ಐಟಿ ಹಬ್, ಭಾರತದ ಸಿಲಿಕಾನ್ ಕಣಿವೆ, ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಪ್ರೀತಿಯಿಂದ ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂತಲೂ ಕರೆಸಿಕೊಳ್ಳುತ್ತದೆ. ಇಂದಿನ ಭಾರತದ ಹೊಸ ಮುಖ ಎಂತಲೆ ಹೇಳಬಹುದಾದ ಬೆಂಗಳೂರು ಸಾಕಷ್ಟು ಜಾಗತೀಕರಣವೂ ಹೊಂದಿದೆ. ಇಲ್ಲೊಂದು ರೀತಿಯಲ್ಲಿ ಆಧುನಿಕ ಜೀವನಶೈಲಿಯನ್ನು ಕಾಣಬಹುದು.
ಎಲ್ಲ ಕೋನಗಳಲ್ಲೂ ಅದ್ಭುತವಾಗಿ ಕಂಡುಬರುವ ಶಿವನಿವನು!
ಇಷ್ಟಾಗಿಯೂ, ಸಂಸ್ಕೃತಿ-ಸಂಪ್ರದಾಯಗಳ ವಿಚಾರ ಬಂದಾದ ಬೆಂಗಳೂರು ಒಂದು ಸಾಂಸ್ಕೃತಿಕ ನಗರವಾಗಿಯೂ ಗಮನಸೆಳೆಯುತ್ತದೆ. ಬೆಂಗಳೂರಿಗರು ಶಿಕ್ಷಣ, ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಆಚಾರ-ವಿಚಾರಗಳಲ್ಲಿ ಅಪ್ಪಟ ಭಾರತೀಯ ಹಿಂದುಗಳು ಎಂದು ತೋರಿಸಿಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಇಂದಿಗೂ ಈ ಆಧುನಿಕ ನಗರದಲ್ಲಿ ಸಾಕಷ್ಟು ಗುಡಿ-ಗುಂಡಾರಗಳನ್ನು ಎಲ್ಲೆಡೆ ಕಾಣಬಹುದಾಗಿದೆ.

ಚಿತ್ರಕೃಪೆ: Indianhilbilly
ಪ್ರಸ್ತುತ ಲೇಖನದಲ್ಲಿ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯಲ್ಲಿರುವ ಕೆಲವು ವಿಶೇಷವಾದ ಧಾರ್ಮಿಕ ಸನ್ನಿಧಿಗಳ ಕುರಿತು ತಿಳಿಸಲಾಗಿದೆ. ಮುರುಗೇಶಪಾಳ್ಯ ಬೆಂಗಳೂರು ನಗರದ ಒಂದು ಬಡಾವಣೆ ಪ್ರದೇಶ. ಸಾಕಷ್ಟು ಐಟಿ ಹಾಗೂ ಇತರೆ ಕಂಪನಿಗಳಿಗೆ ಆಶ್ರಯ ಒದಗಿಸಿರುವ ಈ ಪ್ರದೇಶದಲ್ಲಿ ಕೆಲವು ಸುಂದರ ಧಾರ್ಮಿಕ ಆಕರ್ಷಣೆಗಳನ್ನು ಕಾಣಬಹುದು.
ಮೊದಲನೇಯದಾಗಿ ಕೆಂಪ್ ಫೋರ್ಟ್ ಶಿವ ದೇವಾಲಯ. ಇದೊಂದು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾದ ಶಿವನ ಸನ್ನಿಧಿಯಾಗಿದೆ. 65 ಅಡಿಗಳಷ್ಟು ಎತ್ತರದ ಶ್ವೇತವರ್ಣದ ಧ್ಯಾನ ಮುದ್ರೆಯಲ್ಲಿರುವ ಶಿವನ ಪ್ರತಿಮೆ ಇದರ ಅತಿ ಪ್ರಮುಖ ಆಕರ್ಷಣೆ. ಹಿಮಾಲಯ ಪರ್ವತಗಳ ಹಿನ್ನಿಲೆಯಲ್ಲಿ ಜಟದಲ್ಲಿ ಗಂಗಾಧಾರಿಯಾಗಿ ಪ್ರತಿಷ್ಠಾಪಿಸಲಾಗಿರುವ ಈ ಪ್ರತಿಮೆ ನಯನ ಮನೋಹರವಾಗಿದೆ.

ಚಿತ್ರಕೃಪೆ: Rakesh
ರವಿ ಎಂ ಮೆಲ್ವಾನಿ ಹಾಗೂ ಅವರ ತಂದೆಗೆ ಕನಸಿನಲ್ಲಿ ಶಿವನ ದೇವಾಲಯ ಸ್ಥಾಪಿಸಬೇಕೆಂಬ ಪ್ರೇರಣೆಯುಂಟಾಗಿ ಅವರ ಸತತ ಪ್ರಯತ್ನ ಫಲದಿಂದಲೆ ಇಂದು ಮುರುಗೇಶಪಾಳ್ಯದಲ್ಲಿ ಈ ಶಿವನ ದೇವಾಲಯ ನಿರ್ಮಾಣವಾಗಿದೆ. 1995 ಫೆಬ್ರುವರಿ 26 ರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯ ಶ್ರೀ ಶಂಕರಾಚಾರ್ಯರ ಸಾನಿಧ್ಯದಲ್ಲಿ ಈ ಭವ್ಯ ಶಿವನ ದೇವಾಲಯ ಲೋಕಾರ್ಪಣೆಯಾಯಿತು.
ಇದೊಂದು ರೀತಿಯ ಆಧುನಿಕತೆಯ ಛಾಪಿರುವ ದೇವಾಲಯವಾಗಿದ್ದು ಎಲ್ಲ ವರ್ಗದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಷ್ಟೆ ಅಲ್ಲ ಬೇರೆ ಬೇರೆ ದೇಶಗಳಿಂದ ಬಂದ ಪ್ರವಾಸಿಗರೂ ಸಹ ಇದಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಮತ್ತೊಂದು ವಿಶೇಷವೆಂದರೆ 32 ಅಡಿಗಳ ಗಣೇಶನ ಪ್ರತಿಮೆ. ಕೇಸರಿ ದಾರಗಳನ್ನು ಇದಕ್ಕೆ ಕಟ್ಟುವಾಗ ಭಕ್ತರು ತಮ್ಮ ವಿಘ್ನಗಳನ್ನು ದೂರಮಾಡುವಂತೆ ಗಣೇಶನಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲದೆ ಭಾರತದ ವಿವಿಧ ಭಾಗಗಳಲ್ಲಿ ಕಂಡುಬರುವ ಪ್ರಮುಖ ಶಿವಲಿಂಗಗಳ ಪ್ರತಿಕೃತಿಗಳು ಇಲ್ಲಿವೆ.

ಚಿತ್ರಕೃಪೆ: Sissssou
ಇಲ್ಲಿಗೆ ಭೇಟಿ ನೀಡುವ ಶಿವನ ಭಕ್ತರಲ್ಲಿ ಕೆಲವರು ಹೇಳುವಂತೆ ಈ ಸನ್ನಿಧಿಯು ಸಾಕಷ್ಟು ಪ್ರಭಾವಶಾಲಿಯಾಗಿದೆಯಂತೆ. ಶಿವನ ಪ್ರತಿಮೆಯ ಎದುರಿಗಿರುವ ಘಂಟೆಗಳನ್ನು ಹೊತ್ತ ಎರಡು ಖಂಬಗಳು ಸಾಕಷ್ಟು ಪವಾಡ ಶಕ್ತಿಯನ್ನು ಹೊಂದಿವೆಯಂತೆ ಹಾಗೂ ಅವುಗಳನ್ನು ಮುಟ್ಟಿ ಯಾರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥಿಸುತ್ತಾರೊ ಅವರಿಗೆ ಒಳಿತಾಗುತ್ತದೆಂದು ಕೆಲವರ ಅಭಿಪ್ರಾಯವಾಗಿದೆ.
ಹಿಮಗಡ್ಡೆಯಲ್ಲಿ ನಿರ್ಮಿಸಲಾದ ಶಿವನ ಲಿಂಗ ಇಲ್ಲಿನ ಮತ್ತೊಂದು ವಿಶೇಷವಾಗಿದ್ದು ಅದು ಅಮರನಾಥ ಗುಹೆಯ ಶಿವಲಿಂಗದ ಪ್ರತಿಕೃತಿ ಎನ್ನಲಾಗಿದೆ. ಶಿವನ ಪ್ರತಿಮೆ ಹೊರತುಪಡಿಸಿ ಇಲ್ಲಿ ಗಣೇಶನ, ಪ್ರತ್ಯಕ್ಷಲಿಂಗ ಹಾಗೂ ನವಗೃಹಗಳ ಸನ್ನಿಧಿಯನ್ನೂ ಸಹ ಕಾಣಬಹುದು. ಲಿಂಗಾಭಿಷೇಕ, ಆರತಿ, ಶಿವರಕ್ಷ ಧಗಾ ಪೂಜೆ ಮುಂತಾದವುಗಳನ್ನು ಇಲ್ಲಿ ಆಚರಿಸಲಾಗುತ್ತದೆ ಹಾಗೂ ಶಿವರಾತ್ರಿ ಇಲ್ಲಿನ ಪ್ರಮುಖ ಉತ್ಸವವಾಗಿದೆ.

ಹೀಲಿಂಗ್ ಸ್ಟೋನ್ಸ್, ಚಿತ್ರಕೃಪೆ: John Hoey
ಉತ್ತರಕ್ಕೆ ಜೀವನಭೀಮಾ ನಗರ, ಪೂರ್ವದಲ್ಲಿ ವಿಮಾನಪುರ, ದಕ್ಷಿಣದಲ್ಲಿ ಹೆಚ್ ಎ ಎಲ್ ಏರ್ ಪೋರ್ಟ್ ಹಾಗೂ ಪಶ್ಚಿಮದಲ್ಲಿ ರುಸ್ತಂ ಬಾಗ್ ಬಡಾವಣೆಯಿಂದ ಸುತ್ತುವರೆದಿರುವ ಮುರುಗೇಶಪಾಳ್ಯವನ್ನು ಬೆಂಗಳೂರು ನಗರದ ಎಲ್ಲ ಮೂಲೆಗಳಿಂದಲೂ ತಲುಪಬಹುದಾಗಿದೆ. ಬಿಎಂಟಿಸಿ ಬಸ್ಸುಗಳು ಹಾಗೂ ಬಾಡಿಗೆ ಕಾರು, ರಿಕ್ಷಾಗಳು ಮೆಜೆಸ್ಟಿಕ್ ನಿಂದ ದೊರೆಯುತ್ತವೆ.
ಬೆಂಗಳೂರಿನಲ್ಲಿ ಶಾಪಿಂಗ್ ಮಾಡಬಹುದಾದ ಅದ್ಭುತ ಸ್ಥಳಗಳು


Click it and Unblock the Notifications
















