ಜೋಶಿಮಠ ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿರುವ ಪವಿತ್ರ ಶ್ರೀಕ್ಷೇತ್ರ. ಸಮುದ್ರ ಮಟ್ಟದಿಂದ 6000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಪ್ರದೇಶವು ತನ್ನ ಸುತ್ತಲೂ ಹಿಮಚ್ಛಾದಿತ ಹಿಮಾಲಯ ಪರ್ವತ ಶ್ರೇಣಿಗಳಿಂದ ಸುತ್ತುವರೆದಿದೆ. ಹಿಂದು ಸಮುದಾಯದ ಜನರಿಗೆ ಇದೊಂದು ಪವಿತ್ರ ಕ್ಷೇತ್ರವಾಗಿದ್ದು, ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಆದಿ ಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ 4 ಮಠಗಳಲ್ಲಿ ಜೋಶಿಮಠವೂ ಒಂದಾಗಿದ್ದು 8 ನೇ ಶತಮಾನದಲ್ಲಿ ನಿರ್ಮಿತವಾಗಿದೆ. ಹಿಂದು ಧರ್ಮದ ಪವಿತ್ರವಾದ ವೇದಗಳಲ್ಲಿ ಒಂದಾದ 'ಅಥರ್ವ ವೇದ'ಕ್ಕೆ ಈ ಮಠವು ಸಮರ್ಪಿತವಾಗಿದೆ. ಮೊದಲಿಗೆ 'ಕಾರ್ತಿಕೇಯಪುರ' ಎಂದು ಕರೆಸಿಕೊಳ್ಳುತ್ತಿದ್ದ ಈ ಜೋಶಿಮಠವು ಉತ್ತರಖಂಡದ ನೋಡಲೇ ಬೇಕಾದ ಸ್ಥಳವಾಗಿದೆ.
ಈ ಸ್ಥಳವು, ಧೌಲಿಗಂಗಾ ಮತ್ತು ಅಲಕ್ ನಂದಾ ನದಿಗಳು ಸಂಗಮಿಸುವ ಪ್ರದೇಶವಾದ ಕಾಮಪ್ರಯಾಗ ಎಂಬ ಪ್ರದೇಶದಲ್ಲಿ ನೆಲೆಸಿದೆ. ಚಮೋಲಿ ಜಿಲ್ಲೆಯ ಮೇಲ್ಭಾಗಗಳಲ್ಲಿ ಚಾರಣ ಕೈಗೊಳ್ಳಲು ಜೋಶಿಮಠವು ಅವಕಾಶ ಒದಗಿಸುತ್ತದೆ. ಹಲವು ಜನಪ್ರಿಯ ಚಾರಣ ಮಾರ್ಗಗಳಲ್ಲಿ ಒಂದು ಮಾರ್ಗವು, ಜೋಶಿಮಠದಿಂದ ಪ್ರಾರಂಭವಾಗಿ 'ವ್ಯಾಲಿ ಆಫ್ ಫ್ಲಾವರ್ಸ್' ಅಥವಾ ಹೂವುಗಳ ಕಣಿವೆಯವರೆಗೆ ಸಾಗುತ್ತದೆ.
ಪ್ರವಾಸಿಗರು ಅನ್ವೇಷಿಸಬಹುದಾದಂತಹ ಹತ್ತು ಹಲವು ಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಜೋಶಿಮಠದಲ್ಲಿ ಕಾಣಬಹುದು. ಅವುಗಳಲ್ಲಿ ಒಂದೆಂದರೆ ಇಡಿ ಭಾರತದಲ್ಲೆ ಅತಿ ಪುರಾತನ ಎಂದು ಪರಿಗಣಿಸಲಾದ ಕಲ್ಪವೃಕ್ಷ ಮರ. ಸ್ಥಳೀಯರು ಹೇಳುವ ಪ್ರಕಾರ, ಈ 1200 ವರ್ಷಗಳ ಪ್ರಾಯದ ಮರದ ಕೆಳಗೆ ಆದಿ ಗುರು ಶಂಕರರು ಧ್ಯಾನಿಸಿದ್ದರು. ಈ ಕಲ್ಪವೃಕ್ಷ ಮರದ ಸುತ್ತಳತೆ 21.5 ಮೀ.
ನರಸಿಂಗ ದೇವಸ್ಥಾನವು ಜೋಶಿಮಠದಲ್ಲಿ ಕಾಣಬಹುದಾದ ಮತ್ತೊಂದು ಜನಪ್ರಿಯ ಕ್ಷೇತ್ರವಾಗಿದ್ದು, ಹಿಂದು ಧರ್ಮದ ನರಸಿಂಹ ದೇವರಿಗೆ ಇದು ಮುಡಿಪಾಗಿದೆ. ಈ ದೇವಾಲಯವು ಸಂತ ಶ್ರೀ ಬದರಿನಾಥರ ಮನೆಯಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರಖ್ಯಾತ ನರಸಿಂಹನ ವಿಗ್ರಹವು ದಿನದಿನಕ್ಕೂ ಚಿಕ್ಕದಾಗುತ್ತಿದ್ದು, ನಂಬಿಕೆಗಳ ಪ್ರಕಾರ, ಯಾವಾಗ ಈ ವಿಗ್ರಹವು ಮರೆಯಾಗುತ್ತದೋ, ಅಂದು ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿ ಬದರಿನಾಥ್ ಗೆ ಹೋಗುವ ಮಾರ್ಗವು ಮುಚ್ಚಲ್ಪಡುತ್ತದೆ.
ಜೋಶಿಮಠದಿಂದ 24 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಾ ದೇವಿ ರಾಷ್ಟ್ರೀಯ ಉದ್ಯಾನವು ಒಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆ. ಈ ತಾಣವು ಯುನೆಸ್ಕೊ(UNESCO) ದಿಂದ 1988 ರಲ್ಲಿ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆಯನ್ನು ಪಡೆದಿದೆ.
ಜೋಶಿಮಠವನ್ನು ಪ್ರವಾಸಿಗರು ವಾಯು, ರೈಲು ಮತ್ತು ರಸ್ತೆ ಮಾಧ್ಯಮಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಇದಕ್ಕೆ ಹತ್ತಿರದ ವಾಯು ಹಾಗು ರೈಲು ನಿಲ್ದಾಣಗಳು ಕ್ರಮವಾಗಿ ಡೆಹ್ರಾಡೂನಿನ ಜಾಲಿ ಗ್ರಾಂಟ್ ಏರ್ ಪೋರ್ಟ್ ಹಾಗು ರಿಷಿಕೇಶಗಳಾಗಿವೆ.
ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಚಳಿಗಾಲ ಹಾಗು ಮಳೆಗಾಲದಲ್ಲಿ ಕ್ರಮವಾಗಿ ಅತಿಶಯ ಪ್ರಮಾಣದ ಹಿಮಪಾತ ಮತ್ತು ಮಳೆಯನ್ನು ಕಾಣಬಹುದು. ಜೋಶಿಮಠವನ್ನು ಅನ್ವೇಷಿಸಬಯಸುವ ಪ್ರವಾಸಿಗರು ಇವೆರಡು ಕಾಲಗಳನ್ನು ಹೊರತುಪಡಿಸಿ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ, ಏಕೆಂದರೆ ಈ ಸಮಯದಲ್ಲಿ ಅಹ್ಲಾದಕರ ವಾತಾವರಣ ಇಲ್ಲಿರುತ್ತದೆ.