ನಾವು ಹಲವಾರು ಬಾರಿ ಅಲ್ಲಲ್ಲಿ ಪ್ರಕೃತಿ, ನಿಸರ್ಗ ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತೆವೆ. ಆದರೆ ಪ್ರಕೃತಿ ಎಂದರೆ ಏನು? ಅದರ ವ್ಯಾಖ್ಯಾನವೇನು? ಅದರ ಮಹತ್ವವೇನು? ಎಂಬ ಪ್ರಶ್ನೆಗಳ ಕುರಿತು ಎಂದಾದರೂ ತಾಳ್ಮೆಯಿಂದ ವಿಶ್ಲೇಷಿಸಿದ್ದೆವೆಯಾ? ಅದೇನೆ ಇರಲಿ...ಇದೇನು ಅಂತಹ ಮಹಾ ಪ್ರಶ್ನೆ...ಪ್ರಕೃತಿ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರ, ಗಿಡ ಮರಗಳು, ಬೆಟ್ಟಗುಡ್ಡಗಳು, ನದಿ, ಕೆರೆ, ಹಳ್ಳ, ತೊರೆಗಳು ಎಂದು ಉತ್ತರ ಕೊಟ್ಟುಬಿಡಬಹುದು. ಸರಿ...ಇವೆಲ್ಲವೂ ಸೇರಿ ಪ್ರಕೃತಿಯಾದರೂ ಕೂಡ ವೈಜ್ಞಾನಿಕವಾಗಿ ಇದೊಂದು ಸೌರವ್ಯೂಹದಲ್ಲಿ ಸ್ವಾಭಾವಿಕವಾಗಿ ರಚಿಸಲ್ಪಟ್ಟ ಭೌತಿಕ ಮಾಧ್ಯಮ.
ಮಾನವ ಸೇರಿ ಸಕಲ ಜೀವರಾಶಿಗಳು ಉದ್ಭವಗೊಂಡ ವಸುಂಧರೆಯ ಸಮತೋಲನವಾದ ನಿರಂತರ ಕ್ಷಮತೆಯ ಚಲನೆಗೆ ಆಧಾರವಾಗಿ ನಿಲ್ಲುತ್ತದೆ ಪ್ರಕೃತಿ. ಮಾನವ ತನ್ನ ಚಾಣಾಕ್ಷತನ ಹಾಗು ಬುದ್ಧಿಮತ್ತೆಯಿಂದ ಅದೆಷ್ಟೊ ತನಗೆ ಅನುಕೂಲಕರವಾದ ವಸುಗಳನ್ನು ಕೃತಕವಾಗಿ ರಚಿಸಿದರೂ ಪ್ರಕೃತಿಯು ಸ್ವಾಭಾವಿಕವಾಗಿ ಹಲವು ವಸ್ತುಗಳನ್ನು ಯಾವುದೆ ಅಡ್ಡ ಪರಿಣಾಮಗಳಿರಲಾರದೆ ಹಾಗು ಕಿಂಚಿತ್ ಸ್ವಾರ್ಥವಿಲ್ಲದೆ ರಚಿಸಿ ಮೊದಲಿನಿಂದಲೂ ವಿಶ್ವ ಮಾನವಕುಲಕ್ಕೆ ಸಹಕಾರ ಕೊಡುತ್ತ ಬಂದಿದೆ. ಇಂತಹ ದಯಾಮಯಿಯಾದ ಪ್ರಕೃತಿ ಮಾತೆಯನ್ನು ಇಂದು ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಮನಸೋ ಇಚ್ಛೆ ಬಳಸಿ ಅದನ್ನು ಹಾಳುಗೆಡುವುತ್ತಿರುವುದು ದುರದೃಷ್ಟವೆ ಸರಿ.
ಅಷ್ಟೆ ಅಲ್ಲ, ಪ್ರಕೃತಿಯು ಮಾನವನ ಮನರಂಜನೆ ಹಾಗು ಆನಂದಕ್ಕೆಂದು ಅಲ್ಲಲ್ಲಿ ಸೋಜಿಗಗಳನ್ನೂ ರಚಿಸಿದೆ. ಅಂತಹ ವಿಸ್ಮಯಗಳನ್ನು ನಾವು ಖುದ್ದಾಗಿ ನೋಡಿದಾಗ ಆನಂದದ ಜೊತೆ ಆಶ್ಚರ್ಯವು ಆಗುತ್ತದೆ. ಬನ್ನಿ ಹಾಗಾದರೆ ಈ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಅಥವಾ ನೀವು ತಿಳೀಯಲೇಬೇಕಾಗಿರುವ ಏಳು ವಿಸ್ಮಯಗಳ ಪ್ರವಾಸ ಮಾಡೋಣ ಹಾಗು ಸದಾ ನಮ್ಮ ಕಾಳಜಿವಹಿಸುವ ಪ್ರಕೃತಿ ಮಾತೆಯ ರಕ್ಷಣೆಗೆ ಸಿದ್ಧರಾಗೋಣ.
ಚೀರಾಪುಂಜಿಯ ಲಿವಿಂಗ್ ರೂಟ್ ಬ್ರಿಡ್ಜ್:
ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಸೇತುವೆ ಒಂದು ನಿಸರ್ಗ ನಿರ್ಮಿತ ಜಗತ್ತಿನಲ್ಲೆ ಅದ್ಭುತ ಅಚ್ಚರಿಯಾಗಿದೆ. ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿರುವ ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದೆ.
ಸಮತೋಲನದ ಬಂಡೆ/ಬ್ಯಾಲೆನ್ಸಿಂಗ್ ರಾಕ್:
ತಮಿಳುನಾಡಿನ ಮಹಾಬಲಿಪುರಂ ಪಟ್ಟಣದಲ್ಲಿರುವ ಹೆಚ್ಚು ಕಡಿಮೆ ಗೋಲಾಕಾರದ ಈ ಬೃಹತ್ ಬಂಡೆಯು ಪ್ರಕೃತಿಯ ಮತ್ತೊಂದು ಅಚ್ಚರಿ. ಕೃಷ್ಣನ ಬೆಣ್ಣೆಯುಂಡೆ ಎಂತಲೂ ಕರೆಯಲ್ಪಡುವ ಇದು ಮಹಾಬಲಿಪುರಂನ ಸಮುದ್ರ ದಂಡೆಯ ಶಿವ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ಲೋನಾರ್ ಕ್ರೇಟರ್ ಕೆರೆ (ಉಲ್ಕಾಗುಂಡಿ):
ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆಯ ಲೋನಾರ್ ಎಂಬಲ್ಲಿ ಈ ಉಲ್ಕಾಗುಂಡಿ ನಿರ್ಮಾಣಗೊಂಡಿದೆ. ಪ್ಲೀಯ್ಸ್ಟೊಸಿನ್ ಎಪೋಕ್ ಕಾಲಮಾನದಲ್ಲಿ ನಿರ್ಮಿತವಾದ ಈ ಕೆರೆಯು ಸಲೈನ್ ನೀರನ್ನು ಹೊಂದಿದೆ. ಕೆರೆಯ ಬಳಿಯಲ್ಲಿ ವಿಷ್ಣು ದೇವರ ದೈತ್ಯ ಸೂದನ ಹಾಗು ಕಮಾಲಾ ಜಿ ದೇವಸ್ಥಾನಗಳನ್ನು ಕಾಣಬಹುದು.
ಚುಂಬಕ ಗುಡ್ಡ: ಲಡಾಖ್
ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದರಿಯ ಮೇಲೆ ಲಡಾಖ್ ನ ಲೇಹ್ ಬಳಿಯಲ್ಲಿ ಸುಮಾರು 50 ಕಿ.ಮೀ ದೂರದಲ್ಲಿ ಈ ವಿಸ್ಮಯಕಾರಿ ಚುಂಬಕ ಗುಡ್ಡವು ನೆಲೆಸಿದೆ. ಸುತ್ತಮುತ್ತಲಿನ ಭೂದೃಶ್ಯಾವಳಿಗಳಿಂದ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಈ ಗುಡ್ಡ..ವಾಹನಗಳು ಮೇಲ್ಮುಖವಾಗಿ ತನ್ನಷ್ಟಕ್ಕೆ ತಾನೆ ಚಲಿಸುವಂತೆ ಗೋಚರಿಸುತ್ತವೆ.
ಬೊರ್ರಾ ಗುಹೆಗಳು:
ಆಂಧ್ರಪ್ರದೇಶದ ಅನಂತಗಿರಿ ಪರ್ವತ ಶ್ರೇಣಿಯ ಅರಕು ಕಣಿವೆಯಲ್ಲಿ ಈ ವಿಸ್ಮಯಕಾರಿ ಪ್ರಾಕೃತಿಕ ಗುಹೆಗಳು ನೆಲೆಸಿವೆ. ಭಾರತದಲ್ಲಿ ಕಂಡುಬರುವ ಅತಿ ಆಳವಾದ ಗುಹೆ ಇದಾಗಿದ್ದು ಸುಮಾರು 80 ಮೀ. ಆಳವನ್ನು ತಲುಪುತ್ತದೆ.
ಬಿಸಿ ನೀರಿನ ಬುಗ್ಗೆಗಳು: ಮಣೀಕರಣ
ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿರುವ ಮಣೀಕರಣವು ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವುದೂ ಅಲ್ಲದೆ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಬಿಸಿ ನೀರಿನ ಬುಗ್ಗೆಗಳಿಗೆ ಮನೆಯೂ ಆಗಿದೆ.
ಅಮರನಾಥ ಮಂಜುಗಡ್ಡೆಯ ಶಿವಲಿಂಗ:
ಹಿಂದೂಗಳಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥಿನ ಶಿವಲಿಂಗವು ಒಂದು ಪ್ರಕೃತಿಯ ವಿಸ್ಮಯ. ಗುಹೆಯೊಂದರಲ್ಲಿ ಶಿವಲಿಂಗದ ರೂಪದಲ್ಲಿ ಈ ಒಂದು ಮಂಜುಗಡ್ಡೆಯ ಸ್ಟಾಲಗ್ಮೈಟ್ (ಗವಿಗಂಬ) ಪ್ರತಿ ವರ್ಷ ಮೇ ನಿಂದ ಅಗಸ್ಟ್ ಅವಧಿಯವರೆಗೆ ರೂಪಗೊಳ್ಳುತ್ತದೆ.