ಕೂಡಲ್ಮಾಣಿಕ್ಯಮ್ ದೇವಾಲಯವು ಕೇರಳ ರಾಜ್ಯದಲ್ಲಿ ಸದಾ ಯಾತ್ರಾರ್ಥಿಗಳಿಂದ ತುಂಬಿ ತುಳುಕುವ ದೇವಾಲಯಗಳಲ್ಲಿ ಒಂದಾಗಿದೆ. ಇದು ಕೊಡುಂಗಲ್ಲೂರಿಗೆ ಸಮೀಪದಲ್ಲಿದೆ. ಇದು ತ್ರಿಶ್ಶೂರಿನಿಂದ 20 ಕಿ.ಮೀ ದೂರದಲ್ಲಿರುವ ಇರಿಂಗಲಕುಡ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಶ್ರೀ ರಾಮ ಚಂದ್ರನ ಸಹೋದರನಾದ ಭರತನನ್ನು ಪೂಜಿಸುವ ಭಾರತದ ಏಕೈಕ ದೇವಾಲಯವಾಗಿದೆ. ಈ ಉದ್ದೇಶಕ್ಕಾಗಿ ಇದು ದೇಶದೆಲ್ಲೆಡೆಯಿಂದ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತದೆ.
ಈ ದೇವಾಲಯವು ತನ್ನ ಅದ್ದೂರಿತನದಿಂದ ಕೂಡಿರುವ ವಾಸ್ತುಶಿಲ್ಪ ಮತ್ತು ಕುಸುರಿತನಕ್ಕೆ ಖ್ಯಾತಿ ಪಡೆದಿದೆ. ಈ ದೇವಾಲಯ ಸಂಕೀರ್ಣವು ಚುಟ್ಟಂಬಲಮ್ ಎಂದು ಕರೆಯಲಾಗುವ ಗರ್ಭಗುಡಿಯನ್ನು ಹೊಂದಿದೆ, ಈ ದೇವಾಲಯದ ಸುತ್ತಲು ನಾಲ್ಕು ಕೊಳಗಳಿದ್ದು, ಇದರ ಒಳ ಗೋಡೆಗಳು ಅದ್ಭುತವಾದ ಭಿತ್ತಿ ಚಿತ್ರಕಲೆಯಿಂದ ಕೂಡಿವೆ. ಈ ದೇವಾಲಯದ ಹೊರಭಾಗ ಸಂಕೀರ್ಣದಲ್ಲಿ ಕೂಥಂಬಲಂ ಅಂದರೆ ಕಥಕ್ಕಳಿ ಮತ್ತು ಕೂಥುವಿನಂತಹ ಸಾಂಪ್ರದಾಯಿಕ ಆಟಗಳನ್ನು ಪ್ರದರ್ಶಿಸಲಾಗುವ ವೇದಿಕೆ ಇದೆ.
ಎಪ್ರಿಲ್- ಮೇ ತಿಂಗಳುಗಳಲ್ಲಿ ಇಲ್ಲಿ ಹತ್ತು ದಿನಗಳ ಕಾಲ ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಅಲಂಕರಿಸಿದ ಆನೆಗಳು ಮತ್ತು ಪಂಚರಿ ಮೇಳ ( ಮಂಗಳ ವಾದ್ಯಗಳು) ಗಳೊಂದಿಗೆ ಭಾರಿ ಮೆರವಣಿಗೆಯನ್ನು ನಡೆಸಲಾಗುತ್ತದೆ, ಇದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.