ಪ್ರಸ್ತುತ ಲೆಖನದಲ್ಲಿ ನಾಲ್ಕು ವಿಶಿಷ್ಟ ಹಾಗೂ ವಿಶೇಷವಾದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಈ ನಾಲ್ಕು ದೇವಾಲಯಗಳನ್ನು ಸೇರಿಸಿ ಒಟ್ಟಾರೆಯಾಗಿ "ನಾಲಂಬಲಂ" ಎಂದು ಕರೆಯುತ್ತಾರೆ. ಅಂದರೆ ಇದರ ಅರ್ಥ ನಾಲ್ಕು ಅಂಬಲ ಅಥವಾ ದೇವಾಲಯಗಳೆಂದಾಗುತ್ತದೆ. ಏನಪ್ಪಾ ವಿಶೇಷ ಈ ದೇವಾಲಯಗಳಲ್ಲಿ ಎಂಬ ಪ್ರಶ್ನೆ ಮೂಡಿದೆಯಲ್ಲವೆ?
ರಾಮಾಯಣದಲ್ಲಿ ಉಲ್ಲೇಖಿಸಲಾದ ಇಂದಿನ ಸ್ಥಳಗಳು
ಹೌದು, ಮೂಡಿರಲೇಬೇಕು. ಈ ದೇವಾಲಯಗಳು ಸಾಮಾನ್ಯವಾಗಿ ಪ್ರಮುಖ ದೇವ, ದೇವತೆಯರಿಗೆ ಮುಡಿಪಾದ ದೇವಾಲಯಗಳಾಗಿರದೆ ಕುಟುಂಬವೊಂದರ ನಾಲ್ಕು ಸಹೋದರರಿಗೆ ಮುಡಿಪಾದ ದೇವಾಲಯಗಳಾಗಿವೆ. ಹೌದು, ತಮಗೆಲ್ಲರಿಗೂ ರಾಮಾಯಣ ಮಹಾಕಾವ್ಯದ ಕುರಿತು ತಿಳಿದಿರಲೇಬೇಕಲ್ಲವೆ? ಇದರಲ್ಲಿ ರಾಮನಿಗೆ ಮೂರು ಸಹೋದರರಿದ್ದರು ಎಂದು ಎಲ್ಲರಿಗೂ ತಿಳಿದಿರುವ ವಿಚಾರ ತಾನೆ.
ರಾಮನನ್ನು ಹಿಡಿದು ಅವನ ಸಹೋದರರಾದ ಲಕ್ಷ್ಮಣ, ಭರತ ಹಾಗೂ ಶತ್ರುಘ್ನರಿಗೆ ಮುಡಿಪಾದ ದೇವಾಲಯಗಳೆ ನಾಲಂಬಲಂ ಅಂದರೆ ನಾಲ್ಕು ದೇವಾಲಯಗಳು ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುತ್ತವೆ. ಈ ನಾಲ್ಕೂ ವಿಶೇಷ ದೇವಾಲಯಗಳು ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ.
ಶ್ರೀರಾಮನ ಪೂಜೆ, ಚಿತ್ರಕೃಪೆ: Epggireesh
ಇದೊಂದು ಜನಪ್ರೀಯ ತೀರ್ಥಯಾತ್ರೆಯಾಗಿದ್ದು ಈ ದೇವಾಲಯಗಳನ್ನು ಕ್ರಮಬದ್ಧವಾಗಿ ಒಂದೆ ದಿನದಲ್ಲಿ ಅದರಲ್ಲೂ ವಿಶೇಷವಾಗಿ ಕರ್ಕಾಟಕ ಮಾಸದಲ್ಲಿ (ಜೂನ್-ಜುಲೈ) ಸಂದರ್ಭದಲ್ಲಿ ಮಾಡಿದರೆ ಸಕಲರಿಗೂ ಐಶ್ವರ್ಯ ಹಾಗೂ ಧನಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ. ಈ ಯಾತ್ರೆಯನ್ನು ರಾಮನ ದೇವಾಲಯದಿಂದ ಪ್ರಾರಂಭಿಸಿ, ಭರತ, ಲಕ್ಷ್ಮಣ ಹಾಗೂ ಶತ್ರುಘ್ನರ ದೇವಾಲಯಗಳಿಗೆ ಭೇಟಿ ನೀಡಿ ಕೊನೆಗೊಳಿಸಬೇಕು.
ರಾಮನ ದೇವಾಲಯ, ಚಿತ್ರಕೃಪೆ: Vsathian
ಶ್ರೀರಾಮನ ದೇವಾಲಯ : ಮೊದಲನೇಯದಾಗಿ ರಾಮನ ದೇವಾಲಯ. ಇದು ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಪಟ್ಟಣದಲ್ಲಿದೆ. ತೀವ್ರ ನದಿಯ ತಟದಲ್ಲಿ ನೆಲೆಸಿರುವ ಈ ರಾಮನ ದೇವಾಲಯದಲ್ಲಿ ಶ್ರೀರಾಮಚಂದ್ರನು ಆರು ಅಡಿಗಳಷ್ಟು ಭವ್ಯವಾದ ವಿಗ್ರಹ ಹೊಂದಿದ್ದು ನಾಲ್ಕು ಕೈಗಳುಳ್ಳ ಮೂಲ ದೇವನಾಗಿ ನೆಲೆಸಿದ್ದಾನೆ.
ಭರತನ ದೇವಾಲಯ, ಚಿತ್ರಕೃಪೆ: Krishnanow
ಭರತನ ದೇವಾಲಯ : ನಾಲಂಬಲಂ ಯಾತ್ರೆಯಲ್ಲಿ ಎರಡನೇಯದಾಗಿ ಭರತನ ದೇವಾಲಯಕ್ಕೆ ಭೇಟಿ ನೀಡಬೇಕು. ತ್ರಿಶ್ಶೂರ್ ಜಿಲ್ಲೆಯ ಇರಿಂಜಾಲಕುಡ ಎಂಬಲ್ಲಿ ಭರತನಿಗೆ ಮುಡಿಪಾದ ಈ ದೇವಾಲಯವಿದೆ. ಇದನ್ನು ಕೂಡಲಮಾಣಿಕ್ಯಂ ದೇವಾಲಯ ಎಂದು ಕರೆಯಲಾಗುತ್ತದೆ.
ಭರತ ದೇವಾಲಯ ಕಲ್ಯಾಣಿ, ಚಿತ್ರಕೃಪೆ: Haribhagirath
ಇಲ್ಲಿ ಪೂರ್ವಕ್ಕೆ ಮುಖ ಮಾಡಿ ನಿಂತಿರುವ ಆರು ಅಡಿಗಳ ಭರತನ ಏಕೈಕ ವಿಗ್ರಹ ಮಾತ್ರವಿದ್ದು ಇನ್ನ್ಯಾವುದೆ ದೇವತೆಗಳ ವಿಗ್ರಹಗಳಿಲ್ಲ. ಉಗ್ರ ರೂಪದ ಭರತನ ಈ ದೇವಾಲಯವು ಕಲ್ಯಾಣಿಯನ್ನು ಹೊಂದಿದ್ದು ಈ ಯಾತ್ರೆಯಲ್ಲಿ ಭೇಟಿ ನೀಡಬೇಕಾದ ಎರಡನೇಯ ದೇವಾಲಯವಾಗಿದೆ. ತ್ರಿಪ್ರಯಾರ್ ಪಟ್ಟಣದಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ.
ಲಕ್ಷ್ಮಣ ದೇವಾಲಯ, ಚಿತ್ರಕೃಪೆ: Santoshknambiar
ಲಕ್ಷ್ಮಣನ ದೇವಾಲಯ : ಈ ಯಾತ್ರೆಯಲ್ಲಿ ಮೂರನೇಯ ದೇವಾಲಯವಾಗಿ ಲಕ್ಷ್ಮಣನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ದೇವಾಲಯವು ಎರ್ನಾಕುಲಂ ಜಿಲ್ಲೆಯ ತಿರುಮೂಳಿಕುಲಂ ಎಂಬಲ್ಲಿದೆ. ತ್ರಿಪ್ರಯಾರ್ ನ ರಾಮನಂತೆಯೆ ಇಲ್ಲಿ ಲಕ್ಷ್ಮಣನು ಆರು ಅಡಿಗಳಷ್ಟು ಎತ್ತರದ ವಿಗ್ರಹ ಹೊಂದಿದ್ದು ನಾಲ್ಕು ಕೈಗಳಿಂದ ಭೂಷಿತನಾಗಿದ್ದಾನೆ. ಇರಿಂಜಾಲಕುಡದಿಂದ ಈ ದೇವಾಲಯ 30 ಕಿ.ಮೀ ಗಳಷ್ಟು ದೂರದಲ್ಲಿದೆ.
ಶತ್ರುಘ್ನ ದೇವಾಲಯ, ಚಿತ್ರಕೃಪೆ: Challiyan
ಶತ್ರುಘ್ನ ದೇವಾಲಯ : ಈ ಯಾತ್ರೆಯ ಅಂತಿಮ ಕೇಂದ್ರವಾಗಿದೆ ಶತ್ರುಘ್ನನ ದೇವಾಲಯ. ಇದನ್ನು ಪಾಯಮ್ಮಲ್ ಶ್ರೀ ಶತ್ರುಘ್ನ ದೇವಾಲಯ ಎಂದು ಕರೆಯುತ್ತಾರೆ. ಇದು ಇರಿಂಜಾಲಕುಡದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿಯೆ ನೆಲೆಸಿದೆಯಾದರೂ ಲಕ್ಷ್ಮಣನ ದೇವಾಲಯಕ್ಕೆ ಭೇಟಿ ನೀಡಿದ ನಂತರವೆ ಈ ದೇವಾಲಯಕ್ಕೆ ಭೇಟಿ ನೀಡಬೇಕು. ಇದು ರಾಮನ ಕೊನೆಯ ಸಹೋದರನಾದ ಶತ್ರುಘ್ನನಿಗೆ ಮುಡಿಪಾಗಿದೆ.