ಇದರ ಮೈಮಾಟವೆ ಹಾಗೆ, ಒಮ್ಮೆ ನೋಡಿದರೆ ಸಾಕು ಹೇಗೆ ಚುಂಬಕವು ಕಬ್ಬಿಣವನ್ನು ಎಳೆಯುತ್ತದೊ ಅದೆ ರೀತಿಯಲ್ಲಿ ಇದು ಪ್ರವಾಸಿಗರನ್ನು ತನ್ನೆಡೆ ಎಳೆಯುತ್ತದೆ. ಎಳಗಿರಿ ಅಥವಾ ಯಳಗಿರಿ ಎಂತಲೂ ಕರೆಯಲ್ಪಡುವ ಈ ಚಿಕ್ಕ ಹಾಗೂ ಸುಂದರ ಗಿರಿಧಾಮವು ಕೆಲವು ವಿಶೇಷ ಪ್ರವಾಸಿ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ.
ಪ್ಯಾರಾಗ್ಲೈಡಿಂಗ್, ಚಾರಣದಂತಹ ರೋಮಾಂಚನಕಾರಿ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಈ ಪುಟ್ಟ ಗಿರಿಧಾಮವು ತನ್ನ ಸುತ್ತಲೂ ಹಸಿರಿನಿಂದ ಕೂಡಿದ ದಟ್ಟವಾದ ಹುಲ್ಲುಗಾವಲು, ಗಿಡ ಮರಗಳು ಹಾಗೂ ಗುಲಾಬಿ ತೋಟಗಳನ್ನು ಹೊಂದಿದ್ದು ನಯನಮನೋಹರವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ.
ಚಿತ್ರಕೃಪೆ: Ashwin Kumar
ಬ್ರಿಟೀಷರ ಆಡಳಿತ ಕಾಲದಲ್ಲಿ ಈ ಸುಂದರ ಗಿರಿಧಾಮವು ಪ್ರವರ್ಧಮಾನಕ್ಕೆ ಬಂದಿತು. ಅದಕ್ಕೂ ಮುಂಚೆ ಇದೊಂದು ಸಾಮಾನ್ಯ ಪ್ರದೇಶವಾಗಿತ್ತು ಹಾಗೂ ಇದರ ಸೌಂದರ್ಯದ ಕುರಿತು ಅಷ್ಟೊಂದು ಉಲ್ಲೇಖವಿರಲಿಲ್ಲ. 1950 ಕ್ಕೂ ಮುಂಚೆ ಸಂಪೂರ್ಣ ಎಳಗಿರಿ ಪ್ರದೇಶವು ಎಳಗಿರಿ ಜಮೀಂದಾರರ ಒಡೆತನದ ಭೂಮಿಯಾಗಿತ್ತು. ನಂತರ ಸರ್ಕಾರವು ಇದನ್ನು ಅಧೀನ ಪಡಿಸಿಕೊಂಡಿತು.
ತಮಿಳುನಾಡಿನ ವೇಲೂರು ಜಿಲ್ಲೆಯಲ್ಲಿ ಬರುವ ಎಳಗಿರಿಯು ಜೋಲಾರಪೆಟ್ಟೈ ಹಾಗೂ ವನಿಯಂಬಾಡಿ ಎಂಬ ಎರಡು ಪಟ್ಟಣಗಳ ಮಧ್ಯೆ ಸ್ಥಿತವಿದೆ. ತಮಿಳುನಾಡಿನ ಜನಪ್ರೀಯ ಗಿರಿಧಾಮಗಳಾದ ಊಟಿ ಹಾಗೂ ಕೊಡೈಕೆನಲ್ ರೀತಿಯಲ್ಲಿ ಈ ಗಿರಿಧಾಮ ಇನ್ನೂ ಅಷ್ಟೊಂದು ಅಭಿವೃದ್ಧಿಗೊಂಡಿಲ್ಲ.
ಪುಂಗನೂರು ಕೆರೆ, ಚಿತ್ರಕೃಪೆ: cprogrammer
ಆದರೆ ಜಿಲ್ಲಾಡಳಿತವು ಈ ಪ್ರದೇಶವನ್ನು ಒಂದು ಸುಂದರ ಹಾಗೂ ಪ್ರಸಿದ್ಧವಾದ ಗಿರಿಧಾಮ ಮಾಡಬೇಕಂತಿದ್ದು ಅದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅದರ ಪ್ರಕಾರವಾಗಿ ಇಲ್ಲಿ ಪ್ಯಾರಾಗ್ಕೈಡಿಂಗ್ ಹಾಗೂ ರಾಕ್ ಕ್ಲೈಂಬಿಂಗ್ ನಂತಹ ಚಟುವಟಿಕೆಗಳನ್ನು ಸಾಕಷ್ಟು ಪ್ರೋತ್ಸಾಹಿಸುತ್ತಿದೆ.
ಇನ್ನುಳಿದಂತೆ ಟ್ರೆಕ್ಕಿಂಗ್ ಇಲ್ಲಿ ಸಾಕಷ್ಟು ಜನಪ್ರೀಯತೆ ಪಡೆದಿದ್ದು ರಾಜ್ಯದ ಹಲವಾರು ಭಾಗಗಳಿಂದ ಉತ್ಸಾಹಿ ತರುಣ ಪ್ರವಾಸಿಗರು ಈ ಗಿರಿಧಾಮಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ. ಚಾರಣವೆಂದಾಗ ಇಲ್ಲಿ ಕೆಲವು ಆಯ್ಕೆಗಳಿದ್ದು ಚಾರಣಿಗರು ತಮಗಿಷ್ಟವಾದ ಪಥದಲ್ಲಿ ಚಾರಣ ಕೈಗೊಳ್ಳಬಹುದು.
ಸ್ವಾಮಿ ಮಲೈದೆಡೆ ಚಾರಣ, ಚಿತ್ರಕೃಪೆ: solarisgirl
ಎಳಗಿರಿಯಲ್ಲಿ ಅತಿ ಎತ್ತರದ ಗುಡ್ಡ ಸ್ವಾಮಿ ಮಲೈ ಬೆಟ್ಟ. ತದನಂತರ ಜಾವಡಿ ಬೆಟ್ಟ ಚಾರಣವೂ ಸಹ ಸಾಕಷ್ಟು ರೋಮಾಂಚಕತೆಯಿಂದ ಕೂಡಿದೆ. ಎಳಗಿರಿಯಲ್ಲಿ ಹೆಚ್ಚಾಗಿ ತಮಿಳು ಹಿಂದುಗಳಿದ್ದು ಅವರು ಸಾಮಾನ್ಯವಾಗಿ ಶಿವ ಹಾಗೂ ಪಾರ್ವತಿಯನ್ನು ನಾಚಿಯಪ್ಪ ಹಾಗೂ ನಾಚಿಯಮ್ಮನ ಅವತಾರದಲ್ಲಿ ಪೂಜಿಸುತ್ತಾರೆ.
ನೇಚರ್ ಪಾರ್ಕ್, ಪುಂಗನೂರು ಕೃತಕ ಕೆರೆ, ಜಲಗಂಪಾರೈ ಜಲಪಾತ, ಸ್ವಾಮಿ ಮಲೈ ಬೆಟ್ಟ, ದೂರದರ್ಶಕ ಕೇಂದ್ರ ಎಳಗಿರಿಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ಪ್ರವಾಸಿ ಆಕರ್ಷಣೆಗಳಾಗಿವೆ. ಸ್ವಾಮಿ ಮಲೈ ಬೆಟ್ಟ ಚಾರಣ ಸಾಕಷ್ಟು ಹೆಸರುವಾಸಿಯಾಗಿದೆ.
ಬೆಂಗಳೂರಿಗೆ ಹತ್ತಿರದಲ್ಲಿರುವ ಬಡವರ ಊಟಿ!
ಮೂರು ಕಿ.ಮೀ ಹತ್ತುವ ಹಾಗೂ ಮೂರು ಕಿ.ಮೀ ಇಳಿಯುವ ಮಾರ್ಗವನ್ನು ಇದು ಹೊಂದಿದ್ದು ಚಾರಣ ಕಷ್ಟಕರ ಎನಿಸುವುದಿಲ್ಲ. ಆದರೆ ಈ ಚಾರಣ ಮಾಡಲು ಎಳಗಿರಿಯ ಮಂಗಲಂ ಹಳ್ಳಿಗೆ ತಲುಪಿ ಅಲ್ಲಿಂದ ಪ್ರಾರಂಭಿಸ ಬೇಕು. ಸ್ವಾಮಿ ಮಲೈ ಗಟ್ಟಿಯಾದ ಅಡಿಪಾಯ ಹಾಗೂ ಮೊನಚಾದ ಶಿಖರ ಹೊಂದಿದ್ದು "ಕೇಕ್" ಆಕಾರದಲ್ಲಿ ಕಂಡುಬರುತ್ತದೆ.
ಹೇಗಿದೆ ನೋಡಿ, ಊಟಿಯ ಮೈಮಾಟ!
ಜೋಲಾರಪೆಟ್ಟೈ ಎಳಗಿರಿಗೆ ಹತ್ತಿರದಲ್ಲಿರುವ ಪ್ರಮುಖ ಪಟ್ಟಣವಾಗಿದೆ. ಜೋಲಾರಪೆಟ್ಟೈ ರೈಲು ನಿಲ್ದಾಣ ಹೊಂದಿದ್ದು ಚೆನ್ನೈ, ಬೆಂಗಳೂರು ಮುಂತಾದ ಕಡೆಗಳಿಂದ ಬರುವ ರೈಲುಗಳಿಗೆ ನಿಲ್ದಾಣವಾಗಿದೆ. ಇನ್ನೂ ಎಳಗಿರಿ ಜೋಲಾರಪೆಟ್ಟೈನಿಂದ 21 ಕಿ.ಮೀ ದೂರವಿದ್ದು ಬಾಡಿಗೆ ಕಾರುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ.