ಕುಮಾವೂನ್ ಎಂಬುದು ಉತ್ತರಾಖಂಡ ರಾಜ್ಯದ ಗಡ್ವಾಲ್ ಜೊತೆಗೆ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಭಾಗವಾಗಿದೆ. ಚಂಪಾವತ್, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಪಿತೋಡ್ಗಢ್ ಮತ್ತು ಉಧಾಮ್ಸಿಂಗ್ ನಗರ ಜಿಲ್ಲೆಗಳು ಕುಮಾವೂನ್ ನ ಆಡಳಿತದಡಿಯಲ್ಲಿ ಬರುತ್ತವೆ. ಈ ಪ್ರಾಂತ್ಯವು ಉತ್ತರದಲ್ಲಿ ಟಿಬೇಟನ್ನು, ದಕ್ಷಿಣದಲ್ಲಿ ಉತ್ತರ್ ಪ್ರದೇಶವನ್ನು, ಪೂರ್ವದಲ್ಲಿ ನೇಪಾಳವನ್ನು ಮತ್ತು ಪಶ್ಚಿಮದಲ್ಲಿ ಗಡ್ವಾಲ್ ಅನ್ನು ಹೊಂದಿದೆ. ಈ ಪ್ರಾಂತ್ಯದ ಸ್ಥಳೀಯ ಭಾಷೆ ಕುಮಾಂವ್ನಿ ಮತ್ತು ನೈನಿತಾಲ್, ಅಲ್ಮೋರಾ, ಹಲ್ಡ್ ವಾನಿ, ಮುಕ್ತೇಶ್ವರ್, ಪಿತೋಡಗಢ್, ಕಾಶೀಪುರ್, ರುದ್ರಪುರ್ ಮತ್ತು ರಾಣಿಖೇತ್ ಗಳು ಈ ಪ್ರಾಂತ್ಯದ ಪ್ರಮುಖ ನಗರಗಳಾಗಿವೆ.
ಈ ಸ್ಥಳದ ಹೆಸರು "ಕೂರ್ಮಾಂಚಲ್" ಎಂಬ ಪದದಿಂದ ಉಗಮಗೊಂಡಿದೆ. ಇದರರ್ಥ ಕೂರ್ಮಾವತಾರ್ ಎಂದಾಗುತ್ತದೆ. "ಕೂರ್ಮಾವತರ್" ಎಂದರೆ ವಿಷ್ಣುವಿನ ಅವತಾರಗಳಲ್ಲಿ ಒಂದಾಗುತ್ತದೆ. ಅಲ್ಲದೆ ಈ ಸ್ಥಳವು ತನ್ನಲ್ಲಿರುವ ಪ್ರಖ್ಯಾತ ಕುಮಾವೂನ್ ರೆಜಿಮೆಂಟ್ ಎಂಬ ಸೇನಾದಳಕ್ಕೆ ಸಹಾ ಖ್ಯಾತಿ ಪಡೆದಿದೆ. ನಂದಾ ದೇವಿ ಮೇಳ, ಚೈತಿ ಮೇಳ, ಬೆಟ್ಟದ ಜಾತ್ರೆ, ಬಾಗ್ವಾಲ್, ಉತ್ತರಾಯನಿ ಮೇಳ ಮತ್ತು ಕಂಡಲಿ ಎಂಬ ವಿಶೇಷ ಉತ್ಸವಗಳಿಗಾಗಿ ಈ ಪ್ರಾಂತ್ಯವು ಖ್ಯಾತಿಯನ್ನು ಪಡೆದಿದೆ.
ಅಬ್ಬಟ್ ಮೌಂಟ್ ಎಂಬುದು ಇಲ್ಲಿನ ಸುಂದರವಾದ ಬೆಟ್ಟವಾಗಿದೆ. ಇದರಲ್ಲಿ ಕೇವಲ 13 ಕಾಟೇಜ್ (ಕುಟೀರಗಳು) ಇವೆ. ಇವುಗಳನ್ನು ಬ್ರಿಟೀಷರ ಆಡಳಿತಾವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶ್ರೀಯುತರಾದ ಜಾನ್ ಹಾರೊಲ್ಡ್ ಅಬ್ಬಟ್ರವರ ಬಂಗಲೆಯು ಇಲ್ಲಿನ ಹಿಮಾಚ್ಛಾಧಿತ ಪರ್ವತದ ಮೇಲೆ, ದಟ್ಟವಾಗಿ ಬೆಳೆದಿರುವ ಪೈನ್ ಮತ್ತು ಓಕ್ ಮರಗಳ ನಡುವೆ ನೆಲೆಗೊಂಡಿದೆ.
ಇದರ ಜೊತೆಗೆ ಪ್ರವಾಸಿಗರು ಇಲ್ಲಿ ಓಂ ಅಥವಾ ಆದಿ ಕೈಲಾಷ್ ಪರ್ವತವನ್ನು ನೋಡಬಹುದು. ಇದು ಸಮುದ್ರ ಮಟ್ಟದಿಂದ 6191 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಪರ್ವತಗಳು ಬಾಬಾ ಕೈಲಾಷ್ ಮತ್ತು ಜೋಂಗ್ಲಿಂಗ್ಕಾಂಗ್ ಅಥವಾ ಲಿಟಲ್ ಕೈಲಾಷ್ ಎಂಬ ಹೆಸರುಗಳಿಂಗ ಸಹ ಕರೆಯಲ್ಪಡುತ್ತದೆ. ಈ ಸ್ಥಳವು ಪ್ರವಾಸಿಗರ ವಲಯದಲ್ಲಿ ಓಂ ಅಥವಾ ಪರ್ವತದ ಮೇಲಿರುವ ಓಂ ಆಕಾರದ ಹಿಮದ ರಾಶಿಗಾಗಿ ಖ್ಯಾತಿಯನ್ನು ಪಡೆದಿದೆ. ಈ ಪರ್ವತವು ಟಿಬೇಟಿನಲ್ಲಿರುವ ಕೈಲಾಷ್ ಪರ್ವತವನ್ನು ಹೋಲುತ್ತದೆ.
ಮಿಲಮ್ ಹಿಮನದಿ (ಗ್ಲೇಸಿಯರ್) ಈ ಸ್ಥಳದಲ್ಲಿರುವ ಪ್ರವಾಸಿಗರ ಪ್ರಧಾನ ಆಕರ್ಷಣೆಯಾಗಿದೆ. ಇದು ಸಮುದ್ರ ಮಟ್ಟದಿಂದ 3870 ಮೀಟರ್ ಎತ್ತರದಿಂದ ಹಿಡಿದು 5500 ಮೀಟರ್ ಎತ್ತರದವರೆಗೆ ನಿಂತಿದೆ. ಈ ಹಿಮನದಿಯು ಸುಮಾರು 37 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇದು ಕುಮಾವೂನ್ ಪ್ರಾಂತ್ಯದ ಅತಿ ದೊಡ್ದ ಹಿಮ ನದಿಯಾಗಿದೆ. ಪ್ರವಾಸಿಗರು ಮುನ್ಸಿಯಾರಿಯನ್ನು ತಮ್ಮ ಚಾರಣದ ಮೂಲನೆಲೆಯಾಗಿ ಬಳಸಿಕೊಂಡು ಈ ಹಿಮನದಿಯನ್ನು ತಲುಪಬಹುದು. ಈ ಚಾರಣದ ಹಾದಿಯು ಹಲವಾರು ಜಲಪಾತಗಳನ್ನು, ಕಾಡುಗಳನ್ನು ಮತ್ತು ಹಳ್ಳಿಗಳನ್ನು ಹಾದು ಹೋಗುತ್ತದೆ.
ಈ ಎಲ್ಲ ಸ್ಥಳಗಳು ಚಾರಣಿಗರ ಆಯಾಸವನ್ನು ಮರೆಸುವಷ್ಟರ ಮಟ್ಟಿಗೆ ಸೌಂದರ್ಯವನ್ನು ತುಂಬಿಕೊಂಡಿವೆ. ಪಿಂಡಾರಿ ಗ್ಲೇಸಿಯರ್ ಕುಮಾಂವಿನ ಮತ್ತೊಂದು ಪ್ರಸಿದ್ಧ ಹಿಮನದಿಯಾಗಿದೆ. ಇದು ಸಮುದ್ರ ಮಟ್ಟದಿಂದ 3627 ಮೀಟರ್ ಎತ್ತರದಲ್ಲಿದೆ. ಇದು ಬಾಗೇಶ್ವರ್ ಜಿಲ್ಲೆಯಲ್ಲಿರುವ ನಂದಾ ಕೋಟ್ ಮತ್ತು ನಂದಾ ದೇವಿ ಶಿಖರಗಳ ನಡುವೆ ನೆಲೆಗೊಂಡಿದೆ. ಪಿಂಡಾರಿ ಗ್ಲೇಸಿಯರ್ ಪಿಂಡಾರಿ ನದಿಯ ಉಗಮ ಸ್ಥಾನವಾಗಿದೆ. ಈ ನದಿಯು ದಕ್ಷಿಣಕ್ಕೆ ಹರಿಯುತ್ತದೆ.
ಮುನ್ಸಿಯರಿ ಎನ್ನುವುದು ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುವಂತಹ ಪ್ರವಾಸಿ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2298 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಹಿಮಾಲಯ ಪರ್ವತ ಶ್ರೇಣಿಯ ನಡುವೆ ನೆಲೆಸಿರುವ ಈ ಸ್ಥಳವು ತ್ರಿಶೂಲ್, ನಂದಾ ದೇವಿ ಮತ್ತು ಪಂಚಚುಲಿ ಶಿಖರಗಳ ಭವ್ಯ ನೋಟವನ್ನು ಒದಗಿಸುತ್ತದೆ. ಈ ನಯನಮನೋಹರ ಸ್ಥಳದ ಸೌಂದರ್ಯವು ಪೈನ್, ದೇವದಾರು ಮತ್ತು ರೋಡೊಡೆಂಡ್ರೋನ್ಸ್ ಮರಗಳಿಂದ ಮತ್ತಷ್ಟು ದ್ವಿಗುಣಗೊಂಡಿದೆ.
ಇಲ್ಲಿ ಸುತ್ತಾಡುವಾಗ ಪ್ರವಾಸಿಗರು ಹಲವು ಬಗೆಯ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಕಣ್ತುಂಬಿಕೊಳ್ಳಬಹುದು. ಮುನ್ಸಿಯಾರಿಯು ನಂದಾ ದೇವಿ, ರಾಲಮ್ ಮತ್ತು ಮಿಲನ್ ಹಾಗು ನಾಮಿಕ್ ಶಿಖರಗಳಿಗೆ ಸಾಗುವ ಚಾರಣಕ್ಕೆ ಮೂಲ ನೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಕೀಯಿಂಗ್ ಮತ್ತು ಇತರ ಚಳಿಗಾಲದ ಕ್ರೀಡೆಗಳು ಈ ಪ್ರಾಂತ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಪ್ರವಾಸಿಗರು ಹೆಚ್ಚಾಗಿ ಈ ಪ್ರದೇಶಕ್ಕೆ ಬರಲು ಇದು ಸಹ ಕಾರಣವಾಗಿದೆ.
ಸುಂದರ್ ಧುಂಗಾ ಎಂಬ ಪ್ರಮುಖ ಪ್ರವಾಸಿ ತಾಣವು ಪಿಂಡಾರ್ ಕಣಿವೆಯ ಪಶ್ಚಿಮದಲ್ಲಿ ನೆಲೆಗೊಂಡಿದೆ. ಇಲ್ಲಿ ಪ್ರವಾಸಿಗರು ಮಟ್ಕೋಟಿ ಮತ್ತು ಸುಖರಾಮ್ ಎಂಬ ಎರಡು ಹಿಮನದಿಗಳನ್ನು ನೋಡಬಹುದು. ಸುಂದರ್ ಧುಂಗಾ ಎಂಬ ಹೆಸರಿನ ಅರ್ಥವು "ಸುಂದರ ಕಲ್ಲುಗಳಿಂದ ಕೂಡಿದ ಕಣಿವೆ" ಎಂದಾಗುತ್ತದೆ.
ಕುನಾವೂನ್ ಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಪಂತ್ ನಗರ್ ವಿಮಾನ ನಿಲ್ದಾಣ. ಇದು ಭಾರತದ ಪ್ರಮುಖ ನಗರಗಳೊಂದಿಗೆ ವಿಮಾನ ಸಂಪರ್ಕವನ್ನು ಹೊಂದಿದೆ. ಕಠ್ಗೋಡಂ ಎಂಬುದು ಕುಮಾವೂನ್ ಗೆ ಸಮೀಪದಲ್ಲಿರುವ ರೈಲು ನಿಲ್ದಾಣವಾಗಿದೆ. ಇದು ಲಖ್ನೋ, ಹೌರಾ ಮತು ದೆಹಲಿಗಳಂತಹ ಪ್ರಮುಖ ರೈಲು ನಿಲ್ದಾಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ರಸ್ತೆ ಮಾರ್ಗದ ಮೂಲಕ ಕುಮಾವೂನ್ ತಲುಪಬೇಕೆಂದು ಆಶಿಸುವ ಪ್ರವಾಸಿಗರು ಉತ್ತರ್ ಖಂಡ್ನ ಸಮೀಪದ ನಗರಗಳಿಂದ ಇಲ್ಲಿಗೆ ಬಸ್ಸಿನಲ್ಲಿ ತಲುಪಬಹುದು.
ಕುಮಾವೂನ್ ನ ಹವಾಮಾನವು ವರ್ಷಾಪೂರ್ತಿ ಆಹ್ಲಾದಕರವಾಗಿರುತ್ತದೆ. ಆದರೂ ಕುಮಾವೂನ್ ಗೆ ಚಳಿಗಾಲದಲ್ಲಿ ಭೇಟಿಕೊಡಬೇಕೆಂದು ಬಯಸುವ ಪ್ರವಾಸಿಗರು ಅಗತ್ಯವಾದ ಉಣ್ಣೆಯ ಬಟ್ಟೆಗಳನ್ನು ತರಲು ಮರೆಯಬಾರದು. ಹಾಗೆಯೇ ಮಳೆಗಾಲದಲ್ಲಿ ಇಲ್ಲಿಗೆ ಬರಬೇಕೆಂದು ಬಯಸುವವರು ಅಗತ್ಯವಾದ ಬಟ್ಟೆ ಬರೆಗಳನ್ನು ಮತ್ತು ರೈನ್ ಕೋಟ್ಗಳನ್ನು ತರಲು ಮರೆಯಬಾರದು.