ನಮಗೆಲ್ಲಾ ಚಿಕ್ಕಮಗಳೂರು ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಎಕರೆಗಟ್ಟಲೆ ಕಾಫಿ ತೋಟಗಳು, ಹಚ್ಚ ಹಸಿರಿನ ಕಣಿವೆಗಳು, ಅಡಿಕೆ ತೋಟಗಳು, ಗಿರಿ ತೊರೆಗಳು ಅಲ್ಲವೇ. ವರ್ಷಪೂರ್ತಿ ಪ್ರವಾಸಿಗರ ಆಕರ್ಷಕ ತಾಣವಾಗಿರುವ ಚಿಕ್ಕಮಗಳೂರಿನಲ್ಲಿ ವೀಕ್ಷಿಸಲು ಎಂತೆಂಥ ಸ್ಥಳಗಳಿವೆ ಎಂದರೆ ನೋಡಲು ಎರಡು ಕಣ್ಣು ಸಾಲದು. ಅಂದಹಾಗೆ ಚಿಕ್ಕಮಗಳೂರಿನಲ್ಲಿ ಒಂದು ಸ್ಥಳವಿದೆ. ಆದರೆ ಹೆಚ್ಚಿನ ಜನರಿಗೆ ಅದರ ಪರಿಚಯವಿಲ್ಲ. ಇಲ್ಲಿಂದ ಚಿಕ್ಕಮಗಳೂರಿಗೆ ಕೇವಲ ಎರಡು ಗಂಟೆಗಳ ಪ್ರಯಾಣವಷ್ಟೇ.
ಹೌದು, ಈ ಸ್ಥಳದ ಹೆಸರು ಘಾಟಿ ಕಲ್ಲು. ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ. ತೊರೆಗಳು, ಜಲಪಾತಗಳು, ಬೆಟ್ಟಗಳು, ದಟ್ಟ ಕಾಡುಗಳು ಎಲ್ಲಕ್ಕಿಂತ ಹೆಚ್ಚಾಗಿ ಅದರ ಪ್ರಶಾಂತವಾದ ವಾತವರಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಕ್ಯಾಂಪಿಂಗ್, ನಕ್ಷತ್ರ ವೀಕ್ಷಣೆ, ಟ್ರೆಕ್ಕಿಂಗ್ ಮತ್ತು ನದಿ ಬದಿ ನಡಿಗೆಗೆ ಹೀಗೆ ಅನೇಕ ಪ್ರವಾಸಿ ಚಟುವಟಿಕೆಗಳಿಗೆ ಈ ತಾಣ ಜನಪ್ರಿಯತೆ ಗಳಿಸುತ್ತಿದ್ದು, ಇಲ್ಲಿ ಒಳ್ಳೊಳ್ಳೆಯ ಹೋಂಸ್ಟೇಗಳು ಮತ್ತು ರೆಸಾರ್ಟ್ಗಳೂ ಇವೆ.

ಪ್ರಕೃತಿ ಪ್ರಿಯರ ಹಾಟ್ ಸ್ಪಾಟ್
ಘಾಟಿಕಲ್ಲು ಕರ್ನಾಟಕ ರಾಜ್ಯದ, ಚಿಕ್ಕಮಗಳೂರು ಜಿಲ್ಲೆಯ ದುರ್ಗದಹಳ್ಳಿ ಗ್ರಾಮದಲ್ಲಿ ನೆಲೆಗೊಂಡಿರುವ ಒಂದು ಅದ್ಭುತವಾದ ವಾಂಟೇಜ್ ಪಾಯಿಂಟ್ ಆಗಿದೆ. ಬಲ್ಲಾಳರಾಯನದುರ್ಗ ಕೋಟೆಯ ಸಮೀಪದಲ್ಲಿರುವ ಇದು ಪ್ರಕೃತಿ ಪ್ರಿಯರಿಗೆ ಮತ್ತು ಟ್ರೆಕ್ಕಿಂಗ್ ಉತ್ಸಾಹಿಗಳಿಗೆ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ನೆಲೆಸಿರುವ ಘಾಟಿಕಲ್ಲು 600 ಅಡಿಯಿರುವ 'ಒಂದು ಬಂಡೆಯ ಪರ್ವತ'ವಾಗಿದ್ದು, ಕೆಳಗಿನ ಕಣಿವೆಯ ನೋಟ ಅತ್ಯಂತ ಅದ್ಭುತವಾಗಿದೆ. ಈ 'ಒಂದು ಬಂಡೆಯ ಪರ್ವತ'ದ ಬಗ್ಗೆ ಅನೇಕ ಪುರಾಣಗಳೂ ಇವೆ. ಇಲ್ಲಿಂದ ನಾವು ಸುತ್ತಮುತ್ತಲಿನ ಶಿಖರಗಳು, ಹುಲ್ಲುಗಾವಲುಗಳು, ಕಣಿವೆಗಳು, ದಟ್ಟ ಕಾಡು, ಬಲ್ಲರಾಯನ ದುರ್ಗ ಮತ್ತು ರಾಣಿ ಜರಿ ವ್ಯೂಪಾಯಿಂಟ್ಗಳ ವಿಹಂಗಮ ನೋಟವನ್ನು ನೋಡಬಹುದು. ಈ ಸ್ಥಳವು ನಗರ ಜೀವನದ ಜಂಜಾಟ, ಗದ್ದಲಗಳಿಂದ ದೂರವಿದೆ.

ಎಚ್ಚರಿಕೆಯಿಂದ ಹೆಜ್ಜೆಯಿಡಿ...
ಇಲ್ಲಿಗೆ ಬರುವಾಗ ಸಂದರ್ಶಕರನ್ನು ಎಚ್ಚರಿಸಲು ಯಾವುದೇ ಫಲಕಗಳು ಅಥವಾ ಸೈನ್ ಬೋರ್ಡ್ ಇಲ್ಲವಾದ್ದರಿಂದ ಎಚ್ಚರಿಕೆಯಿಂದ ಹೆಜ್ಜೆಯಿಡಲು ಸಲಹೆ ನೀಡಲಾಗುತ್ತದೆ. ದುರ್ಗದಹಳ್ಳಿ ಗ್ರಾಮದಿಂದ ದಟ್ಟವಾದ ಕಾಡಿನ ಮೂಲಕ ಚಾರಣ ಮಾಡಿದರೆ ಮಾತ್ರ ಘಾಟಿ ಕಲ್ಲು ವ್ಯೂಪಾಯಿಂಟ್ ತಲುಪಬಹುದು. ಮೂಡಿಗೆರೆಯಿಂದ ಸುಮಾರು 41 ಕಿಮೀ ದೂರದಲ್ಲಿರುವ ದುರ್ಗದಹಳ್ಳಿಯ ಕಾಲಭೈರವೇಶ್ವರ ದೇವಸ್ಥಾನದಿಂದ ಟ್ರೆಕ್ಕಿಂಗ್ ಪ್ರಾರಂಭವಾಗುತ್ತದೆ.
ಪ್ರಾರಂಭದ ಸ್ಥಳದಿಂದ 4 ಕಿಮೀ ಟ್ರೆಕ್ಕಿಂಗ್ ಮಾರ್ಗವು ಮಧ್ಯಮ ಕಡಿದಾದ ಮಣ್ಣಿನ ರಸ್ತೆಯಲ್ಲಿದೆ. ಜೀಪ್ಗಳು ಮತ್ತು ಇತರ ಎಸ್ಯುವಿಗಳು 1 ಕಿ.ಮೀ. ದೂರ ಅಂದರೆ ಪ್ರಾರಂಭದ ಹಂತದವರೆಗೆ ಹೋಗಬಹುದು. ಇಲ್ಲದಿದ್ದರೆ ನಿಮ್ಮ ವಾಹನವನ್ನು ದೇವಸ್ಥಾನದ ಬಳಿ ನಿಲ್ಲಿಸಿ. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭಿಸಿ. ಇದು ಮಧ್ಯಮ ಚಾರಣವಾಗಿದೆ. ದೇವಾಲಯದಿಂದ ವಾಂಟೇಜ್ ಪಾಯಿಂಟ್ ತಲುಪಲು ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಟ್ರೆಕ್ಕಿಂಗ್ ಮಾಡಿ, ಸೂರ್ಯಾಸ್ತ ನೋಡಿ
ಘಾಟಿ ಕಲ್ಲುಗೆ ಬರುವಾಗ ನಿಮಗೆ ಒರಟಾದ, ದುರ್ಗಮ ಹಾದಿ ಸಿಗುತ್ತದೆ. ಖಂಡಿತವಾಗಿ ಇಲ್ಲಿ ಟ್ರೆಕ್ಕಿಂಗ್ ಮಾಡುವ ಪ್ರತಿಯೊಬ್ಬರಿಗೂ ಒಂದೊಳ್ಳೆಯ ವ್ಯಾಯಾಮವಂತೂ ಆಗುತ್ತದೆ. ಆದರೆ ನೀವು ಅಂತಿಮವಾಗಿ ನೀವು ಈ ಸ್ಥಳವನ್ನು ತಲುಪಿದಾಗ ಎಲ್ಲಾ ಸುಸ್ತು ಆಯಾಸಗಳು ಮಂಜಿನಂತೆ ಕಣ್ಮರೆಯಾಗುತ್ತವೆ. ಹಸಿರು ನೋಟ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಇಲ್ಲಿ ಕ್ಯಾಂಪಿಂಗ್ ಮಾಡಲು ಹಲವು ಸ್ಥಳಗಳಿದ್ದರೂ, ಕ್ಯಾಂಪಿಂಗ್ ಮಾಡಲು ಪ್ರಯಾಣಿಕರು ಬಂಡೆಜೆ ಅರ್ಬಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಧರ್ಮಸ್ಥಳದ ಸಮೀಪವಿರುವ ಉಜಿರೆ ಪಟ್ಟಣದಿಂದ 8 ಕಿಮೀ ದೂರದಲ್ಲಿ ಪೆಟ್ರೋಲ್ ಬಂಕ್ ಇದೆ.

ಭೇಟಿ ನೀಡುವ ಸಮಯ
ಈ ಸ್ಥಳಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವೆಂದರೆ ನವೆಂಬರ್ ಮತ್ತು ಮೇ ನಡುವಿನ ಸಮಯ. ಸಮೀಪದಲ್ಲಿ ಯಾವುದೇ ಅಂಗಡಿಗಳಿಲ್ಲದ ಕಾರಣ ಸಾಕಷ್ಟು ಆಹಾರ ಮತ್ತು ಪಾನೀಯಗಳನ್ನು ಕೊಂಡೊಯ್ಯಲು ಸಲಹೆ ನೀಡಲಾಗುತ್ತದೆ. ಬೆಳಗ್ಗೆ 6 ರಿಂದ ಸಂಜೆ 6 ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಪ್ರವೇಶ ಉಚಿತ. ಗರಿಷ್ಠ ತಾಪಮಾನವು ಸುಮಾರು 29 - 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ವ್ಯೂಪಾಯಿಂಟ್ಗಳಿಗೆ ಹೋಗುವ ಮಾರ್ಗಗಳು ಜೌಗು ಮತ್ತು ಜಾರು ಆಗುವುದರಿಂದ ಮಳೆಗಾಲದಲ್ಲಿ ಹೋಗುವುದನ್ನು ತಪ್ಪಿಸಿ.

ಹೋಗುವುದು ಹೇಗೆ?
ದುರ್ಗದಹಳ್ಳಿ ಗ್ರಾಮದಿಂದ ಘಾಟಿ ಕಲ್ಲು ತಲುಪುವುದು ಹೇಗೆಂದು ಈಗಾಗಲೇ ಹೇಳಿದ್ದೀವಿ. ಆದ್ದರಿಂದ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಬರುವವರು ಘಾಟಿ ಕಲ್ಲು ತಲುಪಲು ಚಿಕ್ಕಮಗಳೂರಿಗೆ ಅಥವಾ ದುರ್ಗದಹಳ್ಳಿಗೆ ಬನ್ನಿ. ಚಿಕ್ಕಮಗಳೂರಿನಿಂದ ದುರ್ಗದಹಳ್ಳಿ 75 ಕಿ.ಮೀ. ದೂರವಿದೆ. ಚಿಕ್ಕಮಗಳೂರಿಗೆ ಅತ್ಯುತ್ತಮ ರಸ್ತೆ ಸಂಪರ್ಕವಿದೆ. ಬೆಂಗಳೂರಿಂದ ಇಲ್ಲಿಗೆ ಬಸ್ ಮತ್ತು ಕ್ಯಾಬ್ ಸೇವೆಗಳು ಲಭ್ಯವಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಹತ್ತಿರದ ರೈಲು ನಿಲ್ದಾಣ ಕಡೂರು, ಚಿಕ್ಕಮಗಳೂರಿನಿಂದ 40 ಕಿಮೀ ದೂರದಲ್ಲಿದೆ. ಹಾಗಾಗಿ ಪ್ರವಾಸಿಗರು ಈ ಮೂಲಕವೂ ಇಲ್ಲಿಗೆ ಪ್ರಯಾಣ ಬೆಳಸಬಹುದು. ಚಿಕ್ಕಮಗಳೂರು ಗುಡ್ಡಗಾಡು ಪ್ರದೇಶವಾದ್ದರಿಂದ ಪಟ್ಟಣದ ಸುತ್ತಮುತ್ತಲು ಪ್ರವಾಸಕ್ಕಾಗಿ ಓಡಾಡಲು ಆಟೋಗಳನ್ನು ಬಳಸಿ. ಜೀಪ್ ಅಥವಾ ಬಸ್ಸುಗಳು ಆಗಾಗ್ಗೆ ಲಭ್ಯವಿದೆ.


Click it and Unblock the Notifications

















