ಮಕ್ಕಳಲ್ಲಿ ಕುತೂಹಲ ಹಾಗೂ ಕಲಿಕೆಯ ಮಟ್ಟ ಹೆಚ್ಚಾಗಿ ಇರುತ್ತದೆ. ಹಾಗಾಗಿಯೇ ಅವರು ತಮ್ಮ ಸುತ್ತಲ ವಾತಾರಣದ ಪರಿಸ್ಥಿತಿ ಹಾಗೂ ಭಾಷೆಗಳನ್ನು ಬಹಳ ಬೇಗನೆ ಅರಿಯುತ್ತಾರೆ. ಹಾಗಂತ ಮಕ್ಕಳಿಗೆ ಕಲಿಕೆಯ ಕುರಿತು ಒತ್ತಡ ಹೇರುವುದು ಸರಿಯಲ್ಲ. ಅವರಲ್ಲಿರುವ ಆಸಕ್ತಿ ಹಾಗೂ ಕಲಿಕೆಯ ಗುಣಮಟ್ಟವನ್ನು ಅರಿತು ಮಾರ್ಗದರ್ಶನ ನೀಡಬೇಕು. ಈಗಾಗಲೇ ಬೇಸಿಗೆ ರಜೆಯು ಸಮೀಪಿಸುತ್ತಿದೆ. ಅವರಿಗೂ ಸ್ವಲ್ಪ ಬಿಡುವಿನ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಈ ವಿಚಾರವಾಗಿಯೇ ನೀವೂ ಸಹ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದರೆ ಈ ಕೆಳಗಿನ ಪ್ರವಾಸ ತಾಣಕ್ಕೆ ಹೋಗಿ. ಇಲ್ಲಿ ಮಕ್ಕಳಿಗೆ ಖುಷಿ ಆಗುವಂತಹ ತಾಣಗಳಿವೆ. ಮಕ್ಕಳೂ ಸಹ ಹೊಸ ವಿಚಾರದ ಜೊತೆಗೆ ರಜೆಯ ಮಜವನ್ನು ಅನುಭವಿಸಬಹುದು.
ರಾಮೋಜಿ ಚಿತ್ರ ನಗರಿ
ಇದು ಹೈದ್ರಾಬಾದ್ ವಿಜಯವಾಡದ ಹಯಾತ್ ನಗರ ಮತ್ತು ಪೆಡಂಬರ್ ಪೇಟೆ ಬಳಿ ಇದೆ. ಪ್ರಪಂಚದ ಅತ್ಯಂತ ದೊಡ್ಡ ಸಂಘಟಿತ ಚಲನ ಚಿತ್ರ ಸ್ಟುಡಿಯೋ. ಇದು ಸರಿಸುಮಾರು 2000 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಅನೇಕ ಉದ್ಯಾನವನಗಳಿವೆ. ಕೆಲವು ಕೃತಕವಾಗಿದ್ದರೆ ಇನ್ನೂ ಕೆಲವು ನೈಜ ಉದ್ಯಾನವನಗಳು. ಚಿತ್ರೀಕರಣಕ್ಕೆ ಬೇಕಾಗುವ ಎಲ್ಲಾಬಗೆಯ ಸೌಲಭ್ಯಗಳು ಇಲ್ಲಿವೆ. ಇವುಗಳ ಪರಿಚಯವನ್ನು ಮಕ್ಕಳಿಗೆ ಮಾಡಿದರೆ ಅವು ಹೆಚ್ಚು ಖುಷಿ ಪಡಬಲ್ಲವು. ಬೆಂಗಳೂರಿನಿಂದ 586 ಕಿ.ಮೀ. ದೂರದಲ್ಲಿದೆ.
PC: flickr.com
ತೆಕ್ಕಡಿ
ಕೇರಳದಲ್ಲಿ ಬರುವ ಈ ತಾಣ ಹಸಿರು ಸಿರಿ ಹಾಗೂ ವನ್ಯ ಜೀವಿಗಳ ಧಾಮಕ್ಕೆ ಹೆಸರಾಗಿದೆ. ಇಲ್ಲಿ ಪೆರಿಯಾರ್ ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿಧಾಮಗಳನ್ನು ನೋಡಬಹುದು. ಹುಲಿ, ಆನೆ ಹಾಗೂ ಪಕ್ಷಿಗಳ ಧಾಮಗಳನ್ನು ಇಲ್ಲಿ ನೋಡಬಹುದು. ಸುಮಾರು 260 ಜಾತಿಯ ಪಕ್ಷಿಗಳ ವಾಸವಿದೆ ಎಂದು ಅಂದಾಜಿಸಲಾಗಿದೆ. ನದಿ ನೀರಿನಲ್ಲೇ ಇರಬಹುದಾದಂತಹ ದೋಣಿ ಮನೆಗಳು ಇವೆ. ಇವುಗಳಲ್ಲಿ ಒಂದು ದಿನ ಕಳೆದರೆ ಮಕ್ಕಳಿಗೂ ಹೊಸ ಅನುಭವ ಆಗುವುದು. ಇದು ಬೆಂಗಳೂರಿನಿಂದ 507.9 ಕಿ.ಮೀ. ದೂರದಲ್ಲಿದೆ.
ಉಡುಪಿ
ಕಡಲ ತೀರದಿಂದ ಕಂಗೊಳಿಸುವ ಉಡುಪಿ ಮಕ್ಕಳಿಗೆ ಇಷ್ಟವಾಗುವಂತಹ ಪ್ರದೇಶ. ನೀರಿನಲ್ಲಿ ಆಡುವುದು ಮಕ್ಕಳಿಗೊಂದು ಖುಷಿ. ಜಲಕ್ರೀಡೆಗಳು, ಹಳೆಯ ಲೈಟ್ ಹೌಸ್ ಹಾಗೂ ದೋಣಿ ಪ್ರಯಾಣ ಎಲ್ಲವೂ ಒಂದು ಬಗೆಯ ಸಂತೋಷ ನೀಡಬಲ್ಲದು.
PC: flickr.com
ಆಗ್ರಾ
ಉತ್ತರ ಪ್ರದೇಶದಲ್ಲಿರುವ ಆಗ್ರಾ ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಪುಸ್ತಕಗಳಲ್ಲಿ ಆಗಾಗ ಓದುವ ತಾಜ್ ಮಹಲ್ಅನ್ನು ಕಣ್ಣಾರೆ ಮಕ್ಕಳು ನೋಡಬಹುದು. ಅದಕ್ಕೆ ಹತ್ತಿರದಲ್ಲೇ ಇರುವ ಅಕ್ಬರನ ಸಮಾಧಿ, ಯಮುನಾ ನದಿ ದಂಡೆ ಹಾಗೂ ಆಗ್ರಾ ಕೋಟೆಯನ್ನು ನೋಡಬಹುದು. ಹಲವಾರು ರೆಸಾರ್ಟ್ ಹಾಗೂ ಹೋಟೆಲ್ಗಳು ಇರುವುದರಿಂದ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗದು. ಬೆಂಗಳೂರಿನಿಂದ ಅನೇಕ ರೈಲ್ವೆ ಸಂಪರ್ಕವಿದೆ.
ಉದಯ್ಪುರ
ರಾಜಸ್ಥಾನದ ಉದಯ್ಪುರದಲ್ಲಿ ನಡೆಯುವ ಬೊಂಬೆ ಪ್ರದರ್ಶನ ನೋಡಬೇಕು. ಬೊಂಬೆಯಾಟವಾದ ಇದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮನರಂಜನೆ ನೀಡುತ್ತದೆ. ರಾಜಸ್ಥಾನದ ಕಲೆ ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ಇಷ್ಟೇ ಅಲ್ಲದೆ ಒಂಟೆ ಸವಾರಿ ಹಾಗೂ ಕುದುರೆ ಸವಾರಿಗಳಲ್ಲೂ ಮಕ್ಕಳನ್ನು ಬಿಡಬಹುದು.
PC: flickr.com
ದೆಹಲಿ
ಭಾರತದ ರಾಜಧಾನಿಯಾದ ದೆಹಲಿ ಪ್ರವಾಸಿ ತಾಣಕ್ಕೆ ಹೆಸರಾಗಿದೆ. ಇಲ್ಲಿರುವ ಲೋಧಿ ಉದ್ಯಾನವನ, ಲೋಧಿ ಕಾಲದ ಸೇತುವೆ, ಗೋರಿಗಳು ಹಾಗೂ ವಾಸ್ತುಶಿಲ್ಪದ ಬಗ್ಗೆ ತಿಳಿದುಕೊಳ್ಳಬಹುದು. ಮಕ್ಕಳಿಗೆ ಇಷ್ಟವಾಗುವಂತಹ ಉದ್ಯಾನವನಗಳು, ಸಾಹಸ ಕ್ರೀಡೆಗಳನ್ನು ಆಡಲು ಅವಕಾಶವಿದೆ. ಇಲ್ಲಿರುವ ಬಾಲ ಭವನ ವಸ್ತು ಸಂಗ್ರಹಾಲಯವು ಮಕ್ಕಳಿಗೊಂದು ಹೊಸ ಶಿಕ್ಷಣವನ್ನು ನೀಡಬಲ್ಲದು.
PC: flickr.com
ಔಲಿ
ಉತ್ತರಾಖಂಡ್ನಲ್ಲಿರುವ ಔಲಿಯ ಪರ್ವತ ಶ್ರೇಣಿಗಳು ಹಿಮದ ಪುಡಿಯಿಂದ ಮುಚ್ಚಿದಂತೆ ಕಾಣುತ್ತದೆ. ಈ ಹಿಮದ ಪುಡಿಯಲ್ಲಿ ಬೊಂಬೆಗಳನ್ನು ತಯಾರಿಸಿ ಆಡುವುದು ಮಕ್ಕಳಿಗೆ ಮುದ ನೀಡುವುದು. ಇಲ್ಲಿಯ ಹೊಸ ವಾತಾವರಣದ ಪರಿಚಯ ಮಕ್ಕಳಿಗಾಗುತ್ತದೆ. ಪ್ರವಾಸಕ್ಕೆ ಸೂಕ್ತ ಸಮಯ ಎಂದರೆ ಜನವರಿಯಿಂದ ಏಪ್ರಿಲ್ ತಿಂಗಳು.