ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಇವೆ. ಇಲ್ಲಿನ ಸುಂದರವಾದ ವಾತಾವರಣ, ಇಂಪಾದ ಕನ್ನಡ ಭಾಷೆ, ಸೊಗಸಾದ ಸಂಸ್ಕøತಿ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇಲ್ಲಿ ಪ್ರಾಕೃತಿಕ ಸೊಬಗನ್ನು ಅಸ್ವಾಧಿಸಲು ದೇಶದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವುಗಳಲ್ಲಿ ದುರ್ಗಗಳು ಕೂಡ ಒಂದು. ಸಾಮಾನ್ಯವಾಗಿ ದುರ್ಗಗಳು ಎಂದರೆ ಬೆಟ್ಟಗುಡ್ಡಗಳ ಮೇಲೆ ನಿರ್ಮಾಣ ಮಾಡಲಾದ ಕೋಟೆ ಕೊತ್ತಲಗಳೇ ಆಗಿವೆ.
ಒಂದು ಕಾಲದಲ್ಲಿ ಬೆಟ್ಟ ಪ್ರದೇಶಗಳ ಮೇಲೆ ನಿರ್ಮಾಣ ಮಾಡುತ್ತಿದ್ದ ಸಣ್ಣ ಪುಟ್ಟ ನಗರಗಳು ಹಾಗು ಕೋಟೆಗಳಿಗೆ ದುರ್ಗ ಎಂಬ ಹೆಸರಿನಿಂದ ಕರೆಯುತ್ತಿದ್ದರು. ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹಲವಾರು ರಾಜಮನೆತನಗಳು ಆಳ್ವಿಕೆ ಮಾಡಿವೆ. ಅವರ ಆಳ್ವಿಕೆಯ ಸಮಯದಲ್ಲಿ ದುರ್ಗಗಳನ್ನು ನಿರ್ಮಾಣ ಮಾಡುತ್ತಿದ್ದರು. ಅಂಥಹ ದುರ್ಗಗಳಿಗೆ ಭೇಟಿ ನೀಡುವುದು ಏನೋ ಒಂದು ರೀತಿಯ ಸಂತಸ. ನಿಮಗೆ ಗೊತ್ತ ನಮ್ಮ ಕರ್ನಾಟಕದಲ್ಲಿ ಎಷ್ಟೋ ಪ್ರಸಿದ್ಧವಾದ ಹಾಗು ಆಕರ್ಷಕವಾದ ದುರ್ಗಗಳು ಇವೆ ಎಂದು? ಹಾಗಾದರೆ ಬನ್ನಿ ಆ ದುರ್ಗಗಳು ಯಾವುವು? ಎಂಬುದರ ಕುರಿತು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ. ಅವಕಾಶವಿದ್ದರೆ ಒಮ್ಮೆ ಭೇಟಿ ನೀಡಿ ಬನ್ನಿ...
ಕವಲೇದುರ್ಗ
ಹೆಸರು ಕೇಳಿದ್ದೀರಾ? ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಸುಂದರವಾದ ದುರ್ಗವಾಗಿದೆ. ಶಿವಮೊಗ್ಗ ನಗರದಿಂದ ಸುಮಾರು 80 ಕಿ,ಮೀ ದೂರದಲ್ಲಿ ಈ ಅದ್ಭುತವಾದ ದುರ್ಗವಿದೆ. ದಟ್ಟವಾದ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಇರುವ ದುರ್ಗವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ನೈಸರ್ಗಿಕ ಸುಂದರವಾದ ತಾಣ ಇದಾಗಿದೆ.
ಕವಲೇದುರ್ಗ
ಒಂದು ಕಾಲದಲ್ಲಿ ಈ ದುರ್ಗವನ್ನು ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕೂಡ ಕರೆಯುತ್ತಿದ್ದರು. ಇದೊಂದು ಆಕರ್ಷಕವಾದ ತಾಣವಾಗಿದೆ. ಇಲ್ಲಿ ವಿಶೇಷವಾಗಿ ತಿಮ್ಮಣ್ಣ ನಾಯಕನ ಕೆರೆ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಸರಿಸುಮಾರು 18 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಮನಮೋಹಕವಾದ ಕೆರೆಯಾಗಿದೆ. ಈ ದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ.
ಹುತ್ರಿದುರ್ಗ
ಹುತ್ರಿದುರ್ಗವು ಬೆಂಗಳೂರಿನಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ತುಮಕೂರು ಜಿಲ್ಲೆಯಲ್ಲಿನ ಸುಂದರವಾದ ದುರ್ಗವಾಗಿದೆ. ಕುಣಿಗಲ್ನಿಂದ ಆಗ್ನೇಯ ದಿಕ್ಕಿಗೆ ಸುಮಾರು 16 ಕಿ.ಮೀ ದೂರದಲ್ಲಿದೆ ಈ ಭವ್ಯವಾದ ತಾಣ. ಇದು ಏಳು ಸುತ್ತಿನ ಕೋಟೆಯಾಗಿತ್ತು. ಪ್ರಸ್ತುತ ಕೋಟೆಯು ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲೆ ಶಿವ ಮತ್ತು ನಂದಿ ದೇವಾಲಯಗಳಿವೆ. ಪ್ರತಿ ಸೋಮವಾರ ಹಾಗು ಶುಕ್ರವಾರದಂದು ಪೂಜೆಗಳನ್ನು ಮಾಡಲಾಗುತ್ತದೆ. ಇಲ್ಲಿ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಚಿತ್ರದುರ್ಗ
ದುರ್ಗ ಎಂದ ತಕ್ಷಣ ತಟ್ಟನೆ ಹೊಳೆಯುವುದು ಚಿತ್ರದುರ್ಗ. ಅಷ್ಟು ಪ್ರಸಿದ್ಧವಾಗಿದೆ ಚಿತ್ರದುರ್ಗ. ಭೌಗೋಳಿಕವಾಗಿ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಚಿತ್ರದುರ್ಗ, ಬಹು ದೊಡ್ಡ ಪ್ರವಾಸಿ ತಾಣವಾಗಿದೆ. ಚಿತ್ರದುರ್ಗವು ಪ್ರಸಿದ್ಧವಾಗಿರುವುದು ತನ್ನ ಅದ್ಭುತವಾದ ಏಳು ಸುತ್ತಿನ ಕೋಟೆಯಿಂದಲೇ ಆಗಿದೆ. ಈ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತವಾದ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರಿಗೆ ಅಚ್ಚು ಮೆಚ್ಚು.
ಚಿತ್ರದುರ್ಗ
ಇದರ ನಿರ್ಮಾಣವನ್ನು ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಗಳನ್ನು ಈ ಕೋಟೆಯ ನಿರ್ಮಾಣಕ್ಕೆ ಧಾರೆ ಎರೆದಿದ್ದಾರೆ. 15 ರಿಂದ 18 ನೇ ಶತಮಾನದ ಮಧ್ಯ ಭಾಗದಲ್ಲಿ ನಿರ್ಮಾಣಗೊಂಡ ಈ ಕೋಟೆಯಲ್ಲಿ ವೀರ ಮಹಿಳೆಯ ಕಥೆಯು ಕೂಡ ಅಡಗಿದೆ. ಚಿತ್ರದುರ್ಗವು ಬೆಂಗಳೂರಿನಿಂದ ಸುಮಾರು 205 ಕಿ,ಮೀ ಗಳಷ್ಟು ದೂರದಲ್ಲಿದೆ.
ನಂದಿದುರ್ಗ
ಬೆಂಗಳೂರು ಬಳಿಯಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವೇ ನಂದಿ ದುರ್ಗವಾಗಿದೆ. ಇದನ್ನು ನಂದಿ ಬೆಟ್ಟ ಎಂದು ಕೂಡ ಕರೆಯುತ್ತಾರೆ. ಬೆಂಗಳೂರು ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿ ನೆಲೆಸಿರುವ ನಂದಿದುರ್ಗಕ್ಕೆ ಕೇವಲ ಬೆಂಗಳೂರಿಗರೇ ಅಲ್ಲದೇ ರಾಜ್ಯದಲ್ಲಿನ ಎಲ್ಲಾ ಪ್ರವಾಸಿಗರ ಅಚ್ಚು-ಮೆಚ್ಚಿನ ತಾಣವಾಗಿದೆ. ವಾರಾಂತ್ಯ ಬಂದರೆ ಸಾಕು ಬೆಂಗಳೂರಿನ ಜನರು ಜನದಟ್ಟನೆಯಿಂದ ಸ್ವಲ್ಪ ದೂರದಲ್ಲಿ ಇರಲು ಬಯಸುತ್ತಾರೆ. ಆ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುವುದೇ ನಂದಿ ಬೆಟ್ಟಕ್ಕೆ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಈ ತಾಣಕ್ಕೆ ಭೇಟಿ ನೀಡುತ್ತಾರೆ. ಈ ಪ್ರಸಿದ್ಧವಾದ ದುರ್ಗ ಸಾಂಸ್ಕøತಿಕವಾಗಿ ಅರ್ಕಾವತಿ ನದಿಯ ಮೂಲ ಎನ್ನಲಾಗಿದೆ.
ನಂದಿದುರ್ಗ
ನಂದಿ ದುರ್ಗ ಅಥವಾ ನಂದಿ ಬೆಟ್ಟಕ್ಕೆ ಹಲವಾರು ಸ್ವಾರಸ್ಯಕರವಾದ ಕಥೆಗಳಿವೆ. ಚೋಳರು ಆಳುತ್ತಿದ್ದ ಕಾಲದಲ್ಲಿ ಈ ಸುಂದರವಾದ ನದಿ ಬೆಟ್ಟಕ್ಕೆ ಆನಂದ ಗಿರಿ ಎಂದು ಕರೆಯುತ್ತಿದ್ದರು. ಮತ್ತೊಂದು ದಂತ ಕಥೆಯ ಪ್ರಕಾರ, ಯೋಗ ನಂದೀಶ್ವರ ಇಲ್ಲಿ ತಪಸ್ಸು ಮಾಡಿದ ಕಾರಣದಿಂದ ಇದಕ್ಕೆ ನಂದಿ ಬೆಟ್ಟ ಎಂದು ಹೆಸರು ಬಂದಿತು ಎಂದು ಹೇಳಲಾಗುತ್ತಿದೆ. ಇಲ್ಲಿ ಟಿಪ್ಪು ಡ್ರಾಪ್ ಮುಖ್ಯವಾದ ಪ್ರವಾಸಿ ಆಕರ್ಷಣೆಯಾಗಿದೆ.
ಭೈರವದುರ್ಗ
ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ಈ ಭೈರವದುರ್ಗ ಇದೆ. ಇದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುಡುರು ಎಂಬಲ್ಲಿದೆ ಈ ಭೈರವೇಶ್ವರ ನೆಲೆಸಿರುವ ಭೈರವದುರ್ಗ. ಇದು ಸಹ ನವದುರ್ಗಗಳ ಪೈಕಿ ಒಂದಾಗಿದ್ದು, ಕೆಂಪೇಗೌಡರಿಂದ ನಿರ್ಮಾಣ ಮಾಡಲ್ಪಟ್ಟಿದೆ. ಇಲ್ಲಿ ಪರಮೇಶ್ವನಿಗೆ ಮುಡಿಪಾದ ಭೈರವೇಶ್ವರನ ಪುರಾತನವಾದ ದೇವಾಲಯವಿದೆ. ಈ ದುರ್ಗವು ಇತಿಹಾಸ ಪ್ರಿಯರಿಗೆ, ಭೂಗೋಳ ಪ್ರಿಯರಿಗೆ ಕುತೂಹಲ ಕೆರಳಿಸುವ ದುರ್ಗ ಎಂದೆರೆ ತಪ್ಪಾಗಲಾರದು.