ಕೆಲವೊಂದು ಗಿರಿಧಾಮಗಳು ತಮ್ಮ ರೌದ್ರ ಅವತಾರಗಳಿಂದ ಭೇಟಿ ನೀಡುವವರನ್ನು ಮೂಕವಿಸ್ಮಿತರನ್ನಾಗಿ ಮಾಡಿಸುತ್ತವೆ. ತಮ್ಮಲ್ಲಿರುವ ಎತ್ತರದ ವೀಕ್ಷಣಾ ಸ್ಥಳಗಳಿಂದ ಮೈಮನಗಳಿಗೆ ರೋಮಾಂಚನದ ಅನುಭೂತಿ ಕರುಣಿಸುತ್ತವೆ. ಇಂತಹ ಕೆಲವು ಗಮ್ಯ ಗಿರಿಧಾಮಗಳ ಪೈಕಿ ಒಂದಾಗಿದೆ, ಮಹಾರಾಷ್ಟ್ರದ ಮಹಾಬಲೇಶ್ವರ ಅರ್ಥಾತ್ "ಮಹಾಶಕ್ತಿಯ ಈಶ್ವರ" ಎಂಬ ಅರ್ಥ ಕೊಡುವ ತಾಣ. ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲೆಯಲ್ಲಿರುವ ಈ ಭವ್ಯ ಗಿರಿಧಾಮವು ಪಶ್ಚಿಮ ಘಟ್ಟಗಳ ಸುಂದರ ವನ ಸಂಪತ್ತಿನಿಂದ ಕಂಗೊಳಿಸುವ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ.
ಭಾರತದಲ್ಲಿ ಕಂಡುಬರುವ ಕೆಲವೆ ಕೆಲವು ನಿತ್ಯಹರಿದ್ವರ್ಣ ಕಾಡುಗಳ ಪೈಕಿ ಒಂದಾಗಿರುವ ಈ ತಾಣವು ಬಾಂಬೆ (ಈಗಿನ ಮುಂಬೈ) ಪ್ರದೇಶದ ಬ್ರಿಟೀಷ್ ರಾಜ್ ಆಡಳಿತದ ಸಮಯದಲ್ಲಿ ಬ್ರಿಟೀಷರಿಗೆ ಬೇಸಿಗೆಯ ರಾಜಧಾನಿಯಾಗಿತ್ತು. "ಸ್ಟ್ರಾಬೆರ್ರಿಗಳ ಭೂಮಿ" ಎಂದು ಕೂಡ ಜನಜನಿತವಾಗಿರುವ ಮಹಾಬಲೇಶ್ವರವು ಮಹಾರಾಷ್ಟ್ರ ಪ್ರವಾಸೋದ್ಯಮಕ್ಕೆ ತನ್ನದೆ ಆದ ವಿಶೀಷ್ಟ ಕೊಡುಗೆ ನೀಡಿದೆ.
ಮಹಾಬಲೇಶ್ವರ:
ಮಹಾಬಲೇಶ್ವರವು ಸಮುದ್ರ ಮಟ್ಟದಿಂದ ಸುಮಾರು 1,353 ಮೀ ಎತ್ತರದಲ್ಲಿ ನೆಲೆಸಿದ್ದು ಮಹಾರಾಷ್ಟ್ರದ ಸುಪ್ರಸಿದ್ಧ ನಗರಗಳಾದ ಪುಣೆ ಹಾಗು ಮುಂಬೈಗಳಿಂದ ಕ್ರಮವಾಗಿ 120 ಕಿ.ಮೀ ಹಾಗು 285 ಕಿ.ಮೀಗಳಷ್ಟು ಅಂತರದಲ್ಲಿದೆ. ಇಲ್ಲಿರುವ ಎಲಿಫಂಟ್ ಹೆಡ್ ಎಂಬ ವೀಕ್ಷಣಾ ಸ್ಥಳವು ರೋಮಾಂಚನವನ್ನುಂಟು ಮಾಡುತ್ತದೆ.
ಚಿತ್ರಕೃಪೆ: Tropicana
ಸೂರ್ಯೋದಯ ವೀಕ್ಷಣಾ ಸ್ಥಳ:
ಮಹಾಬಲೇಶ್ವರದಲ್ಲಿರುವ ಅತ್ಯಂತ ಎತ್ತರದ ಸ್ಥಳವನ್ನು ವಿಲ್ಸನ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಸಮುದ್ರ ಮಟ್ಟದಿಂದ 4,721 ಅಡಿಗಳಷ್ಟು ಎತ್ತರದಲ್ಲಿದೆ.
ಚಿತ್ರಕೃಪೆ: Bagheera2
ನದಿಯ ಮೂಲ:
ಈ ಪ್ರಖ್ಯಾತ ಪ್ರವಾಸಿ ಕ್ಷೇತ್ರವು ಕೃಷ್ಣಾ ನದಿಯ ಮೂಲ ಸ್ಥಳವಾಗಿದೆ. ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯವಲ್ಲದೆ ಕರ್ನಾಟಕ ಹಾಗು ಆಂಧ್ರಪ್ರದೇಶ ರಾಜ್ಯಗಳಲ್ಲೂ ಹರಿದಿದೆ. ಇಲ್ಲಿನ ಪುರಾತನ ಮಹಾಬಲೇಶ್ವರ ಪ್ರದೇಶದಲ್ಲಿರುವ ಪ್ರಾಚೀನ ಮಹಾದೇವನ ದೇವಾಲಯದಲ್ಲಿರುವ ಗೋವಿನ ಮುಖದಿಂದ ಕೃಷ್ಣಾ ನದಿಯು ಉಗಮವಾಗಿದೆ ಎನ್ನಲಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ಮಹಾಬಲೇಶ್ವರದ "ನೀಡಲ್ ಹೋಲ್ ಪಾಯಿಂಟ್" ಎಂಬ ವೀಕ್ಷಣಾ ಸ್ಥಳ. ಸೂಜಿಯ ರಂಧ್ರದಂತೆ ಗೋಚರಿಸುವುದರಿಂದ ನೀಡಲ್ ಹೋಲ್ ಎಂಬ ಹೆಸರುಬಂದಿದೆ.
ಚಿತ್ರಕೃಪೆ: Rishabh Tatiraju
ದಂತಕಥೆ:
ಪೌರಾಣಿಕ ಪಾತ್ರವಾದ ಸಾವಿತ್ರಿಯ ಶಾಪದಿಂದ ತ್ರಿಮೂರ್ತಿಯರಲ್ಲಿ ಒಬ್ಬನಾದ ವಿಷ್ಣು ಕೃಷ್ಣಾ ನದಿಯಾಗಿದ್ದು ಇದರ ಎರಡು ಉಪನದಿಗಳಾದ ವೆನ್ನಾ ಹಾಗು ಕೊಯ್ನಾ ನದಿಗಳು ಶಿವ ಹಾಗು ಬ್ರಹ್ಮದೇವನಾಗಿದ್ದಾನೆ ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೃಷ್ಣಾ ನದಿಯ ಹೊರತಾಗಿ ವೆನ್ನಾ, ಕೊಯ್ನಾ, ಸಾವಿತ್ರಿ ಹಾಗು ಗಾಯಿತ್ರಿಗಳೆಂಬ ನಾಲ್ಕು ನದಿಗಳು ಗೋಮುಖದಿಂದಲೆ ಉದ್ಭವವಾಗಿದ್ದು ಸ್ವಲ್ಪ ದೂರ ಹರಿದು ಕೊನೆಗೆ ಕೃಷ್ಣಾ ನದಿಯಲ್ಲಿ ಸೇರ್ಪಡೆಯಾಗುತ್ತವೆ.
ಚಿತ್ರಕೃಪೆ: Juzerb4u
ಪ್ರವಾಸ:
ಪ್ರಸ್ತುತ ಇಂದಿನ ಮಹಾಬಲೇಶ್ವರ ಗಿರಿಧಾಮವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವುದೂ ಅಲ್ಲದೆ ಹಿಂದುಗಳಿಗೆ ಪವಿತ್ರವಾದ ಮಹಾಬಲೇಶ್ವರನ ದೇವಾಲಯವಿರುವ ಧಾರ್ಮಿಕ ಕ್ಷೇತ್ರವೂ ಆಗಿದೆ.
ಚಿತ್ರಕೃಪೆ: Shalini31786
ಮುಂಬೈನಿಂದ:
ಹೊಸ ರಸ್ತೆಯ ನಿರ್ಮಾಣದ ನಂತರ ಮಹಾಬಲೇಶ್ವರವನ್ನು ಮುಂಬೈನಿಂದ ನೇರವಾಗಿ ನಾಲ್ಕು ಘಂಟೆಗಳ ಪ್ರಯಾಣಾವಧಿಯಲ್ಲಿ ಸುಲಭವಾಗಿ ತಲುಪಬಹುದಾಗಿದೆ.
ಚಿತ್ರಕೃಪೆ: Bagheera2
ಹೆಸರುವಾಸಿ:
ಮಹಾಬಲೇಶ್ವರ ಗಿರಿಧಾಮವು ತನ್ನಲ್ಲಿ ಬೆಳೆಯಲಾಗುವ ಸ್ಟ್ರಾಬೆರ್ರಿ, ಮಲ್ಬೆರ್ರಿ ಹಣ್ಣುಗಳು ಹಾಗು ಜೇನಿನ ಹನಿಗೆ ಅತಿ ಜನಪ್ರಿಯವಾಗಿದೆ. ಸ್ಟ್ರಾಬೆರ್ರಿಗಳನ್ನು ಅವುಗಳ ಸಹಜ ಸ್ಥಿತಿಯಲ್ಲಿ ನೋಡಲು ಇಲ್ಲಿನ ಸ್ಟ್ರಾಬೆರ್ರಿ ಫಾರ್ಮ್ ಗಳಿಗೆ ಬೇಕಾದರೆ ಭೇಟಿ ನೀಡಬಹುದು.
ಚಿತ್ರಕೃಪೆ: Abhishekjoshi
ಕ್ರೀಮ್ ಕಾರ್ನರ್:
ಏಪ್ರಿಲ್ ಹಾಗು ಮೇ ತಿಂಗಳಿನ ಸಮಯದಲ್ಲಿ ಇಲ್ಲಿನ ಪ್ರಖ್ಯಾತ ಕ್ರೀಮ್ ಕಾರ್ನರ್ ಎಂಬಲ್ಲಿ ಬಾಯಲ್ಲಿ ನೀರೂರಿಸುವಂತಹ "ಸ್ಟ್ರಾಬೆರ್ರಿಸ್ ವಿಥ್ ಕ್ರೀಮ್" ಹಾಗು "ಮಲ್ಬೆರ್ರಿಸ್ ವಿಥ್ ಕ್ರೀಮ್" ಎಂಬ ಉತ್ಕೃಷ್ಟ ಖಾದ್ಯಗಳನ್ನು ಸವಿಯಬಹುದು.
ಚಿತ್ರಕೃಪೆ: Rauf.dange
ಆಕರ್ಷಣೆಗಳು:
ವೆನ್ನಾ ಕೆರೆಯು ಮಹಾಬಲೇಶ್ವರದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಕೆರೆಯು ತನ್ನ ಎಲ್ಲ ದಿಕ್ಕುಗಳಲ್ಲೂ ವಿಶಾಲವಾದ ಗಿಡ ಮರಗಳಿಂದ ಸುತ್ತುವರೆದಿದ್ದು ನೋಡಲು ವಿಹಂಗಮವಾದ ನೋಟವನ್ನು ಒದಗಿಸುತ್ತದೆ. ಚಳಿಗಾಲದ ಸಮಯದಲ್ಲಿ ಮಂಜು ಮುಸುಕಿದ ವಾತಾವರಣದಲ್ಲಿ ಕೈಗೊಳ್ಳಬಹುದಾದ ದೋಣಿ ವಿಹಾರವು ಅತಿ ರೋಮಾಂಚಕವಾಗಿರುತ್ತದೆ.
ಚಿತ್ರಕೃಪೆ: Ganesh G
ಉಪಹಾರ:
ವೆನ್ನಾ ಕೆರೆಯ ದಡದಗುಂಟ ಹಲವಾರು ಉಪಹಾರ ಲಭ್ಯವುಳ್ಳ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು. ಸುತ್ತಮುತ್ತಲಿನ ಪ್ರದೇಶದ ಜನರು ಕುಟುಂಬ ಸಮೇತರಾಗಿ ಇಲ್ಲಿಗೆ ಒಂದು ದಿನದ ಪಿಕ್ನಿಕ್ ಗೆಂದು ಬರಲು ವೆನ್ನಾ ಕೆರೆಯು ಅತ್ಯಂತ ಯೋಗ್ಯ ಸ್ಥಳವಾಗಿದೆ.
ನಗರಪ್ರದೇಶ:
ಮಹಾಬಲೇಶ್ವರದ ವೆನ್ನಾ ಕೆರೆಯಿಂದ ಕೇವಲ ಎರಡು ಕಿ.ಮೀ ದೂರ ಚಲಿಸಿದಾಗ ನಗರದ ಮಾರುಕಟ್ಟೆ ಹಾಗು ಬಸ್ ನಿಲ್ದಾಣಕ್ಕೆ ಪ್ರವೇಶಿಸಬಹುದು. ಹಲವಾರು ಖಾಸಗಿ ಹಾಗು ಸರ್ಕಾರಿ ಬಸ್ಸುಗಳು ಮಹಾಬಲೇಶ್ವರಕ್ಕೆ ತೆರಳುವಾಗ ವಿನಂತಿಯ ಮೆರೆಗೆ ವೆನ್ನಾ ಕೆರೆಯ ಬಳಿ ನಿಲುಗಡೆಯನ್ನು ಕೊಡುತ್ತವೆ.
ತಲುಪುವ ಬಗೆ:
ಮಹಾಬಲೇಶ್ವರವು ವಾಲಿಯಿಂದ 32 ಕಿ.ಮೀ, ಮುಂಬೈನಿಂದ 285 ಕಿ.ಮೀ, ಸತಾರಾದಿಂದ 55 ಕಿ.ಮೀ ಹಾಗು ಪುಣೆಯಿಂದ 120 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಈ ಎಲ್ಲ ಪ್ರಮುಖ ನಗರಗಳಿಂದ ಮಹಾಬಳೇಶ್ವರಕ್ಕೆ ಬಸ್ಸುಗಳು ಲಭ್ಯವಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ಸತಾರಾ ಹಾಗು ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಪುಣೆಯ ವಿಮಾನ ನಿಲ್ದಾಣ.