ನೋಡಲು ಪಿರಮಿಡ್ ಆಕಾರದಲ್ಲಿರುವ ಗಳಗನಾಥೇಶ್ವರ ದೇವಾಲಯವು ತನ್ನ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಗಳಗನಾಥೇಶ್ವರನ ವಿಶೇಷ ಏನು ಅನ್ನೋದು ನಿಮಗೆ ಗೊತ್ತಾ? ಇಲ್ಲಿನ ಲಿಂಗ ಯಾವುದನ್ನು ಸ್ಪರ್ಶಿಸಿದರೂ ಅದು ಚಿನ್ನವಾಗುತ್ತಿತ್ತಂತೆ.

ಸ್ಪರ್ಶ ಲಿಂಗ
Dineshkannambadi
ದೇವಾಲಯದಲ್ಲಿರುವ ಶಿವಲಿಂಗವನ್ನು ಸ್ಪರ್ಶ ಲಿಂಗವೆಂದು ಕರೆಯುತ್ತಾರೆ. ಇದೊಂದು ಅಸಾಮಾನ್ಯ ಶಿವಲಿಂಗವಾಗಿತ್ತು ಹಾಗೂ ಯಾವುದೇ ಲೋಹವನ್ನು ಇದಕ್ಕೆ ಸ್ಪರ್ಶಿಸಿದರೆ ಅದು ಬಂಗಾರವಾಗುತ್ತಿತ್ತು.

ಗಳಗನಾಥೇಶ್ವರ ಹೆಸರು ಬರಲು ಕಾರಣವೇನು?
PC: Manjunath Doddamani Gajendragad
ಈ ಲಿಂಗದಿಂದ ಆಪತ್ತು ಎದುರಾಗಬಹುದೆಂದು ಮನಗಂಡ ಗರ್ಗ ಋಷಿಗಳು ಇದನ್ನು ಎಂದಿಗೂ ಮುಟ್ಟಲಾಗದಂತೆ ಗಳಗದಿಂದ ಮುಚ್ಚಿದರು. ಹಾಗಾಗಿ ಇದಕ್ಕೆ ಗಳಗನಾಥೇಶ್ವರ ಎಂಬ ಹೆಸರು ಬಂದಿತೆನ್ನಲಾಗಿದೆ.

ರಂಧ್ರ ಕೊರೆದರು
ಆದರೆ ಅಭಿಷೇಕಕ್ಕೆ ತೊಂದರೆಯಾಗದಂತೆ ಮೇಲೊಂದು ರಂಧ್ರವನ್ನು ಮಾತ್ರ ಕೊರೆದರಂತೆ. ಈ ರೀತಿಯಾಗಿ ಗಳಗನಾಥೇಶ್ವರ ತನ್ನದೆ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದಾನೆ. ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ .

ಸುಬ್ರಹ್ಮಣ್ಯ, ಗಣಪತಿಯೂ ಇದ್ದಾರೆ
ಶಿವನ ಸನ್ನಿಧಿಯ ಜೊತೆಗೆ ಇಲ್ಲಿ ಸುಬ್ರಹ್ಮಣ್ಯ ಹಾಗೂ ಗಣಪತಿಯರ ಸನ್ನಿಧಿಗಳನ್ನೂ ಸಹ ಕಾಣಬಹುದಾಗಿದೆ. ಇವುಗಳ ಜೊತೆಗೆ ಹಲವು ದೇವ ದೇವತೆಯರ, ನದಿ ದೇವಿಯರ, ಪಂಚ ಲಿಂಗಗಳ ಕೆತ್ತನೆಗಳು ನಯನಮನೋಹರವಾಗಿದ್ದು ಅಂದಿನ ನಿಪುಣ ಕೆತ್ತನೆಕಾರರನ್ನು ಪ್ರತಿ ಸಂದರ್ಭದಲ್ಲೂ ಶ್ಲಾಘಿಸಲೇಬೇಕು.

ಪಿರಮಿಡ್ ಶೈಲಿಯಲ್ಲಿದೆ
ತುಂಗಭದ್ರಾ ನದಿಯ ಬಲ ದಂಡೆಯಲ್ಲಿ ಪಸರಿಸಿರುವ ನಿಸರ್ಗ ಸೌಂದರ್ಯದ ಒಡಲಿನಲ್ಲಿ ಶಾಂತವಾಗಿ ನೆಲೆಸಿರುವ ಗಳಗನಾಥೇಶ್ವರ ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ಮಂಟಪವನ್ನು ಹೊಂದಿರುವ ದೇವಾಲಯವಾಗಿದ್ದು ಇದರ ಒಟ್ಟಾರೆಯ ಗೋಪುರಾಕಾರವು ವಿಚಿತ್ರವಾದಂತಹ ಪಿರಮಿಡ್ ಶೈಲಿಯಲ್ಲಿದ್ದು ನೋಡಿದ ತಕ್ಷಣ ಆಕರ್ಷಿಸುತ್ತದೆ.

ತಲುಪುದು ಹೇಗೆ?
ಪ್ರವಾಸಿಗರನ್ನು ಆಕರ್ಷಿಸುವ ಗಳಗನಾಥವು ಹಾವೇರಿ ನಗರ ಕೇಂದ್ರದಿಂದ 45 ಕಿ.ಮೀ ಗಳಷ್ಟು ದೂರದಲ್ಲಿದೆ. ರಾಣೆಬೆನ್ನೂರಿನಿಂದ ಕೇವಲ 14 ಕಿ.ಮೀ ಗಳಷ್ಟು ದೂರದಲ್ಲಿರುವ ಗಳಗನಾಥವನ್ನು ಗುತ್ತಲದ ಮೂಲಕ ಸುಲಭವಾಗಿ ತಲುಪಬಹುದು.


Click it and Unblock the Notifications

















