ಲೇಖನದ ಶಿರ್ಷಿಕೆ ಸೂಚಿಸುವಂತೆ ಈ ಎರಡು ಕ್ಷೇತ್ರಗಳು ಪವಿತ್ರ ತೀರ್ಥ ಕ್ಷೇತ್ರಗಳಾಗಿದ್ದು ಒಂದು ನರಸಿಂಹ ದೇವರಿಗೂ ಇನ್ನೊಂದೂ ಶ್ರೀರಾಮಚಂದ್ರನಿಗೂ ಮುಡಿಪಾದ ದೇವಾಲಯಗಳನ್ನು ಹೊಂದಿವೆ. ಒಂದು ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯದಲ್ಲಿದ್ದರೆ ಇನ್ನೊಂದು ವಿನೂತನವಾಗಿ ರೂಪಗೊಂಡ ತೆಲಂಗಾಣ ರಾಜ್ಯದಲ್ಲಿದೆ.
ವಿಶೇಷ ಲೇಖನ : ತೆಲಂಗಾಣದ ಪ್ರವಾಸಿ ಆಕರ್ಷಣೆಗಳು
ಆಂಧ್ರದಲ್ಲಿರುವ ಸಿಂಹಾಚಲಂ ಶ್ರೀಕ್ಷೇತ್ರವು ವಿಷ್ಣುವಿನ ಉಗ್ರಾವತಾರವಾದ ನರಸಿಂಹ (ಮಾನವ ದೇಹ ಸಿಂಹದ ಮುಖ) ದೇವರಿಗೆ ಮುಡಿಪಾದ ದೇವಾಲಯದಿಂದ ಮಹತ್ವ ಪಡೆದಿದ್ದರೆ, ತೆಲಂಗಾಣ ರಾಜ್ಯದಲ್ಲಿರುವ ಭದ್ರಾಚಲಂ ಶ್ರೀಕ್ಷೇತ್ರವು ವಿಷ್ಣುವಿನ ನಮ್ರತೆಯ ಅವತಾರವಾದ ಶ್ರೀ ರಾಮಚಂದ್ರನ ದೇವಾಲಯದಿಂದಾಗಿ ಪ್ರಖ್ಯಾತಿಗಳಿಸಿದೆ. ಹೀಗಾಗಿ ಈ ಲೇಖನವು ವಿಷ್ಣುವಿನ ಉಗ್ರ ಹಾಗೂ ಸೌಮ್ಯ ಮುಖದ ದರುಶನ ಮಾಡಿಸುತ್ತದೆ.
ಆಂಧ್ರದ ಸಮಗ್ರ ಪ್ರವಾಸಿ ಸ್ಥಳಗಳು
ಸಿಂಹಾಚಲಂ, ಆಂಧ್ರದ ಪ್ರಮುಖ ಬಂದರು ಪಟ್ಟಣ ವಿಶಾಖಾಪಟ್ಟಣಂ (ವೈಜಾಗ್) ನಲ್ಲಿದ್ದು ನಗರ ಕೇಂದ್ರದಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನೂ ವೈಜಾಗಿಗೆ ತೆರಳಲು ದಕ್ಷಿಣ ಭಾರತದ ಪ್ರಮುಖ ನಗರಗಳಿಂದ ಉತ್ತಮ ರೈಲು ಸೌಲಭ್ಯವಿದೆ. ಇನ್ನೊಂದೆಡೆ ಭದ್ರಾಚಲಂ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿದೆ. ಖಮ್ಮಂ ಪಟ್ಟಣದಿಂದ 120 ಕಿ.ಮೀ ದೂರದಲ್ಲಿ ಭದ್ರಾಚಲಂ ಸ್ಥಿತವಿದ್ದು ಸುಲಭವಾಗಿ ತೆರಳಬಹುದಾಗಿದೆ.
ಸಿಂಹಾಚಲಂ:
ಈ ಲೇಖನದ ಮೂಲಕ ಎರಡೂ ಕ್ಷೇತ್ರಗಳ ಕುರಿತು ತಿಳಿಯಿರಿ ಹಾಗೂ ಅವಕಾಶ ದೊರೆತಾಗ ವಿಷ್ಣುವಿನ ಸೌಮ್ಯ ಮುಖದ ಹಾಗೂ ಉಗ್ರ ಮುಖದ ದರುಶನ ಪಡೆಯಿರಿ.
ಚಿತ್ರಕೃಪೆ: Adityamadhav83
ಚಿತ್ರಕೃಪೆ: Mark Ahsmann
ಸಿಂಹಾಚಲಂ:
ಸಿಂಹಾಚಲಂ ದಕ್ಷಿಣ ಭಾರತ ಒಂದು ಆಂಧ್ರ ಪ್ರದೇಶದಲ್ಲಿರುವ ವೈಜಾಗ್ ನಗರ ವಲಯದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಸ್ಥಳವು ವಿಷ್ಣು ಭಕ್ತರಿಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿರುವ ಸಿಂಹಾಲಂ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Santoshvatrapu
ಸಿಂಹಾಚಲಂ:
ಸಿಂಹಾಚಲಂನಲ್ಲಿರುವ ನರಸಿಂಹ ದೇವರಿಗೆ ಮುಡಿಪಾದ ದೇವಾಲಯವು ಹದಿನೆಂಟು ನರಸಿಂಹ ಕ್ಷೇತ್ರಗಳ ಪೈಕಿ ಒಂದಾಗಿದೆ. ನರಸಿಂಹ ಒಂದು ವಿಶಿಷ್ಟವಾದ ವಿಷ್ಣುವಿನ ಅವತಾರದ ದೇಹ ರಚನೆಯಾಗಿದೆ. ದೇಹವು ಸದೃಢವಾದ ಮಾನವ ಶರೀರ ಹೊಂದಿದ್ದರೆ, ತಲೆಯ ಭಾಗವು ಸಿಂಹದ ಮುಖ ಹೊಂದಿದೆ. ವಿಷ್ಣುವು ಈ ಅವತಾರ ಧರಿಸಲು ರೋಚಕವಾದ ದಂತ ಕಥೆಯೆ ಇದೆ. ಅದು ಹೀಗೆ ಸಾಗುತ್ತದೆ.
ಚಿತ್ರಕೃಪೆ: Adityamadhav83
ಸಿಂಹಾಚಲಂ:
ಹಿಂದೆ ಹಿರಣ್ಯಕಶಿಪು ಎಂಬ ದೈತ್ಯ ಅಸುರನಿದ್ದ. ಕಠಿಣವಾದ ತಪಸ್ಸಾಚರಿಸಿ ಬ್ರಹ್ಮನಿಂದ ಅದ್ವಿತೀಯವಾದ ವರ ಪಡೆದಿದ್ದ. ಅದರ ಪ್ರಕಾರ ಆತನಿಗೆ ಯಾವ ಪ್ರಾಣಿ, ಪಕ್ಷಿ ಅಥವಾ ಮನುಷ್ಯರಿಂದ, ಇಲ್ಲವೆ ನೈಸರ್ಗಿಕ ವಿಕೋಪಗಳಿಂದ, ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯಲಿ, ಆಕಾಶ ಅಥವಾ ಭೂಮಿಯ ಮೇಲೆ ಯಾವುದೆ ರೀತಿಯ ಆಯುಧಗಳಿಂದ ಸಾವು ಬರದು. ಇದರಿಂದ ತನಗೆ ಸಾವೇ ಇಲ್ಲ ಎಂದು ಬಗೆದು ಗರ್ವಿಷ್ಠನಾಗಿ ಹರಿಯನೊಂದಿಗೆ ದ್ವೇಷ ಸಾಧಿಸುತ್ತ ತಾನೆ ಪರಮ ದೈವನೆಂದು ಬಗೆದು ಜನರನ್ನು ಹಿಂಸಿಸಲಾರಂಭಿಸಿದ.
ಚಿತ್ರಕೃಪೆ: Adityamadhav83
ಸಿಂಹಾಚಲಂ:
ಇತ್ತ ಅವನ ಮಗನಾದ ಪ್ರಹ್ಲಾದನು ಹರಿಯ ಅಂದರೆ ವಿಷ್ಣುವಿನ ಪರಮ ಭಕ್ತನಾಗಿ ಸದಾ ಅವನ ಸ್ಮರಣೆಯಲ್ಲಿರುತ್ತಿದ್ದನು. ಇದನ್ನರಿತ ತಂದೆ ಅಸುರನು ಪ್ರಹ್ಲಾದನು ತನ್ನ ಮಗನೆಂದೂ ಸಹ ಲೆಕ್ಕಿಸದೆ ಅವನ ಬಾಯಿಯಿಂದ ಹರಿನಾಮ ಹೋಗಿಸುವ ದೃಷ್ಟಿಯಿಂದ ಅವನಿಗೆ ಸಾಕಷ್ಟು ತೊಂದರೆ ನೀಡಿದ ಹಾಗೂ ಮರಣದ ದವಡೆಗೂ ನುಗ್ಗಿದ. ಪ್ರತಿ ಬಾರಿ ಪ್ರಹ್ಲಾದ ತನ್ನ ಭಕ್ತಿಯ ಶಕ್ತಿಯಿಂದ ಉಳಿಯತೊಡಗಿದೆ. ಹೀಗೆ ಒಂದು ಸಂದರ್ಭದಲ್ಲಿ ತಂದೆ ಮಗನ ನಡುವೆ ಹರಿಯ ಕುರಿತು ವಾಗ್ವಾದ ನಡೆದು ಹರಿಯನ್ನು ಬರುವಂತೆ ಹಿರಣ್ಯಕಶಿಪು ಹೂಂಕರಿಸುತ್ತಾನೆ.
ಚಿತ್ರಕೃಪೆ: imgarcade.com
ಸಿಂಹಾಚಲಂ:
ಈ ಸಂದರ್ಭದಲ್ಲಿ ವಿಷ್ಣು ಉಗ್ರ ರೂಪವಾದ ನರಸಿಂಹನ ಅವತಾರ ಪಡೆದು ಖಂಬ ಸಿಳಿ ಹೊರ ಬಂದು ಹಿರಣ್ಯಕಶಿಪುವನ್ನು ತೋಳುಗಳಲ್ಲಿ ಬಿಗಿಯಾಗಿ ಹಿಡಿದು ಮೂರು ಸಂಜೆಯ ಹೊತ್ತಿನಲ್ಲಿ, ಹೊಸಲಿನ ಮೇಲೆ ಕುಳಿತು ತನ್ನ ಕೈಗಳ ಚೂಪಾದ ಉಗುರುಗಳಿಂದ ಅವನ ಹೊಟ್ಟೆ ಬಗೆದು ಸಂಹರಿಸಿದ. ಹೀಗೆ ವಿಷ್ಣು ನರಸಿಂಹನಾಗಿ ಪ್ರತ್ಯಕ್ಷನಾದ ಸ್ಥಳವೆ ಸಿಂಹಾಚಲಂ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Sourindo Mohun Tagore
ಸಿಂಹಾಚಲಂ:
ಈ ದೇವಸ್ಥಾನದಲ್ಲಿರುವ ನರಸಿಂಹನ ವಿಗ್ರಹವು ಸದಾ ಚಂದನದಿಂದ ಲೇಪಿತಗೊಂಡಿರುತ್ತದೆ. ಈ ವಿಗ್ರಹವು ತ್ರಿಭಂಗ ಆಸನದಲ್ಲಿದ್ದು, ಸಿಂಹದ ರುಂಡ ಮತ್ತು ಮನುಷ್ಯನ ಮುಂಡವನ್ನು ಹೊಂದಿದೆ. ಇಲ್ಲಿರುವ ಶಾಸನವು ಈ ದೇವಾಲಯವು ಕ್ರಿ. ಶ 1098ರಲ್ಲಿ ಚೋಳರ ರಾಜ ಕುಲೋತ್ತುಂಗನ ಕಾಲದಲ್ಲಿ ನಿರ್ಮಾಣಗೊಂಡದ್ದು ಎಂದು ಹೇಳುತ್ತದೆ. ಮತ್ತೊಂದು ಶಾಸನವು ಕ್ರಿ.ಶ 1137 ರಿಂದ 1156 ರವರೆಗೆ ಕಳಿಂಗದ ರಾಣಿ ಇಲ್ಲಿ ನೆಲೆಗೊಂಡಿದ್ದಳು ಎಂಬ ಅಂಶವನ್ನು ನಮಗೆ ತಿಳಿಸುತ್ತದೆ.
ಚಿತ್ರಕೃಪೆ: Sureshiras
ಸಿಂಹಾಚಲಂ:
ಈ ದೇವಾಲಯದ ಗೋಡೆಗಳ ಮೇಲೆ ನರಸಿಂಹನ ಹಲವು ಸುಂದರ ಕೆತ್ತನೆಗಳನ್ನು ಮಾಡಲಾಗಿದೆ. ಇಲ್ಲಿರುವ ಶಾಸನಗಳು ತೆಲುಗು ಮತ್ತು ಒರಿಯಾ ಭಾಷೆಗಳಲ್ಲಿವೆ. ಅಲ್ಲದೆ ಈ ದೇವಾಲಯದ ವಾಸ್ತು ಶೈಲಿಯಲ್ಲಿಯೂ ಸಹ ಈ ಎರಡು ರಾಜ್ಯಗಳ ಶೈಲಿಯ ಮಿಶ್ರಣವನ್ನು ಹೊಂದಿದೆ ಎಂದೇ ಹೇಳಬಹುದು. ಗಂಗಾಧರ ಎನ್ನುವ ಪವಿತ್ರ ಸ್ನಾನದ ಪುಷ್ಕರಿಣಿಯೂ ಸಹ ಈ ಗುಡ್ಡದ ಮೇಲೆ ನೆಲೆಗೊಂಡಿದೆ.
ಚಿತ್ರಕೃಪೆ: Adityamadhav83
ಸಿಂಹಾಚಲಂ:
ಸಿಂಹಾಚಲಂನ ಕುರಿತು ಮತ್ತೊಂದು ದಂತಕಥೆ ಪ್ರಚಲಿತದಲ್ಲಿದೆ. ಅದೇನೆಂದರೆ ಮುಸ್ಲಿಂ ದಾಳಿಕೋರರು ಹಿಂದೊಮ್ಮೆ ಈ ಪ್ರದೇಶಕ್ಕೆ ಆಕ್ರಮಣ ಮಾಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಗಳನ್ನು ಹಾಗೂ ಹಿಂದೂಗಳನ್ನು ದಾಳಿಕೋರರಿಂದ ಉಳಿಸಲು ಕುಮಾರನಾಥ ಎಂಬ ಕವಿಯು ಅತ್ಯಂತ ಭಕ್ತಿಯಿಂದ ನರಸಿಂಹಸ್ವಾಮಿಯನ್ನು ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡನಂತೆ. ಆಗ ಆತನ ಆಶಯದಂತೆ ನರಸಿಂಹನು ಧ್ವಂಸಕವಾದ ಕೆಂಪು ಕರಜಿಣಗಿ ಹುಳುಗಳ ದೊಡ್ಡ ಸಮೂಹವೊಂದನ್ನು ಕಳಿಸಿದನೆಂತೆ. ಆ ಹುಳುಗಳು ದಾಳಿಕೋರರನ್ನು ಅಟ್ಟಾಡಿಸಿಕೊಂಡು ಕಡಿದು ಓಡಿಸಿದವಂತೆ. ನಂತರ ಪ್ರದೇಶದಲ್ಲಿರುವ ಒಂದು ಬೆಟ್ಟದ ಹಿಂದೆ ಹೋಗಿ ಆ ಸಮೂಅಹ ಮಾಯವಾಯಿತಂತೆ. ಇದನ್ನು ತುಮ್ಮೇಲದಲ ಮೆಟ್ಟ ಎಂದು ಕರೆಯುತ್ತಾರೆ. ಮುಂದಿನ ಸ್ಲೈಡಿನಿಂದ ಭದ್ರಾಚಲಂ ಪರಿಚಯ.
ಚಿತ್ರಕೃಪೆ: Anirudh Emani
ಭದ್ರಾಚಲಂ:
ತೆಲಂಗಾಣ ಹಿಂದೂ ಧರ್ಮಕ್ಕೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾದಂತಹ ರಾಜ್ಯವಾಗಿದೆ. ಇಲ್ಲಿ ಶ್ರೀ ರಾಮಚಂದ್ರನ ಅಸ್ತಿತ್ವವನ್ನು ಹೇಳುವಂತಹ ಹಲವಾರು ಸನ್ನಿವೇಶಗಳು ಆಗಿ ಹೋಗಿದ್ದು ಅದರಲ್ಲಿ ಭದ್ರಾಚಲಂ ಮಂಚೂಣಿಯಲ್ಲಿದೆ. ಭದ್ರಾಚಲಂ ಭಾರತದ ದಕ್ಷಿಣ ಭಾಗದ ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ ಹಾಗೂ ಪ್ರಬುದ್ಧ ತೀರ್ಥ ಕ್ಷೇತ್ರ.
ಚಿತ್ರಕೃಪೆ: Trived m96
ಭದ್ರಾಚಲಂ:
ಗೋದಾವರಿ ನದಿಯ ತಟದ ಮೇಲೆ ನೆಲೆಸಿರುವ ಭದ್ರಾಚಲಂ ನಗರವು ದೇಶದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ, ಏಕೆಂದರೆ ಈ ಪ್ರದೇಶವನ್ನು ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತೆಯು ನೆಲೆಸಿದ್ದ ನಿವಾಸ ಸ್ಥಾನ ಎಂದು ಹೇಳಲಾಗುತ್ತದೆ. ಶ್ರೀ ರಾಮನ ಹೆಸರಿನಿಂದಾಗಿಯೇ ಭದ್ರಾಚಲಂ ಹಿಂದುಗಳ ಪಾಲಿಗೆ ಪ್ರಸಿದ್ಧ ಯಾತ್ರಾ ಸ್ಥಳವೆನಿಸಿದೆ.
ಚಿತ್ರಕೃಪೆ: Adityamadhav83
ಭದ್ರಾಚಲಂ:
ಮೇರು ಋಷಿ ಹಾಗೂ ಮೇನಕೆಯ ಸಮಾಗಮದಿಂದ ಹುಟ್ಟಿದ ಭದ್ರ ಎಂಬ ಭಕ್ತನಿಂದ ಈ ಪಟ್ಟಣಕ್ಕೆ ಭದ್ರಾಚಲಂ ಎಂಬ ಹೆಸರು ಬಂದಿದೆ. ಭದ್ರಾಚಲಂ ನಗರವು, ಶ್ರೀ ರಾಮನ ಜನ್ಮ ಸ್ಥಾನವಲ್ಲ ಎಂಬುದೊಂದನ್ನು ಹೊರತುಪಡಿಸಿದರೆ ಅಯೋಧ್ಯೆಯ ನಂತರದ ಎರಡನೇ ಪ್ರಮುಖ ಸ್ಥಳವಾಗಿದೆ. ಶ್ರೀ ರಾಮನು ರಾಕ್ಷಸ ರಾಜ ರಾವಣನನ್ನು ಲಂಕೆಯಲ್ಲಿ ಸಂಹಾರ ಮಾಡಿದ ನಂತರ ಇಲ್ಲಿ ನೆಲೆಸಿ ದೀರ್ಘ ಕಾಲ ರಾಜ್ಯವನ್ನು ಆಳಿದನು ಎಂಬ ಪ್ರತೀತಿಯಿದೆ.
ಚಿತ್ರಕೃಪೆ: Vivek rachuri
ಭದ್ರಾಚಲಂ:
ಪುರಾಣ ಕಥೆಯೊಂದರ ಪ್ರಕಾರ, ಭದ್ರಾಚಲಂ ಪಟ್ಟಣ ಇರುವ ಪ್ರದೇಶವು ಹಿಂದೊಮ್ಮೆ ದಂಡಕಾರಣ್ಯ ಇರುವ ಪ್ರದೇಶ ಎಂದು ಹೇಳಲಾಗಿದೆ. ಹಿಂದೂ ಪುರಾಣದ ನಂಬಿಕೆಯ ಪ್ರಕಾರ, ಶ್ರೀ ರಾಮ ಹಾಗೂ ಸೀತಾ ದೇವಿ ಹಾಗೂ ರಾಮನ ತಮ್ಮ ಲಕ್ಷ್ಮಣ ಸ್ವಲ್ಪ ಸಮಯದ ವರೆಗೆ ತಮ್ಮ ವನವಾಸದ ಸಂದರ್ಭದಲ್ಲಿ ಈ ದಂಡಕಾರಣ್ಯದಲ್ಲಿ ವಾಸಿಸಿದ್ದರು ಎನ್ನಲಾಗಿದೆ.
ಚಿತ್ರಕೃಪೆ: Pranayraj1985
ಭದ್ರಾಚಲಂ:
ಅನೇಕ ಜನರು ಹೇಳುವಂತೆ ಹಿಂದೆ ಶ್ರೀರಾಮನು ಸೀತಾ ಹಾಗೂ ಲಕ್ಷ್ಮಣನೊಂದಿಗೆ, ಇಂದು ಕಾಣಬಹುದಾದ ರಾಮನ ದೇವಸ್ಥಾನದ ಸಾಮಿಪ್ಯದಲ್ಲಿರುವ ಅರಣ್ಯವೊಂದರಲ್ಲಿ ನೆಲೆಸಿದ್ದನಂತೆ. ಈ ಅರಣ್ಯವು ದೇವಾಲಯದಿಂದ 32 ಕೀ.ಮಿ ದೂರದಲ್ಲಿದೆ. ಇದೆ ಸ್ಥಳದಲ್ಲಿ ರಾಮನು ನಿರ್ಮಿಸಿದ ಗುಡಿಸಲಿನಿಂದಲೇ (ಸ್ಥಳದಿಂದಲೇ) ರಾವಣನು ಸೀತಾ ಮಾತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ದಿದ್ದನು ಎನ್ನುವ ನಂಬಿಕೆಯಿದೆ.
ಚಿತ್ರಕೃಪೆ: Chitra Ramayana
ಭದ್ರಾಚಲಂ:
ಭದ್ರಾಚಲಂನ ಕುರಿತು ತಳುಕು ಹಾಕಿಕೊಂಡಿರುವ ಇನ್ನೊಂದು ಪ್ರಸಂಗವೆದರೆ ಭಗವಾನ್ ವಿಷ್ಣು ಹಾಗೂ ಅವನ ಭಕ್ತನಾದ ಭದ್ರನ ಮಧ್ಯೆ ನಡೆದ ಘಟನೆ. ಅದರ ಪ್ರಕಾರ, ಭದ್ರನು ಶ್ರೀ ರಾಮಚಂದ್ರನ ಉತ್ಕಟ ಭಕ್ತ ಹಾಗೂ ಋಷಿ ಮಹರ್ಷಿಯಾಗಿದ್ದ. ಭಗವಂತನು ತನ್ನ ಪತ್ನಿ ಸೀತೆಯನ್ನು ಬಿಡಿಸಿಕೊಂಡು ಬರಲು ಲಂಕೆಯ ಮಾರ್ಗದಲ್ಲಿ ಹೋಗುತ್ತಿರುವಾಗ ಭದ್ರನನ್ನು ಭೇಟಿಯಾಗುತ್ತಾನೆ.
ಚಿತ್ರಕೃಪೆ: Adityamadhav83
ಭದ್ರಾಚಲಂ:
ಭಗವಂತನನ್ನುದ್ದೇಶಿಸಿ ಭದ್ರನು ತನ್ನ ತಲೆಯ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಾನೆ. ಆದರೆ ಸೀತೆಯನ್ನು ಹಿಂತಿರುಗಿ ಪಡೆಯುವ ಆತುರದಲ್ಲಿದ್ದ ಶ್ರೀ ರಾಮನು ತಾನು ಪ್ರಮುಖವಾದ ಕಾರ್ಯವೊಂದಕ್ಕೆ ಹೊರಟಿರುವುದರಿಂದ ಹಿಂತಿರುಗಿ ಬರುವಾಗ ನಿನ್ನ ಬಯಕೆಯನ್ನು ಪೂರ್ಣಮಾಡೂವುದಾಗಿ ಹೇಳಿ ಅಲ್ಲಿಂದ ಅವಸರದಲ್ಲಿ ಸೀತಾನ್ವೇಷಣೆಗೆ ಹೊರಟು ಬಿಡುತ್ತಾನೆ.
ಚಿತ್ರಕೃಪೆ: Adityamadhav83
ಭದ್ರಾಚಲಂ:
ರಾಮನು ಭದ್ರನಿಗೆ ನೀಡಿದ ಮಾತಿನಂತೆ ಸಂಭವಿಸಲೇ ಇಲ್ಲ. ಇದರಿಂದಾಗಿ ಭದ್ರನು ಬೇಸರಗೊಂಡು ರಾಮನ ಕಾಯುವಿಕೆ ಸಫಲವಾಗಲಿ ಎಂದು ಆಶಿಸುತ್ತ ವಿಷ್ಣುವಿನನ್ನು ಕುರಿತು ಅಪಾರ ಭಕ್ತಿ, ಶೃದ್ಧೆಗಳಿಂದ ಪ್ರಾರ್ಥಿಸ ತೊಡಗುತ್ತಾನೆ. ಇದರ ಪ್ರತಿಫಲವಾಗಿ ಶ್ರೀ ವಿಷ್ಣುವು, ರಾಮನ ಅವತಾರದಲ್ಲಿ ಸೀತೆ ಹಾಗೂ ಲಕ್ಷ್ಮಣನ ಜೊತೆಗೂಡಿ ಭಕ್ತನ ಎದುರಿಗೆ ಪ್ರತ್ಯಕ್ಷನಾದ ಎಂದು ಹೇಳಲಾಗಿದೆ.
ಚಿತ್ರಕೃಪೆ: Ranveig
ಭದ್ರಾಚಲಂ:
ಭಗವಂತನು ತನ್ನ ಬರುವಿಕೆಯನ್ನು ಶಂಖವನ್ನು ಊದುವುದರ ಮೂಲಕ ಭಕ್ತನಿಗೆ ತಿಳಿಸಿದನಂತೆ. ಭಗವಂತನು ಭದ್ರಗಿರಿಯ ತುದಿಯಲ್ಲಿ ಹಾಗೂ ಆತನ ಪತ್ನಿ ಸೀತಾ ಮಾತೆಯೂ ಎಡ ತೊಡೆಯ ಮೇಲೆ ಮತ್ತು ಲಕ್ಷ್ಮಣನು ಬಲ ತೊಡೆಯ ಮೇಲೆ ಆಸೀನರಾಗಿದ್ದರು. ಈ ಘಟನೆ ಹಲವಾರು ವರ್ಷಗಳ ಕಾಲ ಅಂದರೆ ರಾಮರಾಜ್ಯ ಕೊನೆಗೊಳ್ಳುವವರೆಗೆ ಅಥವಾ ರಾಮ ಆಳ್ವಿಕೆ ಮುಗಿಯುವವರೆಗೆ ಹೀಗೆಯೇ ಇತ್ತು ಎಂಬುದು ಅನೇಕ ಜನರ ನಂಬಿಕೆಯಾಗಿದೆ. ಆದ್ದರಿಂದಲೇ ಈ ಪಟ್ಟಣವು ಶ್ರೀ ರಾಮನ ಭಕ್ತ ಭದ್ರನ ಹೆಸರನ್ನೇ ಹೊಂದಿದೆ!
ಭದ್ರಾಚಲಂ:
ಶ್ರಿ ರಾಮ ದೇವಾಲಯದ ಬಗ್ಗೆ ಪ್ರಚಲಿತದಲ್ಲಿರುವ ಇನ್ನೊಂದು ಅತ್ಯಂತ ಕುತೂಹಲಕಾರಿ ದಂತಕಥೆಯೊಂದಿದೆ, ಅದರ ಪ್ರಕಾರ, ಶ್ರೀ ರಾಮನೇ ಸ್ವತಃ ಪೋಕಲ ದಮ್ಮಕ್ಕ ಎಂಬ ಮಹಿಳೆಯ ಕನಸಿನಲ್ಲಿ ಕಾಣಿಸಿಕೊಂಡು ಭದ್ರಗಿರಿಯ ತಪ್ಪಲು ಪ್ರದೇಶಗಳಲ್ಲಿ ವಿಗ್ರಹಗಳು ಇನ್ನೂ ಅಸ್ತಿತ್ವದಲ್ಲಿರುವುದನ್ನು ಹೇಳಿದನಂತೆ. ಆನಂತರ ಮರುದಿನ ಆ ಮಹಿಳೆಯು ಪರ್ವತಕ್ಕೆ ಹೋಗಿ ನೋಡಿದಾಗ ಆಕೆಗೆ ಆಶ್ವರ್ಯವಾಗುವ ರೀತಿಯಲ್ಲಿ ಹಲವಾರು ಬೇರೆ ಬೇರೆ ಜಾಗಗಳಲ್ಲಿ ವಿಗ್ರಹಗಳು ಲಭಿಸಿದವಂತೆ.
ಚಿತ್ರಕೃಪೆ: Srinivas
ಭದ್ರಾಚಲಂ:
ಇದರಿಂದ ಅಚ್ಚರಿ ಹಾಗೂ ಸಂತಸಗೊಂಡ ಆಕೆ ಚಿಕ್ಕದಾದ ನೆಲೆಯೊಂದನ್ನು ಪರ್ವತದ ಮೇಲೆ ರಚಿಸಿ ಅದಕ್ಕೆ ಧಮ್ಮಕ್ಕ ಎಂದು ಹೆಸರಿಟ್ಟಳು. ಅರಣ್ಯವನ್ನು ತೆರವುಗೊಳಿಸಲು ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿದಳು ಹಾಗೂ ಪ್ರತಿ ದಿನ ಬಲಿಪೀಠದ ಪೂಜೆಯನ್ನೂ ಸಹ ಆರಂಭಿಸಿದಳು. ಅಂದಿನಿಂದ ಕಾಲಕ್ರಮೇಣ ಭದ್ರಗಿರಿ ಪರ್ವತವು ಅತ್ಯಂತ ಪವಿತ್ರ ಸ್ಥಳವೆನಿಸಿದ್ದು ಜಗತ್ತಿನಾದ್ಯಂತ ಇರುವ ಎಲ್ಲಾ ಹಿಂದೂ ಯಾತ್ರಿಕರ ಪ್ರಮುಖ ಸ್ಥಳವಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Bcmnet
ಭದ್ರಾಚಲಂ:
ಪ್ರತಿ ವರ್ಷ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಹಾಗೂ ತಮ್ಮ ಪಾಪಕ್ಕಾಗಿ ಕ್ಷಮೆಯನ್ನು ಯಾಚಿಸಲು ಭದ್ರಾಚಲಂಗೆ ಭೇಟಿ ನೀಡುತ್ತಾರೆ. ಭದ್ರಾಚಲಂ ಪಟ್ಟಣವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಉತ್ತಮವಾದ ಕ್ಷೇತ್ರ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ ಮಾತು ಹಲವು ಇತರೆ ಪ್ರವಾಸಿ ಆಕರ್ಷಣೆಗಳನ್ನೂ ಸಹ ಒದಗಿಸುತ್ತದೆ. ಈ ಪಟ್ಟಣದ ಇನ್ನಿತರ ಪ್ರಮುಖ ಆಕರ್ಷಣೆಗಳೆಂದರೆ ಜಟಾಯು ಪಕ್ಕ, ಪ್ರನಸಲ, ದುಮ್ಮುಗುಡೆಂ, ಹಾಗೂ ಗುಂಡಾಲ. ಈ ಪ್ರದೇಶದ ಪ್ರಸಿದ್ಧವಾದ ದೇವಾಲಯಗಳೆಂದರೆ, ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯ ಹಾಗೂ ಭದ್ರಾಚಲಂ ರಾಮ ದೇವಾಲಯ.
ಚಿತ್ರಕೃಪೆ: Bcmnet
ಭದ್ರಾಚಲಂ:
ಭದ್ರಾಚಲಂ ಪಟ್ಟಣವನ್ನು ರಸ್ತೆ ಹಾಗೂ ರೈಲ್ವೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಖಮ್ಮಂ ಪಟ್ಟಣದಿಂದ 120 ಕಿ.ಮೀ ದೂರವಿರುವ ಭದ್ರಾಚಲಂಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಇಲ್ಲವೆ ಮೊದಲಿಗೆ ವಿಜಯವಾಡಾ ತಲುಪಿ ಅಲ್ಲಿಂದ ಭದ್ರಾಚಲಂಗೆ ತೆರಳಬಹುದು. ವಿಜಯವಾಡಾದಿಂದ ಭದ್ರಾಚಲಂ 186 ಕಿ.ಮೀ ದೂರವಿದ್ದು ಬಸ್ಸುಗಳು ಲಭ್ಯವಿದೆ.
ಚಿತ್ರಕೃಪೆ: Vivek rachuri