ತ್ರಿಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ತ್ರಿಶೂರ್ನಿಂದ 60 ಕಿ.ಮೀ. ದೂರದಲ್ಲಿರುವ ಈ ಊರು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದ 70 ಕಿ.ಮೀ. ದೂರದಲ್ಲಿ ಈ ತಾಣ ಇದೆ. ಆಕರ್ಷಕ ಜಲಪಾತ ಹಾಗೂ ಮಳೆಕಾಡಿನಿಂದ ಇದು ಜನಪ್ರಿಯವಾಗಿದೆ. ಅತ್ಯಂತ ಶ್ರೀಮಂತ ಜೈವಿಕ ಸಂಪನ್ಮೂಲ ಒಳಗೊಂಡ ಪ್ರದೇಶವೆನಿಸಿಕೊಂಡಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಈ ಪ್ರದೇಶವನ್ನು ಮೌನ ಕಣಿವೆ (ಸೈಲೆಂಟ್ ವ್ಯಾಲಿ) ಎಂದು ಬಣ್ಣಿಸಿದ್ದಾರೆ. ಅತ್ತಿರಪಲ್ಲಿಯು ವೈಜಾಕಲ್ ಹಾಗೂ ಚಪ್ರಾ ಜಲಪಾತವನ್ನು ಹೊಂದಿದೆ. ಪ್ರದೇಶದ ಪ್ರಕೃತಿ ಸುಮಧುರವಾಗಿದ್ದು, ಕೇರಳ ರಾಜ್ಯದ ಅತ್ಯಂತ ಶ್ರೇಷ್ಟ ತಾಣಗಳಲ್ಲಿ ಒಂದು ಎನಿಸಿಕೊಂಡಿದೆ.
ಸಮೃದ್ಧ ಪರಿಸರ
ಈ ಪ್ರದೇಶ ಪಶ್ಚಿಮ ಘಟ್ಟಕ್ಕೆ ಅತ್ಯಂತ ಸಮೀಪದಲ್ಲಿದೆ. ಇದರಿಂದಾಗಿ ಇಲ್ಲಿ ಹಸಿರು ಅತ್ಯಂತ ಸಮೃದ್ಧವಾಗಿದ್ದು, ವನ್ಯಜೀವಿಗಳ ಆವಾಸ ಅನ್ನಿಸಿಕೊಂಡಿದೆ. ಈ ಘಾಟಿಯು ಅತ್ತಿರಪಲ್ಲಿ ವೈಜಾಕಲ್ ಪ್ರದೇಶ ಎಂದೇ ಇದು ಕರೆಸಿಕೊಳ್ಳುತ್ತದೆ. ಈ ಹೆಸರಿನಿಂದಲೇ ಇದು ಜನಪ್ರಿಯವಾಗಿದೆ.
ಈ ಅರಣ್ಯ ಪ್ರದೇಶವು ಅತ್ಯಂತ ಅಪರೂಪದ ತಳಿಯ ಪ್ರಾಣಿ ಹಾಗೂ ಪಕ್ಷಿಗಳ ಆವಾಸತಾಣವಾಗಿದೆ. ಭಾರತೀಯ ವನ್ಯಜೀವಿ ಟ್ರಸ್ಟ್ ಈ ಸ್ಥಳವನ್ನು ಹಸಿರು ವಲಯ ಎಂದು ಘೋಷಿಸಿದೆ. "ಆನೆಗಳ ವಾಸಕ್ಕೆ ದೇಶದಲ್ಲೇ ಅತ್ಯಂತ ಸೂಕ್ತ ತಾಣ' ಎಂದು ಸಂಭೋದಿಸಿದೆ. ಅಂತಾರಾಷ್ಟ್ರೀಯ ಪಕ್ಷಿ ಸಂಘವು ಅತ್ತಿರಪಲ್ಲಿಯು ಪಕ್ಷಿಗಳಿಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಇಲ್ಲಿ ಸಾಕಷ್ಟು ವಿಧದ ಪಕ್ಷಿ ಸಂಕುಲ ಪತ್ತೆಯಾಗಿವೆ. ಅಪರೂಪದ ಪಕ್ಷಿಗಳೂ ಕಾಣ ಸಿಗುತ್ತವೆ. ಪ್ರದೇಶವು ಪ್ರಸ್ತುತ ನಾಲ್ಕು ವಿಧದ ತಾಣವಾಗಿ ಕಂಡು ಬರುತ್ತದೆ.
ಈ ಸ್ಥಳದಲ್ಲಿ ಅತ್ಯಂತ ಅಪರೂಪದ ಹೂ ಹಾಗೂ ವನ್ಯ ಸಂಪತ್ತು ಗೋಚರಿಸುತ್ತದೆ. ಏಷ್ಯನ್ ನೇಷರ್ ಕನ್ಸರ್ವೇಶನ್ ಫೌಂಡೇಶನ್ ಈ ಪ್ರದೇಶವನ್ನು ಶತಮಾನದ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಿದೆ. ಈ ಅರಣ್ಯವು ಐದು ಪ್ರಮುಖ ವಿಭಾಗವಾಗಿ ವಿಂಗಡಿಸಲ್ಪಟ್ಟಿದೆ. ಅತ್ತಿರಪಲ್ಲಿ, ವೈಜಾಕಲ್, ಚಪ್ರಾ, ಕೊಲ್ಲತ್ತಿರುಮೇಡು ಹಾಗೂ ಶೋಲಯಾರ್. ಇಲ್ಲಿನ ಎಲ್ಲಾ ಜಲಪಾತಗಳಿಗೂ ರಸ್ತೆ ಮಾರ್ಗ ಹಾಗೂ ಕಾಲ್ನಡಿಗೆ ಮಾರ್ಗ ನಿರ್ಮಿಸಲಾಗಿದೆ. ಇಲ್ಲಿನ ಚಿಕ್ಕಪುಟ್ಟ ತೊರೆಗಳು ಆಕರ್ಷಣೀಯವಾಗಿದ್ದು, ಇವೆಲ್ಲವೂ ಮುಂದೆ ಚಾಲುಕ್ಕಾಡಿ ನದಿಯನ್ನು ಸೇರುತ್ತವೆ. ಮಳೆಗಾಲದ ಸಂದರ್ಭದಲ್ಲಿ ಈ ಸ್ಥಳವನ್ನು ನೋಡುವುದು ಅತ್ಯಂತ ಮನಮೋಹಕ. ಈ ತಾಣದ ಸೊಬಗನ್ನು ಸವಿಯುವುದೇ ಆನಂದ. ಜೀವನದ ಅತ್ಯಂತ ಮೋಹ ಕಲ್ಷಣ ಸವಿಯಲು ಇತ್ತ ಬರಬೇಕು.
ಜಲಪಾತಗಳ ಸುಂದರ ತಾಣ
ಈ ಕಾಡು ಪ್ರವಾಸಿ ತಾಣ ಮಾತ್ರವಲ್ಲ, ಆದಿವಾಸಿಗಳ ಆವಾಸವೂ ಆಗಿದೆ. ಕೋಡರಸ್ ಎಂಬ ಮೂಲವಾಸಿಗಳು ಇಲ್ಲಿ ಕಾಣಸಿಗುತ್ತಾರೆ. ಇವರು ಕಾಡಿನಲ್ಲಿ ಸಿಗುವ ಜೇನುತುಪ್ಪ, ಅಂಟು, ಸಾಗೊ, ಏಲಕ್ಕಿ ಹಾಗೂ ಶುಂಠಿಯನ್ನು ಸಂಗ್ರಹಿಸಿ ಮಾರಿಕೊಂಡು ಬದುಕುತ್ತಾರೆ. ಇಲ್ಲಿ ಕೋಡರಸ್ ಮೂಲವಾಸಿಗಳ ಜೀವನಕ್ರಮವನ್ನು ಕೂಡ ತಿಳಿದುಕೊಳ್ಳಬಹುದು. ದೇವರೇ ನಿರ್ಮಿಸಿದ ಸೌಂದರ್ಯ ನಗರಿ ಕೇರಳದ ಈ ಹಳ್ಳಿ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಅಥವಾ ಹಾಟ್ಸ್ಪಾಟ್ ಅನ್ನಿಸಿಕೊಂಡಿದೆ. ಅತಿಹೆಚ್ಚು ಜನಪ್ರಿಯ ಹಾಗೂ ಸಮಾನತೆಯಿಂದ ಕೂಡಿದ ತಾಣ ಇದಾಗಿದೆ. ಇದಲ್ಲದೇ ಇಲ್ಲಿನ ಜಲಪಾತಗಳು ಅತಿರಮಣೀಯವಾಗಿವೆ. ಇಲ್ಲಿಂದ ಹೊರಡಲೇ ಬಾರದು ಅನ್ನಿಸುವ ಮಟ್ಟಿಗೆ ಆಕರ್ಷಿಸಿ ಬಿಡುತ್ತವೆ.
ಅತ್ತಿರಪಲ್ಲಿ ಜಲಪಾತ, ವೈಜಾಕಲ್ ಜಲಪಾತ ಹಾಗೂ ಚಪ್ರ ಜಲಪಾತಗಳು ಈ ಪ್ರದೇಶವನ್ನು ಜನಪ್ರಿಯ ಪ್ರವಾಸಿತಾಣವಾಗಿ ಮಾಡಿವೆ. ವರ್ಷದ ಎಲ್ಲಾ ಅವಧಿಯಲ್ಲೂ ಇಲ್ಲಿಗೆ ಬರಬಹುದು. ನಿತ್ಯ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಓಡಾಡಲು ಅವಕಾಶ ಇರುತ್ತದೆ. ಟ್ರೆಕ್ಕಿಂಗ್, ಪಿಕ್ನಿಕ್, ಶಾಪಿಂಗ್, ರಿವರ್ ರಾಫ್ಟಿಂಗ್ ಮತ್ತಿತರ ಆಕರ್ಷಣೆಗಳು ಈ ಪ್ರದೇಶದಲ್ಲಿ ಲಭ್ಯವಿದೆ. ಇದಕ್ಕೆ ಸಮೀಪದಲ್ಲಿಯೇ ಎರಡು ಅಮ್ಯೂಸ್ಮೆಂಟ್ ಪಾರ್ಕ್ ಕೂಡ ಇದೆ. ಡ್ರೀಮ್ವರ್ಡ್ ಹಾಗೂ ಸಿಲ್ವರ್ಸ್ಟ್ರೋಮ್ ಇದಾಗಿದೆ. ಈ ಎರಡು ಪಾರ್ಕ್ ಗಳು ಅತ್ತಿರಪಲ್ಲಿಯ ವೈಶಿಷ್ಟ್ಯವನ್ನು ಹಾಗೂ ವೈಶಾಲ್ಯತೆಯನ್ನು ಪ್ರದರ್ಶಿಸುತ್ತಿವೆ. ಅತ್ತಿಲಪಲ್ಲಿಯ ಶ್ರೀಮಂತಿಕೆಯನ್ನು ಪ್ರದಶರ್ಶಿಸುತ್ತಿವೆ. ನೈಸರ್ಗಿಕ ಸಂಪತ್ತು, ಆಂತರಿಕ ಶಕ್ತಿ, ಪಶ್ಚಿಮ ಘಟ್ಟ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಜನರಿಗೆ ಉಣಬಡಿಸುತ್ತಿವೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಬ್ಯಾಗ್ ಕಟ್ಟಿಕೊಂಡು ಹೊರಟು ನಿಲ್ಲಿ. ಇದಲ್ಲದೇ ಚಳಿಗಾಲದಲ್ಲೂ ಇತ್ತ ಪಯಣಿಸಬಹುದು. ಅತ್ತಿಲಪಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಇದೆ. ಇಲ್ಲಿಗೆ ತಲುಪಲು ರಸ್ತೆ ಬಳಸಬೇಕಾದರೂ, ಕೊಂಚ ದೂರದಲ್ಲಿಯೇ ರೈಲು ಹಾಗೂ ವಿಮಾನ ನಿಲ್ದಾಣಗಳು ಸಿಗುತ್ತವೆ.