ಮೊಸಳೆ ಬ್ಯಾಂಕ್ ಮಹಾಬಲಿಪುರಂನಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಮೊಸಳೆಗಳ ಮತ್ತು ಹಾವುಗಳ ಸಂರಕ್ಷಣೆಗಾಗಿ ರೂಪಿಸಿರುವ ನೆಲೆಯಾಗಿದೆ. ಉರಗ ತಙ್ಞರಾದ ರೋಮುಲಸ್ ವಿಟೇಕರ್ ರವರಿಂದ 1976ರಲ್ಲಿ ಪ್ರಾರಂಭಗೊಂಡ ಈ ಮೊಸಳೆ ಬ್ಯಾಂಕ್, ಮುಖ್ಯವಾಗಿ ಭಾರತೀಯ ಮತ್ತು ಆಫ್ರೀಕನ್ ಮೊಸಳೆ ತಳಿಗಳನ್ನು ಉಳಿಸುವ ಮತ್ತು ವಂಶಾಭಿವೃದ್ಧಿ ಮಾಡುವ ಸಲುವಾಗಿ ಜನ್ಮ ತಳೆಯಿತು. ಪ್ರಸ್ತುತ ಇಲ್ಲಿ ಸುಮಾರು 5000 ಕ್ಕಿಂತ ಹೆಚ್ಚಿರುವ ಸರಿಸೃಪಗಳನ್ನು ನಾವು ನೋಡಬಹುದು. ಅವುಗಳನ್ನು ಇಲ್ಲಿ ಅವುಗಳ ಪ್ರಾಕೃತಿಕ ಮೂಲ ನೆಲೆಗಳ ಮಾದರಿಯಲ್ಲಿಯೇ ರೂಪಿಸಲಾದ ಕೊಳಗಳಲ್ಲಿ ಸಂರಕ್ಷಿಸಿ ಇಡಲಾಗಿದೆ. ಪ್ರವಾಸಿಗರು ಇವುಗಳನ್ನು ಸುರಕ್ಷಿತ ಅಂತರದಿಂದ ನಿಂತು ನೋಡಬಹುದು.
ಭಾರತದ ಅತ್ಯಂತ ದೊಡ್ಡ ಮೊಸಳೆಗಳ ಸಂತಾನೋತ್ಪತಿ ಕೇಂದ್ರವಾಗಿರುವ ಈ ಉದ್ಯಾನವನವು ಸುಮಾರು 3.2 ಹೆಕ್ಟೇರ್ ಪ್ರದೇಶದಲ್ಲಿ ತಲೆ ಎತ್ತಿದೆ. ಇದರ ಆವರಣದಲ್ಲಿ ಸಂತಾನೋತ್ಪತಿ ಕೇಂದ್ರದ ಸಮೀಪದಲ್ಲಿಯೇ ಮೊಸಳೆಗಳ ಸಂರಕ್ಷಣಾ ಕೇಂದ್ರವಿದೆ. ಸಂತಾನೋತ್ಪತಿಯ ನಂತರ ಈ ಮೊಸಳೆಗಳನ್ನು ಚಂಬಲ್ ಮತ್ತು ಮಹಾನದಿಗಳಂತಹ ಸಂರಕ್ಷಿತ ತಾಣಗಳಲ್ಲಿ ಬಿಡಲಾಗುತ್ತದೆ.
ಇದರ ಜೊತೆಗೆ ಈ ಉದ್ಯಾನವನವು ಹಾವು ಹಿಡಿಯುವ ಬುಡಕಟ್ಟು ಜನಾಂಗವಾದ ಇರುಳರ ಏಳಿಗೆಗು ಸಹ ಶ್ರಮಿಸುತ್ತಿದೆ. ಇಲ್ಲಿ ಇವರು ವಿಷವನ್ನು ಸಂಗ್ರಹಿಸುವ ವಿಧಾನವನ್ನು ಪ್ರವಾಸಿಗರಿಗೆ ತೋರಿಸುತ್ತಾರೆ.
ಇಲ್ಲಿಗೆ ಭೇಟಿಕೊಡಲು ಪ್ರವೇಶದರ ವಯಸ್ಕರಿಗೆ ಮತ್ತು ಮಕ್ಕಳಿಗೆ 30 ರೂಪಾಯಿ ಇರುತ್ತದೆ.