Bheemana Gudda: ಸದಾ ಕಿಕ್ಕಿರಿದ ಪ್ರವಾಸಿ ತಾಣಗಳಲ್ಲಿ ಪ್ರಯಾಣಿಸಿ ಬೋರ್ ಆಗಿದ್ದರೆ, ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ನಾವು ನಿಮಗೊಂದು ಅದ್ಭುತ ಸ್ಥಳದ ಬಗ್ಗೆ ಹೇಳಲಿದ್ದೇವೆ. ಇದನ್ನು ಕರ್ನಾಟಕದ ಗುಪ್ತ ರತ್ನಗಳ ಪೈಕಿ ಒಂದೆಂದು ಹೇಳಲಾಗುತ್ತದೆ. ಹೌದು, ಆ ಸ್ಥಳದ ಹೆಸರು ಭೀಮನಗುಡ್ಡ. ಇದು ಶಿರಸಿ ಸಮೀಪದಲ್ಲಿರುವ ಉತ್ತರ ಕನ್ನಡದ ಒಂದು ಸಣ್ಣ ಪಟ್ಟಣವಾಗಿದೆ. ಈ ಸ್ಥಳವು ವಿಶ್ರಾಂತಿ ಬಯಸುವವರಿಗೆ, ಮೈಂಡ್ ರಿಫ್ರೆಶ್ ಮಾಡಿಕೊಳ್ಳಲು ಬೆಸ್ಟ್ ಪ್ಲೇಸ್ ಆಗಿದೆ. ಅಂದಹಾಗೆ ಭೀಮನಗುಡ್ಡಕ್ಕೆ ಬಂದಾಗ ನೀವು ಕೇವಲ ಭೀಮನಗುಡ್ಡ ಮಾತ್ರವಲ್ಲ, ಅದರ ಸುತ್ತಮುತ್ತಲಿರುವ ಇತರ ಸುಂದರ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದು.
ಸಾಂಸ್ಕೃತಿಕವಾಗಿಯೂ ಪ್ರಾಮುಖ್ಯತೆಯನ್ನು ಹೊಂದಿರುವ ಈ ತಾಣವು ಹಚ್ಚ ಹಸಿರಿನ ಕಾಡುಗಳು, ಭವ್ಯವಾದ ತೊರೆಗಳು ಮತ್ತು ಜಲಪಾತಗಳ ಸೌಂದರ್ಯದಿಂದ ಆವೃತವಾಗಿದೆ. ಇಲ್ಲಿಗೆ ಸಮೀಪದ ಹಳ್ಳಿಗಳಲ್ಲಿ ಜನರು ಪ್ರಾಥಮಿಕ ಬೆಳೆಯಾಗಿ ಅಡಿಕೆ ಅಥವಾ ವೀಳ್ಯದೆಲೆಯನ್ನು ಬೆಳೆಯುತ್ತಾರೆ. ಭೀಮನಗುಡ್ಡಕ್ಕೆ ಹೋದಾಗ ನೀವು ಇಲ್ಲಿ ಇನ್ನು ಏನೆಲ್ಲಾ ನೋಡಬಹುದು ನೋಡೋಣ ಬನ್ನಿ...
ಭೀಮನಗುಡ್ಡ ಜಲಪಾತ
ಭೀಮನಗುಡ್ಡ ತನ್ನ ರುದ್ರರಮಣೀಯ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಭವ್ಯವಾದ ಜಲಪಾತವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಇದು ಸರಿಸುಮಾರು 100 ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಇದು ಆಕರ್ಷಕ ದೃಶ್ಯವನ್ನು ಸೃಷ್ಟಿಸುತ್ತದೆ. ನೀರಿನಡಿಯಲ್ಲಿ ನಿಮ್ಮ ಪಾದಗಳನ್ನು ತೇವಗೊಳಿಸಿ, ಫೋಟೋ ಕ್ಲಿಕ್ ಮಾಡುತ್ತಿದ್ದರೆ ಆ ಮಜಾವೇ ಬೇರೆ. ಒಟ್ಟಾರೆ ಇದು ವಿಶ್ರಾಂತಿ ಬಯಸುವವರಿಗೆ ಪರಿಪೂರ್ಣ ತಾಣವಾಗಿದೆ.

ಯಾಣ
ಶಿರಸಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಯಾಣ ಒಂದು ವಿಶಿಷ್ಟವಾದ ಭೂವೈಜ್ಞಾನಿಕ ರಚನೆಯಾಗಿದೆ. ಸಮೃದ್ಧವಾದ ಕಾಡಿನಲ್ಲಿ ನೆಲೆಗೊಂಡಿರುವ ಇಲ್ಲಿನ ಬೃಹತ್ ಬಂಡೆಯನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಯಾಣದ ಬೃಹತ್ ಸ್ಫಟಿಕದಂತಹ ಬಂಡೆಗಳು ಹಲವು ವರ್ಷಗಳಿಂದ ಎತ್ತರದಲ್ಲಿ ನಿಂತಿವೆ. ಇನ್ನು ಇಲ್ಲಿನ ಗುಹೆಗಳು ಯಾತ್ರಾರ್ಥಿಗಳಿಗೆ, ಚಾರಣಿಗರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ತಂಪಾದ ಗಾಳಿ, ಬೆಟ್ಟಗಳ ಮೂಲಕ 16 ಕಿಮೀ ಚಾರಣವು ನಿಮ್ಮನ್ನು ತಪ್ಪಲಿಗೆ ಕರೆದೊಯ್ಯುತ್ತದೆ. ಅಲ್ಲಿಂದ ಬಂಡೆಗಳ ರಚನೆಗಳು ಪ್ರಾರಂಭವಾಗುತ್ತವೆ.
ಉಂಚಳ್ಳಿ ಜಲಪಾತ
ಉಂಚಳ್ಳಿ ಜಲಪಾತವು ಕರ್ನಾಟಕದ ಅತ್ಯಂತ ಜನಪ್ರಿಯ ಜಲಪಾತಗಳಲ್ಲಿ ಒಂದಾಗಿದೆ. ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿಲೋಮೀಟರ್ ಪ್ರಯಾಣ ಬೆಳೆಸಿದರೆ ಉಂಚಳ್ಳಿ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಈ ಸ್ಥಳಕ್ಕೆ 1845 ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲುಶಿಂಗ್ಟನ್ ಅವರ ಹೆಸರನ್ನು ಇಡಲಾಗಿದೆ. ಈ ಜಲಪಾತವನ್ನು ಲುಶಿಂಗ್ಟನ್ ಪತ್ತೆ ಹಚ್ಚಿದ್ದರಿಂದ ಇದನ್ನು ಲುಶಿಂಗ್ಟನ್ ಫಾಲ್ಸ್ ಎಂದು ಕರೆಯಲಾಗುತ್ತದೆ. ನೀವು ಇದನ್ನು ಹತ್ತಿರದಿಂದ ನೋಡಲು ಬಯಸಿದರೆ, ನೀವು ಮೆಟ್ಟಿಲುಗಳ ಕೆಳಗೆ ತೆರಳಬಹುದು ಮತ್ತು ಜಲಪಾತದ ಕೆಳಗಿನಿಂದ ದೃಶ್ಯವನ್ನು ನೋಡಿ ಆನಂದಿಸಬಹುದು.

ಶ್ರೀ ಮಹಾಗಣಪತಿ ದೇವಸ್ಥಾನ
ಶಿರಸಿಯಲ್ಲಿ ಅದ್ಭುತ ಸ್ಥಳಗಳನ್ನು ಹುಡುಕುವ ಪ್ರವಾಸಿಗರಿಗೆ ಇದು ಕೂಡ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಏಕೆಂದರೆ ಶ್ರೀ ಮಹಾಗಣಪತಿ ದೇವಸ್ಥಾನವನ್ನು ಸುಮಾರು 400-500 ವರ್ಷಗಳ ಹಿಂದೆ ಗೋವಾದಿಂದ ವಲಸೆ ಬಂದ ಭಕ್ತರು ಸ್ಥಾಪಿಸಿದರು. ವಿಶೇಷವೆಂದರೆ ದೇಗುಲದಲ್ಲಿ 183 ಸೆಂ.ಮೀ. ಎತ್ತರ ಮತ್ತು 159 ಸೆಂ.ಮೀ. ಅಗಲವಿರುವ ದೊಡ್ಡ ಗಣೇಶನ ವಿಗ್ರಹವಿದೆ.

ಶಿವಗಂಗಾ ಜಲಪಾತ
ಶಿವಗಂಗಾ ಜಲಪಾತವು ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಇಲ್ಲಿ ಈಜಲು ಅನುಮತಿಸಲಾಗಿದೆ. ದಟ್ಟವಾದ ಕಾಡುಗಳು ಮತ್ತು ಸಮೃದ್ಧ ಸಸ್ಯವರ್ಗದ ನಡುವೆ ಹಲವಾರು ಬಂಡೆಗಳ ಕೆಳಗೆ ಬೀಳುವ ನೀರು ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ. ಜಲಪಾತವು ಹಲವಾರು ಕಾಡುಗಳಿಂದ ಆವೃತವಾಗಿದೆ. ಇಲ್ಲಿನ ಮತ್ತೊಂದು ಜನಪ್ರಿಯ ಆಕರ್ಷಣೆಯೆಂದರೆ ಗಣೇಶಪಾಲ್ ದ್ವೀಪ. ದ್ವೀಪವು ಚಿಕ್ಕ ಗಣಪತಿ ದೇವಾಲಯವನ್ನು ಹೊಂದಿದೆ. ಇನ್ನು ಜಲಪಾತವನ್ನು ರಸ್ತೆಯ ಮೂಲಕ ಪ್ರವೇಶಿಸಲಾಗುವುದಿಲ್ಲ. ಆದರೆ ಟ್ರೆಕ್ಕಿಂಗ್ ಮೂಲಕ ಮಾತ್ರ ಇಲ್ಲಿಗೆ ತಲುಪಬಹುದು.
ಭೀಮನಗುಡ್ಡಕ್ಕೆ ಹೋಗುವುದು ಹೇಗೆ?
ಭೀಮನಗುಡ್ಡ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಿಂದ ಸರಿಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ನೀವು ವಿಮಾನದ ಮೂಲಕ ಇಲ್ಲಿಗೆ ತಲುಪಲು ಯೋಜಿಸುತ್ತಿದ್ದರೆ, ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣ, ಇದು ಸುಮಾರು 107 ಕಿ.ಮೀ. ಶಿರಸಿಯಿಂದ 62 ಕಿಮೀ ದೂರದಲ್ಲಿರುವ ಕುಮಟಾ ಹತ್ತಿರದ ರೈಲು ನಿಲ್ದಾಣವಾಗಿದೆ. ಶಿರಸಿಯು ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಆದ್ದರಿಂದ ನೀವು ಬಸ್ ಅಥವಾ ಕಾರಿನ ಮೂಲಕವೂ ಭೀಮನಗುಡ್ಡಕ್ಕೆ ತಲುಪಬಹುದು.


Click it and Unblock the Notifications

















