ಹಿಂದುಗಳು ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ರಾಹು-ಕೇತುಗಳ ಪ್ರಭಾವ ಇದ್ದೆ ಇರುತ್ತದೆ ಎಂದು ಸಾಮಾನ್ಯವಾಗಿ ನಂಬುತ್ತಾರೆ. ಅದರಂತೆ ರಾಹು ದೋಷವಿದ್ದರೆ ಕಂಕಣ ಭಾಗ್ಯದ ಸಮಸ್ಯೆ, ಸಂತಾನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದೂ ಸಹ ನಂಬಲಾಗುತ್ತದೆ. ಇದು ಅವರವರ ಭಕ್ತಿ-ನಂಬಿಕೆಗೆ ಬಿಟ್ಟ ವಿಚಾರ.
ಆದಾಗ್ಯೂ ಹಿಂದು ಸಂಸ್ಕೃತಿಯು ಎಷ್ಟೊಂದು ಅಗಾಧ ಹಾಗೂ ಶ್ರೀಮಂತಮಯವಾಗಿದೆ ಎಂದರೆ ಇಂತಹ ದೋಷಗಳನ್ನು ನಿವಾರಿಸುವ ಹಲವಾರು ಉಪಾಯಗಳನ್ನೂ ಸಹ ಹೇಳುತ್ತದೆ. ಅದರಲ್ಲೂ ವಿಶೇಷವಾಗಿ ಕೆಲ ದೇವಸ್ಥಾನಗಳು ಅಥವಾ ಕ್ಷೇತ್ರಗಳು ಎಷ್ಟೊಂದು ಹೆಸರುವಾಸಿಯಾಗಿವೆ ಎಂದರೆ ಅಲ್ಲಿಗೆ ತೆರಳಿ ನಿರ್ದಿಷ್ಟ ಸೇವೆಗಳನ್ನು ಸಲ್ಲಿಸಿದರೆ ದೋಷಗಳಿಂದ ಮುಕ್ತಿ ಪಡೆಯಬಹುದೆಂದು ಹೇಳಲಾಗುತ್ತದೆ.
ಕಷ್ಟ ನಿವಾರಿಸಿ ಇಷ್ಟವಾಗುವ ಅಷ್ಟಲಕ್ಷ್ಮಿಯ ದೇವಾಲಯ
ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ವಿಶೇಷ ದೇವಾಲಯದ ಕುರಿತು ತಿಳಿಸಲಾಗಿದೆ. ಈ ಲೇಖನ ಓದಿ ಆ ದೇವಾಲಯದ ವಿಶೇಷತೆ ಏನು ಹಾಗೂ ಅದು ಇರುವುದಾದರೂ ಎಲ್ಲಿ ಎಂಬುದರ ಕುರಿತು ತಿಳಿಯಿರಿ. ನಿಮಗೂ ಹೋಗುವ ಬಯಕೆಯಿದ್ದರೆ ಒಂದೊಮ್ಮೆ ಭೇಟಿ ನೀಡಿ.

ಕೊಡುಮುಡಿ
ಆ ದೇವಾಲಯವೆ ಶಿವನಿಗೆ ಮುಡಿಪಾದ ಮಗುದೇಶ್ವರರ್ ದೇವಾಲಯ ಅಥವಾ ಮಗುದೇಶ್ವರನ ದೇವಾಲಯ. ಈ ದೇವಾಲಯವು ರಾಹು ದೋಷ ನಿವಾರಣೆಗೆ ಸಾಕಷ್ಟು ಪ್ರಸಿದ್ಧಿ ಪಡೆದ ತಾಣವಾಗಿದೆ. ಅಂತೆಯೆ ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Booradleyp1

ಸಾವಿರ ವರ್ಷಗಳು!
ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯವೆಂಬ ಹೆಗ್ಗಳಿಕೆ ಪಡೆದಿದೆ. ಇಂದಿಗೂ ಇತಿಹಾಸಕಾರರು ಇದರ ಕರಾರುವಕ್ಕಾದ ಅಥವಾ ನಿಖರವಾದ ಪ್ರಾಚೀನತೆಯ ಕುರಿತು ತಿಳಿದಿಲ್ಲ. ಆದರೂ ಸುಮಾರು ಎರಡರಿಂದ ಮೂರು ಸಾವಿರ ವರ್ಷಗಳಷ್ಟು ಪುರಾತನವಾಗಿರಬಹುದೆಂದು ಅಂದಾಜಿಸಲಾಗಿದೆ.
ಚಿತ್ರಕೃಪೆ: Booradleyp1

ಬ್ರಹ್ಮದೇವ
ಇಲ್ಲಿ ಶಿವನು ಪ್ರಧಾನ ದೇವನಾಗಿ ನೆಲೆಸಿದ್ದಾನೆ. ಅಲ್ಲದೆ ಶಿವನ ಜೊತೆಗೆ ಇಲ್ಲಿ ಬ್ರಹ್ಮ ದೇವರ ಸನ್ನಿಧಾನವೂ ಸಹ ಇರುವುದು ವಿಶೇಷವಾಗಿದೆ.
ಚಿತ್ರಕೃಪೆ: Booradleyp1

ಪವಿತ್ರಮಯ
ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಈ ದೇವಾಲಯದಲ್ಲಿರುವ ಪವಿತ್ರ ಬನ್ನಿ ಮರ. ಈ ಮರವು ಅತ್ಯಂತ ಪುರಾತನವಾದ ಮರ ಎಂದೂ ಸಹ ಹೇಳಲಾಗುತ್ತದೆ.
ಚಿತ್ರಕೃಪೆ: Booradleyp1

ಒಂದು ಎಲೆ!
ಈ ಮರದ ಪವಿತ್ರತೆ ಎಷ್ಟಿದೆ ಎಂದರೆ, ಇದರ ಎಲೆಗಳನ್ನು ನೀರಿನಲ್ಲಿ ಹಾಕಿದರೆ ಆ ನೀರು ಪರಮ ಪವಿತ್ರವಾಗಿ ಬಹು ದಿನಗಳ ಕಾಲ ಪಾವಿತ್ರ್ಯತೆಯನ್ನು ಹಾಗೆ ಉಳಿಸಿಕೊಂಡಿರುತ್ತದೆ ಎನ್ನಲಾಗಿದೆ.
ಚಿತ್ರಕೃಪೆ: Booradleyp1

ತರ್ಪಣ ಕ್ಷೇತ್ರ!
ಕಾವೇರಿ ನದಿ ತಟದಲ್ಲಿರುವ ಈ ಕ್ಷೇತ್ರವು ಪೂರ್ವಿಕರಿಗೆ ತರ್ಪಣಗಳನ್ನು ಅರ್ಪಿಸುವ ಪ್ರಸಿದ್ಧ ಕ್ಷೇತ್ರವಾಗಿಯೂ ಸಹ ಗುರುತಿಸಿಕೊಂಡಿದೆ. ಆ ಕಾರಣದಿಂದಾಗಿ ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಸಾಕಷ್ಟು ಜನರು ತಮ್ಮ ಪೂರ್ವಿಕರಿಗೆಂದು ತರ್ಪಣ ಸಮರ್ಪಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Booradleyp1

ನಿವಾರಣಾ ಕೇಂದ್ರ
ಎರಡನೆಯದಾಗಿ ಇದು ರಾಹು ದೋಷಕ್ಕೆ ಪರಿಹಾರ ನೀಡುವ ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿದೆ. ಈ ದೋಷದಿಂದ ಬಳಲುವವರು ಸಾಮಾನ್ಯವಾಗಿ ಸಂತಾನ ಭಾಗ್ಯ, ಕಂಕಣ ಭಾಗ್ಯಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಅಂಥವರೂ ಸಹ ಇಲ್ಲಿ ಬಂದು ಸೇವೆ ಸಲ್ಲಿಸಿ ಆ ದೋಷಗಳಿಂದ ಮುಕ್ತಿ ಪಡೆಯುತ್ತಾರೆಂಬ ನಂಬಿಕೆಯಿದೆ.
ಚಿತ್ರಕೃಪೆ: Booradleyp1

ಇಲ್ಲಿ ಬರೀ ಮೂರು
ಸಾಮಾನ್ಯವಾಗಿ ಬ್ರಹ್ಮ ದೇವರಿಗೆ ನಾಲ್ಕು ಮುಖಗಳಿರುತ್ತವೆ. ಆದರೆ ಈ ದೇವಾಲಯದಲ್ಲಿರುವ ಬನ್ನಿ ಮರದ ಬಳಿ ಪ್ರತಿಷ್ಠಾಪಿತನಾಗಿರುವ ಬ್ರಹ್ಮ ದೇವರು ಕೇವಲ ಮೂರು ಮುಖಗಳನ್ನು ಹೊಂದಿದ್ದಾನೆ. ಅವನ ನಾಲ್ಕನೆಯ ಮುಖವೆ ಬನ್ನಿ ಮರವೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Booradleyp1

ಭೇಟಿ ನೀಡಲೇಬೇಕಾದ
ಅಲ್ಲದೆ 60 ನೇಯ ಜನ್ಮದಿನವನ್ನು ಆಚರಿಸುವವರು ಇಲ್ಲಿಗೆ ಭೇಟಿ ಉತ್ತಮ ಆರೋಗ್ಯ ಹಾಗೂ ದೀರ್ಘ ಆಯುಷ್ಯಕ್ಕೆ ಪ್ರಾರ್ಥಿಸುತ್ತಾರೆ. ಅಡೆ-ತಡೆಗಳು ದೂರವಾಗಲೆಂದು ಜನರು ತಮ್ಮ ವಯಸ್ಸಿನ ಸಂಖ್ಯೆಯಷ್ಟು ಮಡಕೆಗಳಲ್ಲಿ ನೀರು ತುಂಬಿ ಇಲ್ಲಿರುವ ವಿನಾಯಕನ ವಿಗ್ರಹಕ್ಕೂ ಅಭಿಷೇಕ ಮಾಡುತ್ತಾರೆ.
ಚಿತ್ರಕೃಪೆ: Booradleyp1

ಯಾವ ಪಟ್ಟಣದಲ್ಲಿ?
ರಾಹು ದೋಷವನ್ನು ನಿವಾರಿಸುವ ಪ್ರಸಿದ್ಧ ದೇವಾಲಯವಾಗಿ ಗುರುತಿಸಿಕೊಂಡಿರುವ ಮಗುದೇಶ್ವರರ್ ದೇವಾಲಯವು ತಮಿಳುನಾಡಿನ ಈರೋಡ್ ಜಿಲ್ಲೆಯ ಕೊಡುಮುಡಿ ಎಂಬ ಪಟ್ಟಣದಲ್ಲಿ ಸ್ಥಿತವಿದೆ.
ಚಿತ್ರಕೃಪೆ: Booradleyp1


Click it and Unblock the Notifications
















