ದಕ್ಷಿಣ ಭಾರತದ ತಮಿಳುನಾಡಿನ ತೂತುಕ್ಕುಡಿ ಜಿಲ್ಲೆಯ ಸಮುದ್ರತೀರದ ಒಂದು ಸಣ್ಣ ಹಾಗೂ ಸುಂದರ ನಗರ ತಿರುಚೆಂಡೂರ್. ಮುರುಗನ್ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿರುವ ತಿರುಚೆಂಡೂರ್, ಗಲ್ಫ್ ಆಫ್ ಮನ್ನಾರ್ ನ ಪ್ರಸಿದ್ದ ತೀರ್ಥಕ್ಷೇತ್ರವಾಗಿದೆ.
ದೇವಳಗಳ ನಾಡು - ತಿರುಚೆಂಡೂರ್ ಸುತ್ತಲಿನ ಆಕರ್ಷಣೆಗಳು
ತಿರುಚೆಂಡೂರ್ ಮುಖ್ಯವಾಗಿ ಇಲ್ಲಿನ ಸುಂದರ ದೇವಸ್ಥಾನಗಳಾದ ತಿರುಚೆಂಡೂರ್ ಮುರುಗನ್ ದೇವಸ್ಥಾನ, ವಲ್ಲಿ ಗುಹೆ ಅಥವಾ ದತ್ತಾತ್ರೇಯ ಗುಹೆ ಇತ್ಯಾದಿಗಳಿಗೆ ಪ್ರಖ್ಯಾತಿ ಪಡೆದಿದೆ. ದೇವಸ್ಥಾನಗಳ ಹೊರತಾಗಿ, ಇಲ್ಲಿನ ಇತರ ಆಕರ್ಷಣೆಗಳೆಂದರೆ, ಪಂಚಲಂಕುರಿಚಿ ಕೋಟೆ, ಮೆಳಪುತುಕುಡಿ, ಕುಧಿರೈ ಮೊಳಿತೆರಿ, ಟ್ಯೂಟಿಕಾರಿನ್ ಮತ್ತು ವನತಿರುಪತಿ, ಪುನ್ನೈ ನಗರ.
ತಿರುಚೆಂಡೂರಿನ ಬಗ್ಗೆ ಇನ್ನಷ್ಟು
ಈ ನಗರವು ಕರಾವಳಿಯ ಶುಷ್ಕ ಕಾಡುಗಳಿಂದ ಸುತ್ತುವರೆದಿದೆ. ಒಣ ಪ್ರದೇಶದ ಕಾಡುಗಳು ತಾಳೆ ಮರ, ಗೇರು ಮರ ಹಾಗೂ ಇತರ ಉಷ್ಣವಲಯದ ಮರಗಳಿಗೆ ಹೆಸರುವಾಸಿಯಾಗಿದೆ. ಈ ನಗರದ ಬಗ್ಗೆ ಕ್ರಿಸ್ತಪೂರ್ವದ ಪುಸ್ತಕಗಳಲ್ಲಿ ಪ್ರಸ್ತಾವಿಸಲಾಗಿದೆ. ಮುರುಗನ್ ದೇವರು ರಾಕ್ಷಸನಾದ ಸುರಪದ್ಮನ್ ಅನ್ನು ತಿರುಚೆಂಡೂರಿನಲ್ಲಿ ವಧಿಸಿದ್ದರು ಎಂದು ಪಂಡಿತರ ವಾದ. ಈ ಜಾಗವು ಮುರುಗನ್ ದೇವರ ಪವಿತ್ರ ನೆಲೆಗಳಲ್ಲಿ ಒಂದು ಎಂದು ನಂಬಲಾಗುತ್ತದೆ.
ತಿರುಚೆಂಡೂರಿನ ಮೊದಲಿನ ಹೆಸರು ಕಾಪಾಡಪುರಂ ಎಂದಾಗಿತ್ತು. ಅನಂತರ ಅದನ್ನು ತಿರುಚೆನ್-ಚೆಂಡಿಲೂರ್ ಎಂದು ಬದಲಿಸಲಾಯಿತು. ಕಾಲಕ್ರಮೇಣ ತಿರುಚೆಂಡೂರ್ ಎಂದು ಬದಲಾಯಿತು. ತಿರುಚೆಂಡೂರನ್ನು ಚೇರ, ಪಾಂಡ್ಯ ಮುಂತಾದ ದೊರೆಗಳು ಆಳಿದ್ದರು. 1649 ರಲ್ಲಿ ಡಚ್ಚರು ತೂತುಕ್ಕುಡಿಯನ್ನು ಪೋರ್ಚುಗೀಸರಿಂದ ವಶಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ಈ ನಗರವನ್ನು ಆಕ್ರಮಿಸಿದರು. ಆದರೆ ಪೋರ್ಚುಗೀಸರು ಮತ್ತು ಮದುರೈ ನ ನಾಯಕ್ ರಾಜರುಗಳು ಒಟ್ಟಾಗಿ ಹೋರಾಡಿ ಡಚ್ಚರನ್ನು ಸೋಲಿಸಿ, ಈ ಜಾಗ ಬಿಟ್ಟು ಓಡಿಸಿದರು.
ತಿರುಚೆಂಡೂರ್ ಹವಾಮಾನ
ತಿರುಚೆಂಡೂರಿನಲ್ಲಿ ವರ್ಷಪೂರ್ತಿ ಮಿತವಾದ ವಾತಾವರಣವಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಸಮಯಗಳು ಪ್ರವಾಸ ಮತ್ತು ತೀರ್ಥಯಾತ್ರೆಗೆ ಅನುಕೂಲಕರವಾಗಿರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೇವರ ದರ್ಶನ ಮತ್ತು ಕ್ಷಿಪ್ರ ಭೇಟಿಗೆ ಅನುಕೂಲಕರ.
ತಲುಪುವ ಬಗೆ
ತಿರುಚೆಂಡೂರ್ ಗೆ ಒಳ್ಳೆಯ ರಸ್ತೆ ಸೌಕರ್ಯವಿದೆ. ಹತ್ತಿರದ ವಿಮಾನ ನಿಲ್ದಾಣವಾದ ಟುಟಿಕೋರಿನ್ ವಿಮಾನನಿಲ್ದಾಣ 27 ಕಿ. ಮೀ ದೂರದಲ್ಲಿದೆ. ಇದಲ್ಲದೆ, ತಿರುಚೆಂಡೂರ್ ನಿಂದ ತಿರುನಲ್ವೇಲಿ ಜಂಕ್ಷನ್ ಗೆ ರೈಲು ಸಂಪರ್ಕವಿದ್ದು, ಇಲ್ಲಿಂದ ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ರೈಲು ಸೌಕರ್ಯವಿದೆ. ನಿಮಗೆ ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸದಲ್ಲಿ ಆಸಕ್ತಿಯಿದ್ದರೆ, ತಿರುಚೆಂಡೂರಿಗೆ ಭೇಟಿ ನೀಡಲೇಬೇಕು.