ಅಂದು ಬದುಕಿನ ಭರವಸೆಗಳೆಲ್ಲವನ್ನು ಕಳೆದುಕೊಂಡಿದ್ದೆ. ಆರ್ಥಿಕ ತೊಂದರೆ, ಅಪ್ಪನ ಆರೋಗ್ಯ ಸಮಸ್ಯೆ, ಆಸ್ತಿಗಾಗಿ ಚಿಕ್ಕಪ್ಪನ ಕಿರುಕುಳ ಇವೆಲ್ಲವೂ ಮನಸ್ಸನ್ನು ಹಿಂಡಿ ಹಿಸುಕಿತ್ತು. ಇದ್ದಾಗ ಬಳಿ ಬರುವ ಸಂಬಂಧಿಕರು ದೂರವಾಗಿದ್ದರು. ಕೆಲಸಕ್ಕಾಗಿ ಎಷ್ಟು ಅಲೆದರೂ ಸಿಕ್ಕಿರಲಿಲ್ಲ... ಬದುಕಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ, ದುಃಖ ಇದ್ದೇ ಇರುತ್ತದೆ ಎನ್ನುವುದು ನಿಜ. ಆದರೆ ಸಮಸ್ಯೆಯಲ್ಲೇ ಮುಳುಗಿರುವ ನನಗೆ ಉಸಿರಾಡುವ ಆಸೆಯೂ ಇರಲಿಲ್ಲ...
ಆತ್ಮೀಯ ಗೆಳತಿಯೂ ಮದುವೆಯಾಗಿ ಉಡುಪಿಗೆ ಹೋಗಿದ್ದಳು. ಅವಳು ಬಳಿ ಇದ್ದಿದ್ದರೆ ಎಲ್ಲವನ್ನು ಹೇಳಿಕೊಳ್ಳುತ್ತಿದ್ದೆ. ಅವಳು ಹತ್ತಿರ ಇಲ್ಲದಿರುವುದಕ್ಕೆ ಮನಸ್ಸು ದುಃಖದಲ್ಲಿ ತುಂಬಿತ್ತು. ಕಷ್ಟದಲ್ಲೇ ದಿನ ದೂಡುತ್ತಿರುವ ನನಗೆ ಒಂದು ದಿನ ಆ ಗೆಳತಿ ಕರೆ ಮಾಡಿದಳು. ಅವಳ ಬಳಿ ಮಾತನಾಡುತ್ತಿದ್ದಂತೆ ಒಮ್ಮೆಲೆ ನನ್ನ ಪರಿಸ್ಥಿತಯನ್ನು ಹೇಳಿಕೊಂಡೆ... ಆಗ ಅವಳ ಹೇಳಿದ್ದು ಇಷ್ಟೇ... ಮುಂದಿನ ವಾರ ಇಲ್ಲಿಗೆ ಬಾ... ಒಂದು ದೇವಾಲಯಕ್ಕೆ ಹೋಗೋಣ... ಆ ದೇವರು ನಿನ್ನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವನು ಎಂದಳು...
ಅವಳು ಹೇಳಿದಂತೆ ಅಲ್ಲಿಗೆ ಹೋದೆ. ಆಗ ಅವಳು ಹಟ್ಟಿ ಅಂಗಡಿ ಸಿದ್ಧಿವಿನಾಯಕ ದೇಗುಲಕ್ಕೆ ಕರೆದೊಯ್ದಳು. ದೇವರಲ್ಲಿ ನನ್ನ ಸಮಸ್ಯೆಗಳನ್ನು ಹೇಳಿಕೊಂಡೆ... ಮನೆಗೆ ಹಿಂತಿರುಗುವಾಗ ಮನಸ್ಸಿಗೊಂದು ಬಗೆಯ ನಿರಾಳ ಭಾವವಿತ್ತು... ಒಂದು ತಿಂಗಳಲ್ಲಿ ನನಗೊಂದು ಕಡೆ ಒಳ್ಳೆಯ ಕೆಲಸ ದೊರೆಯಿತು. ಅಪ್ಪನ ಆರೋಗ್ಯವೂ ಸುಧಾರಿಸುತ್ತಾ ಬಂತು... ಚಿಕ್ಕಪ್ಪನೂ ಪದೆ ಪದೇ ಜಗಳವಾಡುವುದನ್ನು ನಿಲ್ಲಿಸಿದ್ದ... ಇಂತಹ ಅಪರೂಪದ ಶಕ್ತಿ ಇರುವ ದೇಗುಲದ ಪರಿಚಯ ಎಲ್ಲರಿಗೂ ಆಗಬೇಕು... ಸರ್ವರ ಕಷ್ಟಗಳು ಕರಗಲಿ ಎನ್ನುವ ಉದ್ದೇಶದಿಂದಲೇ ಈ ದೇಗುಲದ ಪರಿಚಯ ನಿಮ್ಮ ಮುಂದೆ ಇಡುತ್ತಿದ್ದೇನೆ...
ಉಡುಪಿ ಜಿಲ್ಲೆಯ ಹಟ್ಟಿ ಅಂಗಡಿ ಎನ್ನುವ ಹಳ್ಳಿಯಲ್ಲಿದೆ. ಕುಂದಾಪುರದಿಂದ 14. ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ 8ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಈ ದೇಗುಲದಲ್ಲಿ ಗಣೇಶನನ್ನು ಆರಾಧಿಸಲಾಗುತ್ತದೆ. ವರಾಹಿ ನದಿಯ ದಡದಲ್ಲಿ ನಿಂತಿರುವ ಈ ದೇಗುಲ ಸುಂದರವಾದ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿದೆ.
ಸಾಲಿಗ್ರಾಮ ಕಲ್ಲಿನಿಂದ ನಿರ್ಮಿಸಲಾದ ಈ ಗಣೇಶನ ಮೂರ್ತಿ 2.5 ಅಡಿ ಎತ್ತರವನ್ನು ಹೊಂದಿದೆ. ಭಕ್ತಾಧಿಗಳಿಗೆ ಪ್ರತಿದಿನವು ಅನ್ನದಾನ ಸಂತರ್ಪಣೆ ನಡೆಯುತ್ತದೆ. ಪ್ರತಿಯೊಬ್ಬರೂ ಇಲ್ಲಿ ಊಟಮಾಡಬಹುದು. ಸಂಕಷ್ಟಿ, ಗಣೇಶ ಚತುರ್ಥಿ ಸೇರಿದಂತೆ ಅನೇಕ ಹಬ್ಬ ಹರಿದಿನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಮಾಡಲಾಗುತ್ತದೆ. ಭಕ್ತರು ಸಹ ವಿಶೇಷ ಪೂಜೆಗಳನ್ನು ಹೇಳಿಕೊಂಡರೆ ಅದನ್ನು ಮಾಡಿಕೊಡಲಾಗುತ್ತದೆ.
ಈ ಪವಿತ್ರ ಕ್ಷೇತ್ರದ ಸುತ್ತಲೂ ಹಸಿರು ಸಿರಿ ಹಾಗೂ ನದಿಯ ಹರಿವು ಇರುವುದರಿಂದ ಯಾತ್ರಿಕನ ಮನಸ್ಸು ನಿರಾಳವಾಗುತ್ತದೆ. ಹತ್ತಿರದಲ್ಲಿಯೇ ಮರವಂತೆ ಕಡಲ ತೀರ, ಕೋಸಳ್ಳಿ ಜಲಪಾತ, ಸೋಮೇಶ್ವರ ಕಡಲ ತೀರ, ತ್ರಾಸಿ ಕಡಲ ತೀರದ ರೆಸಾರ್ಟ್, ವಾರಾಹಿ ವಿದ್ಯುತ್ ಉತ್ಪಾದನಾ ಕೇಂದ್ರ, ಆನೆಗುಡ್ಡ ವಿನಾಯಕ, ಕೊಲ್ಲೂರು ಮೂಕಾಂಬಿಕಾ ದೇಗುಲಗಳಿಗೆ ಹೋಗಬಹುದು.
ಬೆಂಗಳೂರಿನಿಂದ 416.8 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 8 ತಾಸುಗಳ ಕಾಲ ಪ್ರಯಾಣ ಮಾಡಬೇಕು. ನಗರ ಪ್ರದೇಶದಲ್ಲಿಯೇ ಗುಣಮಟ್ಟದ ವಸತಿ ಸೌಲಭ್ಯವನ್ನು ಪಡೆಯಬಹುದು. ಉತ್ತಮ ರಸ್ತೆ ಮಾರ್ಗವನ್ನು ಹೊಂದಿರುವ ಹಟ್ಟಿಅಂಗಡಿಗೆ ಬಟ್ಕಳದಿಂದ ಮುಂದೆ ಬಂದು ಬಲಭಾಗದ ತಿರುವನ್ನು ತೆಗೆದುಕೊಳ್ಳಬೇಕು. ನಂತರ 9 ಕಿ.ಮೀ. ದೂರದಲ್ಲಿ ಕುಂದಾಪುರ ಸಿಗುವುದು. ಅಲ್ಲಿಂದ 5 ಕಿ.ಮೀ. ದೂರ ಕ್ರಮಿಸಿದರೆ ಹಟ್ಟಿ ಅಂಗಡಿ ಪುಣ್ಯಕ್ಷೇತ್ರ ಇರುವುದು.