ಶಿಕ್ಷಣ ಹಾಗೂ ತೆಂಗಿನ ಬೆಳೆಗೆ ಹೆಸರಾದ ತುಮಕೂರು ಅನೇಕ ದೇವಾಲಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಈ ಸುಂದರವಾದ ಪ್ರಕೃತಿ ಸೌಂದರ್ಯದ ನಡುವೆ ಇರುವ ಚಿಕ್ಕ ದೇವಾಲಯವೇ ಕೈದಾಳ ಚನ್ನಕೇಶವ ದೇಗುಲ. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು
ತುಮಕೂರಿನಿಂದ 9 ಕಿ.ಮೀ ದೂರದಲ್ಲಿರುವ ಈ ದೇಗುಲ ಜಕಣಾಚಾರಿಯವರ ಕೆತ್ತನೆಯಿಂದ ನಿರ್ಮಾಣಗೊಂಡಿದೆ. 1150 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ದ್ರಾವೀಡ ಶೈಲಿಯಲ್ಲಿದೆ. ಇದನ್ನು ಮೊದಲು ಕ್ರೀಡಿಕಾಪುರ ಎಂದು ಕರೆಯುತ್ತಿದ್ದರು. ಬರಬರುತ್ತ ಕೈದಾಳ ಎಂದು ಕರೆಯಲಾಯಿತು ಎನ್ನಲಾಗುತ್ತದೆ.
ಚನ್ನಕೇಶವ ದೇಗುಲ
ಹೆಸರೇ ಹೇಳುವಂತೆ ಇಲ್ಲಿ ಚನ್ನಕೇಶವ ಹಾಗೂ ಗಂಗಾಧರೇಶ್ವರ ಮೂರ್ತಿಯನ್ನು ಪೂಜಿಸಲಾಗುತ್ತದೆ. 12ನೇ ಶತಮಾನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ವಿಶೇಷ ಕಲ್ಲಿನ ಮೇಲೆ ಶಾಸನ ಕೊರೆದಿರುವುದನ್ನು ಕಾಣಬಹುದು. ಇತರ ದೇವಾಲಯಕ್ಕಿಂತ ಸ್ವಲ್ಪ ಭಿನ್ನವಾದ ಶೈಲಿಯಲ್ಲಿ ದೇಗುಲವನ್ನು ಕೆತ್ತಲಾಗಿದೆ. ಇದು ಜಕಣಾಚಾರಿಯ ಉತ್ತಮ ಕೆತ್ತನೆಯ ಶೈಲಿಗೆ ಕನ್ನಡಿ ಹಿಡಿಯುತ್ತದೆ. ಈ ದೇವಾಲಯವನ್ನು ಹೊರಗಡೆಯಿಂದ ನೋಡಿದರೆ ಕೋಟೆಯಂತೆ ಕಾಣುತ್ತದೆ. ಒಳಗಡೆ ಒಂದು ವಿಷಾಲವಾದ ಮಂಟಪವೂ ಇದೆ. ಇಲ್ಲಿರುವ ಕಂಬಗಳನ್ನು ಸೂಕ್ಷ್ಮ ಬಗೆಯ ಕೆತ್ತನೆಯಿಂದ ಸಿಂಗರಿಸಲಾಗಿದೆ. ಇಲ್ಲಿಯ ಕೆಲವು ಅದ್ಭುತ ಕೆತ್ತನೆಗಳು ಬೇಲೂರು ಚನ್ನಕೇಶವ ದೇವಾಲಯವನ್ನು ನೆನಪಿಸುತ್ತವೆ. ಗರ್ಭಗುಡಿಯಲ್ಲಿರುವ 6 ಅಡಿ ಎತ್ತರದ ಚನ್ನಕೇಶವ ಮೂರ್ತಿ ಪಶ್ಚಿಮ ಮುಖವಾಗಿರುವುದು ವಿಶೇಷ. ಚೆನ್ನಕೇಶವ ದೇವಾಲಯ, ಬೇಲೂರು
ದೇಗುಲದ ಕೆತ್ತನೆ
ದೇಗುಲದ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾತಾರದ ಚಿತ್ರಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಪ್ರತಿಯೊಂದು ಕಂಬಕ್ಕೂ ವಿಶೇಷವಾದ ಕೆತ್ತನೆ ನೀಡಿ ಸಿಂಗರಿಸಿರುವುದು ಈ ದೇಗುಲದ ಕಲೆಯ ಶ್ರೀಮಂತಿಕೆಯನ್ನು ತೋರುತ್ತದೆ. ಈ ದೇಗುಲ ನೋಡಲು ಚಿಕ್ಕದಾದರೂ ಕೆತ್ತನೆ ಹಾಗೂ ವಾಸ್ತುಶಿಲ್ಪ ಅಪರೂಪದ ಶೈಲಿಯಲ್ಲಿದೆ.
ಹಿನ್ನೆಲೆ
ಇತಿಹಾಸದ ಪ್ರಕಾರ ಜಕಣಾಚಾರಿಯ ಹುಟ್ಟೂರು ಕೈದಾಳ. ಇದನ್ನು ಮೊದಲು ಕ್ರೀಡಿಕಾಪುರ ಎಂದು ಕರೆಯುತ್ತಿದ್ದರು. ಜಕಣಾಚಾರಿ ಕೆತ್ತಿದ ಬೇಲೂರು ಚನ್ನಕೇಶವ(ಕಪ್ಪೆ ಚನ್ನಿಗರಾಯ) ಮೂರ್ತಿಯಲ್ಲಿ ದೋಷವಿದೆ ಎಂಬ ಮಾತುಗಳು ಕೇಳಿಬಂದಾಗ, ಬೇಸರಗೊಂಡ ಜಕಣಾಚಾರಿ ತನ್ನ ಕೈ ಬಲಿಕೊಟ್ಟನು. ದೇವರ ಅನುಗ್ರಹದಂತೆ ತನ್ನ ಹುಟ್ಟೂರಿನಲ್ಲಿ ಮತ್ತೊಂದು ದೇವಸ್ಥಾನವನ್ನು ನಿರ್ಮಿಸಿದ. ಆಗ ಪುನಃ ತನ್ನ ಕೈಯನ್ನು ಮರಳಿ ಪಡೆದ. ಅದಕ್ಕಾಗಿಯೇ ಕ್ರೀಡಿಕಾಪುರ ಎಂಬ ಹೆಸರು ಹೋಗಿ ಕೈದಾಳ ಎನ್ನುವ ಹೆಸರು ಬಂತು. ಈ ಕೈದಾಳ ದೇವಸ್ಥಾನವು ಜಕಣಾಚಾರಿಯ ಕೊನೆಯ ದಿನಗಳಲ್ಲಿ ನಿರ್ಮಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಜಕಣಚಾರಿ ವಿಧಿವಶರಾದರು. ಹಾಗಾಗಿ ದೇವಾಲಯದ ಹೊರವಲಯಗಳ ನಿರ್ಮಾಣ ಅರ್ಧದಲ್ಲೇ ನಿಂತಿತು. ದೇಗುಲದ ಗಾತ್ರವೂ ಚಿಕ್ಕದಾಗಿಯೇ ಉಳಿಯಿತು ಎನ್ನಲಾಗುತ್ತದೆ.
ಸಮೀಪದ ಆಕರ್ಷಣೆ
ಈ ದೇವಾಲಯಕ್ಕೆ ಬಂದರೆ ಹತ್ತಿರದಲ್ಲಿರುವ ದೇವರಾಯನ ದುರ್ಗ, ಚನ್ನರಾಯನ ದುರ್ಗ, ಯಡಿಯೂರು ಸಿದ್ಧಲಿಂಗೇಶ್ವರ, ಪಾವಗಡ, ಮಾರ್ಕೋನಹಳ್ಳಿ ಹಾಗೂ ಮಧುಗಿರಿಯನ್ನು ನೋಡಬಹುದು.
ದೇಗುಲದ ಸಮಯ
ಪ್ರತಿದಿನ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರೆಗೆ ಸಂಜೆ 6.30 ರಿಂದ 8.30ರ ವರೆಗೆ ತೆರೆದಿರುತ್ತದೆ. ವಾರದ ರಜೆ ಹಾಗೂ ಸರ್ಕಾರಿ ರಜೆಯ ದಿನದಂದು ಬೆಳಗ್ಗೆ 10.30 ರಿಂದ 2.30ರವರೆಗೆ ಸಂಜೆ 5.30 ರಿಂದ 8.30 ರವರೆಗೆ ತೆರೆದಿರುತ್ತದೆ.
ದೂರ
ಬೆಂಗಳೂರಿನಿಂದ ತುಮುಕೂರಿಗೆ ಬಸ್ಗಳಲ್ಲಿ ಸಾಗುವುದಾದರೆ 66 ಕಿ.ಮೀ. ದೂರವಾಗುತ್ತದೆ. ರೈಲ್ವೇ ಪ್ರಯಾಣ ಬಯಸಿದರೆ 71 ಕಿ.ಮೀ. ದೂರ.