಗಿ ಜನವಸತಿಯಿಲ್ಲದ ಪ್ರದೇಶವಾಗಿದೆ. ಇಲ್ಲಿ ಕಂಡುಬರುವ ನೈದಿಲೆ ಹೂವುಗಳು ನೋಡಲು ಅಪರೂಪವಾಗಿದ್ದು ಇದನ್ನು ಜುಕೌ ನೈದಿಲೆ ಎಂತಲೆ ಕರೆಯಲಾಗುತ್ತದೆ. ಈ ವಿಶಿಷ್ಟ ನೈದಿಲೆ ಮತ್ತಿನ್ನೆಲ್ಲೂ ಕಂಡುಬರುವುದಿಲ್ಲ.
ಚಿತ್ರಕೃಪೆ: Mongyamba
ಅದ್ಭುತ ಪರಿತ್ಯಕ್ತ ಸ್ಥಳಗಳು:
ಚಂಬಲ್ ಕಣಿವೆ: ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಚಂಬಲ್ ನದಿಯ ಕಣಿವೆ ಪ್ರದೇಶವು ಹಿಂದೊಮ್ಮೆ ಡಕಾಯಿತರ ನೆಲೆ ಹಾಗೂ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿತ್ತು. ಇಂದು ಈ ಕಣಿವೆಯು ತೊರೆದ ಪ್ರದೇಶವಾಗಿದ್ದು ಚಂಬಲ್ ನದಿಗಾಗಿ ಖ್ಯಾತಿಗಳಿಸಿದೆ.
ಚಿತ್ರಕೃಪೆ: Jangidno2
ಅದ್ಭುತ ಪರಿತ್ಯಕ್ತ ಸ್ಥಳಗಳು:
ನುಬ್ರಾ ಕಣಿವೆ: ರುದ್ರ ಭಯಂಕರ ಪ್ರಪಾತ ಕಣಿವೆಗಳಿಗೆ ಖ್ಯಾತಿ ಪಡೆದ ರಾಜ್ಯ ಜಮ್ಮು ಮತ್ತು ಕಾಶ್ಮೀರ. ಮೈ ಜುಮ್ಮೆನ್ನಿಸುವ ನುಬ್ರಾ ಈ ರಾಜ್ಯದಲ್ಲಿ ಕಂಡುಬರುವ ಹಲವು ಕಣಿವೆಗಳ ಪೈಕಿ ಒಂದು. ಈ ಕಣಿವೆಯನ್ನು ಜಗತ್ತಿನ ಅತಿ ಎತ್ತರದ ರಸ್ತೆಗಳ ಪೈಕಿ ಒಂದಾಗಿರುವ ಖರದುಂಗ್ ಲಾ ಪಾಸ್ (ರಹದಾರಿ) ನಿಂದ ಸಾಗುವ ಮೂಲಕ ತಲುಪಬಹುದಾಗಿದೆ. ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ಜಿಲ್ಲೆಯ ರಾಜಧಾನಿ ಪಟ್ಟಣವಾದ ಲೇಹ್ ನ ಉತ್ತರಕ್ಕೆ ಸುಮಾರು 150 ಕಿ.ಮೀ ದೂರದಲ್ಲಿ ನುಬ್ರಾ ಕಣಿವೆ ನೆಲೆಸಿದೆ. ಇದರ ಮೆಲ್ಮೈನ ಭೂಪದರಗಳು ಚಂದ್ರನ ವಾತಾವರಣದಂತೆಯೆ ತೊರುವುದರಿಂದ ಇದನ್ನು ಚಂದ್ರ ಕಣಿವೆ ಎಂತಲೂ ಸಹ ಕರೆಯಲಾಗುತ್ತದೆ.
ಚಿತ್ರಕೃಪೆ: Raghavan V
ಅದ್ಭುತ ಪರಿತ್ಯಕ್ತ ಸ್ಥಳಗಳು:
ಕಲಾವತಿದುರ್ಗ ಕೋಟೆ: ಮಹಾರಾಷ್ಟ್ರದ ಪನ್ವೇಲ್ ಮತ್ತು ಮಾಥೇರಾನ್ ಮಧ್ಯದಲ್ಲಿ ಈ ವಿಸ್ಮಯಕಾರಿ ಕೋಟೆಯ ತಾಣ ಸ್ಥಿತವಿದೆ. ಬಹಮನಿ ಸುಲ್ತಾನರಿಂದ ನಿರ್ಮಿಸಲ್ಪಟ್ಟ ಈ ಕೋಟೆಯನ್ನು ನಂತರ ಶಿವಾಜಿ ಮಹಾರಾಜನು 1657 ರಲ್ಲಿ ಮುಘಲರಿಂದ ವಶಪಡಿಸಿಕೊಂಡಿದ್ದನು. ಇಂದು ನಿರ್ಜನವಿರುವ ಈ ಕೋಟೆ ತಾಣಕ್ಕೆ ಟ್ರೆಕ್ ಮಾಡುತ್ತ ಕೆಲವು ಪ್ರವಸಿಗರು ಮಾತ್ರ ಬರುತ್ತಾರೆ. ಹತ್ತಲು ಮೆಟ್ಟಿಲುಗಳಿದ್ದು ಅದ್ಭುತವಾದ ಅನುಭವವನ್ನು ಕರುಣಿಸುತ್ತದೆ.
ಚಿತ್ರಕೃಪೆ: Hasenläufer