ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ ಉದ್ಯಮಶೀಲತೆಯನ್ನು ಬೆಳಗಿದ ಗುಜರಾತಿಗಳನ್ನು ನೋಡಿದರೆ ಮತ್ತೊಂದೆಡೆ ಸತ್ಯಾಗ್ರಹ ಹಾಗು ಅಹಿಂಸೆ ಎಂಬ ಆಯುಧಗಳನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯವರನ್ನು ನಾವು ಕಾಣಬಹುದು. ಅಹಮದಾಬಾದ್ನಲ್ಲ್ಲಿ ಒಂದೆಡೆ ಐಹಿಕ ಸುಖ ಭೋಗಗಳು ತಮ್ಮ ತುತ್ತ ತುದಿಯನ್ನು ಪ್ರಕಟಪಡಿಸುತ್ತಿದ್ದರೆ, ಮತ್ತೊಂದೆಡೆ ವೈರಾಗ್ಯ ಆಧ್ಯಾತ್ಮಿಕ ಜೀವನಗಳ ಸೆಳೆತವನ್ನು ನಾವಿಲ್ಲಿ ಕಾಣಬಹುದು. ಈ ಎಲ್ಲ ವೈವಿಧ್ಯತೆಗಳ ಕಾರಣವಾಗಿ ಅಹಮದಾಬಾದ್ ಭಾರತವನ್ನು ಪ್ರತಿನಿಧಿಸುವ ಒಂದು ಮಹಾನಗರವಾಗಿ ನಮ್ಮ ಮುಂದೆ ನಿಂತಿದೆ. ಅಭಿವೃದ್ಧಿಯ ದೃಷ್ಟಿಯಿಂದ ಏಳನೆ ಮಹಾನಗರವೆಂದು ಗುರುತಿಸಲ್ಪಟ್ಟಿರುವ ಈ ನಗರವು ಭಾರತದಲ್ಲಿ ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ದೇಶವಾಗಿ ಗುರುತಿಸಿಕೊಂಡಿದೆ.
ಅಹಮದಾಬಾದ್ನ ಹಿಂದಿನ ಕತೆ
ಅಹಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ. ಇದು ಗಾಂಧಿನಗರದಿಂದ 32 ಕಿ.ಮೀ ದೂರದಲ್ಲಿ ಸಾಬರಮತಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಅಹಮದಾಬಾದ್ ಅನ್ನು ಹಿಂದೆ ಇಲ್ಲಿ ಆಳುತ್ತಿದ್ದ ಒಂದನೆ ಕರ್ಣದೇವ್ ಎಂಬ ಸೋಲಂಕಿ ರಾಜನಿಂದಾಗಿ ಕರ್ಣಾವತಿ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಸುಲ್ತಾನ್ ಅಹಮದ್ ಶಾ ಇದನ್ನು ವಶಪಡಿಸಿಕೊಂಡ ನಂತರ ಇದನ್ನು ಅಹಮದಾಬಾದ್ ಎಂದು ಕರೆಯಲು ಆರಂಭಿಸಲಾಯಿತು.
ಗತಕಾಲದ ಕುರುಹುಗಳು
ಸುಲ್ತಾನ್ ಅಹಮದ್ರ ಮೊಮ್ಮಗನಾದ ಮಹಮ್ಮದ್ ಬೆಗ್ಡನು ಈ ನಗರವನ್ನು ರಕ್ಷಿಸುವ ಸಲುವಾಗಿ ಇದರ ಸುತ್ತ 10 ಕಿ.ಮೀ ವ್ಯಾಸದ ಗೋಡೆಯನ್ನು ಕಟ್ಟಿಸಿದನು. ಇದಕ್ಕೆ 189 ಬುರುಜುಗಳು, 6,000ದಷ್ಟು ಕೋಟೆಯ ಮೇಲಿನ ಕೈಪಿಡಿಗಳನ್ನು ನಿರ್ಮಿಸಿ, ಇತರರು ಈ ನಗರದ ಮೇಲೆ ದಾಳಿ ಮಾಡಲು ಅಸಾಧ್ಯವೆನ್ನುವಂತೆ ಮಾಡಿದನು. ಈ ಗೋಡೆಗೆ ಸುಂದರವಾದ ಕೆತ್ತನೆ ಮತ್ತು ಬರಹಗಳಿಂದ ಕೂಡಿರುವ 12 ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವೊಂದು ದ್ವಾರಗಳಲ್ಲಿ ಬಾಲ್ಕನಿಗಳನ್ನು ಸಹ ನಿರ್ಮಿಸಲಾಗಿದೆ. ಮೊಘಲರ ಆಡಳಿತಾವಧಿಯಲ್ಲಿ ಅಹಮದಾಬಾದ್ ಚಕ್ರವರ್ತಿ ಅಕ್ಬರನ ವಶಕ್ಕೆ ಒಳಪಟ್ಟಿತು. ಅನಂತರ ಈ ನಗರದಲ್ಲಿ ನಾವು ಶಹಜಹಾನ್ ನಿರ್ಮಿಸಿದ ಕೆಲವು ಕಟ್ಟಡಗಳನ್ನು ಕಾಣಬಹುದು. ಶಹಿಬಾಗ್ನಲ್ಲಿರುವ ಮೋತಿ ಶಾಹಿ ಮಹಲನ್ನು ಶಹಜಹಾನ್ ನಿರ್ಮಿಸಿದನು.
ಈ ನಗರದ ಮೇಲೆ ಗಾಂಧೀಜಿಯವರ ಪ್ರಭಾವ
ಬ್ರಿಟೀಷರ ಆಡಳಿತಾವಧಿಯಲ್ಲಿ ಈ ನಗರಕ್ಕೆ ಅತಿ ಹೆಚ್ಚಿನ ಮಹತ್ವ ಬಂದಿತು. ಏಕೆಂದರೆ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತಿದ್ದ ಮಹಾತ್ಮ ಗಾಂಧೀಜಿಯವರು ಇಲ್ಲಿನ ಸಾಬರಮತಿ ನದಿ ತೀರದಲ್ಲಿ ಸತ್ಯಾಗ್ರಹ ಆಶ್ರಮವನ್ನು ( ಇಂದು ಇದನ್ನು ಸಾಬರಮತಿ ಆಶ್ರಮವೆಂದು ಕರೆಯಲಾಗುತ್ತಿದೆ) ಮತ್ತು ಕೊಚ್ರಬ್ ಆಶ್ರಮಮಗಳೆಂಬ ಎರಡು ಆಶ್ರಮಗಳನ್ನು ನಿರ್ಮಿಸಿದರು. ಗಾಂಧೀಜಿಯವರು ಅಹಮದಾಬಾದ್ನಲ್ಲಿರುವ ಸಾಬರಮತಿ ಆಶ್ರಮದಿಂದಲೆ ದಂಡಿ ಸತ್ಯಾಗ್ರಹವನ್ನು ಆರಂಭಿಸಿದ್ದು. ಬ್ರಿಟೀಷರ ಆಡಳಿತಾವಧಿಯಲ್ಲಿ ಇದನ್ನು " ಪೂರ್ವದ ಮ್ಯಾಂಚೆಸ್ಟರ್" ಎಂದು ಕರೆಯುತ್ತಿದ್ದರು. ಗಾಂಧೀಜಿಯವರ ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಜವಳಿ ಉದ್ಯಮವು ಸಾಕಷ್ಟು ಬೆಳವಣಿಗೆಯನ್ನು ಕಂಡಿತು. ಪ್ರಸಿದ್ಧವಾದ ಅರವಿಂದ್ ಮಿಲ್ಗಳು, ಕ್ಯಾಲಿಕೊ ಮಿಲ್ಗಳು ಈ ಸಮಯದಲ್ಲಿಯೇ ಸ್ಥಾಪನೆಯಾದವು, ಇವು ಇಂದಿಗು ಪ್ರಸಿದ್ಧವಾಗಿರುವ ಭಾರತೀಯ ಜವಳಿಯನ್ನು ಉತ್ಪಾದಿಸುತ್ತಿವೆ.
ಪ್ರವಾಸಿ ಆಕರ್ಷಣೆಗಳು
ಅಹಮದಾಬಾದ್ ಎಂಬುದು ಐತಿಹಾಸಿಕ ಸ್ಮಾರಗಳಿಂದ, ಬೃಹತ್ ಮಾಲ್ಗಳಿಂದ, ಸಿನಿಮಾ ಹಾಲ್ಗಳಿಂದ, ಮನಮೋಹಕವಾದ ಜೈನ ದೇವಾಲಯಗಳಿಂದ, ಸಿಡಿ ಸಯ್ಯಿದ್ ಮಸೀದಿ, ಸ್ವಾಮಿ ನಾರಾಯಣ ದೇವಾಲಯ, ಜಾಮ ಮಸೀದಿ, ಮಹುದಿ ಜೈನ ದೇವಾಲಯ, ಅಕ್ಷರಧಾಮ್, ನಗರದ ಗೋಡೆಗಳು ಹಾಗು ದ್ವಾರಗಳು, ಬಾದ್ಷಾ ನೊ ಹಜಿರೊ, ಝುಲ್ಟ ಮಿನಾರ, ಸರ್ಕೇಜ್ ರೋಝಾ, ದಾದ ಹರಿರ್ ವಾವ್, ಅಡಲಜ್ ಮೆಟ್ಟಿಲು ಬಾವಿ. ವಸ್ತು ಸಂಗ್ರಹಾಲಯಗಳು, ಪ್ರಾಕೃತಿಕ ಪ್ರವಾಸಿ ತಾಣಗಳಾದ ಇಂಡೋರ ಪ್ರಾಕೃತಿಕ ಉದ್ಯಾನವನ ಮತ್ತು ಕಂಕರಿಯ ಕೆರೆಗಳು ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.ಹೀಗೆ ಹತ್ತು ಹಲವು ಪ್ರವಾಸಿ ಆಕರ್ಷಣೆಗಳು ಈ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಜನಸಂಖ್ಯೆ
ಅಹಮದಾಬಾದ್ನ ಜನಸಂಖ್ಯೆಯು 4.5 ಕೋಟಿಯನ್ನು ದಾಟುತ್ತದೆ. ಅಹಮದಾಬಾದ್ನಲ್ಲಿ ವಣಿಕರು ( ವರ್ತಕರು) ಹೆಚ್ಚಾಗಿ ಕಂಡು ಬರುತ್ತಾರೆ. ಇವರಲ್ಲಿ ಬಹುತೇಕ ಮಂದಿ ಹಿಂದೂ ಮತ್ತು ಜೈನ ಧರ್ಮಗಳಿಗೆ ಸೇರಿರುತ್ತಾರೆ. ಭಾರತದಲ್ಲಿರುವ ಪಾರ್ಸಿಗಳಲ್ಲಿ ಬಹುತೇಕ ಮಂದಿ ಇಲ್ಲಿಯೇ ವಾಸಿಸುತ್ತಿದ್ದಾರೆ. ಇವರ ಜೊತೆಗೆ ಇಸ್ರೇಲಿನ ಯಹೂದ್ಯರ 300 ಕುಟುಂಬಗಳು ಅಹಮದಾಬಾದ್ನಲ್ಲಿ ನೆಲೆಗೊಂಡಿವೆ. ಇಲ್ಲಿನ ಜನಸಂಖ್ಯೆಯಲ್ಲಿ ಮುಸಲ್ಮಾನರದು ಪ್ರಮುಖವಾಗಿ ಎದ್ದು ಕಾಣುವ ಸಮುದಾಯವಾಗಿದೆ. ಗುಜರಾತಿಯು ಈ ರಾಜ್ಯದ ಭಾಷೆಯಾದರೆ, ಹಿಂದಿಯು ಇಲ್ಲಿನ ಶಿಕ್ಷಣಕ್ಕೆ, ವ್ಯವಹಾರಕ್ಕೆ, ಸರ್ಕಾರಿ ಮತ್ತು ಇನ್ನಿತರ ದೈನಂದಿನ ಕಾರ್ಯಕಲಾಪಗಳಿಗೆ ಬಳಸಲ್ಪಡುವ ಭಾಷೆಯಾಗಿದೆ.
ಹವಾಮಾನ
ಅಹಮದಾಬಾದ್ನಲ್ಲಿ ಬಿಸಿಲಿನಿಂದ ಕೂಡಿದ ಅರೆ ಒಣ ಹವೆಯ ಹವಾಮಾನವನ್ನು ನಾವು ಕಾಣಬಹುದು. ಇದು ಅತ್ತ ಮರುಭೂಮಿ ಮತ್ತು ಇತ್ತ ಆರ್ದ್ರತೆಯಿಂದ ಕೂಡಿರುವ, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ನಗರದಲ್ಲಿ ಬೇಸಿಗೆ ,ಮಳೆಗಾಲ ಮತ್ತು ಚಳಿಗಾಲಗಳೆಂಬ ಮೂರು ಕಾಲಗಳನ್ನು ನಾವು ಕಾಣಬಹುದು. ಮಳೆಗಾಲದ ದಿನಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಇಲ್ಲಿನ ಹವಾಮಾನವು ಒಣ ಹವೆಯಿಂದ ಕೂಡಿರುತ್ತದೆ. ಜನವರಿಯು ಉತ್ತರದ ಕಡೆಯಿಂದ ಬೀಸುವ ಶೀತ ಮಾರುತಗಳ ಫಲವಾಗಿ ಸ್ವಲ್ಪ ಮಟ್ಟಿಗೆ ಚಳಿಯಿಂದ ಕೂಡಿರುತ್ತದೆ.
ಸಂಸ್ಕೃತಿ ಮತ್ತು ಹಬ್ಬಗಳು
ಅಹಮದಾಬಾದ್ನಲ್ಲಿ ವರ್ಣರಂಜಿತವಾದ ಸಾಂಸ್ಕೃತಿಕ ಹಿನ್ನಲೆಯ ಸಂಪ್ರದಾಯಗಳನ್ನು ನಾವು ಕಾಣಬಹುದು. ಇವು ತಮ್ಮ ವೈವಿಧ್ಯಮಯವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮುದಾಯಗಳ ಹಿನ್ನಲೆಯೊಂದಿಗೆ ಬಂದಿರುತ್ತವೆ. ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದಲ್ಲಿ ಗರ್ಬ ಎಂಬ ಸಾಂಪ್ರದಾಯಿಕ ಗುಜರಾತಿ ಜನಪದ ನೃತ್ಯವನ್ನು ಆಡಲಾಗುತ್ತದೆ. ದೀಪಾವಳಿ, ಹೋಳಿ, ಗಣೇಶ್ ಚತುರ್ಥಿ, ಗುಡಿ ಪಡ್ವ, ಈದ್ ಉಲ್- ಫಿತರ್, ಮೊಹರಂ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಇಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.
ಸಂಪರ್ಕ ವ್ಯವಸ್ಥೆ
ಈ ನಗರದಲ್ಲಿ ಸುತ್ತಾಡಲು ಬಸ್ಸುಗಳ ಸೌಕರ್ಯ ಉತ್ತಮವಾಗಿದೆ. ಅಹಮದಾಬಾದ್ ಮುನ್ಸಿಪಾಲ್ ಟ್ರಾನ್ಸ್ ಪೋರ್ಟ್ ಸರ್ವಿಸ್ ( AMTS) ಈ ನಗರದಲ್ಲಿ ಸುತ್ತಾಡುವವರಿಗೆ ಬಸ್ ಸೌಕರ್ಯವನ್ನು ಒದಗಿಸುತ್ತದೆ. ಅಹಮದಾಬಾದ್ನ ಪ್ರಮುಖ ರೈಲು ನಿಲ್ದಾಣವು ಕಲುಪುರ್ ಎಂಬ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ನಿಲ್ದಾಣವಲ್ಲದೆ ಅಹಮದಾಬಾದ್ನಲ್ಲಿ ವಟ್ವ, ಅಸರ್ವ, ಗಾಂಧೀಗ್ರಾಮ್, ಚಂಡ್ಲೊಡಿಯ, ವಸ್ತ್ರಪುರ್, ಕಾಲಿ ಗ್ರಾಮ್, ಸಾಬರಮತಿ, ನರೊಡ, ಸರ್ಖೇಜ್, ಆಮ್ಲಿ, ಮಾನಿನಗರ್ ಮುಂತಾದ ರೈಲು ನಿಲ್ದಾಣಗಳು ಇವೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಹಮದಾಬಾದ್ ನಗರದ ಕೇಂದ್ರಭಾಗದಿಂದ ಕೇವಲ 15 ಕಿ.ಮೀ ಹಾಗು ಅಹಮದಾಬಾದ್ ರೈಲು ಮತ್ತು ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿದೆ. ಇದು ದೇಶಿಯ ಮತ್ತು ವಿದೇಶಿಯ ಪ್ರವಾಸಿಗರಿಗೆ ವಿಮಾನ ಯಾನದ ಸೇವೆಯನ್ನು ಒದಗಿಸುತ್ತದೆ.
ಉದಯೋನ್ಮುಖ ನಗರ
ಅಹಮದಾಬಾದ್ ಒಂದು ತೀವ್ರ ವೇಗದಿಂದ ಬೆಳೆಯುತ್ತಿರುವ ನಗರವಾಗಿದೆ. ಹಲವಾರು ರಿಯಲ್ ಎಸ್ಟೇಟ್, ಆಟೋ ಮೊಬೈಲ್, ಕೆಮಿಕಲ್, ಫಾರ್ಮಸಿಟಿಕಲ್, ಪೆಟ್ರೋಲಿಯಂ ಮತ್ತು ಐ ಟಿ ಉದ್ಯಮಗಳು ಇಲ್ಲಿಗೆ ಬರುತ್ತಿವೆ ಮತ್ತು ಬಂದು ನೆಲೆಗೊಳ್ಳುತ್ತಿವೆ. ಈ ನಗರದಲ್ಲಿ ಒಂದು ಐಐಎಮ್ ( ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್) - ಅಹಮದಾಬಾದ್, NID ( ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಡಿಸೈನ್), NIFT( ನ್ಯಾಷನಲ್ ಇನ್ಸಿಟ್ಯೂ ಆಫ್ ಫ್ಯಾಶನ್ ಟೆಕ್ನಾಲಾಜಿ), ಧಿರುಬಾಯ್ ಅಂಬಾನಿ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೆಶನ್ ಅಂಡ್ ಟೆಕ್ನಾಲಜಿ ಮತ್ತು ಇನ್ನಿತರ ವಿದ್ಯಾಸಂಸ್ಥೆಗಳು ಸಹ ಇಲ್ಲಿ ನೆಲೆಗೊಂಡವೆ.
ಇಂದಿನ ಅಹಮದಾಬಾದ್ ನಗರವು ಎಂತಹ ಪ್ರವಾಸಿಗನನ್ನು ಸಹ ಮೈಮರೆಸುವಂತಹ ಅಂಶಗಳನ್ನು ಹೊಂದಿದೆ. ಇಲ್ಲಿ ಬೃಹತ್ ಮಾಲ್ಗಳಿಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದ ಹೋಟೆಲ್ಗಳವರೆಗೆ, ಕಾಡಿನಲ್ಲಿನ ಸಫಾರಿಯಿಂದ ಹಿಡಿದು ಐತಿಹಾಸಿಕ ತಾಣಗಳನ್ನು ವೀಕ್ಷಿಸುವವರೆಗೆ ಪ್ರತಿಯೊಬ್ಬ ಪ್ರವಾಸಿಗನನ್ನು ಸಂತುಷ್ಟಗೊಳಿಸುವ ಎಲ್ಲಾ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ.