ಏನು ಕಪ್ಪೆ ದೇವಾಲಯವೆ ಎಂದು ಆಶ್ಚರ್ಯ ಪಡಬೇಡಿ. ಎಂತೆಂತಹ ಆಶ್ಚರ್ಯಗಳನ್ನು ಹೊತ್ತು ನಿಂತಿರುವ ಭಾರತ ಎಂಬ ಅಚ್ಚರಿಗಳ ದೇಶದಲ್ಲಿ ಇಂತಹ ಒಂದು ದೇವಾಲಯವಿರುವುದು ಅಷ್ಟೊಂದು ದೊಡ್ಡ ಮಾತೇನೂ ಅಲ್ಲ ಬಿಡಿ. ಆದರೂ ಸಾಮಾನ್ಯವಾಗಿ ಎಲ್ಲಿಯೂ ಕಂಡು ಕೇಳದ ಈ ರೀತಿಯ ದೇವಾಲಯಗಳು ಒಂದು ವಿಚಿತ್ರ ಕುತೂಹಲವನ್ನು ಮೂಡಿಸುವುದಂತೂ ಸತ್ಯ.
ನೀವು ಖಂಡಿತವಾಗಿಯೂ ಅಚ್ಚರಿ ಪಡುವಂತಹ ದೇವಾಲಯಗಳು!
ಪ್ರಸ್ತುತ ಲೇಖನವು ಅಂತಹುದೆ ಒಂದು ವಿಚಿತ್ರ ದೇವಾಲಯದ ಕುರಿತು ತಿಳಿಸುತ್ತದೆ. ನಿಮಗೆ ಇಂತಹ ವಿಚಿತ್ರತೆಗಳಲ್ಲಿ ಅಥವಾ ವಿಚಿತ್ರ ರಚನೆಗಳನ್ನು ನೋಡುವ ಬಯಕೆಯಿದ್ದರೆ ಸಮಯಾವಕಾಶ ಮಾಡಿಕೊಂಡು ಒಂದೊಮ್ಮೆ ಉತ್ತರ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಿ ಈ ದೇವಾಲಯವನ್ನೊಮ್ಮೆ ನೋಡಿ ಬಂದು ಬಿಡಿ.
ಚಿತ್ರಕೃಪೆ: Abhi9211
ಕೆಲವು ಪೌರಾಣಿಕ ಸಾಹಿತ್ಯಗಳಲ್ಲಿ ಉಲ್ಲೇಖಿಸಲಾಗಿರುವಂತೆ ಮಂಡೂಕಗಳು ಅಂದರೆ ಕಪ್ಪೆಗಳು ಸಂತಾನೊತ್ಪತ್ತಿ ಶಕ್ತಿಗೆ ಹೆಸರುವಾಸಿಯಾಗಿವೆ. ಅಷ್ಟೆ ಅಲ್ಲ ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ, ಐಶ್ವರ್ಯ ಹಾಗೂ ಸಿರಿ-ಸಂಪತ್ತುಗಳಿಗೆ ರಾಯಭಾರಿಯನ್ನಾಗಿ ಕಪ್ಪೆಗಳನ್ನು ಉಲ್ಲೇಖಿಸಲಾಗಿದೆಯಂತೆ! ಹಾಗಾಗಿ ಈ ದೇವಾಲಯಕ್ಕೆ ವಿಶೆಷವಾದ ಮಹತ್ವ ಬಂದಿದ್ದು ಹೆಚ್ಚು ಹೆಚ್ಚು ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.
ಆದರೆ ಗಮನಿಸಬೇಕಾದ ಒಂದು ಅಂಶವೆಂದರೆ ಎಲ್ಲ ಸಮಯದಲ್ಲೂ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುವುದಿಲ್ಲ. ಕೆಲವು ನಿರ್ದಿಷ್ಟ ಸಮಯದಲ್ಲಿ ಅಂದರೆ ದಿಪಾವಳಿಯ ಹಬ್ಬದ ಸಂದರ್ಭದಲ್ಲಿ, ಶಿವರಾತ್ರಿ ಹಾಗೂ ಶ್ರಾವಣ ಸೋಮವಾರಗಳಂದು ಈ ದೇವಾಲಯಕ್ಕೆ ಭಕ್ತರ ದಂಡೆ ಹರಿದು ಬರುತ್ತದೆ. ಅದರಲ್ಲೂ ವಿಶೇಷವಾಗಿ ದೀಪಾವಳಿಯ ಸಮಯ ಈ ದೇವಾಲಯ ತುಂಬಿರುತ್ತದೆ.
ಚಿತ್ರಕೃಪೆ: Abhi9211
ಇನ್ನೊಂದು ಅಂಶವೆಂದರೆ ಮಕ್ಕಳಿಲ್ಲದ ದಮ್ಪತಿಗಳು ಹಾಗೂ ಬಡತನದಿಂದ ಮುಕ್ತಿ ಪಡೆಯ ಬಯಸುವವರು ಇಲ್ಲಿ ಪ್ರಮುಖವಾಗಿ ಬರುತ್ತಾರೆ. ಅವರವರ ಭಕ್ತಿ, ನಂಬಿಕೆ ಹಾಗೂ ಶೃದ್ಧೆಗಳಿಗನುಸಾರವಾಗಿ ಕಪ್ಪೆಯ ಆಶೀರ್ವಾದ ದೊರೆತು ಅವರ ಬೇಡಿಕೆಗಳು ಈಡೇರುತ್ತವೆ ಎಂದು ಸ್ಥಳೀಯವಾಗಿ ನಂಬಲಾಗುತ್ತದೆ.
ಮೂಲತಃ ಇದು ಶಿವನಿಗೆ ಮುಡಿಪಾದ ದೇವಾಲಯವಾಗಿದೆಯಾದರೂ ಕಪ್ಪೆಯ ಬೆನ್ನಿನ ಮೇಲೆ ಇದನ್ನು ಸುಂದರವಾಗಿ ನಿರ್ಮಿಸಲಾಗಿದೆ. ಸ್ಥಳೀಯವಾಗಿ ಇದನ್ನು ಮಂಡೂಕ ಮಂದಿರ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಮಂಡೂಕ ವಿದ್ಯೆಯ ಪ್ರಕಾರವಾಗಿ ಕಪ್ಪೆಯ ಬೆನ್ನಿನ ಮೇಲೆ ಇಡಲಾದ ತಾಂತ್ರಿಕ ಚಕ್ರದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಚಿತ್ರಕೃಪೆ: Abhi9211
ಒಳ್ಳೆಯ ಹಾಗೂ ಹಿತಕರವಾದ ದೃಷ್ಟಿಯಿಂದ ಇಲ್ಲಿ ತಾಂತ್ರಿಕ ಆಚರಣೆಗಳಿಗೆ ಮಾನ್ಯತೆ ನಿಡಲಾಗಿದೆ. ಈ 200 ವರ್ಷಗಳ ಪುರಾತನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅವರ ದಾರಿದ್ರ್ಯ ನಿವಾರಣೆಯಾಗುತ್ತದೆಂದು ನಂಬಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಒಂದು ದಂತ ಕಥೆಯೂ ಸಹ ಇದೆ.
ಹಿಂದೊಮ್ಮೆ ರಜಪೂತ ದೊರೆಯಾದ ಭಕತ್ ಸಿಂಗ್ ಎಂಬಾತನಿಗೆ ಎಲ್ಲಿಲ್ಲದ ಕಷ್ಟಗಳು ಎದುರಾಯಿತು. ಹೀಗೆ ಸಮಯ ಉರುಳುತ್ತಿದ್ದ ಸಂದರ್ಭದಲ್ಲಿ ಕಪ್ಪೆಯ ಆಶೀರ್ವಾದವು ರಾಜನಿಗೆ ಹಾಗೂ ಅವನ ಪ್ರಜೆಗಳಿಗೆ ಲಭಿಸಿತಂತೆ. ಅಂದಿನಿಂದ ರಾಜನ ಎಲ್ಲ ಕಷ್ಟಗಳು ದೂರವಾಗಿ ಸಕಲ ಸಮ್ಪತ್ತುಗಳು ದೊರೆತವಂತೆ, ಅಷ್ಟೆ ಅಲ್ಲ ಅವನ ಅನುಯಾಯಿಗಳಿಗೂ ಎಲ್ಲ ರೀತಿಯ ಕಲ್ಯಾಣಗಳು ಉಂಟಾಯಿತಂತೆ.
ಈ ಪ್ರಾಕೃತಿಕ ವಿಸ್ಮಯಗಳನ್ನು ನೋಡಿದ್ದೀರಾ?
ಇದರಿಂದ ಪ್ರಸನ್ನನಾದ ರಾಜನು ಕಪ್ಪೆಗೆ ಗೌರವಾರ್ಥವಾಗಿ ಮಂಡೂಕ ತಂತ್ರದ ಪ್ರಕಾರವಾಗಿ ಈ ದೇವಾಲಯವನ್ನು ನಿರ್ಮಿಸಿದನೆನ್ನಲಾಗಿದೆ. ಅಷ್ಟಕ್ಕೂ ಈ ದೇವಾಲಯವಿರುವುದು ಎಲ್ಲಿ? ಈ ದೇವಾಲಯವು ಉತ್ತರ ಪ್ರದೇಶ ರಾಜ್ಯದ ಲಖಿಂಪೂರ್ ಖೇರಿಯಿಂದ ಸಿತಾಪೂರಕ್ಕೆ ಹೊರಡುವ ಮಾರ್ಗದಲ್ಲಿ ಲಖಿಂಪೂರದಿಂದ 12 ಕಿ.ಮೀ ದೂರದಲ್ಲಿರುವ ಓಯಲ್ ಎಂಬ ಗ್ರಾಮದಲ್ಲಿ ಸ್ಥಿತವಿದೆ. ಲಖಿಂಪೂರ್ ಲಖನೌ ಪಟ್ಟಣದಿಂದ 135 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.