ಸಾಮಾನ್ಯವಾಗಿ ಜನರು ಬಸ್ಸುಗಳ ಮೂಲಕ ಪ್ರಯಾಣ ಮಾಡುವುದಕ್ಕಿಂತ ಹೆಚ್ಚಾಗಿ ರೈಲಿನಲ್ಲಿ ತೆರಳಲು ಇಷ್ಟ ಪಡುತ್ತಾರೆ. ಏಕೆಂದರೆ ರೈಲಿನ ಪ್ರಯಾಣವೇ ಒಂದು ರೀತಿಯ ಮಜಾ ನೀಡುತ್ತದೆ. ಇಷ್ಟೇ ಅಲ್ಲದೇ ರೈಲಿನಲ್ಲಿ ಕೆಲವು ಸೌಲಭ್ಯಗಳಿರುವುದರಿಂದ ದೂರದ ಪ್ರಯಾಣಕ್ಕೆ ಹಾಗು ಹತ್ತಿರದ ಪ್ರಯಾಣಕ್ಕೆ ಸೂಕ್ತವಾದುದು ಎಂದೇ ಹೇಳಬಹುದು. ನಮ್ಮಲ್ಲಿ ಸಾಕಷ್ಟು ಮಂದಿ ರೈಲಿನ ಅಭಿಮಾನಿಗಳು ಇದ್ದಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಸ್ನೇಹಿತರ ಹಿತವಾದ ಮಾತುಗಳೊಂದಿಗೆ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಪ್ರಯಾಣ ಮಾಡಬಹುದಾಗಿದೆ.
ಚಿಕ್ಕ ಮಕ್ಕಳಿಗಂತೂ ಖುಷಿಯೂ ಖುಷಿ. ಅಲ್ಲಿನ ಬೆಟ್ಟ, ಗುಡ್ಡಗಳು, ನದಿಗಳನ್ನು ಕಾಣುತ್ತಾ ಮೈಮರೆಯುತ್ತಿರುತ್ತಾರೆ. ನಮ್ಮ ಭಾರತ ದೇಶದಲ್ಲಿನ ರೈಲು ಮಾರ್ಗಗಳು ವಿದೇಶಗಳಿಗೇನು ಕಡಿಮೆ ಇಲ್ಲ. ಹಾಗಾದರೆ ಬನ್ನಿ ಯಾವ ಮಾರ್ಗದಲ್ಲಿ ರೈಲಿನ ಮೂಲಕ ಎಂಥಹ ದೃಶ್ಯವನ್ನು ಸವಿಯಬಹುದು ಎಂಬುದನ್ನು ತಿಳಿಯೋಣ.
ದಾರ್ಜೀಲಿಂಗ್ ಹಿಮಾಲಯನ್ ರೈಲು
ಮೌಂಟೆನ್ ರೈಲುಗಳ ಪೈಕಿ ಅತ್ಯಂತ ಹಳೆಯದಾದ ಈ ಟಾಯ್ ಟ್ರೈನ್ ದಾರ್ಜೀಲಿಂಗ್ ಒಂದು ಪ್ರಮುಖವಾದ ಆಕರ್ಷಣೆ ಎಂದೇ ಹೇಳಬಹುದು. ವಿಶೇಷವೆನೆಂದರೆ 1999 ರಲ್ಲಿ ಯುನೆಸ್ಕೂದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಕೂಡ ಗಳಿಸಿದೆ. ಇದರ ಸುರಳಿ ಮಾರ್ಗಗಳಲ್ಲಿ ಬತಾಸಿಯಾ ಸುರಳಿ ಮಾರ್ಗವು ಜನಪ್ರಿಯವಾದುದು. ಇಲ್ಲಿಂದ ಹಿಮಚ್ಛಾದಿತ ಕಂಚನ್ ಜುಂಗಾ ಪರ್ವತ ಹಾಗು ದಾರ್ಜೀಲಿಂಗ್ ಪಟ್ಟಣದ ಅದ್ಭುತವಾದ ನೋಟವನ್ನು ಸವಿಯಬಹುದು.
ಹಿಮದ ಪ್ರವಾಸ( ಕಾಜಿಗುಂಡ್-ಶ್ರೀನಗರ-ಬಾರಾಮುಲ್ಲಾ)
ಕಾಶ್ಮೀರ ರೈಲಿನ ಭಾಗವಾಗಿರುವ ಈ ರೈಲು ಕಾಜಿಗುಂಡ್, ಶ್ರೀನಗರ ಮತ್ತು ಬಾರಾಮುಲ್ಲಾಗಳ ಮಧ್ಯೆ ಸಂಚರಿಸುತ್ತದೆ. ಚಳಿಗಾಲದ ಸಮಯದಲ್ಲಿ ಈ ರೈಲಿನ ಪ್ರಯಾಣವು ಅನುಕೂಲಕರವಾಗಿದ್ದು, ಸುತ್ತಮುತ್ತಲಿನ ಸುಮುಧುರವಾದ ಹಿಮದ ದೃಶ್ಯವನ್ನು ಕಂಡು ಮೈಮರೆಯಬಹುದು.
ಸಮುದ್ರ ಸೇತುವೆ
ತಮಿಳುನಾಡಿನ ಮಂಡಪಂನಿಂದ ಪಂಬನ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಈ ರೈಲು ಭಾರತದ 2 ನೇ ಅತಿ ಉದ್ದದ ಸಮುದ್ರ ಸೇತುವೆಯ ರೈಲು ಮಾರ್ಗವಾಗಿದೆ. 2 ಬದಿಯಲ್ಲಿ ವಿಶಾಲವಾದ ಸಮುದ್ರವನ್ನು ಕಾಣುತ್ತಾ ಸಾಗುವಾಗ ಮೈಮನ ಪುಳಕಿತವಾಗದೇ ಇರಲಾರದು.
ಒಡಿಶಾ ವೈಭವ
ಕೆ.ಆರ್ ಮಾರ್ಗವೆಂದೆ ಜನಪ್ರಿಯವಾಗಿರುವ ಈ ಕೋರಾಪುತ್-ರಾಯ್ಘಡ್ ರೈಲು ಮಾರ್ಗವು ಸಮುದ್ರ ಮಟ್ಟದಿಂದ ಸುಮಾರು 800 ಮೀ ಎತ್ತರದಲ್ಲಿದೆ. ಇದು ರಾಯಘಡ ತಲುಪುವವರೆಗೂ 200 ಮೇ ಆಳದ ಪ್ರದೇಶ ಮೂಲಕ ಸಾಗುವುದು ಅವಿಸ್ಮರಣೀಯ ಅನುಭವವನ್ನು ಉಂಟು ಮಾಡುತ್ತದೆ.
ಗೋವಾ ಪ್ರಾಕೃತಿಕ ವೈಭವ
ಗೋವಾದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಹಳ್ಳಿಗಳು, ಪ್ರಾಕೃತಿಕ ನೋಟಗಳು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ವಾಸ್ಕೋ-ಡಿ-ಗಾಮಾ ದಿಂದ ಬೆಳಗಾವಿಯ ಬಳಿಯಿರುವ ಲೊಂಡಾದವರೆಗೆ ಚಲಿಸುವ ರೈಲು ಹಲವು ಬೀಚ್ಗಳನ್ನು ಕಾಣಬಹುದಾಗಿದೆ.
ಮಾಥೇರಾನ್ ಹಿಲ್ ರೈಲ್ವೆ
ಮುಂಬೈನ ಜನರು ವಾರಾಂತ್ಯದ ರಜಾ ದಿನಗಳನ್ನು ಕಳೆಯಬಯಸುವ ಪ್ರಸಿದ್ಧವಾದ ಗಿರಿ ಪ್ರದೇಶವೆಂದರೆ ಅದು ಮಾಥೇರಾನ್. ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ನೆಲೆಸಿರುವ ಈ ಪ್ರದೇಶವು ನಿಸರ್ಗದ ಸೌಂದರ್ಯವನ್ನು ಪ್ರವಾಸಿಗರಿಗೆ ನೀಡುತ್ತದೆ.
ಅಸ್ಸಾಂನ ಸ್ವಾದ
ಈ ರೈಲಿನಲ್ಲಿ ಚಲಿಸುವಾಗ ಅಸ್ಸಾಂನಿಂದ ಗುವಾಹಟಿ, ಲುಮ್ಡಿಂಗ್ಂ, ಸಿಲ್ಚರ್ ಮುಖಾಂತರ ಸಾಗುವಾಗ ಚಹಾ ತೋಟವನ್ನು ಕಂಡು ಆನಂದಿಸಬಹುದು. ಜತಿಂಗಾ ನದಿ, ಬರಾಕ್ ಕಣಿವೆಯ ಮೂಲಕ ಸಾಗುವ ಈ ರೈಲು ಈಶಾನ್ಯ ಭಾರತದ ದೊಡ್ಡದಾದ ನಗರ ಅಗರ್ತಲವನ್ನು ಸಂಪರ್ಕಿಸುತ್ತದೆ.
ಮಲೆನಾಡುವಿನ ಜಾದು (ಹಾಸನ-ಮಂಗಳೂರು)
ಹಾಸನ ಹಾಗು ಮಂಗಳೂರಿನ ಮಧ್ಯ ಭಾಗದಲ್ಲಿ ಈ ರೈಲು ಮಾರ್ಗವು ಸ್ವಚ್ಛಂದವಾಗಿ ಬೆಳೆದಿರುವ ಹಸಿರು ಪ್ರಪಂಚವನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದವರೆಗಿರುವ ಹಸಿರು ಮಾರ್ಗ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.