ವಾರಾಂತ್ಯ ಬಂದರೆ, ರಜೆಗಳು ಸಿಕ್ಕರೆ ಪ್ರವಾಸಿ ಪ್ರಿಯರು ಮಾಡುವ ಮೊದಲ ಕೆಲಸ ಹೊಸ ಹೊಸ ಸ್ಥಳಗಳನ್ನು ನೋಡಲು ಬಯಸುವುದು, ಅವುಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅನ್ವೇಷಿಸುವುದು. ಹೇಗಿದ್ದರೂ ಈಗ ಸೆಪ್ಟೆಂಬರ್ ಆರಂಭವಾಗಿದೆ. ಈ ತಿಂಗಳಲ್ಲಿ ಅನೇಕ ರಜಾದಿನಗಳಲ್ಲಿದ್ದು, ಹೆಚ್ಚು ಕಡಿಮೆ ಎಲ್ಲವೂ ವಾರಾಂತ್ಯ ಹಾಗೂ ವಾರದ ಆರಂಭದಲ್ಲಿ ಬಂದಿರುವುದು ವಿಶೇಷ. ಹಾಗಾಗಿ ನೀವು ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸ ಮಾಡಲು ಈಗಲೇ ಪ್ಲಾನ್ ಮಾಡಿ.
ಸೆಪ್ಟೆಂಬರ್ ಮೊದಲ ವಾರಾಂತ್ಯವು 7 ಮತ್ತು 8 ರಂದು ಬರುತ್ತದೆ. ಈ ವಾರಾಂತ್ಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಮೂರು ಗಿರಿಧಾಮಗಳಿಗೆ ಭೇಟಿ ನೀಡಬಹುದು. ಈ ಗಿರಿಧಾಮಗಳು ದಕ್ಷಿಣದ ಮಂದಿಗೆ ಬಹಳ ಹತ್ತಿರ. ಹೌದು, ಊಟಿ, ಮುನ್ನಾರ್ ಮತ್ತು ಕೂರ್ಗ್..ಈ ಮೂರು ಗಿರಿಧಾಮಗಳು ಅತ್ಯಂತ ಜನಪ್ರಿಯವಾಗಿದ್ದು, ಇಲ್ಲಿಗೆ ಭಾರತೀಯರು ಮಾತ್ರವಲ್ಲದೆ, ಪ್ರಪಂಚದಾದ್ಯಂತ ಪ್ರವಾಸಿಗರು ಬರುತ್ತಾರೆ. ಈಗ ಯಾವ ಗಿರಿಧಾಮಕ್ಕೆ ಹೋಗಬೇಕೆಂಬ ಆಯ್ಕೆ ನಿಮ್ಮದು. ಮತ್ತೇಕೆ ತಡ ಅಲ್ಲಿ ನೀವು ಏನೆಲ್ಲಾ ನೋಡಬಹುದು ಎಂಬುದನ್ನು ನೋಡೋಣ ಬನ್ನಿ...

ಮುನ್ನಾರ್
ಎಲ್ಲರಿಗೂ ಗೊತ್ತಿರುವ ಹಾಗೂ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಮುನ್ನಾರ್ ಗಿರಿಧಾಮ ಕೇರಳದಲ್ಲಿದೆ. ಈ ಗಿರಿಧಾಮವು ತುಂಬಾ ಸುಂದರವಾಗಿದೆ. ಮುನ್ನಾರ್ ನೋಡಲು ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಲ್ಲಿ ಪ್ರವಾಸಿಗರು ಎತ್ತರದ ಬೆಟ್ಟಗಳು ಮತ್ತು ಜಲಪಾತಗಳನ್ನು ಹತ್ತಿರದಿಂದ ನೋಡಬಹುದು. ಅಷ್ಟೇ ಅಲ್ಲ, ಇಲ್ಲಿ ನೋಡಲು ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಮುನ್ನಾರ್ನಲ್ಲಿರುವ ಎಕೋ ಪಾಯಿಂಟ್, ಎರವಿಕುಲಂ ರಾಷ್ಟ್ರೀಯ ಉದ್ಯಾನ ಮತ್ತು ಕುಂಡಲ ಸರೋವರಕ್ಕೆ ಭೇಟಿ ನೀಡಬಹುದು. ಎಕೋ ಪಾಯಿಂಟ್ ಮುನ್ನಾರ್ ನಿಂದ 15 ಕಿಲೋಮೀಟರ್ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 600 ಅಡಿ ಎತ್ತರದಲ್ಲಿದೆ. ಇಲ್ಲಿ ಧ್ವನಿ ಪ್ರತಿಧ್ವನಿಸುತ್ತದೆ. ಪ್ರವಾಸಿಗರು ಮುನ್ನಾರ್ನಲ್ಲಿ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಬೋಟಿಂಗ್ ಎಂಜಾಯ್ ಮಾಡಬಹುದು. ನೀವು ಮುನ್ನಾರ್ಗೆ ಭೇಟಿ ನೀಡುತ್ತಿದ್ದರೆ ಇಲ್ಲಿರುವ ಗುಲಾಬಿ ಉದ್ಯಾನವನ್ನು ನೋಡಿ. ಈ ಉದ್ಯಾನವು 2 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ ನೀವು ವಿವಿಧ ರೀತಿಯ ಸಸ್ಯಗಳನ್ನು ನೋಡಬಹುದು.
ತಲುಪುವ ಮಾರ್ಗ: ಕೊಚ್ಚಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇದು 130 ಕಿಮೀ ದೂರದಲ್ಲಿದೆ. ಹತ್ತಿರದ ರೈಲುಮಾರ್ಗಗಳೆಂದರೆ ಅಂಗಮಲೈ, ಆಲುವಾ ಮತ್ತು ಕೊಚ್ಚಿಯ ಎರ್ನಾಕುಲಂ ನಿಲ್ದಾಣ. ಇವು ಕ್ರಮವಾಗಿ 120 -100 ಕಿಮೀ ದೂರದಲ್ಲಿವೆ. ಬಸ್ಸುಗಳು ಮತ್ತು ಪ್ರವಾಸಿ ಟ್ಯಾಕ್ಸಿಗಳು ಕೊಚ್ಚಿಯಿಂದ ಮುನ್ನಾರ್ಗೆ ಸಂಪರ್ಕ ಕಲ್ಪಿಸುತ್ತವೆ.

ಕೂರ್ಗ್
ಕರ್ನಾಟಕದಲ್ಲಿ ಇರುವವರಿಗೆ ಕೂರ್ಗ್ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಈ ಗಿರಿಧಾಮವು ಆರೊಮ್ಯಾಟಿಕ್ ಮಸಾಲೆ ಮತ್ತು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರು ಜಲಪಾತಗಳು, ಕೋಟೆಗಳು, ಪ್ರಾಚೀನ ದೇವಾಲಯಗಳು ಮತ್ತು ಟಿಬೆಟಿಯನ್ ವಸಾಹತುಗಳಿಗೆ ಭೇಟಿ ನೀಡಬಹುದು. ನೀವು ದೈವ ಭಕ್ತರಾಗಿದ್ದರೆ ಕೂರ್ಗ್ನಲ್ಲಿರುವ ಓಂಕಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು 1820 ರಲ್ಲಿ ನಿರ್ಮಿಸಲಾದ ಪ್ರದೇಶದ ಅತ್ಯಂತ ಹಳೆಯ ದೇವಾಲಯವಾಗಿದೆ. ವನ್ಯ ಜೀವಿ ಪ್ರಿಯರಾದರೆ ನೀವು ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು. ಇವೆಲ್ಲಾ ಕಾರಣಕ್ಕೆ ಕೂರ್ಗ್ ಅನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ. ಕೂರ್ಗ್ನ ಸುಂದರವಾದ ಪ್ರಾಕೃತಿಕ ದೃಶ್ಯಗಳು ನಿಮ್ಮ ಹೃದಯವನ್ನು ಗೆಲ್ಲದೆ ಇರಲಾರದು.
ತಲುಪುವ ಮಾರ್ಗ: ರಸ್ತೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಕರ್ನಾಟಕದ ಪ್ರಮುಖ ನಗರಗಳಿಂದ ಕೂರ್ಗ್ಗೆ ಅನೇಕ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಹೋಗುತ್ತವೆ. ಕೂರ್ಗ್ ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿಲ್ಲ ಮತ್ತು ಹತ್ತಿರದ ರೈಲು ನಿಲ್ದಾಣ ಮೈಸೂರಿನಲ್ಲಿದೆ. ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಪ್ರವಾಸಿಗರು ಬಸ್ ಅಥವಾ ಟ್ಯಾಕ್ಸಿ ಮೂಲಕ ಕೂರ್ಗ್ಗೆ ಹೋಗಬಹುದು.

ಊಟಿ
ತಮಿಳುನಾಡಿನಲ್ಲಿರುವ ಊಟಿ ಗಿರಿಧಾಮವನ್ನು 'ಗಿರಿಧಾಮಗಳ ರಾಣಿ' ಎಂದು ಕರೆಯಲಾಗುತ್ತದೆ. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ಸುಂದರವಾದ ಗಿರಿಧಾಮವು ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿದೆ. ಇಲ್ಲಿ ಪ್ರವಾಸಿಗರು ವಿಶಾಲವಾದ ಚಹಾ ತೋಟಗಳು, ಸರೋವರಗಳು, ಜಲಪಾತಗಳು ಮತ್ತು ಭವ್ಯವಾದ ಉದ್ಯಾನಗಳನ್ನು ನೋಡಬಹುದು. ಊಟಿಗೆ ಉದಕಮಂಡಲ ಎಂಬ ಹೆಸರಿದೆಯಾದರೂ ಸಂಕ್ಷಿಪ್ತವಾಗಿ ಇದನ್ನು ಊಟಿ ಎಂದು ಕರೆಯಲಾಗುತ್ತದೆ. ಸುತ್ತಲೂ ಇರುವ ನೀಲಗಿರಿ ಬೆಟ್ಟಗಳಿಂದಾಗಿ ಊಟಿಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಈ ಬೆಟ್ಟಗಳನ್ನು ನೀಲಿ ಪರ್ವತಗಳು ಎಂದೂ ಕರೆಯುತ್ತಾರೆ. ಊಟಿಗೆ ಹೋಗುವ ಪ್ರವಾಸಿಗರು ಬೊಟಾನಿಕಲ್ ಗಾರ್ಡನ್, ದೊಡ್ಡಬೆಟ್ಟ ಗಾರ್ಡನ್, ಊಟಿ ಕೆರೆ, ಕಲ್ಹಟ್ಟಿ ಫಾಲ್ಸ್ ಮತ್ತು ಫ್ಲವರ್ ಶೋ ಮೊದಲಾದ ಸ್ಥಳಗಳಿಗೆ ಭೇಟಿ ನೀಡಬಹುದು.
ತಲುಪುವ ಮಾರ್ಗ: ಹತ್ತಿರದ ವಿಮಾನ ನಿಲ್ದಾಣ ಕೊಯಮತ್ತೂರಿನಲ್ಲಿದ್ದು, ಊಟಿಯಿಂದ 57 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗವಾಗಿ ಹೋಗುವವರು ಸಹ ಕೊಯಮತ್ತೂರಿನಿಂದ ತೆರಳಬಹುದು. ಈ ಸ್ಥಳಗಳಿಂದ ಬಸ್ ಸೇವೆಗಳು ಮತ್ತು ಬಾಡಿಗೆಗೆ ಟ್ಯಾಕ್ಸಿ ಸಹ ಸುಲಭವಾಗಿ ಲಭ್ಯವಿದೆ. ಕೊಯಮತ್ತೂರು ದೇಶದ ಇತರ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ.


Click it and Unblock the Notifications



















