Search
  • Follow NativePlanet
Share
» »ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

By Vijay

ಹಿಂದೂ ಧರ್ಮದವರಿಗೆ ಪುರಾತನ ದೇವಾಲಯಗಳು ಯಾವಾಗಲೂ ಮಹತ್ವವುಳ್ಳ ದೇವಸ್ಥಾನಗಳಾಗಿವೆ. ಅನಾದಿ ಕಾಲದಿಂದಲೂ ಪ್ರಭಾವ ಹೊಂದಿರುವ ಅಂತಹ ಸ್ಥಳಗಳಲ್ಲಿ ಆಚರಣೆ, ಸಂಪ್ರದಾಯಗಳು ಹೆಚ್ಚಿನ ಗತಿಯಲ್ಲಿದ್ದು ಸಾಮಾನ್ಯ ದೇವಾಲಯಗಳಲ್ಲಿ ಕಂಡುಬರುವಂತಿರುವುದಿಲ್ಲ.

ಪ್ರತಿಯೊಬ್ಬ ಹಿಂದೂ ಧರ್ಮದವನು ಮೋಕ್ಷದಲ್ಲಿ ನಂಬಿಕೆ ಹೊಂದಿದ್ದು, ಅದು ಶಿವ ಹಾಗೂ ವಿಷ್ಣುವಿನ ಕೃಪಾಕಟಾಕ್ಷ ದೊರಕಿದಾಗ ಲಭಿಸುವ ವರವಾಗಿದೆ ಎಂದು ಅರಿತಿದ್ದಾನೆ. ಅದರಂತೆಯೆ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ತೆರಳಿ ತನ್ನ ಇಷ್ಟ ದೇವರ ದರುಶನ ಕೋರಲು ಹಂಬಲಿಸುತ್ತಾನೆ.

ಶುಭ ಮಂಗಳವಾರ : ಮೇಕ್ ಮೈ ಟ್ರಿಪ್ ನಿಂದ ಹೋಟೆಲ್ ಹಾಗೂ ವಿಮಾನ ಹಾರಾಟ ದರಗಳ ಮೇಲೆ 50% ರ ವರೆಗೆ ಕಡಿತ

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ


ಚಿತ್ರಕೃಪೆ: Adam Jones

ಭೌಗೋಳಿಕತೆಗನುಸಾರವಾಗಿ ನಮ್ಮ ದೇಶದ ಎಲ್ಲೆಡೆ ಹಲವಾರು ಪುಣ್ಯ ಕ್ಷೇತ್ರಗಳನ್ನು ನಾವು ಕಾಣಬಹುದು. ಬಹುಶಃ ಭಗವಂತನಿಗೂ ಮೊದಲೆ ತಿಳಿದಿತ್ತೊ ಏನೋ ಕಲಿಯುಗದಲ್ಲಿ ಅನೇಕರಿಗೆ ಅತಿ ದೂರದ ಕ್ಷೇತ್ರಗಳಿಗೆ ಭೇಟಿ ನೀಡಿ ದರುಶನ ಪಡೆಯಲು ಕಷ್ಟಕರವಾಗಬಹುದೆಂದು ಅಂತೆಯೆ ಆತನು ಮನುಜನ ಅನುಕೂಲಕ್ಕೆಂದು ಹಲವಾರು ಕ್ಷೇತ್ರಗಳಲ್ಲಿ ಸ್ವತಃ ನೆಲೆಸಿದ್ದಾನೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.

ವಿಶೇಷ ಲೇಖನ : ದಕ್ಷಿಣ ಭಾರತದ ಮುಖ್ಯ ತೀರ್ಥ ಕ್ಷೇತ್ರಗಳು

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಚಿತ್ರಕೃಪೆ: Govind Swamy

ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ ತಿರುವಣ್ಣಾಮಲೈ ಕ್ಷೇತ್ರ. ಬೆಂಗಳೂರಿನಿಂದ 220 ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪಗೊಂಡ ಪಟ್ಟಣವಾಗಿದೆ. ಈ ಎರಡೂ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ವಿಶೇಷ ಲೇಖನ : ಬೆಂಗಳೂರಿನಾಚೆ ಒಂದು ವಿಶಿಷ್ಟ ಪ್ರವಾಸ

ತಿರುವಣ್ಣಾಮಲೈ ಬೆಟ್ಟ ಕ್ಷೇತ್ರವು ತನ್ನಲ್ಲಿರುವ ಅಣ್ಣಾಮಲಯಾರ್ ದೇವಾಲಯಕ್ಕೆ ಪ್ರಖ್ಯಾತಿ ಪಡೆದಿದೆ. ಇದು ಶಿವನಿಗೆ ಮುಡಿಪಾದ ದೇವಸ್ಥಾನವಾಗಿದೆ. ಅಷ್ಟೆ ಅಲ್ಲ, ಪಂಚಭೂತ ಸ್ಥಳಗಳ ಪೈಕಿ ಈ ಸ್ಥಳವೂ ಸಹ ಒಂದು. ಇದು ಪಂಚಭೂತಗಳ ಪೈಕಿ ಒಂದಾದ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಜರುಗುವ ಕಾರ್ತಿಕೈ ದೀಪಂ ಉತ್ಸವವು ಅತಿ ಪ್ರಮುಖವಾದ ಉತ್ಸವವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಚಿತ್ರಕೃಪೆ: Arunankapilan

ವಿಶೇಷ ಲೇಖನ : ಪಂಚಭೂತ ಸ್ಥಳಗಳು

ಗಿರಿವಲಂ ಅಂದರೆ ಈ ಪವಿತ್ರ ಗುಡ್ಡದ ಸುತ್ತ ಪ್ರದಕ್ಷಿಣೆ ಹಾಕುವುದು. ಇದಕ್ಕಾಗಿ ರಸ್ತೆಯ ಮಾರ್ಗವಿದ್ದು ಭಕ್ತಾದಿಗಳು ಈ ಬೆಟ್ಟವನ್ನು ಸುಮಾರು 14 ಕಿ.ಮೀ ಕಾಲ್ನಡಿಗೆಯಲ್ಲಿ ಚಲಿಸಿ ಪ್ರದಕ್ಷಿಣೆ ಹಾಕಬಹುದು. ಕಲಿಯುಗದ ಈ ಒಂದು ಪ್ರದಕ್ಷಿಣೆಯು ಸಾವಿರ ಕುದುರೆ ತ್ಯಾಗಕ್ಕೆ ಸಮ ಎಂದು ಹೇಳಲಾಗಿದೆ ಹಾಗೂ ನಿರಂತರ ಭೇಟಿ ಹಾಗೂ ಪ್ರದಕ್ಷಿಣೆಯಿಂದ ಜೀವನ್ಮರಣಗಳ ಕಾಲ ಚಕ್ರದಿಂದ ಮುಕ್ತಿ ಪಡೆಯಬಹುದು ಎಂದೂ ಸಹ ಹೇಳಲಾಗಿದೆ.

ದಂತ ಕಥೆ:

ಒಂದೊಮ್ಮೆ ವಿಷ್ಣು ಹಾಗೂ ಬ್ರಹ್ಮ ದೇವರ ಮಧ್ಯೆ ತಮ್ಮಲ್ಲಿ ಯಾರು ಹೆಚ್ಚು ಶಕ್ತಿಶಾಲಿ ಎಂಬುದರ ಕುರಿತು ವಾಗ್ವಾದ ಪ್ರಾರಂಭವಾಯಿತು. ಈ ಜಟಾಪಟಿಯು ವರ್ಷಗಳ ಕಾಲ ಮುಂದುವರೆಯುತ್ತಲೆ ಹೋಯಿತು. ನಾರದ ಮಹಾಮುನಿಗಳೂ ಕೂಡ ನಿಮ್ಮಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಯಾರೂ ಹೆಚ್ಚಿಲ್ಲ ಎಂದು ತಿಳಿಸಿದರೂ ಇವರ ವಾದ ಪ್ರತಿವಾದಗಳು ಶಮನವಾಗಲಿಲ್ಲ.

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಚಿತ್ರಕೃಪೆ: Vinoth Chandar

ಇದನ್ನು ಗಮನಿಸುತ್ತಿದ್ದ ಶಿವನು ಕೊನೆಗೆ ಪ್ರಖರವಾದ ಉದ್ದನೆಯ ಜ್ವಾಲೆಯ ರೂಪ ಪಡೆದು ಬ್ರಹ್ಮ ಹಾಗೂ ವಿಷ್ಣುವಿನ ಮಧ್ಯದಲ್ಲಿ ಸೃಷ್ಟಿಯಾಗಿ "ಯಾರು ಇದರ ತುದಿ ಅಥವಾ ತಳ ಮುಟ್ಟುವರೋ ಅವರೆ ಹೆಚ್ಚು ಶಕ್ತಿಶಾಲಿಗಳು" ಎಂದು ಘೋಷಿಸಿದನು. ಆಗ ಬ್ರಹ್ಮನು ಹಂಸವಾಗಿ ಮೇಲೆ ಹಾರುತ್ತ ವಿಷ್ಣು ವರಾಹನಾಗಿ ಭೂಮಿ ಅಗೆಯುತ್ತ ಜ್ವಾಲೆಯ ತುದಿಗಳನ್ನು ಹುಡುಕ ಹೊರಟರು.

ವರ್ಷಾನುಗಟ್ಟಲೆ ಹುಡುಕಿದರೂ ಒಬ್ಬರಿಗೂ ತುದಿಯಾಗಲಿ, ತಳವಾಗಲಿ ದೊರಕಲೇ ಇಲ್ಲ. ಈ ಸಂದರ್ಭದಲ್ಲಿ ಇಬ್ಬರಿಗೂ ತಮ್ಮ ಅಹಂಕಾರದ ಆತ್ಮಾವಲೋಕನವಾಗಿ ಹೆಚ್ಚು ಶಕ್ತಿಶಾಲಿಯಾಗಿದ್ದ ಶಿವನನ್ನು ಕುರಿತು ಪ್ರಾರ್ಥಿಸಿದರು ಹಾಗೂ ತಮ್ಮ ಮೂರ್ಖತನಕ್ಕೆ ಕ್ಷಮಾಪಣೆ ಕೇಳಿದರು. ನಂತರ ಶಿವನು ಇದೆ ರೂಪದಲ್ಲಿ ಇಲ್ಲಿ ನೆಲೆಸಿ ಭಕ್ತರನ್ನು ಹರಸಬೇಕೆಂದು ವಿನಂತಿಸಿದರು.

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಚಿತ್ರಕೃಪೆ: Phil Servedio

ಇದಕ್ಕೆ ಸಮ್ಮತಿಸಿದ ಶಿವನು ಒಂದು ಬೆಟ್ಟದ ರೂಪ ತಾಳಿ ಇಲ್ಲಿ ವಾಸಿಸತೊಡಗಿದನು. ಆದ್ದರಿಂದ ಈ ಕ್ಷೇತ್ರಕ್ಕೆ ಅರುಣಾಚಲ ಎಂಬ ಹೆಸರೂ ಬಂದಿತು. ಸಂಸ್ಕೃತದಲ್ಲಿ ಅರುಣ ಕೆಂಪು ಬಣ್ಣ ಶಿವನ ಪ್ರಕಹರ ತೆಜಸ್ಸನ್ನು ಸೂಚಿಸುತ್ತದೆ. ಅಚಲ ಎಂದರೆ ಚಲಿಸಲಾಗದ್ದು ಎಂದರ್ಥ. ಅಂದರೆ ಶಿವನು ಇಲ್ಲಿ ಯಾವಾಗಲೂ ನೆಲೆಸಿರುತ್ತಾನೆ ಎನ್ನುತದೆ ಇಲ್ಲಿನ ಪ್ರತೀತಿ.

ಕಾರ್ತಿಕೈ ದೀಪಂ ಇಲ್ಲಿ ನಡೆಯುವ ಅತಿ ಪ್ರಮುಖ ಉತ್ಸವವಾಗಿದೆ. ಉತ್ಸವದ ಹತ್ತನೇಯ ದಿನದಂದು ಅರುಣಾಚಲ ಬೆಟ್ಟದ ತುತ್ತುದಿಯ ಮೇಲೆ ಬೃಹದಾಕಾರವಾಗಿ ದೀಪವೊಂದನ್ನು ಬೆಳಗಿಸಲಾಗುತ್ತದೆ. ಇದು ಶಿವನ ಉಪಸ್ಥಿತಿಯನ್ನು ಸೂಚಿಸುತ್ತದೆ. ಈ ದೀಪವನ್ನು ಅದೇ ದಿನ ನಸುಕಿನ ನಾಲ್ಕು ಘಂಟೆಯಲ್ಲಿ ಬೆಳಗಿಸಲಾದ ಭರಣಿ ದೀಪಂ ನಿಂದ ಕಾರ್ತಿಕ ದೀಪವನ್ನು ಬೆಳಗಿಸಲಾಗುತ್ತದೆ. 2014 ರ ಕಾರಿಕೈ ದೀಪಂ ಉತ್ಸವವು ಡಿಸೆಂಬರ್ 5 ರಂದಿದೆ.

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಚಿತ್ರಕೃಪೆ: Vinoth Chandar

ಅರುಣಾಚಲ ಬೆಟ್ಟದಲ್ಲಿ ಒಟ್ಟು ಎಂಟು ಶಿವಲಿಂಗಗಳು, ಎಂಟು ನಂದಿ ವಿಗ್ರಹಗಳು ಹಾಗೂ 350 ಕ್ಕೂ ಅಧಿಕ ಕಲ್ಯಾಣಿಗಳನ್ನು ಕಾಣಬಹುದಾಗಿದೆ. ಪ್ರತಿಯೊಂದು ಲಿಂಗಗಳಿಗೆ ಅದರದೆ ಆದ ವಿಶೇಷತೆಗಳಿವೆ ಹಾಗೂ ಬೆಟ್ಟ ಪ್ರದಕ್ಷಿಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತನು ಕೆಲ ವಿಶೇಷ ಆಚರಣೆಗಳನ್ನು ಪ್ರತಿಯೊಂದು ಶಿವಲಿಂಗಗಳ ಮುಂದೆ ಪಾಲಿಸುತ್ತ ಮುನ್ನಡಯುತ್ತಾನೆ.

ತಿರುವಣ್ಣಾಮಲೈಯನ್ನು ಬೆಂಗಳೂರಿನಿಂದ ಹೊಸೂರು, ಕೃಷ್ಣಗಿರಿ ಚೆಂಗಂ ಮೂಲಕ ಸುಲಭವಾಗಿ ಬಸ್ಸುಗಳಲ್ಲಿ ತೆರಳಬಹುದು. ತಿರುವಣ್ಣಾಮಲೈಗೆ ಬೆಂಗಳೂರಿನಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆಅರಡೂ ದೊರೆಯುತ್ತವೆ.

ಇಲ್ಲಿರುವ ಎಂಟು ಶಿವಲಿಂಗಗಳು ಹಾಗೂ ಅವುಗಳನ್ನು ಪೂಜಿಸುವುದರಿಂದ ದೊರಕುವ ಫಲಗಳು

ಶಿವಲಿಂಗಗಳು ದಿಕ್ಕು ಸ್ಥಾಪಿಸಿದವರು ಅಧಿಪತಿ ಪ್ರತಿಫಲಗಳು
ಇಂದ್ರ ಲಿಂಗಂ ಪೂರ್ವ ಇಂದ್ರ, ಆಕಾಶ ದೇವತೆಗಳ ದೊರೆ ಸೂರ್ಯ ಹಾಗೂ ಶುಕ್ರ ಆಯುಷ್ಯ ವೃದ್ಧಿ ಹಾಗೂ ಪ್ರಸಿದ್ಧಿ
ಅಗ್ನಿ ಲಿಂಗಂ ನೈರುತ್ಯ ಅಗ್ನಿ ದೇವ ಚಂದ್ರ ಭಯ ಹಾಗೂ ರೋಗಗಳಿಂದ ಮುಕ್ತಿ
ಯಮ ಲಿಂಗಂ ದಕ್ಷಿಣ ಯಮ ದೇವ ಮಂಗಳ ಸುದೀರ್ಘ ಜೀವನ
ನಿರುತಿ ಲಿಂಗಂ ಆಗ್ನೇಯ ನಿರುತಿ ದೈತ್ಯಗಳ ದೊರೆ ರಾಹು ಆರೋಗ್ಯ, ಭಾಗ್ಯ, ಸಂತಾನ ಪ್ರಾಪ್ತಿ
ವರುಣ ಲಿಂಗಂ ಪಶ್ಚಿಮ ವರುಣ ದೇವರು ಶನಿ ನೀರು ಸಂಬಂಧಿ ಕಾಯಿಲೆಗಳಿಂದ ಮುಕ್ತಿ
ವಾಯು ಲಿಂಗಂ ವಾಯವ್ಯ ವಾಯು ದೇವರು ಕೇತು ಶ್ವಾಸಕೋಶ, ಹೃದಯ ಸಂಬಂಧಿ ತೊಂದರೆಗಳಿಂದ ಮುಕ್ತಿ
ಕುಬೇರ ಲಿಂಗಂ ಉತ್ತರ ಕುಬೇರ ಗುರು ಧನ ಪ್ರಾಪ್ತಿ ಹಾಗೂ ಪ್ರತಿಷ್ಠೆ
ಈಶಾನ್ಯ ಲಿಂಗಂ ಈಶಾನ್ಯ ಈಶಾನ್ಯನ್ ಬುಧ ನೆಮ್ಮದಿ ಹಾಗೂ ಮನಶ್ಶಾಂತಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+