ಕರ್ನಾಟಕದ ಬಂದರು ನಗರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಾಕಷ್ಟು ವಿಶೇಷತೆಯುಳ್ಳ ನಗರ ಪ್ರದೇಶವಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವ ಮಂಗಳೂರಿನಲ್ಲಿ ನೋಡಲು ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಧಾರ್ಮಿಕವಾಗಿಯೂ ಮಹತ್ವಗಳಿಸಿರುವ ಅನೇಕ ಗುಡಿ-ಗುಂಡಾರಗಳು ಮಂಗಳೂರಿನಲ್ಲಿ ಸ್ಥಿತವಿದೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ
ವರ್ಷಪೂರ್ತಿ ಪ್ರವಾಸಿಗರನ್ನು ಪಡೆಯುವ ಮಂಗಳೂರಿಗೆ ಮಂಗಳೂರು ಎಂಬ ಹೆಸರು ಬರಲು ಒಂದು ವಿಶಿಷ್ಟವಾದ ಕಥೆಯಿದೆ. ಹಿಂದೆ ತುಳುನಾಡು ಸಾಮ್ರಾಜ್ಯ ಎಂದು ಕರೆಯಲ್ಪಡುತ್ತಿದ್ದ ಎಂದು ಕರೆಯಲ್ಪಡುತ್ತಿದ್ದ ಮಂಗಳೂರಿನ ಪ್ರದೇಶವು ಅಹೆಪಾ ಸಾಮ್ರಾಜ್ಯದಿಂದ ನಿರ್ವಹಿಸಲ್ಪಡುತ್ತಿತ್ತು.
ಚಿತ್ರಕೃಪೆ: Ssriram mt
ಮಲಬಾರ್ ಪ್ರಾಂತ್ಯದ ರಾಣಿಯಾದ ಪರಿಮಳ ಒಮ್ಮೆ ಕಾರ್ಯಾಭಾರ ಮಾಡುತ್ತಿದ್ದಾಗ ನಾಥ ಸಂಪ್ರದಾಯದ ಮುಖ್ಯ ಗುರುಗಳಾದ ಮತ್ಸ್ಯೇಂದ್ರನಾಥರು ಇಲ್ಲಿಗೆ ಭೇಟಿ ನೀಡಿದ್ದರು. ಮತ್ಸ್ಯೇಂದ್ರನಾಥರ ಪ್ರಭಾವ ಹಾಗೂ ಅವರ ಪ್ರವಚನದಿಂದಾಗಿ ಪರಿಮಳ ಇಹ ಲೋಕದ ಎಲ್ಲ ಭೋಗ ಭಾಗ್ಯಗಳ ಮೇಲೆ ನಿರಾಸಕ್ತಿ ಹೊಂದಿದಳು ಹಾಗೂ ಮತ್ಸ್ಯೇಂದ್ರನಾಥರ ಅನುಯಾಯಿಯಾದಳು.
ಹೀಗೆ ಅನುಯಾಯಿಯಾದ ಪರಿಮಳ ಮತ್ಸ್ಯೇಂದ್ರನಾಥರ ಶಿಷ್ಯೆಯಾಗಿ ಅವರಿಂದ ದೀಕ್ಷೆಯನ್ನು ಸ್ವೀಕರಿಸಿದಳು. ಈ ಸಂದರ್ಭದಲ್ಲಿ ಗುರುಗಳು ಆಕೆಗೆ ಪ್ರೇಮಳಾದೇವಿ ಎಂದು ಮರುನಾಮಕರಣ ಮಾಡಿದರು. ಪ್ರೇಮಳಾದೇವಿಯು ಅತ್ಯಂತ ಸಾಧ್ವಿಯಾಗಿ ದೇವಿಯ ಕೃಪೆಗೆ ಪಾತ್ರಳಾಗಿ ಗುರುವಿನ ಜೊತೆ ಸಂಚಾರ ಆರಂಭಿಸಿದಳು. ಹೀಗೊಮ್ಮೆ ಸಂಚರಿಸುತ್ತ ಬರುವಾಗ ಇಂದಿನ ಮಂಗಳೂರು ಪ್ರದೇಶಕ್ಕೆ ಭೇಟಿ ನೀಡಿದ್ದರು.
ಚಿತ್ರಕೃಪೆ: Ssriram mt
ಈ ಸಮಯದಲ್ಲಿ ಪ್ರೇಮಿಳಾದೇವಿಯ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿ ಇಲ್ಲಿಯೆ ಅವಳು ತನ್ನ ಪ್ರಾಣ ತ್ಯಾಗ ಮಾಡಬೆಕಾಯಿತು. ಈ ಹೊತ್ತಿಗಾಗಲೆ ಪ್ರೇಮಿಳಾದೇವಿಯು ಸ್ಥಳೀಯವಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದ್ದಳು ಹಾಗೂ ಯಾರಾದರೂ ಈ ತಪಸ್ವಿಯ ಪ್ರವಚನ ಕೇಳಿದಾಗ, ದರ್ಶನ ಮಾಡಿದಾಗ ಅವರಿಗೆ ಮಂಗಳವುಂಟಾಗುತ್ತಿತ್ತು.
ಹೀಗಾಗಿ ಸ್ಥಳೀಯರೆಲ್ಲರೂ ಸೇರಿ ಮಂಗಳಾದೇವಿ ಎಂದು ಕರೆದು ಆಕೆಗೆ ಒಂದು ದೇಗುಅಲವನ್ನು ನಿರ್ಮಿಸಿದರು. ದಿನೆ ದಿನೆ ಈ ದೇಗುಲ ಸಾಕಷ್ಟು ಪ್ರಸಿದ್ಧಿ ಪಡೆಯತೊಡಗಿತು. ನಂತರ ಕುಂದವರ್ಮ ಎಂಬ ರಾಜನು ಇಬ್ಬರು ಸಂತರುಗಳ ಅಣತಿಯಂತೆ ಮಂಗಳಾದೇವಿಯ ದೇವಾಲಯವನ್ನು ಮತ್ತಷ್ಟು ವೈಭವಯುತವಾಗಿ ನವೀಕರಣಗೊಳಿಸಿದನು. ಅಂದಿನಿಂದ ಈ ಪ್ರಾಂತ್ಯವು ಮಂಗಳಪುರ ಎಂದು ಗುರುತಿಸಲ್ಪಟ್ಟಿತು.
ಚಿತ್ರಕೃಪೆ: Gopala Krishna A
ಹೀಗೆ ಸಮಯ ಕಳೆದ ಹಾಗೆ ಮಂಗಳಪುರವು ಕ್ರಮೇಣವಾಗಿ ಮಂಗಳೂರು ಎಂಬ ಇಂದಿನ ಹೆಸರನ್ನು ಪಡೆಯಿತು ಹಾಗೂ ಮಂಗಳಾದೇವಿ ಈ ಊರಿನ ಮುಖ್ಯ ದೇವಿಯಾಗಿ ಪೂಜಿಸಲ್ಪಡತೊಡಗಿದಳು. ದುರೆಗ್ಯ ಅವತಾರವೆನ್ನಲಾಗುವ ಮಂಗಳಾದೇವಿಯು ಪ್ರಾಯಶಃ ಮಂಗಳೂರಿನ ಪ್ರಪ್ರಥಮ ಶಕ್ತಿಯ ದೇವಾಲಯವೂ ಆಗಿರಬಹುದೆಂದು ಹೇಳಲಾಗುತ್ತದೆ.
ಅಲ್ಲದೆ ಮಂಗಳೂರಿನ ಪ್ರಖ್ಯಾತ ಶಿವನಿಗೆ ಮುಡಿಪಾದ ಕದ್ರಿಯ ಮಂಜುನಾಥ ದೇವಾಲಯದೊಂದಿಗೂ ಬಲು ಪುರಾತನ ಕಾಲದಿಂದ ಮಂಗಳಾದೇವಿಯ ದೇವಾಲಯವು ಸಂಬಂಧವನ್ನು ಹೊಂದಿಕೊಂಡು ಬಂದಿದೆ. ಕದ್ರಿ ದೇವಾಲಯ ಉತ್ಸವ ಪ್ರಾರಂಭ ಸಂದರ್ಭದಲ್ಲಿ ಕದ್ರಿ ಯೋಗಿರಾಜ ಮಠದ ಸನ್ಯಾಸಿಗಳು ಮಂಗಳಾದೇವಿಯ ದರ್ಶನ ಪಡೆದು ಉಡುಗೊರೆಗಳನ್ನು ಅರ್ಪಿಸುತ್ತಾರೆ.
ಮಂಗಳೂರು-ಕಾರವಾರ ರಸ್ತೆ ಮಾರ್ಗದಲ್ಲಿ ಸಿಗುವ ಸುಂದರ ಸ್ಥಳಗಳು!
ಮಂಗಳೂರಿನ ಬೋಳಾರ ಅಥವಾ ಬೋಳಾರ್ ಪ್ರದೇಶದಲ್ಲಿ ಮಂಗಳಾದೇವಿಯ ದೇವಾಲಯವಿದ್ದು ನಿತ್ಯವು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಊರಿಗೆ ಹೆಸರು ಬರಲು ಕಾರಣವಾದ ಮುಖ್ಯ ದೇವಿ ಇವಳಾಗಿರುವುದರಿಂದ ಪ್ರವಾಸಿಗರಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ ಈ ದೇವಿಯ ದೇವಾಲಯ. ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿದೆ ಈ ದೇವಾಲಯ. ನವರಾತ್ರಿ ಹಬ್ಬವನ್ನು ಇಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮಗಳಿಂದ ಆಚರಿಸಲಾಗುತ್ತದೆ.
ಮಂಗಳೂರಿಗಿರುವ ರೈಲುಗಳ ವೇಳಾಪಟ್ಟಿ