ಗಂಗೋತ್ರಿಯು ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಇದು ಸಮುದ್ರ ಮಟ್ಟದಿಂದ 3750 ಮೀಟರ್ ಎತ್ತರದ ಮೇಲೆ ನೆಲೆಸಿದ್ದು, ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಇದೆ. ಭಾಗಿರತಿ ನದಿ ದಡದಲ್ಲಿರುವ ಈ ತಾಣ ಅತ್ಯಂತ ಜನಪ್ರಿಯ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ಗಂಗೋತ್ರಿಯು ಪ್ರಸಿದ್ಧ ಯಾತ್ರೆಗಳಾದ 'ಚಾರ್ ಧಾಮ್' ಹಾಗೂ 'ದೊ ಧಾಮ್' ಗಳ ಭಾಗವಾಗಿದೆ.
ಪುರಾಣದ ಪ್ರಕಾರ, ರಾಜ ಭಗಿರಥನ ಪೂರ್ವಜರ ಪಾಪಕರ್ಮಗಳನ್ನು ತೊಳೆಯಲು ಗಂಗಾ ಮಾತೆಯು ಇಲ್ಲಿ ಭಾಗಿರಥಿಯಾಗಿ ಹರಿದಿದ್ದು, ಈ ಕಾರಣದಿಂದ ನದಿಯೂ ಕೂಡ ಪಾವಿತ್ರ್ಯತೆಯನ್ನು ಪಡೆದಿದೆ. ಹಿಂದು ದೇವರಾದ ಶಿವನು ಗಂಗೆಯನ್ನು ತನ್ನ ಮುಡಿಯಲ್ಲಿ ಧರಿಸುವ ಮೂಲಕ ಭೂಮಿಯು ಜಲಪ್ರಳಯವಾಗುವುದರಿಂದ ಕಾಪಾಡಿದ ಎಂದು ನಂಬಲಾಗುತ್ತದೆ. ಗಂಗಾ ನದಿಯ ಮೂಲ ಅಥವಾ ಗೋಮುಖವು ಗಂಗೋತ್ರಿಯಿಂದ 19 ಕಿ.ಮೀ. ದೂರದಲ್ಲಿದೆ. ಈ ಸಂಧಿ ತಾಣದಿಂದ ಮುಂದೆ ಗಂಗಾ ನದಿಯು ಭಾಗೀರಥಿಯಾಗಿ ಹರಿಯುತ್ತಾಳೆ.
ಭಾಗಿರಥಿ ನದಿಯ ಮೇಲ್ಭಾಗದಲ್ಲಿ ದಟ್ಟಾರಣ್ಯ ಆವರಿಸಿದೆ. ಈ ಪ್ರದೇಶದ ಭೂಮಿಯನ್ನು ಗಮನಿಸಿದಾಗ ಹಿಮಾಚ್ಛಾದಿತ ಬೆಟ್ಟಗಳು, ಉದ್ದನೆ ಶಿಖರಗಳು, ಆಳವಾದ ಕಣಿವೆ, ಅಡ್ಡಡ್ಡವಾಗಿ ಬೆಳೆದ ಕ್ಲಿಫ್ಗಳು ಹಾಗೂ ನೇರವಾಗಿ ಕಣ್ಣು ಹಾಯಿಸಿದಷ್ಟೂ ಕಾಣುವ ಕಣಿವೆ ಪ್ರದೇಶ ಗಮನ ಸೆಳೆಯುತ್ತವೆ. ಇಲ್ಲಿನ ಪರ್ವತಗಳ ಎತ್ತರ ಸಮುದ್ರ ಮಟ್ಟದಿಂದ 1800 ರಿಂದ 7083 ಮೀಟರ್ ವರೆಗೂ ಇವೆ. ಇಲ್ಲಿ ಪ್ರವಾಸಿಗರಿಗೆ ಗಮನ ಸೆಳೆಯುವುದು ಆಲ್ಫೈನ್ ಬೆಟ್ಟಗಳು, ಮರಗಳು ಹಾಗೂ ದಟ್ಟವಾಗಿ ಹರಡಿದ ಹಸಿರು. ಈ ಅರಣ್ಯವನ್ನು ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಎಂದು ಘೊಷಿಸಲಾಗಿದೆ. ಇದು ಭಾರತ- ಚೀನಾ ಗಡಿಭಾಗದಲ್ಲಿದೆ.
ಧಾರ್ಮಿಕ ನಂಬಿಕೆ ಹಾಗೂ ಆಕರ್ಷಕ ದೇವಾಲಯಗಳಿಗೆ ಗಂಗೋತ್ರಿ ಜನಪ್ರಿಯವಾಗಿದೆ. ಇಲ್ಲಿನ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ ಗಂಗೋತ್ರಿ ದೇವಾಲಯ. ಹಿಂದುಗಳ ಆರಾಧ್ಯ ದೇವಾಲಯ ಇದಾಗಿದೆ. ಈ ದೇಗುಲವನ್ನು ಗುರ್ಖಾ ಅರಸು ಅಮೀರ್ ಸಿಂಗ್ ತಾಪಾ ಎಂಬಾತ 18ನೇ ಶತಮಾನದಲ್ಲಿ ನಿರ್ಮಿಸಿದ. ಭಾರೀ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ದೇವಿ ಗಂಗೆಯ ಆರಾಧಕರು ವರ್ಷದ ಎಲ್ಲಾ ಕಾಲದಲ್ಲೂ ಬರುತ್ತಾರೆ. ಪ್ರವಾಸಿಗರು ಇಲ್ಲಿ ಬಂದ ಸಂದರ್ಭದಲ್ಲಿ ಜ್ಞಾನೇಶ್ವರ ಹಾಗೂ ಏಕಾದಶ ರುದ್ರ ದೇಗುಲಕ್ಕೂ ಭೇಟಿ ನೀಡಬಹುದು. ಇಲ್ಲಿ ಏಕಾದಶಿ ರುದ್ರಾಭಿಷೇಕ ಪೂಜೆ ಅತ್ಯಂತ ಜನಪ್ರಿಯ.
ಗಂಗೋತ್ರಿಯ ಭಾಗೀರಥಿ ಶಿಲೆ ಹಾಗೂ ಸುಬ್ಮೇರ್ಘಡ ಶಿವಲಿಂಗ ಸಾಕಷ್ಟು ಧಾರ್ಮಿಕ ಭಾವನೆಯನ್ನು ಹೆಚ್ಚಿಸಿವೆ. ಈ ನಿಸರ್ಗದತ್ತ ಶಿವಲಿಂಗ ಚಳಿಗಾಲದಲ್ಲಿ ಮಾತ್ರ ದರ್ಶನಕ್ಕೆ ಸಿಗುತ್ತದೆ. ಆ ಸಂದರ್ಭದಲ್ಲಿ ನೀರಿನ ಮಟ್ಟ ತಗ್ಗಿರುತ್ತದೆ. ಇದರಿಂದ ಶಿವಲಿಂಗ ಗೋಚರಿಸುತ್ತದೆ. ರಾಜ ಭಗೀರಥ ತನ್ನ ಧ್ಯಾನ ಕಾರ್ಯಕ್ಕೆ ಬಳಸುತ್ತಿದ್ದ ಎಂದು ನಂಬಲಾಗುವ ಭಾಗೀರಥಿ ಶಿಲೆ ಇಲ್ಲಿದೆ. ಗಂಗೋತ್ರಿಗೆ ಸಮೀಪಲ್ಲಿಯೇ ಇರುವ ಗೌರಿ ಕುಂಡ ಹಾಗೂ ಸೂರ್ಯ ಕುಂಡಗಳು ಪ್ರವಾಸಿಗರ ಇನ್ನಿತರೆ ಆಕರ್ಷಣೆಗಳು.
ಗಂಗೋತ್ರಿಯ ಇನ್ನೊಂದು ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್. ಮತ್ತೊಂದು ಆಕರ್ಷಣೆಯಾದ ಪಾಂಡವ ಗುಹೆ ಒಂದು ತಾಣವಾಗಿದ್ದು, ಪಟ್ಟಣದಿಂದ ನಡೆದು ಸಾಗಬಹುದಾಗಿದೆ. ಈ ಗುಹೆಯು ಐತಿಹಾಸಿಕ ಪ್ರಸಿದ್ಧ ಗ್ರಂಥವಾದ ಮಹಾಭಾರತದಲ್ಲಿ ಬರುವ ಪಾಂಡವ ಸಹೋದರರ ಧ್ಯಾನ ತಾಣವಾಗಿತ್ತು ಎಂದು ನಂಬಲಾಗುತ್ತದೆ. ಇದಲ್ಲದೇ ಪ್ರವಾಸಿಗರನ್ನು ಆಕರ್ಷಿಸುವ ಇನ್ನೊಂದು ಟ್ರೆಕ್ಕಿಂಗ್ ತಾಣ ದಯಾರ ಬುಗ್ಯಾಲಾ. ಇದು ಸಮುದ್ರ ಮಟ್ಟದಿಂದ 3000 ಮೀ. ಎತ್ತರದಲ್ಲಿದೆ. ಹಿಮಾಲಯ ಪರ್ವತದ ಆಕರ್ಷಕ ನೋಟವನ್ನು ಒಳಗೊಂಡು ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ತಾಣ ತಲುಪಲು ಎರಡು ಟ್ರೆಕ್ಕಿಂಗ್ ಮಾರ್ಗಗಳಿವೆ. ಇವು ಇಲ್ಲಿನ ಬರಸು ಹಾಗೂ ರೈಥಲ್ ಎಂಬ ಹಳ್ಳಿಗಳಿಂದ ಆರಂಭವಾಗುತ್ತವೆ.
ಟ್ರೆಕ್ಕಿಂಗ್ ತೆರಳುವ ಮಾರ್ಗದಲ್ಲಿಯೇ ಶಹನಾಗ್ ದೇವಾಲಯ ಕೂಡ ಸಿಗುತ್ತದೆ. ಇಲ್ಲಿ ತೆರಳುವಾಗಲೇ ನೋರಡಿಕ್ ಹಾಗೂ ಆಲ್ಪೈನ್ ವೀಕ್ಷಣಾ ತಾಣದ ನೋಟವನ್ನೂ ಚಳಿಗಾಲದಲ್ಲಿ ಸವಿಯಬಹುದು. ಔಲಿ, ಮುಂಡಲಿ, ಕುಶ್ ಕಲ್ಯಾಣ್, ಕೇದಾರ ಕಾಂತ, ತೇರಿ ಗರ್ವಾಲ್, ಬೆಂಡಿ ಬುಗ್ಯಾಲ್, ಚಿಪಲ್ಕೋಟ್ ಕಣಿವೆ ಪ್ರದೇಶಗಳು ಸ್ಕೀಯಿಂಗ್ ತಾಣಗಳಾಗಿದ್ದು, ತೆರಳಲು ವಿಶಿಷ್ಟವಾಗಿವೆ. ಗಂಗೋತ್ರಿ-ಗೋಮುಖ-ತಪೋವನ ಟ್ರೆಕ್ಕಿಂಗ್ನ ಮೂಲ ತಾಣ ಗಂಗೋತ್ರಿ ಪಟ್ಟಣವಾಗಿದೆ. ಇಲ್ಲಿಗೆ ಕೇದಾರ್ತಲ ಮಾರ್ಗವೂ ತಾಣ ಸಂಪರ್ಕಿಸಲು ಸೂಕ್ತ ದಾರಿಯಾಗಿದೆ. ಗಂಗಾಸ್ ಗ್ಲೇಸಿಯರ್, ಮನೇರಿ, ಕೇದಾರ್ತಾಲ್, ನಂದನವನ, ತಪೋವನ, ವಿಶ್ವನಾಥ ದೇವಾಲಯ, ದೋದಿತಾಲ್, ತೆಹ್ರಿ, ಕುಂತಿ ದೇವಿ ದೇವಾಲಯ, ನಚಿಕೇತ ತಾಲ್, ಗಂಗನಿ ಇತರೆ ತಾಣಗಳು ಇಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಇವೆಲ್ಲಾ ಗಂಗೋತ್ರಿಯ ಸಮೀಪದಲ್ಲಿ, ಆಸುಪಾಸಿನಲ್ಲೇ ಇವೆ.
ಗಂಗೋತ್ರಿಯನ್ನು ಮೂರು ಸಂಚಾರಿ ಮಾಧ್ಯಮಗಳಾದ ವಾಯು, ರಸ್ತೆ ಹಾಗೂ ರೈಲಿನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಡೆಹ್ರಾಡೂನ್ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರು ನಂತರ ಟ್ಯಾಕ್ಸಿಗಳ ಮೂಲಕ ಗಂಗೋತ್ರಿ ತಲುಪಬಹುದು. ಈ ನಿಲ್ದಾಣವು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರದ ರೈಲು ನಿಲ್ದಾಣ ಹೃಷಿಕೇಶದಲ್ಲಿದೆ. ಇದಲ್ಲದೇ ಸಾಕಷ್ಟು ಬಸ್ ಸೌಲಭ್ಯವಿದ್ದು, ಪ್ರವಾಸಿಗರು ರಸ್ತೆ ಮಾರ್ಗದಲ್ಲಿಯೂ ಇಲ್ಲಿಗೆ ಆರಾಮವಾಗಿ ತಲುಪಬಹುದಾಗಿದೆ.