ಇಲ್ಲಿರುವ ಕಂಬಗಳು ಒಂದಕ್ಕಿಂತಲೂ ಒಂದು ಭಿನ್ನ, ಪ್ರತಿಯೊಂದು ಕಂಬವೂ ಬೇರೆ ಬೇರೆ ಕಲಾಕೃತಿಯನ್ನು ಹೊಂದಿವೆ. ಇವುಗಳನ್ನು ಬಡಿದರೆ ಒಂದೊಂದೂ ಹೊಸ ಬಗೆಯ ನಾದವನ್ನು ಹೊರ ಹೊಮ್ಮಿಸುತ್ತದೆ. ಇಲ್ಲಿ ಸುಮಾರು ಸಾವಿರ ಕಂಬಗಳಿರಬಹುದು ಎಂದು ಹೇಳಲಾಗುತ್ತದೆ.
ಹಾಗಂತ ಯಾರೂ ಲೆಕ್ಕ ಮಾಡುವ ಗೋಜಿಗೆ ಹೋಗುವುದಿಲ್ಲ. ಅವುಗಳನ್ನು ಲೆಕ್ಕಮಾಡಿದರೆ ಇನ್ನೊಂದು ಕಂಬ ಹುಟ್ಟಿಕೊಳ್ಳುತ್ತದೆ ಎನ್ನುವ ಭಯ. ಇದು ನಿಜಾನಾ? ಎಂದು ಯೋಚಿಸುತ್ತಿದ್ದೀರಾ? ಹೌದು, ಇಂತಹ ಒಂದು ವಿಶೇಷ ಬಗೆಯ ಪ್ರೇಕ್ಷಣೀಯ ಸ್ಥಳ ಇರುವುದು ಕರ್ನಾಟಕದ ಮೂಡುಬಿದಿರೆಯಲ್ಲಿ. ಇದನ್ನು ಸಾವಿರ ಕಂಬದ ಬಸದಿ ಹಾಗೂ ಚಂದ್ರನಾಥ ಬಸದಿ ಎಂದು ಕರೆಯುತ್ತಾರೆ.
ಚಿತ್ರಕೃಪೆ: Vaikoovery
ಸಾವಿರ ಸ್ತಂಭದ ಬಸದಿ
ಬಸದಿಯ ಗರ್ಭ ಗುಡಿಯಲ್ಲಿ 8 ಅಡಿ ಎತ್ತರದ ಚಂದ್ರಪ್ರಭರ ವಿಗ್ರಹವಿದೆ. ಕರ್ನಾಟಕದಲ್ಲಿರುವ 8 ಜೈನ ಬಸದಿಗಳಲ್ಲಿ ಈ ಬಸದಿಯೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. 13ನೇ ಶತಮಾನದಲ್ಲಿ ಆರಂಭವಾದ ಬಸದಿಯ ಇತಿಹಾಸ 14 ಮತ್ತು 16ನೇ ಶತಮಾನದಲ್ಲಿ ಹೆಚ್ಚು ಜನಪ್ರಿಯಗೊಂಡಿತು. ತ್ರಿಭುವನ ತಿಲಕ ಚೂಡಾಮಣಿಯ ಬಸದಿಯಾದ ಇದು ವಿಶೇಷವಾದ ಕಲೆ ಹಾಗೂ ವಾಸ್ತುಶಿಲ್ಪಗಳಿಂದ ಕೂಡಿದೆ. ಅದಕ್ಕಾಗಿಯೇ ಇದು ಕರ್ನಾಟಕದ ಕರಾವಳಿ ತೀರದಲ್ಲಿರುವ ಅತಿದೊಡ್ಡ ಬಸದಿ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ.
ಬಸದಿ ವಿಶೇಷ
1430ರಲ್ಲಿ ಇದರ ನಿರ್ಮಾಣವಾದರೆ 1962ರಲ್ಲಿ ದೇವರಾಯ ಒಡೆಯರು ಇದರ ಜೀರ್ಣೋದ್ಧಾರ ಮಾಡಿದ್ದಾರೆ. ಇದರಲ್ಲಿ ಇರುವ 60 ಅಡಿಯ ಒಂಟಿ ಸ್ತಂಭವನ್ನು ಕಾರ್ಕಳದ ಭೈರವಿ ರಾಣಿ ನಾಗಳದೇವಿ ಪ್ರತಿಷ್ಠಾಪಿಸಿದ್ದಾಳೆ. ಒಂದೇ ಜಾಗದಲ್ಲಿ 18 ದೇಗುಲ, 18 ಕೆರೆ, 18 ರಸ್ತೆ, 18 ಬಸದಿಗಳಿವೆ.
ಚಿತ್ರಕೃಪೆ: Uajith
ಕಂಬದ ಕಥೆ
ಇಲ್ಲಿರುವ ಪ್ರತಿಯೊಂದು ಕಂಬವೂ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಒಂದೊಂದು ಕಂಬವೂ ತನ್ನ ಯುಗದ ಪುರಾಣಗಳನ್ನು ಬಿಚ್ಚಿಡುತ್ತವೆ. ಗ್ರಾನೈಟ್ ಕಲ್ಲಿನಿಂದ ನಿರ್ಮಾಣಗೊಂಡ ಕಂಬಗಳ ಮೇಲೆ ಅಪರೂಪದ ಚಿತ್ತಾರಗಳಿವೆ. ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಹಿತವಾದಂತೆ ಅನಿಸುತ್ತದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ, ಆಫ್ರಿಕಾ, ಚೀನಾ ಪ್ರಾಣಿ ಪಕ್ಷಿಗಳ ಕೆತ್ತನೆ ಹಾಗೂ ವಾಣಿಜ್ಯ ವ್ಯಾಪಾರ ಖಂಡಗಳ ದಾರಿಯನ್ನು ಬಿಂಬಿಸಲಾಗಿದೆ.
ಮನಸ್ತಂಭ
ಎಲ್ಲಾ ಜೈನ ಬಸದಿಯ ಎದುರು ನಿರ್ಮಿಸಲಾಗುವ ಕಂಬವನ್ನು ಮನಸ್ತಂಭ ಎಂದು ಕರೆಯುತ್ತಾರೆ. ಇದನ್ನು ಬ್ರಹ್ಮ ದೇವರಿಗೆ ಹೋಲಿಸುವುದರಿಂದ ಈ ಕಂಬದ ಬಳಿ ಜೈನರು ತಲೆಭಾಗಿ ನಮಿಸುತ್ತಾರೆ.
ಕೀರ್ತಿಸ್ತಂಭ
ಕೆಲವು ಪುರಾವೆಯ ಪ್ರಕಾರ ಕೀರ್ತಿಸ್ತಂಭವನ್ನು 12ನೇ ಶತಮಾನದಲ್ಲಿ ವ್ಯಾಪಾರಿಯಾದ ಸಹಾಜೀಯಾರ ಎಂಬುವವರು ನಿರ್ಮಿಸಿದ್ದರು ಎಂದರೆ ಇನ್ನೊಂದು ಕಾರಣ ರಾಣಾ ಕುಂಬ ಎಂಬುವವನು 1458-68ರಲ್ಲಿ ಮಹಮ್ಮದ್ ಕಿಲ್ಜಿಯ ಮೇಲೆ ದಂಡೆತ್ತು ಹೋಗಿ ಜಯಸಾಧಿಸಿದ್ದ. ಅದರ ಗುರುತಿಗಾಗಿ ಈ ಕಂಬವನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ.
ಚಿತ್ರಕೃಪೆ: Naveenbm
ಹತ್ತಿರ ಇರುವ ಸ್ಥಳಗಳು
ಮಲ್ಪೆ ಬೀಚ್, ಸೋಮೇಶ್ವರ ಬೀಚ್, ಕುದರೆಮುಖ ರಾಷ್ಟ್ರೀಯ ಉದ್ಯಾನವನ, ಶೃಂಗೇರಿ, ಧರ್ಮಸ್ಥಳ ದೇವಸ್ಥಾನ, ಬಾದಾಮಿ ಗುಹೆ ದೇಗುಲ.
ಹೋಗುವ ದೂರ
ಬೆಂಗಳೂರಿನಿಂದ ಮಂಗಳೂರಿಗೆ 352 ಕಿ.ಮೀ. ದೂರ. ಮಂಗಳೂರಿನಿಂದ ಮೂಡಬಿದಿರೆ 33.7 ಕಿ.ಮೀ. ದೂರ, ಬೆಂಗಳೂರಿನಿಂದ ಮಂಗಳೂರಿಗೆ ಹೇರಳವಾಗಿ ಬಸ್ ವ್ಯವಸ್ಥೆ ಇದೆ. ಒಮ್ಮೆ ಮಂಗಳೂರಿಗೆ ತಲುಪಿದರೆ ಅಲ್ಲಿಂದ ಮೂಡುಬಿದಿರೆಯಲ್ಲಿರುವ ಸಾವಿರ ಸ್ತಂಭ ಬಸದಿಗೆ ಹೋಗಬಹುದು.
ಆಕರ್ಷಕ ಕಾರ್ಕಳ ಪಟ್ಟಣಕ್ಕೊಂದು ಪವಿತ್ರ ಯಾತ್ರೆ