ಮಾನವನ ವಾಸವಿರುವ ಈ ಭೂಮಿಯು ಅತ್ಯಾಕರ್ಷಕ ಪ್ರಕೃತಿಯನ್ನು ಹೊಂದಿದೆ. ಅದರಂತೆ ಪ್ರಕೃತಿಯು ಅದೆಷ್ಟೊ ಅಗಾಧವಾದ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಅಫ್ರಿಕಾದಂತಹ ಕಾಡುಗಳಲ್ಲಿ ಇನ್ನೆಲ್ಲೂ ಕಾಣಸಿಗದಂತಹ ದೈತ್ಯಮರಗಳಿರಬಹುದು ಅಥವಾ ಹರಿಯುವ ನೀರು ಸಾವಿರ ಸಾವಿರ ಅಡಿಗಳಷ್ಟು ಎತ್ತರದಿಂದ ಧುಮುಕಿದಾಗ ಉಂಟಾಗುವ ಜಲಪಾತವಿರಬಹುದು, ಇವೆಲ್ಲವೂ ಪ್ರಾಕೃತಿಕ ವಿಸ್ಮಯಗಳೆ ಸರಿ.
ಇನ್ನೂ ಮಾನವನ ದೃಷ್ಟಿಗೆ ಬೀಳದ ಅದೆಷ್ಟೊ ಅಚ್ಚರಿಗಳು ಭೂಗರ್ಭದಲ್ಲೊ, ಕಾಡಿನ ಯಾವುದೊ ಪ್ರದೇಶದಲ್ಲೊ, ಸಮುದ್ರದಾಳದಲ್ಲೊ ಹುದುಗಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಈ ರೀತಿಯ ಕೆಲವು ಪ್ರಕೃತಿ ಸಹಜ ವಿಸ್ಮಯಗಳನ್ನು ನೋಡಿದಾಗ ಮನುಷ್ಯನಿಗೆ ರೋಮಾಂಚನ ಉಂಟಾಗುವುದು ಖಂಡಿತ. ಅಂತೆಯೆ ಈ ರೀತಿಯ ನೈಸರ್ಗಿಕ ಅಚ್ಚರಿಗಳು ಆಕರ್ಷಕ ಪ್ರವಾಸಿ ತಾಣಗಳಾಗಿಯೂ ಗಮನ ಸೆಳೆಯುತ್ತವೆ.
ಜಗತ್ತಿನೆಲ್ಲೆಡೆ ಕಂಡುಬರುವಂತೆ ಭಾರತದಲ್ಲೂ ಸಹ ಕೆಲವು ಗುರುತರವಾದ ನಯನಮನೋಹರವಾದ ಪ್ರಾಕೃತಿಕ ಆಕರ್ಷಣೆಗಳಿವೆ. ಅಂತಹ ಕೆಲವು ವಿಸ್ಮಯಗೊಳಿಸುವ ನಿಸರ್ಗ ನಿರ್ಮಿತ ಆಕರ್ಷಣೆಗಳ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅವಕಾಶ ಸಿಕ್ಕರೆ ಯಾವುದಾದರೂ ಆಕರ್ಷಣೆಗೆ ಭೇಟಿ ನೀಡಿ.
ಲೇಹ್
ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರಾಂತ್ಯದ ಆಕರ್ಷಕ ಪ್ರವಾಸಿ ತಾಣವಾದ ಲೇಹ್ ಬಳಿ ಚುಂಬಕ ಬೆಟ್ಟ ಅಥವಾ ಮ್ಯಾಗ್ನೆಟಿಕ್ ಹಿಲ್ ಕಂಡುಬರುತ್ತದೆ. ಇದೊಂದು ಪ್ರವಾಸಿ ಆಕರ್ಷಣೆಯಾಗಿಯೂ ಹೆಸರುವಾಸಿಯಾಗಿದೆ. ಗುಡ್ಡದ ಮೇಲೆ ಏರಿಕೆಯಲ್ಲಿ ಸಾಗುವ ರಸ್ತೆಯಿದ್ದು ಅಲ್ಲಿ ಕಾರುಗಳನ್ನು ಚಾಲಕನಿಲ್ಲದೆ ಬಿಟ್ಟರೆ ಅದು ತನ್ನಿಂತಾನೆ ಗುರುತ್ವಾಕರ್ಷಣೆಗೆ ಒಳಪಟ್ಟು ಮೇಲ್ಮುಖವಾಗಿ ಚಲಿಸುತ್ತದೆ. ಇದು ನೋಡಲು ಬಹಳವೆ ರೋಮಾಂಚಕಾರಿಯಾಗಿರುತ್ತದೆ.
ಚಿತ್ರಕೃಪೆ: Fulvio Spada
ಆಪ್ಟಿಕಲ್ ಇಲ್ಯೂಷನ್
ಹಿಂದಿನ ಸ್ಲೈಡಿನಲ್ಲಿ ವಿವರಿಸಲಾದಂತೆ ನಿಮಗೆ ಅನಿಸುವುದೇನೊ ನಿಜ. ಆದರೆ ವಿಜ್ಞಾನಿಗಳ ಪ್ರಕಾರ, ಇದೊಂದು ದೃಷ್ಟಿ ಭ್ರಮಣೆಯ (ಆಪ್ಟಿಕಲ್ ಇಲ್ಯೂಷನ್)ಸಿದ್ಧಾಂತವಾಗಿದೆ. ಅದರ ಪ್ರಕಾರ, ಕೆಲವು ಸ್ಥಳಗಳಲ್ಲಿ ವಾತಾವರಣದ ಹಲವಾರು ಸಂದರ್ಭಗಳು, ಸನ್ನಿವೇಷಗಳು ನಿರ್ದಿಷ್ಟವಾಗಿ ರೂಪಗೊಂಡಾಗ ಈ ರೀತಿಯ ಭ್ರಮಣೆ ಉಂಟಾಗುತ್ತದೆ. ಅಂದರೆ ವಾಸ್ತವಿಕವಾಗಿ ಇಳಿಮುಖವಾಗಿರುವ ರಸ್ತೆಯು ಮೇಲ್ಮುಖದಲ್ಲಿರುವಂತೆ ಕಣ್ಣಿಗೆ ಕಾಣುತ್ತದೆ. ಹಾಗಾಗಿಯೆ ವಾಹನಗಳು ತನ್ನಿಂತಾನೆ ಚಲಿಸುತ್ತಿವೆ ಎಂಬ ಆಭಾಸ ಮೂಡುತ್ತದೆ. ಆದರೆ ಏನೆ ಇರಲಿ ಇದೊಂದು ಪ್ರಾಕೃತಿಕ ವಿಸ್ಮಯವೆ ಸರಿ ಅಲ್ಲವೆ?
ಚಿತ್ರಕೃಪೆ: Rohit Ganda
ಜಮ್ಮು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಪವಿತ್ರ ತೀರ್ಥ ಯಾತ್ರಾ ಕ್ಷೇತ್ರವಾದ ಅಮರನಾಥ ಯಾತ್ರೆಯು ಮೂಲತಃ ಅಮರನಾಥ ಗುಹೆಗೆ ಭೇಟಿ ನೀಡಿ ನಿರ್ದಿಷ್ಟ ಸಮಯದಲ್ಲಿ ಹಿಮದಿಂದ ರೂಪಗೊಳ್ಳುವ ಶಿವಲಿಂಗ ದರ್ಶನ ಪಡೆಯುವುದಾಗಿದೆ. ಈ ಅಮರನಾಥ ಗುಹೆಯೆ ಒಂದು ಪ್ರಾಕೃತಿಕ ವಿಸ್ಮಯದ ಹಾಗೆ ಗೋಚರಿಸುತ್ತದೆ. ಅಲ್ಲದೆ ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಗುಹೆಯ ಬಂಡೆಗಳು ರುಪಗೊಂಡಿದ್ದು ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ನೀರು ಕರಗಿ ಒಂದೆಡೆ ನಿರಂತರವಾಗಿ ಬೀಳುತ್ತ ಶಿವಲಿಂಗದ ಆಕಾರ ಪಡೆದುಕೊಳ್ಳುವುದು ಒಂದು ನೈಸರ್ಗಿಕ ಅಚ್ಚರಿಯೆ ಹೌದು.
ಚಿತ್ರಕೃಪೆ: Gktambe
ಮಹಾಬಲಿಪುರಂ
ತಮಿಳುನಾಡಿನ ಚೆನ್ನೈಗೆ ಹತ್ತಿರವಿರುವ ಸಮುದ್ರ ತಟದ ಮಾಮಲ್ಲಪುರಂ ಅಥವಾ ಮಹಾಬಲಿಪುರಂ ತನ್ನಲ್ಲಿರುವ ಕಡಲ ತೀರ ತಟದ ದೇವಾಲಯಕ್ಕಾಗಿ ಸಾಕಷ್ಟು ಪ್ರಸಿದ್ಧಿಪಡೆದಿರುವ ತಾಣ. ಆದರೆ ಇಲ್ಲಿ ಇನ್ನೊಂದು ವಿಶೇಷವಿದೆ. ಅದೆ ಸಮತೋಲನದ ಬಂಡೆ. ದೊಡ್ಡದಾದ ಹೆಚ್ಚು ಕಮ್ಮಿ ಗೋಲಾಕಾರದ ಬಂಡೆಯೊಂದು ಇಳಿಜಾರಿನ ಕಲ್ಲು ಹಾಸಿಗೆಯ ಮೇಲೆ ಉರುಳದೆ ಚಿಕ್ಕದಾದ ಸ್ಥಳದಲ್ಲಿ ಹಾಗೆ ತನ್ನ ಸಮತೋಲನವನ್ನು ಕಾಯ್ದುಕೊಂಡು ನಿಂತಿರುವುದನ್ನು ನೋಡಿದಾಗ ಅಚ್ಚರಿಯಾಗದೆ ಇರಲಾರದು.
ಚಿತ್ರಕೃಪೆ: Dey.sandip
ಜಬಲ್ಪುರ
ಮಧ್ಯಪ್ರದೇಶ ರಾಜ್ಯದ ಪ್ರಮುಖ ನಗರಗಳಲ್ಲೊಂದಾದ ಜಬಲ್ಪುರದಲ್ಲೂ ಸಹ ಇದೆ ರೀತಿಯ ಬಂಡೆಗಲ್ಲೊಂದನ್ನು ಕಾಣಬಹುದು. ವಿಶೇಷ ಎಂದರೆ ಜಬಲ್ಪುರವು ತನ್ನಲ್ಲಿರುವ ಜ್ವಾಲಾಮುಖಿಯಿಂದುಂಟಾದ ಕಲ್ಲಿನ ಪದರುಗಳ ರಚನೆಗಳಿಗೆ ಹೆಸರುವಾಸಿಯಾಗಿದೆ. ಹಿಂದೊಮ್ಮೆ ಈ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 6.5 ರಷ್ಟು ಪ್ರಮಾಣದಲ್ಲಿದ್ದ ಭೂಕಂಪನ ಉಂಟಾಗಿದ್ದರೂ ಈ ಬಂಡೆ ಸ್ವಲ್ಪ ಕದಲದೆ ಇದ್ದದ್ದು ಬಲು ಅಚ್ಚರಿ ಮೂಡಿಸಿದೆ. ಇದರ ಸಮತೋಲನವನ್ನು ಭಂಗ ಪಡಿಸುವುದು ಅಸಾಧ್ಯ ಎಂದು ಹೇಳಲಾಗಿದೆ.
ಚಿತ್ರಕೃಪೆ: wikivoyage
ನೋಹ್ಕಾಲಿಖಾಯ್
ಮೇಘಾಲಯ ರಾಜ್ಯದ ಪೂರ್ವ ಖಾಸಿ ಜಿಲ್ಲೆಯಲ್ಲಿರುವ ನೋಹ್ಕಾಲಿಖಾಯ್ ಜಲಪಾತ ಒಂದೆ ನೆಗೆತಕ್ಕೆ ಧುಮುಕುವ ಅತಿ ಎತ್ತರದ ಜಲಪಾತವಾಗಿ ಗಮನ ಸೆಳೆಯುವುದಲ್ಲದೆ ಅದ್ಭುತ ನೈಸರ್ಗಿಕ ಆಕರ್ಷಣೆಯಾಗಿಯೂ ಸಹ ಗಮನ ಸೆಳೆಯುತ್ತದೆ. ಇದರ ಒಟ್ಟು ಎತ್ತರ 1,120 ಅಡಿಗಳು.
ಚಿತ್ರಕೃಪೆ: Sohel78bd
ಚಿತ್ರಕೂಟ
ಎತ್ತರದ ನಂತರ ಈಗ ಅತಿ ದೊಡ್ಡದಾದ ಅಂದರೆ ಹೆಚ್ಚು ಅಗಲವುಳ್ಳ ಜಲಪಾತ. ಇದೂ ಸಹ ನೈಸರ್ಗಿಕವಾಗಿ ರುಪಗೊಂಡಿರುವುದರಿಂದ ಹಾಗೂ ಇತರೆ ಜಲಪಾತಗಳಿಗೆ ಹೋಲಿಸಿದಾಗ ವಿಶೇಷವಾಗಿ ಕಂಡುಬರುವುದರಿಂದ ಪ್ರಾಕೃತಿಕ ವಿಸ್ಮಯವೆ ಆಗುತ್ತದೆ. ಈ ಅಗಾಧ ಜಲಪಾತವು ಛತ್ತೀಸಗಡ್ ರಾಜ್ಯದ ಬಸ್ತರ್ ನಗರದ ಬಳಿ ಸ್ಥಿತವಿದ್ದು ಚಿತ್ರಕೂಟ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಚಿತ್ರಕೃಪೆ: Iamg
ಆಂಧ್ರಪ್ರದೇಶ
ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಕೊಲಿಮಿಗುಂಡ್ಲಾ ತಾಲೂಕಿನ ಬೇಲಂ ಎಂಬ ಗ್ರಾಮದಲ್ಲಿ ವೈಜ್ಞಾನಿಕ ವಿಶೇಷತೆಯ ರಾಸಾಯನಿಕ ಕ್ರಿಯೆಯಿಂದುಂಟಾದ ವಿಶಿಷ್ಟ ಶಿಲಾ ಪದರಗಳಿಂದ ನಿರ್ಮಿತ ಪ್ರಾಕೃತಿಕವಾಗಿ ವಿಸ್ಮಯಕರ ರಚನೆ ಎನ್ನಬಹುದಾದ ಬೇಲಂ ಗುಹೆಗಳನ್ನು ಕಾಣಬಹುದಾಗಿದೆ. ಇದೊಂದು ಗಮನಾರ್ಹ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Rajesh Kumar Karumanchi
ಉಡುಪಿ
ಕರ್ನಾಟಕದ ಉಡುಪಿಯ ಮಲ್ಪೆ ತೀರದಿಂದ ಸಮುದ್ರದಲ್ಲಿ ಸ್ವಲ್ಪ ದೂರದಲ್ಲಿರುವ ಸಂತ ಮೇರಿ ದ್ವಿಪದ ಬಳಿ ಕಾಣಬಹುದಾದ ವಿಶಿಷ್ಟ ಕೊಲುಮ್ನಾರ್ ಬಸಾಲ್ಟಿಕ್ ರಾಕ್ ರಚನೆಗಳು ನೈಸರ್ಗಿಕ ಅಚ್ಚರಿ ಎಂದರೂ ತಪ್ಪಾಗಲಾರದು. ಇವು ವಿಶಿಷ್ಟವಾಗಿ ರುಪಗೊಂಡಿದ್ದು ಭಾರತದ ಮತ್ತ್ಯಾವ ಕಡಲ ತೀರದಲ್ಲೂ ಇಂತಹ ರಚನೆಗಳು ಕಂಡುಬರುವುದು ಕಷ್ಟ. ಈ ದ್ವೀಪವನ್ನು ಕೊಕೋನಟ್ ಐಲ್ಯಾಂಡ್ ಎಂತಲೂ ಸಹ ಕರೆಯಲಾಗುತ್ತದೆ ಹಾಗೂ ಮಲ್ಪೆ ತೀರದಿಂದ ದೋಣಿಯ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
ಚಿತ್ರಕೃಪೆ: Bailbeedu
ಲಕ್ಷದ್ವೀಪ
ಲಕ್ಕಾಡೀವ್ ಎಂತಲೂ ಕರೆಯಲ್ಪಡುವ ಲಕ್ಷದ್ವೀಪವು ಹಲವಾರು ನಡುಗಡ್ಡೆಗಳ ಆಕರ್ಷಕ ಸಮೂಹವಾಗಿದ್ದು ಅರಬ್ಬಿ ಸಮುದ್ರದಲ್ಲಿ ಸ್ಥಿತವಿದೆ. ಕೇರಳದ ಕೊಚ್ಚಿ ನಗರದಿಂದ ಹತ್ತಿರವಿರುವ ಲಕ್ಷದ್ವೀಪಕ್ಕೆ ತಲುಪಲು ವಿಮಾನ ಹಾಗೂ ಹಡಗುಗಳ್ ಲಭ್ಯವಿದೆ. ಇದು ಭಾರತ ಸರ್ಕಾರದಲ್ಲಿರುವುದರಿಂದ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅನುಮತಿಯ ಮೆರೆಗೆ ಮಾತ್ರ ಇತರೆ ಪ್ರವಾಸಿಗರು ಪ್ರವೇಶಿಸಬಹುದು. ವಿಶೇಷ ಎಂದರೆ ಭಾರತದಲ್ಲಿ ಏಕೈಕ ಅತ್ಯಾಕರ್ಷಕ ಪ್ರಕೃತಿ ಸಹಜ ನಿರ್ಮಿತ ಹವಳದ ದಿಬ್ಬಗಳಿಗಾಗಿ (ಕೋರಲ್ ರೀಫ್) ಇದು ಹೆಸರುವಾಸಿಯಾಗಿದೆ.
ಚಿತ್ರಕೃಪೆ: wikivoyage
ಹಿಮಾಚಲ ಪ್ರದೇಶ
ಸಾಮಾನ್ಯವಾಗಿ ಹಿಮಾಚಲ ಪ್ರದೇಶದ ಕಾಡುಗಳಲ್ಲಿ ಕಂಡುಬರುವ ಈ ಅದ್ಭುತ ಮರಗಳು ಸಾಕಷ್ಟು ಆಕರ್ಷಕವಾಗಿವೆ ಹಾಗೂ ದೇಶದ ಉಳಿದ ಭಾಗಗಳಲ್ಲಿ ಈ ಮರಗಳು ಕಂಡುಬರುವುದಿಲ್ಲ. ಇವುಗಳ ವಿಶೆಷತೆ ಎಂದರೆ ಇವು 50 ರಿಂದ 60 ಅಡಿಗಳಷ್ಟು ಎತ್ತರ ಬೆಳೆದರೆ ಸುಮಾರು 20 ರಿಂದ 30 ಅಡಿಗಳಷ್ಟು ಅಗಲವಾಗಿರುತ್ತವೆ.
ಚಿತ್ರಕೃಪೆ: Paul Evans
ಜತಿಂಗಾ
ಅಸ್ಸಾಂ ರಾಜ್ಯದ ಉತ್ತರ ಕಚಾರ್ ಹಿಲ್ಸ್ ಜಿಲ್ಲೆಯ ಜತಿಂಗಾ ಎಮ್ಬ ಗ್ರಾಮವು ಅಗಸ್ಟ್ ನಿಂದ ನವಂಬರ್ ಮಧ್ಯದ ಸಮಯದಲ್ಲಿ ಹಲವು ಪಕ್ಷಿ ವೀಕ್ಷಕರು, ಪಕ್ಷಿ ತಜ್ಞರಿಂದ ತುಂಬಿಕೊಳ್ಳುತ್ತದೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ಪಕ್ಷಿಗಳ ಸಾಮೂಹಿಕ ಆತ್ಮಹತ್ಯೆಯನ್ನು ಕಾಣಬಹುದು. ಇದು ಇನ್ನೂವರೆಗೂ ರಹಸ್ಯವಾಗಿ ಉಳಿದಿದೆಯಾದರೂ ಹಲವು ತಜ್ಞರ ಪ್ರಕಾರ, ಇಲ್ಲಿನ ಮಂಜು ಕವಿದ ವಾತಾವರಣ ಹಾಗೂ ಪ್ರಕೃತಿಯ ಕೆಲವು ವಿಶೇಷ ಹಾಗೂ ನಿರ್ದಿಷ್ಟ ಸನ್ನಿವೇಶಗಳಿಂದ ಪಕ್ಷಿಗಳು ತಮ್ಮ ದೃಷ್ಟಿಪಥದಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕಾಶವಿರುವ ಕಡೆಗೆ ಅವು ಆಕರ್ಷಿತವಗಿ ಹಾರಾಡುತ್ತ ಗಿಡ ಮ್ರಗಳ ರೆಂಬೆ ಕೊಂಬೆಗಳಿಗೆ ಜೋರಾಗಿ ಅಪ್ಪಳಿಸಿ ಕೆಳಗಿ ಬಿದ್ದು ಸಾಯುತ್ತವಂತೆ!
ಚಿತ್ರಕೃಪೆ: nchills.gov.in
ಚೆಂಬ್ರಾ ಶಿಖರಶೃಂಗ
ಕೇರಳದ ವಯನಾಡ್ ಜಿಲ್ಲೆಯ ಅತಿ ಎತ್ತರದ ಶಿಖರ ಶೃಂಗವಾದ ಚೆಂಬ್ರಾ ಪೀಕ್ ನಲ್ಲಿ ಈ ಅದ್ಭುತ ಹಾಗೂ ಪ್ರೀತಿಯ ಸಂಕೇತವಾದ ಹೃದಯದಾಕಾರದ ಕೆರೆಯನ್ನು ಕಾಣಬಹುದು. ಕಲ್ಪೆಟ್ಟಾದಿಂದ ಎಂಟು ಕಿ.ಮೀ ದೂರವಿರುವ ಮೆಪ್ಪಾಡಿ ಎಂಬಲ್ಲಿ ಚೆಂಬ್ರಾ ಶಿಖರವಿದ್ದು ಚಾರಣಕ್ಕೆ ಯೋಗವಾದ ಸ್ಥಳವಾಗಿದೆ.
ಚಿತ್ರಕೃಪೆ: Tanuja R Y
ನಾಗಾಲ್ಯಾಂಡ್
ನಾಗಾಲ್ಯಾಂಡ್ ಹಾಗೂ ಮಣಿಪುರದ ಮಧ್ಯದಲ್ಲಿರುವ ಈ ಅದ್ಭುತ ಕಣಿವೆ ನೋಡಲು ಬಹಳ ಆಕರ್ಷಕವಾದ ಕಣಿವೆಯಾಗಿದೆ. ಈ ಪ್ರದೇಶವು ಸಮತಟ್ಟಾದ ಹುಲ್ಲುಗಾವಲಿನಿಂದ ಎಲ್ಲೆಡೆ ಕೂಡಿದ್ದು ಒಂದೆ ರೀತಿಯ ಎತ್ತರದ ಹುಲ್ಲುಗಳು ಎಲ್ಲೆಡೆ ಹರಡಿರುವುದು ಆಕರ್ಷಕವಾಗಿದೆ. ಹೀಗಿದ್ದಾಗ್ಯೂ ವರ್ಷದ ನಿರ್ದಿಷ್ಟ ಸಮಯದಲ್ಲಿ ಇಲ್ಲಿ ವೈವಿಧ್ಯಮಯ ಪುಷ್ಪಗಳು ಅರಳಿ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಚಿತ್ರಕೃಪೆ: Mongyamba
ಲೋಕ್ತಕ್
ಮಣಿಪುರದ ಕೀಯ್ಬುಲ್ ಲಮ್ಜಾವೋ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಅದ್ಭುತ ಕೆರೆ ನೋಡಲು ಆಕರ್ಷಕ ಹಾಗೂ ಅಷ್ಟೆ ವಿಸ್ಮಯಕಾರಿಯಾಗಿದೆ. ಕೆರೆಯ ಅಲ್ಲಲ್ಲಿ ಹುಲ್ಲುಗಾವಲಿನ ಗಟ್ಟಿಯಾದ ಹಾಸುಗಳು ತೇಲುತ್ತಿದ್ದು ತೇಲುತ್ತಿರುವುದು ಕಂಡುಬರುವುದರಿಂದ ಇದಕ್ಕೆ ತೇಲುವ ಕೆರೆ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Sudiptorana
ಚಂಡಿಪುರ
ಒಡಿಶಾದಲ್ಲಿರುವ ಚಂಡಿಪುರ ಕಡಲ ತೀರವು ಒಂದು ಪ್ರಕೃತಿ ವಿಸ್ಮಯವೆ ಹೌದು. ಏಕೆಂದರೆ ಈ ಕಡಲ ತೀರ ಯಾವ ರೀತಿ ನಿರ್ಮಿತವಾಗಿದೆ ಎಂದರೆ ಅಲೆಗಳ ರಭಸವಿದ್ದ ಸಂದರ್ಭದಲ್ಲಿ ಅಂದರೆ ನಿರ್ದಿಷ್ಟ ಸಮಯದಲ್ಲಿ ತೀರವು ಸಂಪೂರ್ಣವಾಗಿ ಮುಳುಗಿರುತ್ತದೆ. ಅಲೆಗಳ ರಭಸ ಕಡಿಮೆ ಇದ್ದ ಸಂದರ್ಭದಲ್ಲಿ ನೀರು ಮೊಣಕಾಲಿಗೂ ತಾಕದಂತೆ ಕಡಿಮೆ ಆಳ ಹೊಂದಿದ್ದು ಕೆಲ ದೂರ ನಡೆಯುವಂತಿರುತ್ತದೆ. ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುವಂತಿದೆ ಈ ಕಡಲ ತೀರ.
ಚಿತ್ರಕೃಪೆ: Alankar41
ಸಿಕ್ಕಿಂ
ಜಗತ್ತಿನಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ಕೆರೆಗಳ ಪೈಕಿ ಸಿಕ್ಕಿಂ ರಾಜ್ಯದಲ್ಲಿರುವ ಗುರುದೊಂಗ್ಮಾರ್ ಕೆರೆಯೂ ಸಹ ಒಂದು.
ಚಿತ್ರಕೃಪೆ: Vickeylepcha
ಉಲ್ಕಾ ಕೆರೆ
ಸಾವಿರಾರು ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ ಉಲ್ಕೆಯಿಂದುಂಟಾದ ಬೃಹತ್ ಗುಂಡಿಯೊಂದರಲ್ಲಿ ಕ್ಷಾರಯುಕ್ತ ಅಥವಾ ಲವಣಯುಕ್ತ ನೀರಿನಿಂದ ತುಂಬಿರುವ ದೊಡ್ಡದಾದ ಕೆರೆ ಇಂದು ಒಂದು ನೈಸರ್ಗಿಕ ಅಚ್ಚರಿಯಾಗಿ ಕುತೂಹಲ ಕೆರಳಿಸುತ್ತದೆ. ಅದೆ ಲೋಣಾರ್ ಕ್ರೇಟರ್ ಅಥವಾ ಲೋಣಾರ್ ಉಲ್ಕಾಗುಂಡಿಯ ಕೆರೆ. ಇದರ 200 ಕಿ.ಮೀ ತ್ರಿಜ್ಯಗ್ ಹೊಂದಿದ್ದರೆ, 100 ಮೀ. ಆಳ ಹೊಂದಿದೆ. ಮೂರನೇಯ ದೊಡ್ಡ ಉಲ್ಕಾ ಕೆರೆ ಇದಾಗಿದೆ. ಮಹಾರಾಷ್ಟ್ರದ ಬುಲ್ಡಾನಾ ಎಂಬಲ್ಲಿ ಈ ಕೆರೆ ಸ್ಥಿತವಿದೆ.
ಚಿತ್ರಕೃಪೆ: Amitabhkhare
ಮಜುಲಿ ದ್ವೀಪ
ಇದೊಂದು ಅಮೋಘ ಕೆರೆ. ಇದರ ಹೆಗ್ಗಳಿಕೆ, ಇದು ಜಗತ್ತಿನ ನದಿಯಲ್ಲಿ ಸ್ಥಿತವಿರುವ ಅತಿ ದೊಡ್ಡ ದ್ವೀಪ. ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಲ್ಲಿ ಈ ದ್ವೀಪವಿದೆ.
ಚಿತ್ರಕೃಪೆ: Kalai Sukanta
ರಣ್ ಆಫ್ ಕಚ್
ಗುಜರಾತ್ ರಾಜ್ಯದಲ್ಲಿರುವ ರಣ್ ಆಫ್ ಕಚ್, ಒಂದು ಗಮನಸೆಳೆವ ಪ್ರವಾಸಿ ತಾನವಾಗಿಯೂ ಹೆಸರುವಾಸಿಯಾಗಿದೆ. ಈ ನೈಸರ್ಗಿಕ ಅಚ್ಚರಿಯು ಲವಣದ ಮರಭೂಮಿಯನ್ನು ಹೊಂದಿದ್ದು ಇದು ಜಗತ್ತಿನಲ್ಲೆ ಅತಿ ದೊಡ್ಡ ಆ ರೀತಿಯ ಮರಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಗೌರವಾರ್ಥವಾಗಿ ಪ್ರತಿ ವರ್ಷ ರಣ್ ಉತ್ಸವವನ್ನೂ ಸಹ ಆಚರಿಸಲಾಗುತ್ತದೆ.
ಚಿತ್ರಕೃಪೆ: Superfast1111