ಈ ದುರ್ಗ ಅಥವಾ ಕೋಟೆಯನ್ನೊಮ್ಮೆ ನೋಡಿದರೆ ಸಾಕು, ಸಾಮಾನ್ಯವಾಗಿ ಬಡಿದುಕೊಳ್ಳುತ್ತಿರುವ ಹೃದಯ ನೂರು ಮೀ. ಓಟದ ಸ್ಪರ್ಧೆಯ ಓಟಗಾರನಂತೆ ಓಡಲು ಆರಂಭಿಸುತ್ತದೆ. ಇದರ ರಚನೆಯೆ ಆ ರೀತಿಯಲ್ಲಿರುವುದನ್ನು ಕಂಡಾಗ ಯಾರಿಗಾದರೂ ಸರಿ ಅಚ್ಚರಿಯಾಗದೆ ಇರಲಾರದು.
ಪ್ರವಾಸಿಗರಿಗೆ ಮಹಾಬಲೇಶ್ವರವೆಂದರೆ ಯಾಕಿಷ್ಟ?
ಆದರೆ ನಿಮಗಿದು ಗೊತ್ತೆ, ಈ ದುರ್ಗವನ್ನು ಚಾರಣಿಗರ ಬಲು ನೆಚ್ಚಿನ ಕೋಟೆ ಎಂದೆ ಕರೆಯಲಾಗುತ್ತದೆ. ಇದು ಇತರೆ ಸಾಮಾನ್ಯವಾಗಿ ಗುಡ್ಡದ ಮೇಲಿರುವ ಕೋಟೆಯಂತಿರದೆ ಚೂಪಾದ ಗುಡ್ಡವೊಂದರ ಮೇಲೆ ನೆಲೆಸಿರುವುದೆ ವಿಶೇಷವಾಗಿದೆ. ಈ ಕೋಟೆಯನ್ನು ಏರಲು ಕಲ್ಲುಗಲಲ್ಲಿ ಮೆಟ್ಟಿಲುಗಳನ್ನು ಕೊರೆಯಲಾಗಿದ್ದು ಏರಲು ಅನುಕೂಲಕರವಾಗಿದೆ.
ಚಿತ್ರಕೃಪೆ: Rohit Gowaikar
ಆದರೆ, ಮಳೆಗಾಲದ ಸಂದರ್ಭದಲ್ಲಿ ಈ ದುರ್ಗವನ್ನು ಏರುವುದೆಂದರೆ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿದಂತೆ. ಬಲು ಮೊನಚಾದ ಬೆಟ್ಟವಾಗಿರುವುದರಿಂದ ಸ್ವಲ್ಪ ಕಾಲು ಜಾರಿತೆಂದರೂ ಮನುಷ್ಯ ಪಾತಾಳಕ್ಕೆ ಸೇರುತ್ತಾನಷ್ಟೆ. ಆದ್ದರಿಂದ ಮಳೆಗಾಲವೊಂದನ್ನು ಹೊರತು ಪಡಿಸಿ ಮಿಕ್ಕ ಸಮಯದಲ್ಲಿ ಈ ಅದ್ಭುತ ದುರ್ಗವನ್ನು ಏರಿ ಆನಂದಿಸಬಹುದು.
ಈ ದುರ್ಗದ ಸುತ್ತಮುತ್ತಲಿನ ಜಾಗವೆಲ್ಲ ಸಾಕಷ್ಟು ನಯನಮನೋಹರವಾಗಿದ್ದು ಅದ್ಭುತ ಅನುಭವ ನೀಡುತ್ತದೆ. ಒಮ್ಮೆಯಾದರೂ ಈ ದುರ್ಗಕ್ಕೆ ಚಾರಣ ಮಾಡಲೇಬೇಕು ಅನ್ನುವಂತಿದೆ ಈ ಕಲವಂತಿನ್ ದುರ್ಗ. ಹೌದು ಇದನ್ನು ಕಲವಂತಿನ್ ದುರ್ಗ ಇಲ್ಲವೆ ಹೆಚಾಗಿ ಪ್ರಬಾಲಗಡ್ ಕೋಟೆ ಎಂದು ಕರೆಯುತ್ತಾರೆ.
ಚಿತ್ರಕೃಪೆ: Dinesh Valke
ಮಹಾರಾಷ್ಟ್ರದಲ್ಲಿ ಆವರಿಸಿರುವ ಮನಮೋಹಕ ಪಶ್ಚಿಮಘಟ್ಟಗಳ ಜಾಡಿನಲ್ಲಿ ಈ ಅದ್ಭುತ ದುರ್ಗ ಸ್ಥಿತವಿರುವುದನ್ನು ಕಾಣಬಹುದು. ಮಹಾರಾಷ್ಟ್ರದ ಅದ್ಭುತ ಗಿರಿಧಾಮ ಪ್ರದೇಶವಾದ ಮಾಥೇರಾನ್ ಹಾಗೂ ಮುಂಬೈ ಬಳಿಯ ಪನ್ವೇಲ್ ಮಧ್ಯದ ಪ್ರದೇಶದಲ್ಲಿ ಪ್ರಬಾಲ್ಗಡ್ ಕೋಟೆಯಿದೆ.
ಹಿಂದೆ ಮಹಾರಾಷ್ಟ್ರದ ಉತ್ತರ ಕೊಂಕಣ ಪ್ರದೇಶದಲ್ಲಿ ಪನ್ವೇಲ್ ಹಾಗೂ ಕಲ್ಯಾಣ ಕೋಟೆಗಳು ಭದ್ರವಾಗಿ ನೆಲೆಯೂರಿದ್ದವು. ಬಹುಮನಿ ಸುಲ್ತಾನರು ಈ ಎರಡೂ ಕೋಟೆಗಳ ಮೇಲೆ ಕಣ್ಣಿಡಲು ಅನುಕೂಲವಾಗುವಂತೆ ಈ ಕಲವಂತಿನ್ ಕೋಟೆಯನ್ನು ನಿರ್ಮಿಸಿದ್ದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.
ಚಿತ್ರಕೃಪೆ: Dinesh Valke
ಪ್ರಸ್ತುತ ಈ ದುರ್ಗವು ಪ್ರವಾಸಿಗರ ಬಲು ನೆಚ್ಚಿನ ತಾಣವಾಗಿದೆ ಹಾಗೂ ವಾರಾಂತ್ಯದ ರಜೆಗಳಲ್ಲಿ ಸಾಕಷ್ಟು ಹದಿಹರೆಯದ ಯುವ ಜನರು ಈ ತಾಣಕ್ಕೆ ಚಾರಣ ಮಾಡಲೆಂದು ಬರುತ್ತಾರೆ. 2300 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಅದ್ಭುತ ತಾಣ ಸಾಕಷ್ಟು ರಮಣೀಯ ನೋಟಗಳನ್ನು ಕರುಣೀಸುತ್ತದೆ.
ದಂಗುಬಡಿಸುವ ಭಂಡಾರದರಾ ಪ್ರವಾಸ
ಇದು ರೋಮಾಂಚನಗೊಳಿಸುವ ಅದ್ಭುತ ಚಾರಣ ಅಥವಾ ಏರುವ ಪ್ರವಾಸಿ ತಾಣವಾಗಿದ್ದು ಮುಂಜಾಗೃತೆಯಾಗಿ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಏರುವುದು ಉತ್ತಮ. ಅಕ್ಟೋಬರ್ ನಿಂದ ಮಾರ್ಚ ವರೆಗಿನ ಸಮಯವು ಟ್ರೆಕ್ ಮಾಡಲು ಪ್ರಶಸ್ತ ಸಮಯವಾಗಿದೆ. ಮಾರ್ಗದರ್ಶಿಗಳ/ಪರಿಣಿತರ ಸಲಹೆಗಳಿದ್ದಲ್ಲಿ ಉತ್ತಮ. ಪನ್ವೇಲ್ ರೈಲು ನಿಲ್ದಾಣದಿಂದ ಠಕೂರ್ ವಾಡಾ ಹಳ್ಳಿಗೆ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಬಹುದು.