ಹಾಗೇ ಸುಮ್ಮನೆ ಲಾಂಗ್ ಡ್ರೈವ್ ಹೋಗಬೇಕು, ಪ್ರಶಾಂತವಾದ ಸ್ಥಳದಲ್ಲಿ ಸಂಗಾತಿಯೊಡನೆ ಕುಳಿತು ಮುಕ್ತವಾಗಿ ಮಾತನಾಡಬೇಕು ಎನ್ನುವ ಬಯಕೆ ಇದ್ದರೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೋಗಿ. ಸುತ್ತಲು ಹಸಿರು ಸಿರಿ, ಮುಗ್ಧತೆಯಿಂದಲೇ ಎಲ್ಲರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಾಗರ ಹಾಗೂ ತಂಪಾದ ತಂಗಾಳಿ ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತವೆ.
ನಿಜ, ಬೆಂಗಳೂರಿನಿಂದ 181.4 ಕಿ.ಮೀ ದೂರದಲ್ಲಿರುವ ಈ ತಾಣ ಚಿತ್ರದುರ್ಗ ಜಿಲ್ಲೆಯಲ್ಲಿದೆ. ವೇದಾವತಿ ನದಿಗೆ ಕಟ್ಟಲಾದ ಈ ಅಟಣೆಕಟ್ಟು ಬಹಳ ಪುರಾತನ ಕಾಲದ್ದು ಎನ್ನಲಾಗುತ್ತದೆ. ಇದನ್ನು ಮಾರಿ ಕಣಿವೆ ಎಂತಲೂ ಕರೆಯುತ್ತಾರೆ.
ಇದು 50 ಮೀ. ಎತ್ತರ, 405 ಮೀ. ಉದ್ದ ಇರುವ ಜಲಾಶಯ. ಇದರಲ್ಲಿ ಸುಮಾರು 135 ಅಡಿಯಷ್ಟು ನೀರನ್ನು ಸಂಗ್ರಹಿಸಲಾಗುತ್ತದೆ. ಚಿತ್ರದುರ್ಗ ಹಾಗೂ ಹಿರಿಯೂರು ಜನತೆಗೆ ಜೀವಧಾರೆಯಾಗಿದೆ.
PC: wikipedia.org
ನಮ್ಮವರೊಂದಿಗೆ ಒಂದಿಷ್ಟು ಸಮಯವನ್ನು ಮುಕ್ತವಾಗಿ ಕಳೆಯಲು ಇದು ಸೂಕ್ತ ತಾಣ. ಇಲ್ಲಿ ಬೆಳಗ್ಗೆ 8 ರಿಂದ ಸಂಜೆ 5.30ರ ವರೆಗೆ ಪ್ರವೇಶಕ್ಕ ಅವಕಾಶವಿದೆ. ಸ್ವಲ್ಪ ಹಣ್ಣು ಹಾಗೂ ತಿಂಡಿಗಳನ್ನು ಜೊತೆಗೆ ಕೊಂಡೊಯ್ದರೆ ಒಳ್ಳೆಯದು. ಜಲಾಶಯದ ಹತ್ತಿರ ಇರುವ ನಿಷೇಧಿತ ಪ್ರದೇಶಗಳಿಗೆ ಹೋಗುವಂತಿಲ್ಲ. ಜೊತೆಗೆ ಕೊಂಡೊಯ್ದ ತಿಂಡಿ ಇನ್ನಿತರ ವಸ್ತುಗಳ ಕಾಗದಗಳನ್ನು ಅಲ್ಲೇ ಬಿಡಬಾರದು.
PC: wikipedia.org
ಸಮಯವಿದ್ದರೆ ಅಥವಾ ಇನ್ನೂ ಬೇರೆಡೆಗೆ ಸುತ್ತಬೇಕು ಎನ್ನುವ ಮನಸ್ಸಾದರೆ ಹತ್ತಿರದಲ್ಲೇ ಚಿತ್ರದುರ್ಗದ ಕೋಟೆಯಿದೆ. ರಾಜ ಮಹರಾಜರ ಇತಿಹಾಸವನ್ನು ಒಳಗೊಂಡಿರುವ ಈ ಕೋಟೆ ಐತಿಹಾಸಿಕ ತಾಣದಲ್ಲೊಂದು. ಇಲ್ಲಿಯ ಕಲೆ ವೈಭವಗಳನ್ನು ಕಣ್ತುಂಬಿಕೊಂಡು, ಪ್ರವಾಸದ ಸವಿಯನ್ನು ಹೆಚ್ಚಿಸಿಕೊಳ್ಳಬಹುದು.