ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿರುವ ಹಳ್ಳಿಯೆ ಮೋರಿ. ಈ ಒಂದು ಜನಪ್ರಿಯ ತಾಣವು ಸಮುದ್ರ ಮಟ್ಟದಿಂದ 3700 ಅಡಿ ಎತ್ತರದಲ್ಲಿ ನೆಲೆಸಿದೆ. ಜೌನ್ಸರ್ ಬಾವರ್ ಪ್ರದೇಶದ ಟಾನ್ಸ್ (ತಮಸ್ ಎಂದೂ ಕರೆಯಲಾಗುತ್ತದೆ) ನದಿಯ ದಡದ ಮೇಲಿರುವ ಈ ಪ್ರದೇಶವು "ಗೇಟ್ ವೆ ಆಫ್ ಟಾನ್ಸ್ ವ್ಯಾಲೆ" ಎಂಬ ನಾಮಾಂಕಿತವನ್ನು ಪಡೆದಿದೆ. ಒಂದು ದಂತಕಥೆಯ ಪ್ರಕಾರ, ಟಾನ್ಸ್ ನದಿಯು ಮಹಾಭಾರತದ ಒಂದು ಪೌರಾಣಿಕ ಪಾತ್ರವಾದ ಬಬ್ರುವಾಹನನ ಕಣ್ಣೀರಿನಿಂದ ಉತ್ಪತ್ತಿಯಾಗಿದೆ. ಇಲ್ಲಿನ ಸ್ಥಳೀಯರು, ಈ ನದಿಯಲ್ಲಿ ಬಬ್ರುವಾಹನನ ಕಣ್ಣೀರು ಇಂದಿಗೂ ಹರಿಯುತ್ತಿದೆ ಎಂದು ನಂಬಿದ್ದು, ಅದರ ನೀರನ್ನು ಕುಡಿಯುವುದಿಲ್ಲ. ಆದರೆ ಕೆಲವರ ಪ್ರಕಾರ, ಈ ನದಿಯು ರಾಮಾಯಣದ ಮತ್ತೊಂದು ಪೌರಾಣಿಕ ಪಾತ್ರವಾದ ಶೂರ್ಪನಖಾ ಕಣ್ಣೀರಿನಿಂದ ಉತ್ಪತ್ತಿಯಾದದ್ದಾಗಿದೆಯಂತೆ.
ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ತಮ್ಮನ್ನು ತಾವು ಮಹಾಕಾವ್ಯ ಮಹಾಭಾರತದ ಪಾತ್ರಧಾರಿಗಳಾದ ಕೌರವರು ಹಾಗು ಪಾಂಡವರ ವಂಶಜರೆಂದು ನಂಬಿದ್ದಾರೆ. ಕೌತುಕವೆಂದರೆ, ಈ ಮಹಾಕಾವ್ಯದಲ್ಲಿ ಖಳನಾಯಕರಾಗಿ ಬಿಂಬಿತರಾಗಿರುವ ಕೌರವರನ್ನು ಇಲ್ಲಿನ ಜನರು ಪೂಜಿಸುತ್ತಾರೆ. ಇಲ್ಲಿನ ಜಖೋಲ್ ಹಳ್ಳಿಯಲ್ಲಿರುವ ದುರ್ಯೋಧನ ದೇಗುಲವು ಪ್ರಸಿದ್ಧವಾಗಿದೆ. ಕೌರವರಲ್ಲಿ ಹಿರಿಯವನಾದ ದುರ್ಯೋಧನನಿಗೆ ಈ ದೇವಾಲಯವು ಸಮರ್ಪಿತವಾಗಿದೆ. ಸೌರ್ ಹಳ್ಳಿಯ ವಾಸಿಗರಿಂದ ಈ ದೇವಾಲಯವು ನಿರ್ಮಿತವಾಗಿದೆ ಎಂದು ನಂಬಲಾಗಿದೆ.
ಏಶಿಯಾದಲ್ಲೆ ಉತ್ತಮವೆನ್ನಬಹುದಾದ ಪೈನ್ ಮರಗಳ ದಟ್ಟ ಹಸಿರಿನಿಂದ ಆವರಿಸಿರುವ ಈ ಸ್ಥಳವು ಕ್ಯಾಂಪಿಂಗ್ ಚಟುವಟಿಕೆಗೆ ಆದರ್ಶಪ್ರಾಯವಾಗಿದೆ. ಇಲ್ಲಿರುವ ಹಲವಾರು ಖಾಸಗಿ ರಿಸಾರ್ಟುಗಳು ಕ್ಯಾಂಪಿಂಗ್ ಸೌಲಭ್ಯಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಒದಗಿಸುತ್ತವೆ. ಇಷ್ಟೆ ಅಲ್ಲ, ಬೋನ್ ಫೈರ್ (ಬೆಂಕಿ ಹೊತ್ತಿಸಿ, ಸುತ್ತಲೂ ಕುಳಿತು ಸಂತೋಷಿಸುವುದು) ಮತ್ತು ಬಾರ್ಬೆಕ್ಯೂ ಸೌಲಭ್ಯಗಳೂ ಕೂಡ ಲಭ್ಯ.
ಮೋರಿಯ ಟಾನ್ಸ್ ನದಿಯಲ್ಲಿ ರಾಫ್ಟಿಂಗ್, ಕಾಯಾಕಿಂಗ್ ಮತ್ತು ಮೀನುಗಾರಿಕೆಗಳಂತಹ ಸಾಹಸಮಯ ಕ್ರೀಡೆಗಳನ್ನೂ ಮಾಡಬಹುದು. ಬಂದರ್ ಪೂಂಚ್ ಶಿಖರದಲ್ಲಿ ಉಗಮಿಸುವ ಈ ನದಿಯನ್ನು ಯಮುನಾ ನದಿಯ ದೊಡ್ಡ ಉಪನದಿಯೆಂದು ಪರಿಗಣಿಸಲಾಗಿದೆ. ಪ್ರವಾಸಿಗರು ಸಮಯಾವಕಾಶವಿದ್ದರೆ ಚಾರಣ, ಬಂಡೆ ಹತ್ತುವುದು, ನಿಸರ್ಗ ವಿಹಾರ ಹೀಗೆ ಮುಂತಾದ ಚಟುವಟಿಕೆಗಳನ್ನು ಮೋರಿಯಲ್ಲಿ ಆಸ್ವಾದಿಸಬಹುದಾಗಿದೆ.
ಮೋರಿಯನ್ನು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ವಾಯು, ರೈಲು ಮತ್ತು ರಸ್ತೆ ಮಾರ್ಗದ ಮೂಲಕವಾಗಿ ಸುಲಭವಾಗಿ ತಲುಪಬಹುದು. 175 ಕಿ.ಮೀ ದೂರದಲ್ಲಿರುವ ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹಾಗು ರೈಲು ನಿಲ್ದಾಣ ಕ್ರಮವಾಗಿ ಮೋರಿಗೆ ಹತ್ತಿರದಲ್ಲಿರುವ ವಾಯುನೆಲೆ ಹಾಗು ರೈಲು ತುದಿ. ಅಲ್ಲದೆ ಸುತ್ತಮುತ್ತಲಿನ ನಗರಗಳಿಂದ ಮೋರಿಗೆ ನಿರಂತರವಾಗಿ ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಸೌಲಭ್ಯವಿದೆ.
ಮೋರಿಗೆ ಪ್ರವಾಸ ಹೋಗಬಯಸುವವರು ಬೇಸಿಗೆ ಹಾಗು ಮಳೆಗಾಲದ ಸಮಯದಲ್ಲಿ ಭೇಟಿ ನೀಡಿದರೆ ಉತ್ತಮ. ಚಾರಣ, ನಿಸರ್ಗ ವಿಹಾರಕ್ಕೆ ಬೇಸಿಗೆಯು ಸೂಕ್ತವಾಗಿದ್ದರೆ, ಕಾಯಾಕಿಂಗ್ ಮತ್ತು ರಾಫ್ಟಿಂಗ್ ಗಳಿಗೆ ಮಳೆಗಾಲವು ಆದರ್ಶಪ್ರಾಯವಾಗಿದೆ.