ರಾಣಿಖೇತ್ ಅನ್ನು 'ಕ್ವೀನ್ಸ್ಮೆಡೊವ್' ಅಥವಾ 'ರಾಣಿ ಹುಲ್ಲುಗಾವಲು' ಎಂದು ಕರೆಯಲಾಗುತ್ತದೆ. ಇದು ಅಲ್ಮೋರಾ ಜಿಲ್ಲೆಯಲ್ಲಿರುವ ನೋಡಲೇ ಬೇಕಾದ ಗಿರಿಧಾಮ. ಒಂದು ದಂತಕಥೆಯ ಪ್ರಕಾರ, ಕುಮಾವೂನ್ ಪ್ರದೇಶದ ಸುಂದರರಾಣಿ ಪದ್ಮಿನಿಯು, ಒಮ್ಮೆ ರಾನಿಖೇತ್ ಗೆ ಭೇಟಿ ನೀಡಿದ್ದಳು ಮತ್ತು ಈ ಸ್ಥಳದ ಸೌಂದರ್ಯದಿಂದ ವಿಸ್ಮಯಗೊಂಡಳು. ಇದನ್ನರಿತ ಅವಳ ಪತಿ ರಾಜ ಸುಖೇರ್ ದೇವನು ಈ ಸ್ಥಳದಲ್ಲಿ ಅರಮನೆಯನ್ನು ನಿರ್ಮಿಸಿದ ಮತ್ತು ಅದಕ್ಕೆ 'ರಾನಿಖೇತ್' ಎಂದು ಹೆಸರಿಸಿದ. ಆದರೆ ಇದರ ಕುರಿತು ಯಾವುದೆ ಪುರಾತತ್ವ ಪುರಾವೆಗಳು ಲಭ್ಯವಿಲ್ಲ. ಆದರೂ ಅರಮನೆಯ ಮೂಲೆ ಮೂಲೆಯಲ್ಲಿ ರಾನಿಖೇತ್ ಅರಮನೆಯ ಬಗ್ಗೆ ಕಥೆಗಳು ಇನ್ನೂ ಜೀವಂತವಾಗಿವೆ.
ಬ್ರಿಟೀಷರು 1869 ರಲ್ಲಿ ಈ ಸ್ಥಾನವನ್ನು ಮರುಶೋಧಿಸಿ ತಮ್ಮ ಬೇಸಿಗೆಯ ವಿಶ್ರಾಂತಿ ಸ್ಥಳವನ್ನಾಗಿ ರೂಪಾಂತರಗೊಳಿಸಿದರು. ಇಲ್ಲಿ ಬ್ರಿಟೀಷರ ಮಾನೇಜ್ ಮೆಂಟ್ (ನಿರ್ವಹಣೆ)ಕೇಂದ್ರಗಳನ್ನು ಸ್ಥಾಪಿಸಲಾಯಿತು. ಪ್ರಸ್ತುತ, ವಸಾಹತುಶಾಹಿ ಪರಂಪರೆ ಹೊತ್ತ, ರಾನಿಖೇತ್ ಭಾರತೀಯ ಸೇನೆಯ ಪ್ರಸಿದ್ಧ ಕುಮಾವೂನ್ ರೆಜಿಮೆಂಟಿನ ಪ್ರಧಾನ ಕಾರ್ಯ ಸ್ಥಳವಾಗಿದೆ. ಈ ಮೋಡಿ ಮಾಡುವ ಸ್ಥಳ, ತನ್ನ ಸಮೃದ್ಧ ಹಸಿರು ಕಾಡು ಮತ್ತು ಹುಲ್ಲುಗಾವಲುಗಳಿಂದ ಕೂಡಿದ್ದು ಒಂದು ದೊಡ್ಡ ಪ್ರವಾಸಿ ಒಳಹರಿವನ್ನು ಹೊಂದಿದೆ. ಬೃಹತ್ ಹಿಮಾಲಯದ ಭಾರಿ ಹಿಮ ಪ್ರದೇಶದಿಂದ ಸುತ್ತುವರೆದ ಈ ಗಿರಿಧಾಮ ಸಮುದ್ರ ಮಟ್ಟದಿಂದ 1869 ಮೀ ಎತ್ತರದಲ್ಲಿದ್ದು ಕುಮಾವೂನ್ ಬೆಟ್ಟಗಳಲ್ಲಿ ನೆಲೆಸಿದೆ.
ಅಲ್ಮೋರಾ ಪಟ್ಟಣದಿಂದ 50 ಕಿ.ಮೀ ಮತ್ತು ನೈನಿತಾಲ್ ನಿಂದ 60 ಕಿ. ಮೀ ದೂರದಲ್ಲಿದೆ ರಾನಿಖೇತ್. ರಾನಿಖೇತ್ ಸಮೃದ್ಧ ಹಸಿರು ಪೈನ್, ಓಕ್ ಮತ್ತು ದೇವದಾರು ಕಾಡುಗಳ ಮಧ್ಯೆ ವಿಶ್ರಾಂತಿ ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಈ ಕಾಡಿನಲ್ಲಿ ಪ್ರವಾಸಿಗರು ಚಿರತೆ, ಬಾರ್ಕಿಂಗ್ ಜಿಂಕೆ, ಸಾಂಬಾರ್, ಚಿರತೆಬೆಕ್ಕು, ಪರ್ವತಮೇಕೆ, ಭಾರತೀಯಮೊಲ, ಕೆಂಪು ಮುಖದಕೋತಿ, ಪೈನ್ಮಾರ್ಟೆನ್, ನರಿ, ಕೆಂಪುನರಿ, ಬುಕ್ಕ ಮತ್ತು ಮುಳ್ಳುಹಂದಿ ಮೊದಲಾದ ವಿವಿಧ ಜಾತಿಗಳ ಪ್ರಾಣಿಗಳನ್ನು ಇಲ್ಲಿ ಗುರುತಿಸಬಹುದು. ಜೊತೆಗೆ, ರಾನಿಖೇತಿನಲ್ಲಿ ದೇವಾಲಯಗಳು, ಚಾರಣ ಮಾರ್ಗಗಳು ಮತ್ತು ಅದ್ಭುತ ದೃಶ್ಯಗಳಕೇಂದ್ರಗಳೂ ಸೇರಿದಂತೆ ಅನೇಕ ಪ್ರವಾಸಿ ಆಕರ್ಷಣೀಯ ಸ್ಥಳಗಳಿವೆ.
ಝುಲಾ ದೇವಿ ದೇವಸ್ಥಾನ ಮತ್ತು ಭಿನ್ಸರ್ ಮಹಾದೇವ್ ದೇವಾಲಯ ಈ ಎರಡೂ, ರಾನಿಖೇತಿನ ಪ್ರಮುಖ ದೇವಾಲಯಗಳಲ್ಲಿ ಕೆಲವು. ಝುಲಾ ದೇವಿ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಹಿಂದೂ ದೇವತೆ ದುರ್ಗಾ ದೇವಿಯ ಪೂಜೆ ನಡೆಯುತ್ತಿದ್ದು ಹಲವಾರು ಯಾತ್ರಾರ್ಥಿಗಳು ಈ ದೇವತೆಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ರಾನಿಖೇತ್ ನಿಂದ 15 ಕಿಮೀ ದೂರದಲ್ಲಿದೆ ಬಿನ್ಸರ್ ಮಹಾದೇವ್ ದೇವಾಲಯ. ಇದು ಹಿಂದೂ ದೇವರು ಶಿವನಿಗೆ ಮೀಸಲಾದ ದೇವಾಲಯ. ಈ ದೇವಸ್ಥಾನವನ್ನು ಸೆಡಾರ್ ಅರಣ್ಯವು ಸುತ್ತುವರಿದಿದ್ದು, ಸ್ವಾಭಾವಿಕ ನೀರಿನ ಬುಗ್ಗೆಯನ್ನೂ ಸಹ ಇಲ್ಲಿ ಕಾಣಬಹುದು.
ರಾನಿಖೇತ್ ಸ್ಥಳದ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ ಕುಮಾವೂನ್ ರೆಜಿಮೆಂಟ್ ನ ಕೇಂದ್ರೀಯ ವಸ್ತುಸಂಗ್ರಹಾಲಯ ಮತ್ತು ಸ್ಮಾರಕ. ಇದು ರಾನಿಖೇತ್ ನ ಸೈನಿಕರ ತ್ಯಾಗ ಮತ್ತು ಶೌರ್ಯವನ್ನು ಪ್ರತಿಬಿಂಬಿಸುವ ಸ್ಮಾರಕವಾಗಿದೆ. 1978 ರಲ್ಲಿ, ಒಂದು ವಸ್ತುಸಂಗ್ರಹಾಲಯ ಕೂಡ ಕುಮಾವೂನ್ ದೇಶದ ಆಸ್ತಿಯನ್ನು ಸಂರಕ್ಷಿಸಿ ಇಡಲು ನಿರ್ಮಿಸಲಾಯಿತು. ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಸೈನಿಕರ ಗೌರವಾರ್ಥ ಇಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ.
ಮಝಖಲಿ, ರಾನಿಖೇಥ್ - ಅಲ್ಮೋರಾ ರಸ್ತೆಯಲ್ಲಿರುವ ಮತ್ತೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಈ ಸ್ಥಳದಿಂದ ಸೋನ್ಯಾ ಶಿಖರಗಳ ಮೇಲಿನ ರುದ್ರರಮಣೀಯ ವೀಕ್ಷಣೆಗಳನ್ನು ಆನಂದಿಸಬಹುದು. ಗುಡ್ಡಗಾಡಿನ ಪ್ರದೇಶಗಳು, ಸಮೃದ್ಧ ಹಸಿರು ಕಣಿವೆಗಳು ಮತ್ತು ಇಲ್ಲಿನ ಹಿತಕರ ಹವಾಗುಣ ಅಮೋಘವಾಗಿದ್ದು, ರಜಾದಿನಗಳನ್ನು ಕಳೆಯಲು ಒಂದು ಸೂಕ್ತವಾದ ತಾಣ ಇದಾಗಿದೆ. ಇಲ್ಲಿ ಇನ್ನೊಂದು ಸ್ಥಳ ಉಪಟ್, ಗಾಲ್ಫ್ ಆಟಗಾರರ ಒಂದು ಸ್ವರ್ಗ ಎಂದೇ ಹೇಳಬಹುದು. ಇಲ್ಲಿ 9 ಹೋಲ್/ರಂಧ್ರಗಳುಳ್ಳ ಗಾಲ್ಫ್ ಕೋರ್ಸ್ ಇದ್ದು ದೇಶದಲ್ಲಿ ಇದನ್ನು ಅತ್ಯುತ್ತಮ ಗಾಲ್ಫ್ ಅಂಗಣ ಎಂದು ಪರಿಗಣಿಸಲಾಗುತ್ತದೆ. ಈ ಸ್ಥಳದ ಬೃಹತ್ ಹಿಮಾಲಯದ ಮೋಡಿ ಮಾಡುವ ಶೃಂಗಗಳ ಸಮ್ಮೋಹನ ಗೊಳಿಸುವ ವೀಕ್ಷಣೆಗಳು, ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿ ಬಿಡುತ್ತವೆ.
ಇಲ್ಲಿರುವ ಚೌಬಾಟಿಯಾ ಎಂಬ ಸ್ಥಳವು, ರುಚಿಕರವಾದ ಸೇಬು, ಪೀಚ್ ಹಣ್ಣುಗಳು, ದ್ರಾಕ್ಷಿ ಮತ್ತು ಏಪ್ರಿಕಾಟುಗಳ ಸಮೃದ್ಧ ಹಸಿರು ತೋಟಗಳಿಗೆ ಪ್ರಸಿದ್ಧವಾಗಿದೆ. ಇದರ ಹೊರತಾಗಿ ನಂದಾದೇವಿ, ನೀಲಕಂಠ, ನಂದಗುಂಟಿ ಮತ್ತು ತ್ರಿಶೂಲ್ ಶಿಖರಗಳ ಸುಂದರವಾದ ವೀಕ್ಷಣೆಗಳನ್ನೂ ನೀಡುವ ಒಂದು ಜನಪ್ರಿಯ ಪ್ರವಾಸಿತಾಣ ಇದಾಗಿದೆ. ರಾನಿಖೇತ್ ಗೆ ಭೇಟಿ ನೀಡುವ ಪ್ರವಾಸಿಗರು, ಇಲ್ಲಿನ ಕಂಟೋನ್ಮೆಂಟ್ ಬೋರ್ಡ್, ಮಳೆ ನೀರು ಕೊಯ್ಲು(Rain water Harvesting) ಮಾಡುವ ಉದ್ದೇಶದಿಂದ ಅಭಿವೃದ್ಧಿಪಡಿಸಿದ ದೊಡ್ಡ ಕೃತಕ ಸರೋವರ ರಾನಿಝೀಲ್ ಅನ್ನು ನೋಡಬಹುದಾಗಿದೆ. ಇದು ಕೇಂದ್ರೀಯ ವಿದ್ಯಾಲಯ ಮತ್ತು ರಾನಿಖೇತ್ ಕಾನೋಸ್ಸಾ ಕಾನ್ವೆಂಟ್ ಸ್ಕೂಲ್ ಇವೆರಡರ ನೈಸರ್ಗಿಕ ರೇಖೆಗಳ ನಡುವೆ ಇದೆ. ಸಮುದ್ರ ಮಟ್ಟದಿಂದ 7500 ಅಡಿ ಎತ್ತರದಲ್ಲಿ ಇರುವ ಈ ಸ್ಥಳವು ಪ್ರವಾಸಿಗರಿಗೆ ದೋಣಿ ವಿಹಾರದ ಸೌಲಭ್ಯವನ್ನೂ ಕೂಡ ಒದಗಿಸುತ್ತದೆ.
ಪ್ರವಾಸಿಗರು ರಾನಿಖೇತ್ ನ ಪ್ರಧಾನ ಶಾಪಿಂಗ್ ಸೆಂಟರ್, ಸರ್ದಾರ್ ಬಜಾರ್ ನಲ್ಲಿ ಶಾಪಿಂಗ್/ಖರೀದಿಯನ್ನು ಆನಂದಿಸಬಹುದು. ಈ ಮಾರುಕಟ್ಟೆ ಪ್ರದೇಶದಲ್ಲಿ ಹಲವಾರು ರೆಸ್ಟಾರೆಂಟ್ ಮತ್ತು ಹೋಟೆಲ್ ಗಳನ್ನು ಕಾಣಬಹುದು. ಪ್ರವಾಸಿಗರು ಜನಾಂಗೀಯ ವಸ್ತುಗಳನ್ನು ಮತ್ತು ವಿಶೀಷ್ಟ ಕಸೂತಿ ಬಟ್ಟೆಗಳಿಗಾಗಿ ಇಲ್ಲಿ ಶಾಪಿಂಗ್ ಮಾಡಬಹುದು. ಮಾಲ್, ಇದು ಇನ್ನೊಂದು ಜನಪ್ರಿಯ ಮತ್ತು ಕಡಿಮೆ ಜನದಟ್ಟಣೆಯ ಮಾರುಕಟ್ಟೆಯಾಗಿದ್ದು, ಪ್ರಯಾಣಿಕರು ಅನನ್ಯ ಉಣ್ಣೆ ಹತ್ತಿಶಾಲುಗಳು, ಉಣ್ಣೆಯ ಶರ್ಟ್, ಜಾಕೆಟ್ ಗಳು ಮತ್ತು ಕುರ್ತಾಗಳನ್ನು ಇಲ್ಲಿ ಖರೀದಿಸಬಹುದು. ಕೈಯಿಂದ ತಯಾರಿಸಿದ ಉಣ್ಣೆಯ ಉತ್ಪನ್ನಗಳು ಸಮಂಜಸ ಬೆಲೆಯಲ್ಲಿ ಈ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಚೌಕುಟಿಯಾ, ರಾನಿಖೇತ್ ನಿಂದ 54 ಕಿ. ಮೀ ದೂರದಲ್ಲಿರುವ ಮತ್ತೊಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ರಾಮಗಂಗಾ ನದಿಯ ಪ್ರಶಾಂತ ದಡದಲ್ಲಿ ಈ ಸ್ಥಳ ಸ್ಥಿತವಾಗಿದೆ. ಈ ಸ್ಥಳ ಕುಮೌನಿ ಪದ ಚೌ-ಕುಟ್ ನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ ಇದರ ಅರ್ಥ ನಾಲ್ಕು ಅಡಿ ಎಂದು. ಈ ಸ್ಥಳವು ತನ್ನ ಹೆಸರಿಗನುಗುಣವಾಗಿ ನಾಲ್ಕು ಅಡಿ ಎಂದರೆ ನಾಲ್ಕು ಮಾರ್ಗಗಳು ಎಂದು ಸೂಚಿಸುತ್ತದೆ. ಮೊದಲ ಮಾರ್ಗ ರಾಮನಗರ, ಕರಣ ಪ್ರಯಾಗ್ ಎರಡನೆಯದ್ದು, ರಾನಿಖೇತ್ ಮೂರನೇ ಮತ್ತು ತಡಕ್ತಾಲ್ ನಾಲ್ಕನೇ ಪ್ರಮುಖ ಮಾರ್ಗವಾಗಿದೆ. ಖೀರಾ ಎಂಬ ಸ್ಥಳವನ್ನು ಈ ನಾಲ್ಕನೇ ಮಾರ್ಗದ ಮೂಲಕ ತಲುಪಬಹುದು. ಆದ್ದರಿಂದ, ಈ ಸ್ಥಳವು ತನ್ನ ಸುತ್ತಮುತ್ತಲಿನ ಪ್ರದೇಶಗಳಿಗೆ ಸುಲಭ ಪ್ರವೇಶ ಒದಗಿಸುತ್ತದೆ.
ಪರ್ವತದ ಮೇಲೆ ಸೈಕಲ್/ಬೈಕಿಂಗ್ ಮತ್ತು ಚಾರಣ, ಇವು ರಾನಿಖೇತಿನಲ್ಲಿ ಆನಂದಿಸಬಹುದಾದ ಅತ್ಯಂತ ಜನಪ್ರಿಯ ಸಾಹಸ ಕ್ರೀಡೆಗಳಾಗಿವೆ. ರಾನಿಖೇತಿನ ಇತರೆ ಆಕರ್ಷಣೆಗಳೆಂದರೆ ದ್ವಾರಹಾತ್, ಭಾಲು ಆಣೆಕಟ್ಟು, ತರಿಖೇತ್, ಕುಮಾವೂನ್ ರೆಜಿಮೆಂಟ್ ಗಾಲ್ಫ್ ಕೋರ್ಸ್, ಕಂಟೋನ್ಮೆಂಟ್ ಆಶಿಯಾನಾ ಉದ್ಯಾನ, ಸೂರ್ಯಾಸ್ತದ ಕೇಂದ್ರಗಳು ಮತ್ತು ಖೂನಟ್ ಮೊದಲಾದವುಗಳು. ಸಿತಲ್ ಖೇತ್, ಜುರಸಿ ಮತ್ತು ಖಿತಣಾ ಮೊದಲಾದವುಗಳೂ ಭೇಟಿ ನೀಡಲು ಯೋಗ್ಯವಾಗಿರುವ ಇಲ್ಲಿನ ಇನ್ನಿತರ ಸ್ಥಳಗಳು.
ರಾನಿಖೇತ್ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದಲ್ಲಿ ವರ್ಷಪೂರ್ತಿ ಮಧ್ಯಮ ಹವಾಗುಣವನ್ನು ಕಾಣಬಹುದು. ಬೇಸಿಗೆ ಕಾಲವು ಈ ಸುಂದರ ತಾಣವನ್ನು ಅನ್ವೇಷಿಸಲು ಆದರ್ಶ ಸಮಯ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಹವಾಮಾನ ಆಹ್ಲಾದಕರವಾಗಿದ್ದು ಪ್ರವಾಸಿಗರು ಬೇಕಾದರೆ ಈ ಸಮಯದಲ್ಲಿಯೂ ಸಹ ರಾನಿಖೇತ್ ಗೆ ಭೇಟಿ ನೀಡಬಹುದು.