ಕೊಡುಂಗಲ್ಲೂರ್ ಎಂಬುದು ಮಲಬಾರ್ ತೀರದಲ್ಲಿರುವ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಇಲ್ಲಿರುವ ಭಗವತಿ ದೇವಾಲಯ ಮತ್ತು ಬಂದರಿಗೆ ಹೆಸರುವಾಸಿಯಾಗಿದ್ದು, ಹಲವಾರು ಶತಮಾನಗಳ ಇತಿಹಾಸವನ್ನು ತನ್ನಲ್ಲಿ ಅವಿತಿಟ್ಟು ಕೊಂಡಿದೆ. ಈ ನಗರದ ಇತಿಹಾಸವು ಸುಮಾರು 7 ನೇ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಆಗ ಈ ನಗರವು ಚೆರಮನ್ ರಾಜರ ರಾಜಧಾನಿಯಾಗಿತ್ತು. ಕೊಡುಂಗಲ್ಲೂರ್ ಸಮುದ್ರಕ್ಕೆ ಸಮೀಪದಲ್ಲಿರುವುದರಿಂದಾಗಿ ಭಾರತದ ಸಾಗರ ವ್ಯಾಪಾರದ ಪ್ರಮುಖ ಸಂಪರ್ಕ ಕೇಂದ್ರವಾಗಿ ರೂಪುಗೊಂಡಿದೆ. ಇತಿಹಾಸಕಾರರ ಪ್ರಕಾರ ಈ ನಗರವು ಸಿರಿಯಾ, ಏಶಿಯಾ ಮೈನ್ಮಾರ್ ಮತ್ತು ಈಜಿಪ್ಟಿನಂತಹ ಮಧ್ಯ ಪ್ರಾಚ್ಯ ದೇಶಗಳ ನಡುವೆ ವ್ಯಾಪಾರ ವ್ಯವಹಾರಗಳನ್ನು ಹೊಂದಿತ್ತಂತೆ.
ಪ್ರಾಚೀನ ಇತಿಹಾಸ, ವರ್ಣಮಯ ಸಂಸ್ಕೃತಿ
ಪ್ರಾಚೀನ ಕಾಲದಲ್ಲಿ ಕೊಡುಂಗಲ್ಲೂರ್ ಅಮೂಲ್ಯವಾದ ಮಸಾಲೆ ಪದಾರ್ಥಗಳನ್ನು ಇತರ ದೇಶಗಳಿಗೆ ರಫ್ತು ಮಾಡುವುದಕ್ಕಾಗಿ ಪ್ರಸಿದ್ಧಿಯನ್ನು ಪಡೆದಿತ್ತು. ಅವುಗಳಲ್ಲಿ ಯವನ ಪ್ರಿಯ ಎಂಬ ಹೆಸರಲ್ಲಿ ಖ್ಯಾತಿ ಪಡೆದಿದ್ದ ಮೆಣಸು ಇಲ್ಲಿನ ಪ್ರಮುಖ ರಫ್ತು ಉತ್ಪನ್ನವಾಗಿತ್ತು. ಈ ಪಟ್ಟಣವು ಸುತ್ತಲು ಹಿನ್ನೀರು ಮತ್ತು ಸಮುದ್ರದಿಂದ ಸುತ್ತುವರೆದಿದ್ದು, ಪೂರ್ವ ಇತಿಹಾಸ ಕಾಲದ ಹಲವಾರು ನಿದರ್ಶನಗಳನ್ನು ಒದಗಿಸುತ್ತದೆ. ಕ್ರಿ.ಪೂ ಒಂದನೆ ಶತಮಾನದಿಂದಲು ಕೊಡುಂಗಲ್ಲೂರ್ ಎಂಬುದು ಒಂದು ಬಂದರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಕೊಡುಂಗಲ್ಲೂರ್ ಸಂಸ್ಕೃತಿಯು ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಪಟ್ಟಣವು ಕ್ರಿಶ್ಚಿಯನ್, ಇಸ್ಲಾಂ ಮತ್ತು ಇತರೆ ಧರ್ಮಗಳನ್ನು ಮತ್ತು ನಂಬಿಕೆಗಳನ್ನು ಮುಕ್ತವಾಗಿ ಬರಮಾಡಿಕೊಂಡು ಪೋಷಿಸುತ್ತಿದೆ. ಕೊಡುಂಗಲ್ಲೂರ್ ಕ್ರಿಶ್ಚಿಯನ್ನರಿಗೆ ಅತ್ಯಂತ ಮಹತ್ವದ ಸ್ಥಳವಾಗಿದೆ. ಕ್ರಿ.ಶ 52ರಲ್ಲಿ ಸೆಂಟ್. ಥಾಮಸ್ ರವರು ಭಾರತದಲ್ಲಿ ಕ್ರೈಸ್ತ ಧರ್ಮದ ಮತಪ್ರಚಾರಕ್ಕಾಗಿ ಆಗಮಿಸಿದಾಗ ಮೊದಲು ಅಡಿಯಿಟ್ಟಿದ್ದು ಇಲ್ಲಿಯೆ. ಅಲ್ಲದೆ ಭಾರತದ ಮೊದಲ ಚರ್ಚ್ ನಿರ್ಮಾಣಗೊಂಡಿದ್ದು ಈ ಪಟ್ಟಣದಲ್ಲಿಯೆ. ಇದರೊಂದಿಗೆ ಕೊಡುಂಗಲ್ಲೂರ್ ವರ್ಣಮಯವಾದ ಇಸ್ಲಾಂ ಸಂಸ್ಕೃತಿಯ ಇತಿಹಾಸವನ್ನು ಸಹ ಹೊಂದಿದೆ. ಕ್ರಿ.ಶ.629 ರಲ್ಲಿ ನಿರ್ಮಾಣಗೊಂಡ ಚೆರಮನ್ ಜುಮಾ ಮಸೀದಿಯು ಭಾರತದ ಮೊಟ್ಟಮೊದಲ ಮುಸ್ಲಿಂ ಧಾರ್ಮಿಕ ಕೇಂದ್ರವೆಂದು ಪರಿಗಣಿಸಲ್ಪಟ್ಟಿದೆ.
ಸಂಸ್ಕೃತಿ ಮತ್ತು ಧಾರ್ಮಿಕತೆಯ ಸಮ್ಮಿಲನ
ಪ್ರಸ್ತುತ ಕೊಡುಂಗಲ್ಲೂರ್ ಪಟ್ಟಣವು ಪ್ರವಾಸಿಗರನ್ನು ಮತ್ತು ಇತಿಹಾಸಕಾರರಿಬ್ಬರನ್ನು ತೃಪ್ತಿಗೊಳಿಸುವ ಗುಣಗಳನ್ನು ಹೊಂದಿದೆ. ಪ್ರವಾಸಿಗರು ಪ್ರಮುಖವಾಗಿ ಇಲ್ಲಿನ ಸುಂದರವಾದ ಕಡಲ ತೀರವನ್ನು ನೋಡಲು, ಇತಿಹಾಸದ ಕುರಿತಾಗಿ ವಿವರವಾಗಿ ತಿಳಿಯಲು ಮತ್ತು ತಮ್ಮ ನೆಚ್ಚಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅರಬ್ಬೀ ಸಮುದ್ರ ಮತ್ತು ಪೆರಿಯಾರ್ ನದಿಗಳಿಂದ ಸುತ್ತುವರೆದಿರುವ ಈ ಸ್ಥಳವು ಪರಿಸರ ಪ್ರಿಯರ ಉತ್ಸಾಹವನ್ನು ಸಹ ಇಮ್ಮಡಿಗೊಳಿಸುತ್ತದೆ.
ಉತ್ಸಾಹಿ ಪ್ರವಾಸಿಗರಿಗೆ ಈ ಪಟ್ಟಣವು ಹಲವಾರು ತಾಣಗಳನ್ನು ನೋಡುವ ಅವಕಾಶವನ್ನು ಒದಗಿಸಿಕೊಡುತ್ತದೆ. ಕೇರಳದ ಆಧುನಿಕ ಇತಿಹಾಸದಲ್ಲಿ ಕೊಡುಂಗಲ್ಲೂರು ಎಂಬ ಹೆಸರು ಇಲ್ಲಿರುವ ಭಗವತಿ ದೇವಾಲಯದ ಸಲುವಾಗಿ ಮಹತ್ವ ಪಡೆದುಕೊಂಡಿದೆ. ಕುರುಂಬ ಭಗವತಿ ದೇವಾಲಯವು ( ಕೊಡುಂಗಲ್ಲೂರ್ ಭಗವತಿ ದೇವಾಲಯ ಅಥವಾ ಕುರುಂಬಕವು ದೇವಾಲಯ ಎಂದೆ ಚಿರಪರಿಚಿತ) ಈ ಪಟ್ಟಣದ ಪ್ರಮುಖ ಭಾಗದಲ್ಲಿ ನೆಲೆಗೊಂಡಿದೆ. ಇಲ್ಲಿ ಭದ್ರಕಾಳಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಾಲಯವು ಕೊಡುಂಗಲ್ಲೂರ್ ಭರಣಿ ಮತ್ತು ತಲಪ್ಪೊಳಿ ಉತ್ಸವಗಳ ಸಂದರ್ಭಗಳಲ್ಲಿ ಲಕ್ಷಾಂತರ ಮಂದಿ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತದೆ.
ಕೀಳ್ದಳಿ ಮಹಾದೇವ ದೇವಾಲಯ, ಮರ್ ದೋಮ ದೇವಾಲಯ, ಶ್ರಿರಂಗಪುರಮ್ ಮಹಾದೇವ ದೇವಾಲಯ, ತಿರುವಂಚಿಕುಲಂ ಮಹಾದೇವ ದೇವಾಲಯ ಮತ್ತು ತ್ರಿಪ್ರಯರ್ ಶ್ರೀ ರಾಮ ದೇವಾಲಯಗಳು ಇಲ್ಲಿ ಭೇಟಿ ಕೊಡಲೆ ಬೇಕಾಗಿರುವ ದೇವಾಲಯಗಳ ಪಟ್ಟಿಯಲ್ಲಿ ಸೇರಿವೆ. ಕೊಡಂಗಲ್ಲೂರಿನ ಕಡ್ಡಿಪುರಂ ಬೀಚ್ ತನ್ನ ಹೊಂಬಣ್ಣದಿಂದ ಕೂಡಿದ ಮರಳು ದಂಡೆಗಳು ಮತ್ತು ತೀರ ಪ್ರಾಂತ್ಯದ ತಾಳೆಮರಗಳ ಸಾಲನ್ನು ಹೊಂದಿದ್ದು, ಬೀಚನ್ನು ಇಷ್ಟ ಪಡುವ ಮತ್ತು ಜಲಕ್ರೀಡೆಯನ್ನು ಬಯಸುವ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಅಲ್ಲದೆ ಕೊಟ್ಟಪ್ಪುರಂ ಕೋಟೆಯ ಅವಶೇಷಗಳು ಸಹ ಇಲ್ಲಿಗೆ ಬರುವ ಪ್ರವಾಸಿಗರ ಗಮನವನ್ನು ಸೆಳೆಯುತ್ತವೆ.
ಸರಿಸಾಟಿಯಿಲ್ಲದ ಪ್ರವಾಸಿ ಅನುಭವ
ಕೇರಳ ರಾಜ್ಯದ ಹೃದಯ ಭಾಗದಲ್ಲಿರುವ ಕೊಡುಂಗಲ್ಲೂರ್ ಅತ್ಯಂತ ಅನುಕೂಲಕರವಾದ ಸಂಪರ್ಕಜಾಲವನ್ನು ಹೊಂದಿದೆ. ಇದು ತ್ರಿಶ್ಶೂರ್ ಮತ್ತು ಕೊಚ್ಚಿಗಳಿಂದ ಸರಿ ಸುಮಾರು ಒಂದೆ ದೂರದಲ್ಲಿ ನೆಲೆಸಿದೆ. ಹೀಗಾಗಿ ಈ ಪಟ್ಟಣವು ಕೇರಳದ ಉತ್ತರ ಮತ್ತು ದಕ್ಷಿಣ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಪಟ್ಟಣ ಹೊಂದಿರುವ ಜಲಮಾರ್ಗವು ಇದನ್ನು ಕೇರಳದ ಇನ್ನಿತರ ಪಟ್ಟಣಗಳಿಂದ ಪ್ರತ್ಯೇಕಿಸುವ ವಿಷಯವಾಗಿದೆ. ಪಶ್ಚಿಮ ಕರಾವಳಿ ಕಾಲುವೆಯು ಭಾರತ ಪ್ರವಾಸಿ ಉದ್ದೇಶಕ್ಕಾಗಿಯು ಬಳಸಲಾಗುವ ಜಲಮಾರ್ಗವಾಗಿ ಪ್ರಾಮುಖ್ಯತೆ ಪಡೆದಿದೆ.
ದಕ್ಷಿಣ ಭಾರತದ ಇನ್ನಿತರ ನಗರಗಳಂತೆ ಕೊಡುಂಗಲ್ಲೂರ್ ಸಹ ವರ್ಷದ ಬಹುಭಾಗ ಉಷ್ಣ ವಲಯದ ಹವಾಗುಣವನ್ನು ಹೊಂದಿರುತ್ತದೆ. ಕರಾವಳಿಗೆ ಸಮೀಪವಿರುವುದರಿಂದಾಗಿ ಈ ಪಟ್ಟಣ ಅಪ್ಯಾಯಕರವಾದ ಹವಾಗುಣವನ್ನು ಹೊಂದಿದೆ. ಅತ್ಯಾಕರ್ಷಕ ಇತಿಹಾಸದಿಂದ ಮತ್ತು ಪವಿತ್ರ ಧಾರ್ಮಿಕ ಸ್ಥಳಗಳಿಂದಾಗಿ ಕೊಡುಂಗಲ್ಲೂರ್ ಪ್ರವಾಸಿಗರಿಗೆ ಅಪೂರ್ವವಾದ ಹಾಗು ಮರೆಯಲಾಗದ ಅನುಭವವನ್ನು ಒದಗಿಸುತ್ತದೆ.