ನಾನಾ ವಿಧಗಳು, ಚಿತ್ರ ವಿಚಿತ್ರ ಸಂಪ್ರದಾಯಗಳು, ವಿಭಿನ್ನ ಆಚರಣೆಗಳು, ವಿವಿಧ ಸಮುದಾಯಗಳು, ಧರ್ಮಗಳು ಆದರೂ ಅನೇಕತೆಯಲ್ಲಿ ಏಕತೆ, ಒಂದು ಸಾಮರಸ್ಯ, ಕೋಮು ಸೌಹಾರ್ದತೆಯ ಜೀವನ, ಇವೆ ಅಖಂಡ ಭಾರತದ ಹಿರಿಮೆ ಹಾಗೂ ಜೀವಾಳ.
ಹಬ್ಬ ಹರಿದಿನಗಳ ಆಚರಣೆಗಳು ಹೇಗೆ ಇರಲಿ, ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸಿ ಭ್ರಾತೃತ್ವ ಬಾಂಧವ್ಯ ಸಾರುವಲ್ಲಿ ಭಾರತೀಯರು ಮೊದಲಿನಿಂದಲೂ ಪ್ರಸಿದ್ಧರು. ಅದೆ ರೀತಿ ವರ್ಷದ ನಿರ್ದಿಷ್ಟ ಸಮಯದಲ್ಲಿ ಜರುಗುವ ಆಯಾ ತೀರ್ಥ ಯಾತ್ರೆಗಳಿಗೂ ನಮ್ಮ ದೇಶ ಮಂಚೂಣಿಯಲ್ಲಿದೆ. ಈ ರೀತಿಯ ಧಾರ್ಮಿಕ ಯಾತ್ರೆಗಳಲ್ಲಿ ಲಕ್ಷಾಂತರ ಜನರು ಒಂದೆಡೆ ಸೇರುವುದು ಸಾಮಾನ್ಯ.
ಈ ರೀತಿಯಾಗಿ ಗುಂಪು ಗೂಡಿ ಹಬ್ಬ ಆಚರಿಸುವುದನ್ನು ಜಗತ್ತಿನ ವಿವಿಧೆಡೆ ನೋಡಬಹುದಾದರೂ ಇದು ಅತಿ ವಿರಳ. ಆದರೆ ಭಾರತದಂತಹ ದೇಶದಲ್ಲಿ ವರ್ಷಪೂರ್ತಿ ಯಾವುದಾದರೊಂದು ಆಚರಣೆಗಳು ನಡೆಯುತ್ತಲೆ ಇರುತ್ತವೆ ಹಾಗೂ ಜನಮನಗಳು ಸೇರುತ್ತಲೆ ಇರುತ್ತವೆ.
ಬನ್ನಿ ಪ್ರಸ್ತುತ ಲೇಖನದ ಮೂಲಕ ಕೇರಳದ ಸುಪ್ರಸಿದ್ಧ ಧಾರ್ಮಿಕ ಯಾತ್ರೆಗಳ ಪೈಕಿ ಒಂದಾದ ಕೊಟ್ಟಿಯೂರಿನ ವಡಕ್ಕೇಶ್ವರಂ ದೇವಾಲಯದ "ಕೊಟ್ಟಿಯೂರು ವೈಶಾಖ ಮಹೋತ್ಸವಂ" ಆಚರಣೆಯ ಕುರಿತು ತಿಳಿಯೋಣ. ಸಮಯಾವಕಾಶ ಲಭಿಸಿದರೆ ಮುಂಬರುವ ಆಚರಣೆಯಲ್ಲಾದರೂ ಒಮ್ಮೆ ಪಾಲ್ಗೊಳ್ಳೋಣ.
ಕೊಟ್ಟಿಯೂರು ವಡಕ್ಕೇಶ್ವರಂ:
ಮೂಲತಃ ಕೊಟ್ಟಿಯೂರು ವೈಶಾಖ ಮಹೋತ್ಸವವನ್ನು ಸತಿಯ ತಂದೆಯಾಗಿದ್ದ ದಕ್ಷ ಪ್ರಜಾಪತಿಯು ನಡೆಸಿದ ಯಾಗದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ದೇವಸ್ಥಾನವನ್ನು ಕೊಟ್ಟಿಯೂರು ವಡಕ್ಕೇಶ್ವರಂ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ.
ಚಿತ್ರಕೃಪೆ: Deepesh ayirathi
ಕೊಟ್ಟಿಯೂರು ವಡಕ್ಕೇಶ್ವರಂ:
ವಾವಲಿ (ಬಾವಲಿ) ನದಿ ಹಿರಿದಿರುವ ಕೊಟ್ಟಿಯೂರಿನಲ್ಲಿ ಮೂಲತಃ ಎರಡು ದೇಗುಲಗಳಿವೆ. ಒಂದು ದೇಗುಲ ನದಿಯ ಪೂರ್ವ ತಟದಲ್ಲಿದ್ದರೆ ಇನ್ನೊಂದು ದೇಗುಲ ನದಿಯ ಪಶ್ಚಿಮ ತಟದಲ್ಲಿದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಪಶ್ಚಿಮ ತಟದಲ್ಲಿರುವ ದೇವಾಲಯವನ್ನು "ಇಕ್ಕರೆ ಕೊಟ್ಟಿಯೂರು ದೇವಾಲಯ" ಎಂದು ಕರೆದರೆ ಪೂರ್ವ ತಟದ ದೇವಾಲಯವನ್ನು "ಅಕ್ಕರೆ ಕೊಟ್ಟಿಯೂರು ದೇವಾಲಯ" ಎಂದು ಕರೆಯಲಾಗುತ್ತದೆ.
ಚಿತ್ರಕೃಪೆ: Satheesan.vn
ಕೊಟ್ಟಿಯೂರು ವಡಕ್ಕೇಶ್ವರಂ:
ಮುಖ್ಯ ಸಂಗತಿಯೆಂದರೆ ಪೂರ್ವ ತಟದ, ಅಕ್ಕರೆ ಕೊಟ್ಟಿಯೂರು ದೇಗುಲವು ತಾತ್ಕಾಲಿಕ ದೇಗುಲವಾಗಿದ್ದು, ವೈಶಾಖ ಮಹೋತ್ಸವವು ಪ್ರಮುಖವಾಗಿ ಇಲ್ಲಿಯೆ ಜರುಗುತ್ತದೆ. ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಲಾಗುತ್ತದೆ ಹಾಗೂ ಈ ಗುಡಿಸಲು ದೇವಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಈ ದೇಗುಲವು ಉತ್ಸವದ ಸಂದರ್ಭದಲ್ಲಿ ಮಾತ್ರ ತೆರೆಯಲ್ಪಡುತ್ತದೆ.
ಚಿತ್ರಕೃಪೆ: Vinayaraj
ಕೊಟ್ಟಿಯೂರು ವಡಕ್ಕೇಶ್ವರಂ:
ಇನ್ನುಳಿದಂತೆ ಪಶ್ಚಿಮ ತಟದ ಇಕ್ಕರೆ ಕೊಟ್ಟಿಯೂರು ದೇವಾಲಯವು ಶಾಶ್ವತ ಕಟ್ಟಡವಾಗಿದ್ದು ವರ್ಷಪೂರ್ತಿ ಭಕ್ತಾದಿಗಳಿಗೆ ದರುಶನಾರ್ಥವಾಗಿ ತೆರೆದಿರುತ್ತದೆ. ಮತ್ತೊಂದು ಚಕಿತಗೊಳಿಸುವ ಸಂಗತಿಯೆಂದರೆ ಈ ಉತ್ಸವವು ಮಲಯಾಳಂ ಕ್ಯಾಲೆಂಡರ್ ಪ್ರಕಾರ, ಮಳೆಗಾಲದ ಸಂದರ್ಭದಲ್ಲಿ ಅಂದರೆ ಜೂನ್, ಜುಲೈ ತಿಂಗಳುಗಳ ಸಮಯದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಮಳೆಯು ಸಹ ಜೋರಾಗಿರುತ್ತದೆ. ಇದನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ವೈಶಾಖ ಮಹೋತ್ಸವವನ್ನು ಅಕ್ಕರೆ ಕೊಟ್ಟಿಯುರು ದೇವಾಲಯದ ತಿರುವಂಚಿರಾ ಪವಿತ್ರ ಕೊಳದಲ್ಲಿಯೆ ಆಚರಿಸಲಾಗುತ್ತದೆ. ಒಣ ಹುಲ್ಲುಗಳ ಗುಡಿಸಲನ್ನು ಮಾತ್ರವೆ ನಿರ್ಮಿಸಲಾಗುತ್ತದೆ. ಈ ದೃಶ್ಯವನ್ನು ನೋಡಿದರೆ ನಾವು ಹಿಂದಿನ ವೇದ ಪುರಾಣಗಳ ಕಾಲದಲ್ಲಿ ಮತ್ತೆ ಮರಳಿದ್ದೇವೇನೊ ಎಂಬಂತೆ ಭಾಸವಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಉತ್ಸವದಾಚರಣೆಗೆ ಬೇಕಾದ ಪರಿಕರಗಳನ್ನು ಭೂತಗಣಗಳು ಕೊಟ್ಟಿಯೂರಿನಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ತಿರುನೆಲ್ಲಿ ಮಹಾ ವಿಷ್ಣು ದೇವಸ್ಥಾನದಿಂದ ಬ್ರಹ್ಮಗಿರಿ ಕಣಿವೆಯ ಮೂಲಕ ತರುತ್ತವೆ ಎಂದು ನಂಬಲಾಗಿದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಕೊಟ್ಟಿಯೂರು ಹೆಸರೆ ಹೇಳುವಂತೆ ತ್ರಿಮೂರ್ತಿಗಳು ಭೇಟಿಯಾಗುವ ಸ್ಥಳ ಇದಾಗಿದೆ. ಅಲ್ಲದೆ ಇಲ್ಲಿರುವ ಶಿವಲಿಂಗವು ಸ್ವಯಂ ಉದ್ಭವದ ನೈಸರ್ಗಿಕ ಶಿವಲಿಂಗವಾಗಿದೆ. ಈ ಉತ್ಸವವು ಒಂದು ಅತಿ ವಿರಳ ಎನ್ನಬಹುದಾದ ಉತ್ಸವವಾಗಿದ್ದು ಇದರಲ್ಲಿ ಸಮಾಜದ ಎಲ್ಲ ಸಮುದಾಯದವರು ಅವರಿಗೆ ವಹಿಸಲಾಗಿರುವ ನಿರ್ದಿಷ್ಟ ಕೆಲಸ/ಸೇವೆಗಳನ್ನು ನಿರ್ವಹಿಸುವುದರ ಮೂಲಕ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಪ್ರದೇಶದ ಪ್ರಮುಖ ವೈಷ್ಣವ ಕುಟುಂಬದ ಯಜಮಾನನು ರೋಹಿಣಿ ಆರಾಧನೆ ಎಂಬ ಪ್ರಮುಖ ವಿಧಾನ/ಆಚರಣೆಯನ್ನು ನಿರ್ವಹಿಸುತ್ತಾರೆ. ಇವರನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ನಂತರದಲ್ಲಿ ಲಂಬೂದಿರಿ ಬ್ರಾಹ್ಮಣರು ಸ್ವಯಂಭೂ ಲಿಂಗವನ್ನು ಪೂಜಿಸುತ್ತಾರೆ. ಅಂದರೆ ಆಲಿಂಗನ ಪುಷ್ಪಾಂಜಲಿ ಎಂಬ ವಿಧಿಯನ್ನು ಆಚರಿಸಲಾಗುತ್ತದೆ. ಈ ಒಂದು ಸಂಪೂರ್ಣ ಆಚರಣೆಯು ದಕ್ಷಯಾಗದಲ್ಲಿ ಸತಿಯು ತನ್ನನ್ನು ತಾನು ದಹಿಸಿಕೊಂಡಾಗ ಅವಳ ಅಗಲಿಕೆಯಿಂದ ಶಿವನು ನೊಂದಾಗ ಯಾವ ರೀತಿಯಲ್ಲಿ ವಿಷ್ಣು ಶಿವನಿಗೆ ಸಂತೈಸುತ್ತಾನೆನ್ನುದರ ಸ್ಮರಣಾರ್ಥವಾಗಿ ನಿರ್ವಹಿಸಲಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
27 ದಿನಗಳ ಕಾಲ ದೀರ್ಘವಾಗಿ ನಡೆಯುವ ಈ ಉತ್ಸವದ ಹಿನ್ನಿಲೆಯು ಅತಿ ರೋಚಕಮಯ ದಂತ ಕಥೆಯಿಂದ ಕೂಡಿದೆ. ದಂತ ಕಥೆಯ ಪ್ರಕಾರ, ಸತಿ ದೇವಿಯ ಅಕಾಲ ಮರಣದ ನಂತರ ಕಲಿಯ ಪ್ರಭಾವ ಹೆಚ್ಚಾಗಿ ಕೇರಳವು ಸಮುದ್ರದಲ್ಲಿ ಮುಳುಗಿ ಬಿಡುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಈ ಸಂದರ್ಭದಲ್ಲಿ ಪರಶುರಾಮರು ತಾವು ಗೆದ್ದ ಎಲ್ಲ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡಿ ವಾಸಿಸಲು ಯೋಗ್ಯ ಸ್ಥಳ ಹುಡುಕುತ್ತ ವರುಣ ದೇವರಿಗೆ ಪ್ರಾರ್ಥಿಸಿ ತಮ್ಮ ಕೊಡಲಿಯನ್ನು ಗೋಕರ್ಣದಿಂದ ಕನ್ಯಾಕುಮಾರಿಯತ್ತ ಎಸೆಯುತ್ತಾರೆ. ಆಗ ಕೇರಳವು ಸಮುದ್ರದಿಂದ ಮತ್ತೆ ಹೊರಬಂದು, ಕಲಿ ದೇವನಿಗೆ ಕೋಪ ಉಂಟಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಕುಪಿತನಾದ ಕಲಿಯು ಪರಶುರಾಮರ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ಪರಶುರಾಮರ ಅತಿ ಬಲದ ಮುಂದೆ ಕಲಿ ದೇವರಿಗೆ ಏನು ಮಾಡಲಾಗುವುದಿಲ್ಲ ಬದಲಾಗಿ ಕಲಿಯೆ ಪರಶುರಾಮರಿಂದ ಸಂಕಷ್ಟಕ್ಕೆ ಇಡಾಗುವ ಪರಿಸ್ಥಿತಿ ಬಂದೊದಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ವಸ್ತು ಸ್ಥಿತಿಯನ್ನರಿತ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ ಪರಶುರಾಮರ ಕುರಿತು ಕಲಿಯನ್ನು ಬಿಟ್ಟು ಬಿಡುವಂತೆ ಮನವಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಪರಶುರಾಮರು ಕಲಿಯು ತನ್ನ ಗುರುವಾದ ಶಿವನ ಸ್ವಯಂಭೂ ಶಿವಲಿಂಗವಿರುವ ಕೊಟ್ಟಿಯೂರಿನಲ್ಲಿ ಮುಂದೆಂದೂ ಪ್ರವೇಶಿಸಬಾರದೆಂಬ ಶರತ್ತಿನ ಮೇಲೆ ಬಿಡುಗಡೆಗೊಳಿಸುತ್ತಾನೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ನಂತರ ಕೊಟ್ಟಿಯೂರಿನಲ್ಲಿ ಈ ಉತ್ಸವವನ್ನು ಸ್ವತಃ ಪರಶುರಾಮರೆ ಪ್ರಾರಂಭಿಸುತ್ತಾರೆ. ಅಂದಿನಿಂದಲೂ ಶತಮಾನಗಳ ಕಾಲ ವೈಶಾಖ ಮಹೋತ್ಸವವು ಕೊಟ್ಟಿಯೂರಿನಲ್ಲಿ ನಡೆಯುತ್ತ ಬಂದಿದೆ ಎನ್ನಲಾಗಿದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಈ ಉತ್ಸವದಲ್ಲಿ ನಿರ್ವಹಿಸಲಾಗುವ ಕೆಲವು ವಿಶಿಷ್ಟ ಆಚರಣೆಗಳೆಂದರೆ, ಉಷಾ ಪೂಜೆ. ದಕ್ಷನ ಯಾಗವು ನಡೆದ ಕಾಲಕ್ಕೆ ಸಮಾನಾಂತರವಾಗಿ ಇದನ್ನು 27 ದಿನಗಳ ಉತ್ಸವದಲ್ಲಿ ಕೇವಲ 24 ದಿನಗಳ ಕಾಲ ಮಾತ್ರ ಆಚರಿಸಲಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಪ್ರತಿ ವರ್ಷ ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತಾದಿಗಳ ಸಂಖ್ಯೆ ಏರುತ್ತಿದ್ದರೂ ಸಹ ಪುರಾತನ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಪ್ರಮಾಣದಲ್ಲೆ ಪ್ರಸಾದ/ನೈವೆದ್ಯವನ್ನು ಸ್ವಲ್ಪವೂ ಹೆಚ್ಚು ಹಾಗೂ ಕಡಿಮೆ ಮಾಡದೆ ಒಂದೆ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಪುಷ್ಪ ಹಾಗೂ ನೈವೆದ್ಯದ ಹೊರತಾಗಿ ಅಮ್ಮರಕ್ಕಾಲ್ (ಸತಿ ದೇವಿಯು ತನ್ನನ್ನು ತಾನು ದಹಿಸಿಕೊಂಡ ಸ್ಥಳ) ಎಂಬ ಸ್ಥಳದಲ್ಲಿ ಯಾವುದೆ ಪೂಜೆ-ಪುನಸ್ಕಾರಗಳನ್ನು ಮಾಡಲಾಗುವುದಿಲ್ಲ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಶೈವ, ವೈಷ್ಣವ ಹಾಗೂ ಶಾಕ್ತ ಅಂಶಗಳ ಅನುರೂಪತೆ ಇಲ್ಲಿರುವುದರಿಂದ ಪುಣ್ಯಹಂ ಅನ್ನು ನೆರವೇರಿಸಲಾಗುವುದಿಲ್ಲ. ಈ ಪ್ರದೇಶವು ಎಷ್ಟೊಂದು ಶುದ್ಧವಾಗಿದೆ ಎಂದರೆ ಎಲ್ಲ ಪಾಪ ಕರ್ಮಗಳು ಇಲ್ಲಿಗೆ ಭೇಟಿ ನೀಡಿದಾಗ ನಶಿಸಿ ಹೋಗುತ್ತವೆ ಎಂದು ನಂಬಲಾಗಿದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಗಣಪತಿ ಹೋಮವನ್ನು ಪ್ರತಿ ದಿನ ಬೆಳಿಗ್ಗೆ ಉತ್ಸವದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರಿಮಿಸಲಾದ ಗುಡಿಸಲುಗಳು, ಅದರ ಹಿನ್ನಿಲೆಯಲ್ಲಿರುವ ಅಗಾಧ ನಿತ್ಯ ಹರಿದ್ವರ್ಣದ ಸೌಂದರ್ಯ ವೇದಗಳ ಕಾಲದ ಗುರುಕುಲವನ್ನು ನೆನಪಿಸುತ್ತದೆ.
ಚಿತ್ರಕೃಪೆ: Sivavkm
ಕೊಟ್ಟಿಯೂರು ವಡಕ್ಕೇಶ್ವರಂ:
ಇನ್ನು, ಕೊಟ್ಟಿಯೂರಿಗೆ ತೆರಳಲು ಹತ್ತಿರವಿರುವ ರೈಲು ನಿಲ್ದಾಣವೆಂದರೆ ತಲಚೇರಿ. ಅಲ್ಲದೆ ಕಣ್ಣೂರು ರೈಲು ನಿಲ್ದಾಣವೂ ಸಹ ಉತ್ತರದ ಕೋಳಿಕೋಡ್ ನಿಂದ ಬರುವ ಭಕ್ತಾದಿಗಳಿಗೆ ಅನುಕೂಲಕರವಾಗಿದೆ. ತಲಚೇರಿಯಿಂದ ಬಸ್ಸುಗಳು ಕೂಡ ಕೊಟ್ಟಿಯೂರಿಗೆ ದೊರೆಯುತ್ತವೆ. ಅಲ್ಲದೆ ಮೈಸೂರಿನಿಂದ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಗೆ ಬಸ್ಸುಗಳು ದೊರೆಯುತ್ತವೆ. ಮಾನಂತವಾಡಿಯಿಂದ ಕೊಟ್ಟಿಯೂರು ಕೇವಲ 20 ಕಿ.ಮೀ ಗಳಷ್ಟು ದೂರವಿದ್ದು ಬಸ್ಸುಗಳು ದೊರೆಯುತ್ತವೆ. ವೈಶಾಖ ಮಹೋತ್ಸವದ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಸ್ಸುಗಳನ್ನು ಇಲ್ಲಿಗೆ ಕೇರಳದ ಹಲವು ಭಾಗಗಳಿಂದ ಬಿಡಲಾಗುತ್ತದೆ.
ಚಿತ್ರಕೃಪೆ: Dhruvaraj S