ಕೆಲವು ಸ್ಥಳಗಳು ತಮ್ಮಲ್ಲಿರುವ ವಿಶೇಷತೆಗಳಿಂದಾಗಿಯೆ ಹೆಚ್ಚು ಜನಜನಿತವಾಗಿರುತ್ತವೆ. ಬಹುತೇಕ ಜನರಲ್ಲಿ ಈ ಸ್ಥಳಗಳು ತಮ್ಮ ವಿಶೇಷತೆಗಳಿಂದಲೆ ಕುತೂಹಲ ಕೆರಳಿಸುತ್ತ ಭೇಟಿ ನೀಡಲು ಪ್ರೇರೇಪಿಸುತ್ತವೆ. ಇನ್ನೂ ವಿಶೇಷತೆಗಳೂ ಸಹ ವಿಶಿಷ್ಟವಾಗಿಯೆ ಇರುತ್ತವೆ. ಅಂತಹ ಕೆಲವು ಸ್ಥಳಗಳ ಪರಿಚಯ ನಿಮಗಾಗಿ ಈ ಲೇಖನದ ಮೂಲಕ. ಸಮಯ ಸಿಕ್ಕರೆ ನೀವು ತೆರಳಿ ಆನಂದಿಸಿ ನೋಡಿ!
ಇಲ್ಲಿ ನೀಡಲಾಗಿರುವ ಕೆಲವು ಸ್ಥಳಗಳು ವೈವಿಧ್ಯಮಯವಾದ ವಿಶೇಷತೆಗಳನ್ನು ಹೊಂದಿವೆ. ಆ ವಿಶೇಷತೆಗಳು ದೆವ್ವ-ಭೂತಗಳ ಹಾವಳಿಯಿಂದ ಹಿಡಿದು ಬಹಳಷ್ಟು ಜನರಿಗೆ ತಿಳಿಯದ ಆದರೆ ಅದ್ಭುತ ಪ್ರಕೃತಿ ಸೌಂದರ್ಯವಿರುವ ಸ್ಥಳಗಳವರೆಗೂ ಇದೆ.
ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಯಾವೆಲ್ಲ ಸ್ಥಳಗಳು ಏನೆಲ್ಲ ವಿಶೇಷತೆಗಳನ್ನು ಹೊಂದಿದ್ದು ಜನರನ್ನು ತಮ್ಮತ್ತ ಬರಲು ಪ್ರೇರೇಪಿಸುತ್ತವೆ ಎಂಬುದರ ಕುರಿತು ತಿಳಿಯಿರಿ. ಖಂಡಿತವಾಗಿಯೂ ನಿಮಗೂ ಸಹ ಈ ಸ್ಥಳಗಳಿಗಂಟಿಕೊಂಡಿರುವ ಹಿನ್ನಿಲೆಗಳು ಅಚ್ಚರಿ ಪಡಿಸಬಹುದು.

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಸರಪಣಿ ಮರ : ಚೈನ್ ಟ್ರೀ ಎಂದೆ ಕರೆಯಲಾಗುವ ಈ ಗಿಡವಿರುವುದು ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಲಕ್ಕಿಡಿ ಗೇಟ್ ವೇ ಎಂಬಲ್ಲಿ ಗಿಡವಿರುವ ಈ ಸ್ಥಳವಿದೆ. ಈ ಗಿಡಕ್ಕೆ ಹೊಂದಿಕೊಂಡಂತೆ ಕೇಳಿ ಬರುವ ಹಿನ್ನಿಲೆ ಎಂದರೆ ಕರಿಂತಂದನ್ ಎಂಬ ಸ್ಥಳೀಯ ನಿವಾಸಿಯೊಬ್ಬನ ಆತ್ಮ ಈ ಗಿಡದಲ್ಲಿ ಸರಪಣಿಯಿಂದ ಬಂಧಿಸಲ್ಪಟ್ಟಿದೆ. ಚೈನ್ ಟ್ರೀ (ಆದರೆ ಕಾಲ್ಪನಿಕ ಭೂತ).
ಚಿತ್ರಕೃಪೆ: Vinodnellackal

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಹಿಂದೆ ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಬ್ರಿಟೀಷ್ ಇಂಜಿನೀಯರ್ ಒಬ್ಬ ತಮರಚೇರಿಗೆ ಸುಲಭವಾದ ಮಾರ್ಗ ಕಂಡು ಹಿಡಿಯಲು ಯೋಚಿಸುತ್ತಿದ್ದ. ಅದಕ್ಕಾಗಿ ಸ್ಥಳೀಯ ನಿವಾಸಿಯಾದ ಕರಿಂತಂದನ್ ಎಂಬಾತನ ಸಹಾಯ ಪಡೆದ ಕರಿಂತಂದನ್ ಪ್ರದೇಶದ ಎಲ್ಲ ಜಾಗಗಳ ಪರಿಚಯ ಹೊಂದಿದ್ದ ಹೀಗಾಗಿ ಲಕ್ಕಿಡಿ ಪಾಸ್ ಅನ್ನು ಶೋಧಿಸಲು ಪ್ರಮುಖವಾಗಿ ಸಹಾಯ ಮಾಡಿದ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Traveler7

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಕರಿಂತಂದನ್ ನಿಂದಲೆ ಪ್ರಮುಖವಾಗಿ ಈ ಮಾರ್ಗ ಕಂಡುಹಿಡಿದಿದ್ದರಿಂದ ಹಾಗೂ ಆ ಗೌರವ ಪ್ರಧಾನವಾಗಿ ಅವನಿಗೆ ಸಲ್ಲುತ್ತದೆಂಬ ದುರುದ್ದೇಶದಿಂದ ಆ ಇಂಜಿನೀಯರ್ ಆತನನ್ನು ಕೊಲೆ ಮಾಡಿ, ತಾನೆ ಆ ಸುಲಭ ಮಾರ್ಗ ಕಂಡುಹಿಡಿದವನೆಂಬ ಗೌರವಕ್ಕೆ ಪಾತ್ರನಾದ. ಆದರೆ ಮಾಡಿದ ಪಾಪ ಹೋಗಬೇಕಲ್ಲ, ಸ್ಥಳ ಪುರಾಣದಂತೆ, (ಚಿತ್ರದಲ್ಲಿ ಲಕ್ಕಿಡಿ ಪಾಸ್)
ಚಿತ್ರಕೃಪೆ: Abhishek

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಆ ಕರಿಂತಂದನ್ ನ ಆತ್ಮ ಆ ಪ್ರದೇಶದಲ್ಲೆಲ್ಲ ಹರಿದಾಡತೊಡಗಿತು. ಆ ಹೊಸದಾರಿಯಲ್ಲಿ ತೆರಳುವವರಿಗೆ ಪೀಡಿಸತೊಡಗಿತು. ನಂತರ ಎಲ್ಲ ಕಥೆ ತಿಳಿದು ಪಾದ್ರಿಯೊಬ್ಬರು ಕರಿಂತಂದನ್ ನ ಆತ್ಮವನ್ನು ಸರಪಣಿಯೊಂದರಲ್ಲಿ ಬಂಧಿಸಿ ಮರವೊಂದಕ್ಕೆ ಬಿಗಿದರು. ಅದೆ ಇಂದು ಚೈನ್ ಟ್ರೀ ಎಂದು ಪ್ರಸಿದ್ಧವಾಗಿದ್ದು ತನ ಕುತೂಹಲಕರ ಹಿನ್ನಿಲೆಯಿಂದಾಗಿ ನಿತ್ಯವೂ ಪ್ರವಾಸಿಗರನ್ನು ಸೆಳೆಯುತ್ತದೆ. ಕೋಳಿಕೋಡ್ ನಿಂದ ತಮರಚೇರಿಗೆ ಹೋಗುವಾಗ ಲಕ್ಕಿಡಿ ಪಾಸ್ ಮೂಲಕ ಹಾದು ಹೋಗಬಹುದಾಗಿದೆ. ಇನ್ನೊಂದು ವಿಷಯವೆಂದರೆ ಗಿಡದೊಂದಿಗೆ ಸರಪಣಿಯು ಬೆಳೆಯುತ್ತದಂತೆ! ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Kleuske

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಇದೆ ಲಕ್ಕಿಡಿಯಲ್ಲಿರುವ ಆ ಚೈನ್ ಟ್ರೀ ಅಥವಾ ಸರಪಣಿ ಮರ.
ಚಿತ್ರಕೃಪೆ: Prof tpms

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಕೃಷ್ಣನ ಬೆಣ್ಣೆ ಉಂಡೆ : ಆಂಗ್ಲದಲ್ಲಿ ಇದನ್ನು ಕೃಷ್ಣಾಸ್ ಬಟರ್ ಬಾಲ್ ಎಂದು ಕರೆಯುತ್ತಾರೆ. ಸುಮಾರು ಹದಿನೈದು ಅಡಿಗಳಷ್ಟು ವ್ಯಾಸದ ಹೆಚ್ಚು ಕಮ್ಮಿ ಗೋಲಾಕಾರದ ಬಂಡೆಯೊಂದು 45 ಡಿಗ್ರಿಗಳಷ್ಟು ಕೋನದ ಕಲ್ಲುಹಾಸಿನ ಮೇಲೆ ಗುರುತ್ವಾಕರ್ಷಣೆಗೆ ಸವಾಲೆಸೆದು ನಿಂತಿರುವದನ್ನು ಕಂಡಾಗ ಯಾರಿಗಾದರೂ ಸರಿ ಅಚ್ಚರಿಯಾಗದೆ ಇರಲಾರದು.
ಚಿತ್ರಕೃಪೆ: Amritamitraghosh

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಸ್ಥಳೀಯವಾಗಿ ಕೃಷ್ಣನು ತಾನು ಕದಿಯುತ್ತಿದ್ದ ಬೆಣ್ಣೆಯ ಸಂಗ್ರಹವಾಗಿದೆ ಎಂದು ಹೇಳುತ್ತಾರೆ. ಹಾಗಾಗಿ ಇದಕ್ಕೆ ಕೃಷ್ಣ ಬೆಣ್ಣೆ ಉಂಡೆ ಎಂಬ ಹೆಸರು ಬಂದಿದೆ. ತಮಿಳುನಾಡಿನ ಚೆನ್ನೈ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಮಹಾಬಲಿಪುರಂನಲ್ಲಿ ಸುಮಾರು ಸಾವಿರಕ್ಕೂ ಅಧಿಕ ವರ್ಷಗಳಿಂದ ಈ ಬಂಡೆ ನೆಲೆಸಿದೆ ಎಂದು ಹೇಳಲಾಗಿದೆ.
ಚಿತ್ರಕೃಪೆ: Manbalaji

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಹರಿಶ್ಚಂದ್ರಗಡ್ : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಹರಿಶ್ಚಂದ್ರಗಡ್ ಒಂದು ಅಚ್ಚರಿಪಡಿಸುವಂತಹ ತಾಣ. ಇದೊಂದು ಮೂಲತಃ ಬೆಟ್ಟ ಕೋಟೆಯಾಗಿದ್ದು ಇದನ್ನು ಪ್ರಳಯ ಸೂಚಕ ಎಂತಲೂ ಕರೆಯಲಾಗಿದೆ. ಆರನೇಯ ಶತಮಾನಕ್ಕೆ ಸಂಬಂಧಿಸಿದ ಈ ಕೋಟೆಯಲ್ಲಿ ಸದಾ ನೀರಿನಿಂದ ಕೂಡಿರುವ ಒಂದು ಸ್ಥಳದಲ್ಲಿ ಶಿವಲಿಂಗವಿದೆ. ಆ ನೀರು ಹೇಗೆ ಹಾಗೂ ಎಲ್ಲಿಂದ ಬರುತ್ತದೆ ಎಂಬುದರ ಕುರಿತು ಯಾರಿಗೂ ಸಮರ್ಪಕವಾದ ಮಾಹಿತಿಯಿಲ್ಲ. ಅಲ್ಲದೆ ಇಲ್ಲಿರುವ ಒಂದು ಕಲ್ಯಾಣಿಯು ಸದಾ ತಂಪಾದ ನೀರಿನಿಂದ ಕೂಡಿರುತ್ತದೆ. ಧಗ ಧಗ ಕುದಿಯುವ ಬೇಸಿಗೆಯಲ್ಲೂ ಇಲ್ಲಿ ನಿಂತರೆ ಹಿಮದಂತೆ ತಂಪಾದ ಅನುಭೂತಿ ಕರುಣಿಸುತ್ತದೆ
ಚಿತ್ರಕೃಪೆ: Bajirao

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಅಲ್ಲದೆ ಶಿವಲಿಂಗಕ್ಕೆ ಛಾವಣಿಯೊಂದನ್ನು ನಿರ್ಮಿಸಲಾಗಿದ್ದು ಅದಕ್ಕೆ ನಾಲ್ಕು ಮೂಲೆಗಳಲ್ಲಿ ನಾಲ್ಕು ಖಂಬಗಳ ಆಧಾರ ನೀಡಲಾಗಿದೆ. ಇದರ ಕುರಿತು ಪ್ರಚಲಿತದಲ್ಲಿರುವ ರೋಚಕ ಸಂಗತಿಯೆಂದರೆ ಇವು ನಾಲ್ಕು ಯುಗಗಳನ್ನು ಸೂಚಿಸುತ್ತವೆ. ಈಗಾಗಲೆ ಮೂರು ಖಂಬಗಳು ನಾಶಗೊಂಡಿದ್ದು ಕಳೆದುಹೋದ ಮೂರು ಯುಗಗಳ ಸಂಕೇತಗಳಾಗಿವೆ. ಕುತೂಹಲಕರ ವಿಷಯವೆಂದರೆ ಯಾವಾಗ ಈಗಿರುವ ಖಂಬವು ನಾಶವಾಗುತ್ತದೊ ಅದೆ ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ.
ಚಿತ್ರಕೃಪೆ: rohit gowaikar

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಕೊಂಕಣ ಕಡಾ : ಹರಿಶ್ಚಂದ್ರಗಡ್ ನಲ್ಲೆ ಇರುವ ಕೊಂಕಣ ಕಡಾ ಎಂಬುದು ಮೊನಚಾದ ಬೆಟ್ಟದ ತುದಿಯಾಗಿದೆ. ವಿಶೇಷವೆಂದರೆ ಮಳೆಗಾಲದ ಸಮಯದಲ್ಲಿ ಅಥವಾ ಅನುಕೂಲಕರ ಸಂದರ್ಭಕ್ಕನುಸಾರವಾಗಿ ಇಲ್ಲಿ ಮೇಘಗಳ ಸ್ಫೋಟವನ್ನು ಕಣ್ಣಾರೆ ಕಾಣಬಹುದು. ಬೆಟ್ಟದ ಮೊನಚಾದ ತುದಿಗಳಿಗೆ ಅಪ್ಪಳಿಸುವ ಮೋಡಗಳು ಛಿದ್ರಗೊಂಡು ಮತ್ತೆ ಮೇಲೆ ಆಕಾಶಕ್ಕೆ ಎಸೆಯಲ್ಪಟ್ಟಿರುವಂತೆ ಕಂಡುಬರುತ್ತವೆ.
ಚಿತ್ರಕೃಪೆ: Cj.samson

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಜತಿಂಗಾ : ಬಹುಶಃ ನಿಮ್ಮಲ್ಲಿ ಕೆಲವರು ಈ ಹೆಸರನ್ನು ಕೇಳಿರಬಹುದಲ್ಲವೆ? ಇದು ಅಸ್ಸಾಂ ರಾಜ್ಯದಲ್ಲಿರುವ ಒಂದು ಸ್ಥಳವಾಗಿದ್ದು ಪಕ್ಷಿಗಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರಸಿದ್ಧವಾಗಿದೆ. ಹೌದು, ನೀವು ಕೇಳುತ್ತಿರುವುದು ನಿಜ, ಇಲ್ಲಿ ಪಕ್ಷಿಗಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತವಂತೆ! ಮಳೆಗಾಲದ ನಂತರದ ಸಮಯದಲ್ಲಿ ಕೆಲ ನಿರ್ದಿಷ್ಟ ಸಮಯದಲ್ಲಿ ಮಬ್ಬು ಹಾಗು ದಟ್ಟ ಮಂಜು ಆವರಿಸಿದಾಗ, ಪರಿಸರದಲ್ಲಿ ಕೆಲವು ಏಕಕಾಲದಲ್ಲಿ ನಿರ್ದಿಷ್ಟ ಬದಲಾವಣೆಗಳಾದಾಗ ಇದಕ್ಕಿದ್ದಂತೆ ಗಿಡಮರಗಳಲ್ಲಿರುವ ಪಕ್ಷಿಗಳು ವಿಚಿತ್ರವಾಗಿ ವರ್ತಿಸುತ್ತ ಪ್ರಕಾಶವಿರುವೆಡೆಗೆ ಹಾರಲು ಆರಂಭಿಸುತ್ತವೆ ಹಾಗೂ ಈ ಸಂದರ್ಭದಲ್ಲಿ ತಮ್ಮ ನಿಯಂತ್ರಣ ಕಳೆದುಕೊಂಡು ಬಂಡೆಗಳಿಗೆ, ಗಿಡ ಮರಗಳಿಗೆ ಅಪ್ಪಳಿಸಿ ಪ್ರಾಣ ಬಿಡುತ್ತವಂತೆ!
ಚಿತ್ರಕೃಪೆ: nchills.gov.in

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಭಾನಗಡ್ ಕೋಟೆ : ಭಾನಗಡ್ ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಇಲ್ಲಿರುವ ಭಾನಗಡ್ ಕೋಟೆಯಲ್ಲಿ ಆತ್ಮಗಳಿವೆಯೆಂದು ಹೇಳಲಾಗುತ್ತದೆ. ರಾಜಸ್ಥಾನದ ಅಧಿಕೃತ ಪ್ರವಾಸಿ ತಾಣವಾಗಿದ್ದರೂ ಸಹ ಈ ಕೋಟೆಯಲ್ಲಿ ಸೂರ್ಯಾಸ್ತದ ನಂತರ ಹಾಗು ಸೂರ್ಯೊದಯದ ಮುಂಚೆ ಯಾರಿಗೂ ಪ್ರವೇಶಿಸಲು ಅನುಮತಿಯಿಲ್ಲ.
ಚಿತ್ರಕೃಪೆ: Shahnawaz Sid

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಇದರ ಹಿಂದಿರುವ ಸ್ವಾರಸ್ಯಕರ ಕಥೆ: ಹಿಂದೆ ಈ ರಾಜ್ಯದಲ್ಲಿ ರತ್ನಾವತಿ ಎಂಬ ಸುಂದರ ರಾಜಕುವರಿಯಿದ್ದಳು. ಇದೆ ಪ್ರದೇಶದಲ್ಲಿದ್ದ ತಾಂತ್ರಿಕನೊಬ್ಬ ಈಕೆಯನ್ನು ತುಂಬ ಪ್ರೀತಿಸುತ್ತಿದ್ದ ಹಾಗು ಮದುವೆ ಮಾಡಿಕೊಳ್ಳಲು ಬಯಸಿದ್ದ. ಆದರೆ ಇದು ಅಸಾಧ್ಯವಗಿದ್ದುದರಿಂದ ಮಾಟಮಂತ್ರಗಳ ಮೂಲಕ ಆಕೆಯನ್ನು ಪಡೆಯಲು ಪ್ರಯತ್ನಿಸಿದ. ಇದರ ಸುಳಿವು ರಾಜನಿಗೆ ತಿಳಿದು ಮಾಂತ್ರಿಕ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು. ಆದರೆ ಸಾಯುವ ಮುನ್ನ ಈ ಕೋಟೆಗೆ ಶಾಪವನ್ನಿತ್ತು ಸತ್ತ. ಅಂದಿನಿಂದ ಇಲ್ಲಿ ಆತ್ಮಗಳು ನೆಲೆಸಿವೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Shahnawaz Sid

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಕುಲಧಾರಾ : ರಾಜಸ್ಥಾನದ ಜೈಸಲ್ಮೇರ್ ದಿಂದ ಪಶ್ಚಿಮಕ್ಕೆ 15 ಕಿ.ಮೀ ದೂರದಲ್ಲಿರುವ ಕುಲ್ಧಾರಾ ಎಂಬ ಹಳ್ಳಿಯು ಸಾವಿನ ಹಳ್ಳಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಮೂಲತಃ ಈ ಹಳ್ಳಿಯು ಪಲಿವಾಲ ಬ್ರಾಹ್ಮಣ ಸಮುದಾಯದವರಿಂದ 1291 ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಬ್ರಾಹ್ಮಣ ಸಮುದಾಯದವರು ಕೃಷಿಗೆ ಸಂಬಂಧಿಸಿದಂತೆ ಅದ್ಭುತವಾದ ಜ್ಞಾನವನ್ನು ಹೊಂದಿದ್ದರು. ಅಂತೆಯೆ ಮರಭೂಮಿಯಲ್ಲೂ ಸಹ ಹೆಚ್ಚಿನ ಪ್ರಮಾಣದ ಫಸಲನ್ನು ತೆಗೆಯುತ್ತಿದ್ದರು. ಹಲವು ಶತಮಾನಗಳ ಕಾಲ ವಾಸಿಸಿದ್ದ ಈ ಸಮುದಾಯದವರು 1825 ರ ಒಂದು ರಾತ್ರಿಯಲ್ಲಿ ಇದಕ್ಕಿದ್ದಂತೆ ಪಟ್ಟಣವನ್ನು ತೊರೆದರು ಹಾಗೂ ಇಲ್ಲಿ ಯಾರೆ ಬಂದು ನೆಲೆಸಿದರೂ ಸಾವು ಖಚಿತ ಎಂಬ ಶಾಪವನಿತ್ತರು. ಇಂದು ಅಳಿದುಳಿದ ಮನೆಗಳು ಹಾಗೂ ಇತರೆ ಕಟ್ಟಡಗಳನ್ನು ಇಲ್ಲಿ ನೋಡಬಹುದಾಗಿದೆ. ರಾಜಸ್ಥಾನ ಸರ್ಕಾರವು ಇದನ್ನು ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ.
ಚಿತ್ರಕೃಪೆ: Tomas Belcik

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ರೂಪಕುಂಡ : ಉತ್ತರಾಖಂಡ ರಾಜ್ಯದಲ್ಲಿರುವ ರೂಪಕುಂಡವು ಒಂದು ರಹಸ್ಯಮಯ ಕೆರೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ದೊರೆತಿರುವ ಮಾನವನ ಅಸ್ಥಿ ಪಂಜರಗಳು ಹಾಗೂ ತಲೆ ಬುರುಡೆಗಳು.
ಚಿತ್ರಕೃಪೆ: Schwiki

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಕೇವಲ ಎರಡು ಮೀಟರುಗಳಷ್ಟು ಆಳ ಹೊಂದಿರುವ ಈ ಹಿಮಗಡ್ಡೆ ಕೆರೆ ಕರಗಿದಾಗ ಅದರ ತಳದಲ್ಲಿ ಅಸ್ಥಿಪಂಜರಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಭೇಟಿ ನೀಡುವವರಿಗೆ ಇದು ಕುತೂಹಲ ಕೆರಳಿಸುತ್ತದೆ. 9 ನೇಯ ಶತಮಾನಕ್ಕೆ ಸಂಬಂಧಿಸಿದ ಈ ಅಸ್ಥಿಪಂಜರಗಳ ಉಪಸ್ಥಿತಿಯ ಕುರಿತು ಅನೇಕ ಹಿನ್ನಿಲೆ, ವ್ಯಾಖ್ಯಾನಗಳನ್ನು ವೈಜ್ಞಾನಿಕ ತಳಹದಿಯಿಂದ ಹಿಡಿದು ಆಧ್ಯಾತ್ಮಿಕನೆಲೆಯವರೆಗೂ ನೀಡಲಾಗಿದೆ.
ಚಿತ್ರಕೃಪೆ: Schwiki

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಶನಿವಾರವಾಡಾ : ಪುಣೆ ನಗರದ ಬಾಜಿ ರಾವ್ ರಸ್ತೆಯ ಅಭಿನವ ಕಲಾ ಮಂದಿರ ಬಳಿಯಿರುವ ಈ ಕೋಟೆಯು ಭಾರತದ ಪ್ರಮುಖ ಪಿಶಾಚಗ್ರಸ್ತ ತಾಣಗಳ ಪೈಕಿ ಒಂದಾಗಿದೆ. ಹಿಂದೆ ಪೇಶ್ವಾ ವಂಶದ ಕುಡಿಯಾದ 14 ವರ್ಷದ ರಾಜಕುಮಾರನನ್ನು ಹೃದಯವಿದ್ರಾವಕವಾಗಿ ಕೊಲೆ ಮಾಡಲಾಗಿದ್ದು ಇಂದಿಗೂ ಕೂಡ ಅವನ ಅಳುವು ಪ್ರತಿ ಪೂರ್ಣ ಚಂದಿರದ ದಿನದಂದು ಕೇಳಬಹುದು ಎನ್ನಲಾಗುತ್ತದೆ. ಇದು ಪುಣೆ ನಗರ ಪ್ರವಾಸಿ ಆಕರ್ಷಣೆಯೂ ಸಹ ಆಗಿದೆ.
ಚಿತ್ರಕೃಪೆ: Ramakrishna Reddy

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಡುಮಾಸ್ ಕಡಲ ತೀರ : ಅರೇಬಿಯನ್ ಸಮುದ್ರದ ಈ ಕಡಲ ತೀರವು ಗುಜರಾತ್ ರಾಜ್ಯದ ಸುರತ್ ನಗರದಿಂದ ನೈರುತ್ಯ ದಿಕ್ಕಿಗೆ ಸುಮಾರು 21 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದು ಉತ್ತಮ ಪ್ರವಾಸಿ ಆಕರ್ಷಣೆಯಾಗಿರುವ ಇದು ಪಿಶಾಚಗ್ರಸ್ತ (ಹಾಂಟೆಡ್) ಕೂಡ ಆಗಿದೆ ಎಂದು ಹೇಳಲಾಗುತ್ತದೆ. ಮಧ್ಯರಾತ್ರಿಯ ಸಮಯದಲ್ಲಿ ಕಡಲ ತೀರದ ಒಂದು ನಿರ್ದಿಷ್ಟ ಜಾಗದಲ್ಲಿ ಆತ್ಮಗಳ ಕಾಟವಿದೆಯೆಂದು ಹೇಳಲಾಗುತ್ತದೆ. ಎಷ್ಟೊ ಜನರು ಇಲ್ಲಿಂದ ಅದೃಶ್ಯರಾಗಿದ್ದು ಮರಳಿ ಬಂದೆ ಇಲ್ಲ ಎಂತಲೂ ಹೇಳಲಾಗುತ್ತದೆ. ಹಿಂದೊಮ್ಮೆ ಇಲ್ಲಿ ಶವಗಳ ದಹನಕ್ರಿಯೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು ಆ ಆತ್ಮಗಳು ಇಲ್ಲಿ ಸುತ್ತಾಡುತ್ತಿರುತ್ತವೆ ಎನ್ನಲಾಗಿದೆ.
ಚಿತ್ರಕೃಪೆ: Marwada

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಚಿಕ್ತಾನ್ ಕೋಟೆ : ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿರುವ ಚಿಕ್ತಾನ್ ಎಂಬ ಗ್ರಾಮದ ನಿರ್ಜನ ಬೆಟ್ಟವೊಂದರ ಮೇಲಿರುವ ಚಿಕ್ತಾನ್ ಕೋಟೆಯು ಪರಿತ್ಯಜಿಸಲ್ಪಟ್ಟ ಸ್ಥಳವಾಗಿದೆ. ಆಂಗ್ಲದ ಡ್ರ್ಯಾಕುಲಾ, ವ್ಯಾಂಪೈರ್ ನಂತಹ ಭಯಾನಕ ಚಿತ್ರಗಳಲ್ಲಿ ಕಂಡುಬರುವ ಕೋಟೆಗಳಂತೆ ಗೋಚರಿಸುವ ಕೋಟೆಯನ್ನು ನೋಡಿದಾಗ ಕಿಂಚಿತ್ತಾದರೂ ಭಯವಾಗದೆ ಇರಲಾರದು. ಇದು ಪಿಶಾಚಗ್ರಸ್ಥ ಸ್ಥಳವಲ್ಲದಿದ್ದರೂ ಸಾಕಷ್ಟು ಭಯ ಉಕ್ಕಿಸುವಂತಹ ಕೋಟೆಯಾಗಿದ್ದು ಇಂದು ಪ್ರದೇಶದ ಇತಿಹಾಸ ವೈಭವ ಸಾರುವ ಸ್ಮಾರಕವಾಗಿ ನಿಂತಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Polybert49

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಶೆಟ್ಟಿ ಹಳ್ಳಿ ಚರ್ಚ್ : ಹಾಸನದ ಬಳಿಯಿರುವ ಶೆಟ್ಟಿ ಹಳ್ಳಿ ಚರ್ಚ್ ಒಂದು ವಿಸ್ಮಯಕರ ಪರಿತ್ಯಜಿಸಲ್ಪಟ್ಟ ಅಥವಾ ತೊರೆದ ಪ್ರದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿರುವ ಚರ್ಚ್ ಒಂದು ವಿಸ್ಮಯಕಾರಿ ಪ್ರವಾಸಿ ಆಕರ್ಷಣೆಯಾಗಿದೆ. 1860 ರಲ್ಲಿ ಫ್ರೆಂಚರಿಂದ ಈ ಚರ್ಚ್ ನಿರ್ಮಾಣವಾಯಿತು. 1960 ರಲ್ಲಿ ತುಂಬಿ ಹರಿಯುವ ಹೇಮಾವತಿ ನದಿಯ ನೀರನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಾಶಯ ನಿರ್ಮಾಣ ಮಾಡಲಾಯಿತು. ಪರಿಣಾಮ ಇಲ್ಲಿದ್ದ ಜನರು ಗ್ರಾಮವನ್ನು ತೊರೆದು ಬೇರೆಡೆ ವಾಸಮಾಡಬೇಕಾಯಿತು. ಆದರೆ ಈ ಚರ್ಚ್ ಮಾತ್ರ ಅಂದಿನಿಂದ ಇಂದಿನವರೆಗೂ ಸದೃಢವಾಗಿಯೆ ನಿಂತಿರುವುದು ವಿಸ್ಮಯ. ಕಾರಣ ಮಳೆಗಾಲದ ಸಂದರ್ಭದಲ್ಲಿ ಹೇಮಾವತಿ ತುಂಬಿದಾಗ ಈ ಚರ್ಚ್ ಸಹ ಮುಳುಗುತ್ತದೆ. ನೀರು ಕಡಿಮೆಯಾದಂತೆ ಮತ್ತೆ ಗೋಚರಿಸುತ್ತದೆ. ಇದೊಂದು ಆಕರ್ಷಕ ಪ್ರವಾಸಿ ಕೇಂದ್ರವೂ ಸಹ ಆಗಿದೆ.
ಚಿತ್ರಕೃಪೆ: Pal.guru

ಅಚ್ಚರಿಪಡಿಸುವ ನೆಚ್ಚಿನ ಸ್ಥಳಗಳು:
ಬೋನಕ್ಕಾಡ್ ಬಂಗಲೆ : ಅಗಸ್ತ್ಯಾರಕೂಡಂ ಕೇರಳದ ಒಂದು ಸುಪ್ರಸಿದ್ಧ ಚಾರಣ ಮಾರ್ಗವಾಗಿದ್ದು ಅದರ ಆಧಾರ ಸ್ಥಳವಾಗಿ (ಬೇಸ್ ಕ್ಯಾಂಪ್) ಬೋನಕ್ಕಾಡ್ ಕಾರ್ಯನಿರ್ವಹಿಸುತ್ತದೆ. ತಿರುವನಂತಪುರಂನಿಂದ ಬೋನಕ್ಕಾಡ್ 60 ಕಿ.ಮೀ ದೂರವಿದ್ದು ವಾಹನಗಳು ದೊರೆಯುತ್ತವೆ. ಹಿಂದೆ ಬ್ರಿಟೀಷರಿಂದ ನಿರ್ಮಾಣ ಮಾಡಲಾದ ಚಹಾ ತೋಟವಿರುವ ಬೋನಕ್ಕಾಡ್ ದಟ್ಟ ಹಸಿರಿನ ಮಧ್ಯ ನೆಲೆಸಿರುವ ಆಕರ್ಷಕ ಸ್ಥಳವಾಗಿದೆ. ಪಾಳು ಬಿದ್ದ ಬ್ರಿಟೀಷ್ ವಾಸ್ತುಶೈಲಿಯ ಪಾಳು ಬಂಗಲೆಯೊಂದು ಇಲ್ಲಿದ್ದು ಅದು ಪಿಶಾಚಗ್ರಸ್ಥವಾಗಿದೆ ಎನ್ನಲಾಗುತ್ತದೆ. ದಿನದ ಸಮಯದಲ್ಲಿ ಭೇಟಿ ನೀಡಬಹುದಾಗಿದ್ದು ರಾತ್ರಿಯ ಸಮಯದಲ್ಲಿ ಯಾರೂ ಇಲ್ಲಿಗೆ ಬರುವುದಿಲ್ಲ. ಸಾಂದರ್ಭಿಕ ಚಿತ್ರ
ಚಿತ್ರಕೃಪೆ: Paul Varuni


Click it and Unblock the Notifications
















