ಭಾರತದ ಪೂರ್ವತೀರದ ಬಂಗಾಳಕೊಲ್ಲಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿದ್ದರೆ ಪಾಶ್ಚಿಮದಲ್ಲಿರುವ ಅರಬ್ಬೀ ಸಮುದ್ರದ ನಡುವೆ ಲಕ್ಷದ್ವೀಪಗಳಿವೆ. ನೈಋತ್ಯ ಭಾರತದಲ್ಲಿರುವ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟ ಈ ದ್ವೀಪಗಳು ಹೆಸರಿಗೆ ಮಾತ್ರವೇ ಲಕ್ಷವೇ ಹೊರತು ನಿಜವಾಗಿ ಇಲ್ಲಿರುವುದು ಕೇವಲ ಮೂವತ್ತಾರು ದ್ವೀಪಗಳು. ಅದಲ್ಲೂ ಕೇವಲ ಹತ್ತು ದ್ವೀಪಗಳಲ್ಲಿ ಮಾತ್ರವೇ ಜನವಸತಿ ಇದೆ. ಈ ಮೂವತ್ತಾರು ದ್ವೀಪಗಳ ಅಷ್ಟು ನೆಲವನ್ನು ಪರಿಗಣಿಸಿದರೆ ಸಿಗುವುದು ಕೇವಲ ಮೂವತ್ತೆರಡು ಚಾದರ ಕಿಲೋಮಿಟರ್ ಮಾತ್ರ. ನಮ್ಮ ರಾಜ್ಯದ ಚಿಕ್ಕ ತಾಲ್ಲೂಕು ಸಹಾ ಇದಕ್ಕಿಂತ ಹೆಚ್ಚಿನ ವಿಸ್ತಾರ ಹೊಂದಿದೆ. ಆದರೆ ಈ ದ್ವೀಪಗಳು ಈ ವಿಸ್ತಾರದಿಂದಲ್ಲ,ಬದಲಿಗೆ ತಂಮ್ಮ ಅನೂಹ್ಯ ನೈಸರ್ಗಿಕ ಸೌಂದರ್ಯ ಮತ್ತು ಅಪ್ಪಟ ಸ್ಪಟಿಕದಂತದ ಸಮುದ್ರ ತೀರಗಳಿಗಾಗಿ ಪ್ರಸಿದ್ದಿ ಪಡೆದಿದೆ. ಯಾವುದೇ ಸಮುದ್ರ ತೀರದಲ್ಲಿರುವಂತೆ ಇಲ್ಲಿಯೂ ಇರುವುದು ಕಲ್ಪವೃಕ್ಷಗಳ ಸಾಲು. ಆದರೆ ನಮ್ಮ ಕರಾವಳಿಯ ತೆಂಗಿಗೂ ಇಲ್ಲಿನ ತೆಂಗಿಗೂ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿನ ತೆಂಗಿನ ಒಳಗಿನ ಕಾಯಿಯಲ್ಲಿ ಏನಿಲ್ಲವೆಂದರೂ ಅರ್ಧ ಲೀಟರ್ನಷ್ಟಾದರೂ ನೀರು ಇರುತ್ತದೆ. ಆದರೆ ಇಲ್ಲಿನ ತೆಂಗಿನಲ್ಲಿರುವುಡ್ ಕೇವಲ ಚಿಕ್ಕ ಟೆನಿಸ್ ಸೆಂಡಿನಷ್ಟು ಚಿಕ್ಕ ಕಾಯಿ, ಅದರೊಳಗೆ ಒಂದು ಚಿಕ್ಕ ಲೋಟದಷ್ಟು ಮಾತ್ರವೇ ನೀರು. ಆದರೆ ಇಲ್ಲಿ ಬರುವ ಪ್ರವಾಸಿಗರಿಗೆ ಇಲ್ಲಿನ ಜನತೆ ನೀಡುವ ಆತಿಥ್ಯ ಮಾತ್ರ ಯಾವುದಕ್ಕೂ ಕಡಿಮೆಯಿಲ್ಲ. ಹಡಗಿನಲ್ಲಿ ಸುಮಾರು ಒಂದು ದಿನ ಪಯಣಿಸಿ ಅಥವಾ ಚಿಕ್ಕ ವಿಮಾನದಲ್ಲಿ ಮಾತ್ರವೇ ಇಲ್ಲಿ ಬರಬಹುದು. ಕಡಿಮೆ ಸ್ಥಳ ಇರುವ ಕಾರಣದಿಂದಲೇ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ಮಿತಿ ಇರುತ್ತದೆ. ಹಾಗಾಗಿ, ಅಧಿಕೃತ ಪ್ರವಾಸಿ ಏಜೆಂಟರ ಮೂಲಕವೇ ಇಲ್ಲಿ ಬರಬೇಕಾಗುತ್ತದೆ. ಇದಕ್ಕಾಗಿ ಕೊಚಿನ್ ನಗರದಲ್ಲಿರುವ ಕಚೇರಿಯಲ್ಲಿ ಪ್ರವಾಸಿಗರಾಗಿ ನೊಂದಾಯಿಸಿಕೊಂಡು ಅಧಿಕೃತ ಪರವಾನಗಿಯ ಮೂಲಕವೇ ಪ್ರಯಾಣಿಸಬೇಕು. ಹಡಗಿಗೆ ಹೋಗುವಾಗಲೂ ವಿಮಾನ ನಿಲ್ದಾಣದಷ್ಟೇ ಬಿಗಿಯಾದ ತಪಾಸಣೆ ಮತ್ತು ಭದ್ರತೆಯ ಮೂಲಕ ಹಡಗನ್ನು ಹತ್ತಬೇಕು.
ಇಲ್ಲಿನ ತೀರಗಳು ಬಹುತೇಕ ನಿರ್ಜನವಾಗಿದ್ದು ಪ್ರವಾಸಿಗರು ಬಂದಾಗಲೇ ಜನನಿಬಿಡವಾಗಿರುತ್ತವೆ. ಪ್ರವಾಸಿಗರಿಗಾಗಿ ಹಲವು ಸೌಲಭ್ಯಗಳನ್ನು ಭಾರತ ಸರ್ಕಾರ ಒದಗಿಸಿದ್ದು ಇದರಲ್ಲಿ ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕೆಲ್ಲಿಂಗ್ ಪ್ರಮುಖ ಆಕರ್ಷಣೆಗಳಾಗಿವೆ. ದ್ವಿಪಾದ ಪಶ್ಚಿಮ ತೀರಾ ದೊಡ್ಡ ಅಲೆಗಳಿಂದ ಭೋರ್ಗರೆಯುತ್ತಿದ್ದರೆ ಪೂರ್ವತೀರ ಮೊಣಕಾಲಿನಷ್ಟೇ ಆಳದಲ್ಲಿರುವ ಅಟಾಲ್ ಗಳಾಗಿವೆ. ವಾಸ್ತವದಲ್ಲಿ ಈ ಅಟಾಳುಗಳೇ ನಿಜವಾದ ಆಕರ್ಷಣೆಯಾಗಿದ್ದು ಸಾಗರಜೀವಿಗಳ ಅದ್ಭುತ ಲೋಕಕ್ಕೆ ಕೊಂಡೊಯುತ್ತದೆ.
ಅಂದ ಮಾತ್ರಕ್ಕೆ ಇಲ್ಲಿ ನಮಗಿಷ್ಟ ಬಂದಂತೆ ನಡೆದುಕೊಳ್ಳುವಂತಿಲ್ಲ. ಬನ್ನಿ, ಇಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ಎಚ್ಚರಿಕೆಗಳನ್ನು ನೋಡೋಣ:
1) ಹವಳಗಳನ್ನು ಕೀಳುವುದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧ
ಲಕ್ಷದ್ವೀಪದ ಮುಖ್ಯ ಆಕರ್ಷಣೆ ಇಲ್ಲಿನ ಪೂರ್ವತೀರದ ಅಟ್ಟಾಲ್ ಗಳಾಗಿವೆ. ಇವು ಹೆಚ್ಚಿನಂಶ ಮೊಣಕಾಲಿನಷ್ಟೇ ಆಳದಲ್ಲಿದ್ದು ಇಲ್ಲಿ ನೂರಾರು ಬಗೆಯ ಹವಳಗಳಿವೆ. ಇವು ಗಾಜಿನಂತೆ ಮುರಿದರೆ ತೀವ್ರ ಹರಿತವಾದ ಅಂಚಿನ ಕತ್ತಿಯಂತಿದ್ದು ಇದರ ಮೇಲೆ ಕಾಲಿಟ್ಟರೆ ಕಾಲು ಕುಯ್ದು ಹೋಗುತ್ತದೆ. ಹಾಗಾಗಿ, ಹವಳಗಳ ಮೇಲೆ ಕಾಲಿಡುವುದು ಅಪಾಯಕರ. ಅಷ್ಟೇ ಅಲ್ಲ ಭಾರತ ಸರ್ಕಾರ ಈ ಹವಳಗಳನ್ನು ಕೀಳುವುದನ್ನಾಗಲಿ ಕೊಂಡು ಹೋಗುವುದನ್ನಾಗಲಿ ನಿಷೇಧಿಸಿದೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಹವಳಗಳಿಗೆ ಹಾನಿ ಎಸಗುವುದು ಕಂಡು ಬಂದರೆ ಜೀವಾವಧಿಯವರೆಗೂ ಶಿಕ್ಷೆ ವಿಧಿಸಬಹುದು..
2) ಮದ್ಯ ಸೇವೆನೆಗೆ ಇಲ್ಲಿ ನಿಷೇಧವಿದೆ.
ಒಂದು ವೇಳೆ ನೀವು ಮದ್ಯಪ್ರಿಯರಾಗಿದ್ದರೆ ಮತ್ತು ಒಂದು ದಿನವೂ ಸೇವಿಸಲಾರದೇ ಇರುವಷ್ಟು ವ್ಯಸನಿಯಾಗಿದ್ದರೆ ನೀವು ಇಲ್ಲಿ ಬಾರದಿರುವುದೇ ಒಳ್ಳೆಯದು. ಏಕೆಂದರೆ ಇಲ್ಲಿ ಕಡ್ಡಾಯ ಪಾನ ನಿಷೇಧವಿದೆ. ಇಲ್ಲಿರುವ ಬಂಗಾರಾಮ್ ಎಂಬ ದ್ವಿಪಾದ ಹೊರತು ಉಳಿದೆಲ್ಲೆಡೆ ಮದ್ಯಕ್ಕೆ ನಿಷೇಧವಿದೆ. ಬಂಗಾರಾಮ್ ಒಂದು ಖಾಸಗಿ ದ್ವೀಪವಾಗಿದ್ದು ಇಲ್ಲಿ ರಿಸಾರ್ಟ್ ಒಂದಿದೆ ಹಾಗೂ ಇಲ್ಲಿ ಮಾತ್ರವೇ ಬಾರ್ ಇದೆ. ಮದ್ಯ ಬೇಕೆಂದರೆ ಈ ರಿಸಾರ್ಟ್ ನ ಅತಿಥಿಯಾಗಿ ಪ್ರತ್ಯೇಕವಾಗಿಯೇ ಬರಬೇಕೆ ವಿನಃ ಪ್ರವಾಸಿಗಯಾಗಿ ಬರುವಂತಿಲ್ಲ.
3) ಎಷ್ಟೋ ಕಡೆ ಇಲ್ಲಿ ನೆಟ್ ವರ್ಕ್ ಇಲ್ಲ
ಲಕ್ಷದ್ವೀಪಕ್ಕೆ ಬರುವುದಾದರೆ ಇಲ್ಲಿಂದ ಹಿಂದಿರುಗುವಷ್ಟು ದಿನ ಇಂಟರ್ನೆಟ್ ನಿಂದ ದೂರವಿರುತ್ತೇನೆ ಎಂದು ಸಂಕಲ್ಪ ಮಾಡ್ಕೊಂಡು ಬರುವುದೇ ಉತ್ತಮ. ಏಕೆಂದರೆ ಇಲ್ಲಿ ಅಂತರ್ಜಾಲ ಸಂಪರ್ಕ ಕೆಲವು ಕಡೆಗಳಲ್ಲಿ ಮಾತ್ರವೇ ಇದೆ ಹಾಗೂ ಇದುವರೆಗೆ ಕೇವಲ ಬಿಎಸ್ ಎನ್ಎಲ್ ಮಾತ್ರವೇ ಇದೆ. ಅದೂ ಟವರ್ ಇವರಲ್ಲಿ ಮಾತ್ರ. ಕೊಂಚ ದೂರದಲ್ಲಿಯೂ ಇದು ಕ್ಷೀಣವಾಗಿರುತ್ತದೆ. ಹಾಗಾಗಿ ಅಂತರ್ಜಾಲ ವ್ಯಸನಿಗಳಿಗೆ ಇದು ಸೂಕ್ತ ಸ್ಥಳವಲ್ಲ. ವ್ಯತಿರಿಕ್ತವಾಗಿ, ನಿಜವಾಗಿಯೂ ನಿಸರ್ಗದ ಮಡಿಲಲ್ಲಿ ಯಾವುದೇ ದುಗುಡ ದುಮ್ಮಾನವಿಲ್ಲದೇ ಅಮೂಲ್ಯ ಸಮಯ ಕಳೆಯುವ ಇರಾದೆ ಇರುವವವರಿಗೆ ಇದು ಸ್ವರ್ಗ ಸಮಾನವಾಗಿದೆ.
4) ಎಳನೀರು ಇಲ್ಲಿ ಮಿನರಲ್ ನೀರಿಗಿಂತ ಅಗ್ಗ
ಸಮುದ್ರದ ನಡುವೆ ಇರುವ ನಡುಗಡ್ಡೆಗಳಲ್ಲಿ ಕುಡಿಯುವ ನೀರಿನದ್ದೇ ಮೊದಲ ಸಮಸ್ಯೆ. ಲಕ್ಷದ್ವೀಪವೂ ಇದಕ್ಕೆ ಹೊರತಲ್ಲ. ಬಾವಿ ತೋಡಿದರೂ ಸಿಗುವುದು ಉಪ್ಪು ನೀರು. ಹಾಗಾಗಿ ತಾಜಾ ನೀರಿಗೆ ಇಲ್ಲಿ ಸದಾ ಆಭಾವ. ಮಿನರಲ್ ನೀರು ಬೇಕಿದ್ದರೆ 403 ಕಿ.ಮೀ. ದೂರದ ಕೊಚ್ಚಿನ್ ನಗರದಿಂದಲೇ ಬರಬೇಕು. ಹಾಗಾಗಿ ನೀರು ಇಲ್ಲಿ ದುಬಾರಿ. ಬದಲಿಗೆ, ಇಲ್ಲಿ ಸದಾ ದೊರಕುವ ಎಳನೀರನ್ನೇ ಜನರು ನೀರಿನ ಬದಲಾಗಿ ಕುಡಿಯುತ್ತಾರೆ. ಅಂಗಡಿಗಳಲ್ಲಿಯೂ ಸದಾ ಎಳನೀರು ದೊರಕುತ್ತದೆ. ಆದರೆ ಒಂದು ಎಳನೀರು ಕುಡಿಯಲು ಸಾಕಾಗುವುದಿಲ್ಲ. ಎರಡು ಅಥವಾ ಮೂರನ್ನಾದರೂ ಕುಡಿಯಬೇಕು.
5) ಸಮುದ್ರತೀರದಲ್ಲಿ ಅಡ್ಡಾಡುವಾಗ ಏಡಿಗಳ ಬಗ್ಗೆ ಎಚ್ಚರವಿರಲಿ
ಸಾಮಾನ್ಯವಾಗಿ ಸಮುದ್ರತೀರದಲ್ಲಿ ನಡೆದು ಹೋಗುವಾಗ ಪ್ರವಾಸಿಗರು ಸಮುದ್ರದ ಅಲೆಗಳು, ತೆಂಗಿನ ಮರ ಅಥವಾ ಇತರ ವಸ್ತುಗಳತ್ತಲೇ ಗಮನ ಹರಿಸಿರುತ್ತಾರೆ. ಕಾಲಿನ ಅಡಿಯಲ್ಲಿ ಏನಾದರೂ ಬಂದರೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಈ ದ್ವೀಪದಲ್ಲಿ ಹಲವು ಬಗೆಯ ಏಡಿಗಳಿವೆ ಹಾಗೂ ಇವು ಅಡ್ಡಲಾಗಿ ವೇಗವಾಗಿ ಧಾವಿಸುತ್ತವೆ. ಒಂದುವೇಳೆ ಅರಿಯದೆ ಇವುಗಳ ಮೇಲೆ ಕಾಲಿಟ್ಟರೆ ಇವು ಕಡಿಯುತ್ತವೆ. ಇವುಗಳ ಕಡಿತ ತೀವ್ರ ನೋವು ಮತ್ತು ಉರಿ ತರಿಸುವ ಅಪಾಯವಿದೆ ಹಾಗೂ ಇಲ್ಲಿ ವೈದ್ಯಕೀಯ ಸೌಲಭ್ಯಗಳು ಮಿತವಾಗಿಯೇ ಇವೆ.
ತಪ್ಪಿಸಿಕೊಳ್ಳಬಾರದ ಕೆಲವು ಸಂಗತಿಗಳು:
* ಇಲ್ಲಿ ಕಳ್ಳತನವಾಗುವ ಭಯವೇ ಇಲ್ಲ, ಹಾಗಾಗಿ ನೀವು ಯಾವುದೇ ವಸ್ತುವನ್ನು ಇಟ್ಟಲ್ಲಿ ಇಟ್ಟ ಹಾಗೆ ಬಿಟ್ಟು ಹೋಗಬಹುದು
* ಸಮುದ್ರದಲ್ಲಿ ಎರಡು ಸಮುದ್ರಗಳು ಸೇರುವ ಸ್ಥಳದಲ್ಲಿ ಎರಡು ಸಮುದ್ರಗಳ ಬಣ್ಣದಲ್ಲಿ ವ್ಯತ್ಯಾಸವಿದ್ದು ಉದ್ದನೆಯ ಗೆರೆಯಂತಿರುತ್ತದೆ, ಹಾಗು ಮಿಶ್ರಣಗೊಳ್ಳದೆ ಇರುವ ನಿಸರ್ಗದ ಅದ್ಭುತವನ್ನು ನೋಡಲು ಮರೆಯದಿರಿ.
* ಅಟಾಲ್ ಮತ್ತು ಹವಳಗಳ ಬಗ್ಗೆ ಇಲ್ಲಿನ ಪ್ರವಾಸಿಗರಿಗೆ ವಿವರಗಳನ್ನು ನೀಡಲು ಸೂಕ್ತ ತರಬೇತಿ ಪಡೆದವರು ಇಲ್ಲ. ಹಾಗಾಗಿ ಈ ಬಗ್ಗೆ ಮೊದಲೇ ಕೊಂಚ ಓದಿಕೊಂಡು ಹೋಗುವುದು ಒಳ್ಳೆಯದು.