ಈ ಭಗವತಿ ದೇವಿ ಅಂತಿಂಥ ಸಾಮಾನ್ಯ ದೇವಿಯಲ್ಲ. ದಿನದ ಮೂರು ಹೊತ್ತಿನಲ್ಲಿ ಮೂರು ವಿವಿಧ ಶಕ್ತಿ ದೇವಿಯರ ಅವತಾರವಾಗಿ ಭಕ್ತರನ್ನು ಹರಸುವ ದೇವಿ. ಬೆಳಿಗ್ಗೆ ಸಮಯದಲ್ಲಿ ಶ್ವೇತ ವರ್ಣದ ಸೀರೆಯಿಂದ ಕಂಗೊಳಿಸುವ ಸರಸ್ವತಿ ದೇವಿಯಾಗಿ ಭಕ್ತರನ್ನು ಹರಸುತ್ತಾಳೆ.
ಕೇರಳದ ಏಳು ಆಶರ್ಯಕರ ದೇವಾಲಯಗಳು
ಅದೆ ಮಧ್ಯಾಹ್ನದ ಸಮಯ ಬಂತೆಂದರೆ ಸಾಕು, ಕಡುಗೆಂಪು ವರ್ಣದ ವೈಭವಯುತವಾದ ಸೀರೆ ಹಾಗೂ ಅದ್ಭುತ ಆಭರಣಗಳ ಅಲಂಕಾರದಿಂದ ಕಂಗೊಳಿಸುತ್ತ ಲಕ್ಷ್ಮಿಯಾಗಿ ಭಕ್ತರ ದಾರಿದ್ರ್ಯವನ್ನು ನಿವಾರಿಸುತ್ತಾಳೆ. ಇನ್ನೂ ಸಂಜೆಯ ಸಮಯದಲ್ಲಿ ನೀಳ ವರ್ಣದ ವಸ್ತ್ರ ಧರಿಸಿ ಸಾಕ್ಷಾತ್ ಶಕ್ತಿಯ ಅವತಾರವಾದ ದುರ್ಗಾದೇವಿಯಾಗಿ ಭಕ್ತರ ತೊಂದರೆಗಳನ್ನು ನಿವಾರಿಸುತ್ತಾಳೆ.
ಚಿತ್ರಕೃಪೆ: Roney Maxwell
ಅಲ್ಲದೆ ಈ ದೇವಿಯು ನೆಲೆಸಿರುವ ದೇವಾಲಯವು ವಿಶಿಷ್ಟವೆ ಆಗಿದೆ. ವಿಶ್ವಕರ್ಮ ಸ್ಥಪತಿಯರು ನೈಪುಣ್ಯತೆ ಹೊಂದಿರುವ ಕಟ್ಟಿಗೆಯಲ್ಲಿ ನಿರ್ಮಿಸಲಾಗುವ ಅದ್ಭುತ ವಾಸ್ತುಶೈಲಿಗೆ ಈ ಸುಂದರ ದೇವಾಲಯ ಸಾಕ್ಷಿಯಾಗುತ್ತದೆ. ಈ ರೀತಿಯ ಆಕರ್ಷಕ ವಾಸ್ತುಶೈಲಿ ಶಬರಿಮಲೆಯ ಅಯ್ಯಪ್ಪನ ದೇವಾಲಯದಲ್ಲಿ ಕಾಣಬಹುದು.
ಚಿತ್ರಕೃಪೆ: Ssriram mt
ಈ ದೇವಾಲಯದ ಇನ್ನೊಂದು ವಿಶೇಷವೆಂದರೆ, ಮಾನಸಿಕವಾಗಿ ಅಸ್ವಸ್ಥರಾಗಿರುವವರು ಹಾಗೂ ಭೂತ-ಪ್ರೇತಾತ್ಮಗಳ ಕಾಟದಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆಂದು ಹೇಳಲಾಗುತ್ತದೆ. ಇದಕ್ಕೆ ಅನ್ವಯಿಸುವಂತೆ ಒಂದು ದಂತಕಥೆಯು ಈ ದೇವಾಲಯದ ಕುರಿತು ಪ್ರಚಲಿತದಲ್ಲಿದೆ.
ಚಿತ್ರಕೃಪೆ: Ssriram mt
ಹಿಂದೆ ಈ ದೇವಾಲಯವಿರುವ ಪ್ರದೇಶ ದಟ್ಟಾರಣ್ಯವಾಗಿತ್ತು. ಯಕ್ಷಿಣಿ, ಢಾಕಿಣಿಗಳ ಉಪಸ್ಥಿತಿಯಿಂದ ಕೂಡಿತ್ತು. ಒಂದೊಮ್ಮೆ ಸ್ಥಳೀಯ ಬ್ರಾಹ್ಮಣ ಅರ್ಚಕನೊಬ್ಬ ಕೆಲಸದ ನಿಮಿತ್ತವಾಗಿ ರಾತ್ರಿಯ ಬೆಳದಿಂಗಳಿನ ಪ್ರಕಾಶದಲ್ಲಿ ಈ ಮಾರ್ಗವಾಗಿ ಸಾಗುತ್ತಿದ್ದ. ಮಧ್ಯದಲ್ಲಿ ಸುಂದರವಾದ ಸ್ತ್ರೀಯೊಬ್ಬಳು ಏಕಾಂಗಿಯಾಗಿ ನಿಂತಿರುವುದು ಕಾಣಿಸಿತು.
ಚಿತ್ರಕೃಪೆ: Ssriram mt
ಅವಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕೆಂದು ಕರೆದುಕೊಂಡು ಹೋದ. ರಸ್ತೆ ಮಧ್ಯದಲ್ಲಿ ಆತನಿಗೆ ಇನ್ನೊಬ್ಬ ಬ್ರಾಹ್ಮಣ ಅರ್ಚಕನಿಗೆ ಏನೊ ಕೊಡಬೇಕಾಗಿದ್ದುದರಿಂದ ವಳಿಗೆ ಕಾಯಲು ಹೇಳಿ ಇನ್ನೊಬ್ಬ ಪಂಡಿತನನ್ನು ಸಂಧಿಸಿ ವಿಷಯ ಹೇಳಿದ. ಇನ್ನೊಬ್ಬ ಬ್ರಾಹ್ಮಣ ಪಂಡಿತನು ಆತನಿಗೆ ಎಚ್ಚರಿಸುತ್ತ ಇವಳು ರಕ್ತ ಹೀರುವ ಯಕ್ಷಿಣಿಯಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಅವನ ಸುರಕ್ಷತೆಗೆಂದು ಕೆಲವು ಕಲ್ಲುಗಳನ್ನು ನೀಡಿ ಹೀಗೆ ಹೇಳಿದ: ನಿನಗೆ ಅವಳು ಸಮೀಪಿಸುತ್ತಿದ್ದಾಳೆಂದು ಅನಿಸಿದಾಗ ಒಂದೊಂದು ಕಲ್ಲನ್ನು ಹಿಂತಿರುಗದೆ ಅವಳತ್ತ ಎಸೆ. ಇದರಿಂದ ಅವಳು ನಿನ್ನನ್ನು ಸಮೀಪಿಸಲಾರಳು ಎಂದ.
ಚಿತ್ರಕೃಪೆ: Ssriram mt
ಈಗ ಇದೆ ಈ ಬ್ರಾಹ್ಮಣ ಇದೆ ರೀತಿ ಮಾಡುತ್ತ ಮುಂದೆ ಸಾಗಿದ. ಇನ್ನೇನೂ ಎಲ್ಲ ಕಲ್ಲುಗಳೂ ಮುಗಿದಾಗ ಆ ಸುಂದರ ಸ್ತ್ರೀ ತನ್ನ ನಿಜ ಸ್ವರೂಪ ಪಡೆದು ಆ ಬಡ ಬ್ರಾಹ್ಮಣ ಅರ್ಚಕನನ್ನು ಚಲಿಸಲಾರದಂತೆ ನಿಲ್ಲಿಸಿಬಿಟ್ಟಳು. ಹೌದು, ಆಕೆ ಒಬ್ಬ ಯಕ್ಷಿಣಿಯೆ ಆಗಿದ್ದಳು. ಇದರಿಂದ ಭಯಭೀತನಾದ ಬ್ರಾಹ್ಮಣ ದೇವಿಯನ್ನು ಅತಿ ಭಕ್ತಿಯಿಂದ ಪ್ರಾರ್ಥಿಸಿದಾಗ ಪಾರ್ವತಿಯು ಸಾಕ್ಷಾತ್ ದುರ್ಗೆಯ ಅವತಾರದಲ್ಲಿ ಪ್ರತ್ಯಕ್ಷಳಾಗಿ ಆ ಯಕ್ಷಿಣಿಯನ್ನು ಒಂದು ಕ್ಷಣದಲ್ಲಿ ಸಂಹರಿಸಿ ಆ ಬ್ರಾಹ್ಮಣನನ್ನು ಕಾಪಾಡಿದಳು ಹಾಗೂ ನಂತರ ಅಲ್ಲಿನ ಕೊಳವೊಂದರಲ್ಲಿ ಸ್ನಾನ ಮಾಡಿದಳು.
ಚಿತ್ರಕೃಪೆ: Ssriram mt
ಇ ರೀತಿಯಾಗಿ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇನ್ನೂ ರೋಚಕ ದಂತಕಥೆಗಳಿವೆ. ಅವುಗಳ ಕುರಿತು ನಿಮಗೆ ಇನ್ನಷ್ಟು ತಿಳಿಯುವ ಬಯಕ್ಕೆಯಿದ್ದಲ್ಲಿ ನೀವು ಖಂಡಿತವಾಗಿಯೂ ದೇವಾಲಯಕ್ಕೊಮ್ಮೆ ಭೇಟಿ ನೀಡಲೇಬೇಕು. ಪ್ರತಿ ದಿನ ಸಾಯಂಕಾಲ ದುರ್ಗೆಯನ್ನು ಆವಾಹಿಸಲು ಆಚರಿಸಲಾಗುವ ಗುರೂತಿ ಪೂಜೆ ಇಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಈ ಸಂದರ್ಭದಲ್ಲಿ ದೆವ್ವ-ಪಿಶಾಚಿಗ್ರಸ್ಥರಾದವರನ್ನು ಈ ದೇವಾಲಯದ ಸನ್ನಿಧಿಗೆ ಕರೆತಂದು ಅರ್ಚಕ ಅವರೊಡನೆ ಕನವರಿಸುತ್ತ ಒಂದು ಕೂದಲನ್ನು ತೆಗೆದು ಹತ್ತಿರದ ಗಿಡವೊಂದಕ್ಕೆ ಕಟ್ಟುತ್ತಾನೆ. ಇದರಿಂದ ಪೀಡಿತರಾದವರು ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆಂದು ಭಕ್ತರು ನಂಬುತ್ತಾರೆ.
ಇವೆ...ಕೇರಳದ ಅತಿ ಮುಖ್ಯ ಶಿವನ ದೇವಾಲಯಗಳು!
ಈ ದೇವಾಲಯ ಕೇರಳದಲ್ಲೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ದೇವಾಲಯಗಳ ಪೈಕಿ ಒಂದಾಗಿದೆ. ಇದನ್ನು ಚೊಟ್ಟಾನಿಕ್ಕಾರಾ ಭಗವತಿ ದೇವಾಲಯ ಎಂದು ಕರೆಯುತ್ತಾರೆ. ಈ ದೇವಿಯನ್ನು ರಾಜರಾಜೇಶ್ವರಿ, ಸರಸ್ವತಿ, ದುರ್ಗೆ, ಕಾಳಿ ಎಂಬೆಲ್ಲ ಹೆಸರುಗಳಿಂದ ಆರಾಧಿಸಲಾಗುತ್ತದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಚೊಟ್ಟಾನಿಕ್ಕಾರಾ ಎಂಬ ಪಟ್ಟಣದಲ್ಲಿ ಈ ದೇವಾಲಯವಿದೆ. ಇನ್ನೂ ಚೊಟ್ಟಾನಿಕ್ಕಾರಾ ಎರ್ನಾಕುಲಂ ನಗರ ಕೇಂದ್ರದಿಂದ ಕೇವಲ 15 ಕಿ.ಮೀ ಗಳಷ್ಟು ದೂರವಿದ್ದು ತಲುಪಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
ಎರ್ನಕುಲಂಗಿರುವ ರೈಲುಗಳು