Search
  • Follow NativePlanet
Share
» »ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣ ಈ ‘ದೇವರಮನೆ’

ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ಮೋಡಿಮಾಡುವ ಟ್ರೆಕ್ಕಿಂಗ್ ಸ್ಥಳಗಳ ಪೈಕಿ ದೇವರಮನೆಯೂ ಒಂದಾಗಿದೆ. ಹಾಗಾಗಿ ಚಿಕ್ಕಮಗಳೂರಿಗೆ ಪ್ರವಾಸ ಕೈಗೊಂಡರೆ ದೇವರಮನೆಯು ನಿಮ್ಮ ಪಟ್ಟಿಯಲ್ಲಿರಲಿ. ಈ ಸ್ಥಳದ ಬಗ್ಗೆ ಬಹುತೇಕರಿಗೆ ಗೊತ್ತಿರದ ಕಾರಣ ಇದು ಕಡಿಮೆ ಜನಪ್ರಿಯತೆಯನ್ನು ಹೊಂದಿರುವ ಕರ್ನಾಟಕದ ಸುಂದರವಾದ ತಾಣಗಳಲ್ಲಿ ಒಂದಾಗಿದೆ.

ಮಧ್ಯಮ ಟ್ರೆಕ್ಕಿಂಗ್ ಮತ್ತು ಫೋಟೋಗ್ರಫಿಗೆ ಸೂಕ್ತವಾದ ಸ್ಥಳವಾಗಿರುವ ದೇವರಮನೆಯ ವಿಶೇಷವೆಂದರೆ ಬೇಸಿಗೆಯಲ್ಲೂ ಈ ಪ್ರದೇಶ ಹಸಿರಾಗಿಯೇ ಇರುತ್ತದೆ. ಪ್ರವಾಸಿಗರು, ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಿಡುವಿನ ವೇಳೆಯನ್ನು ಕಳೆಯಲು ದೇವರಮನೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಮತ್ತೇಕೆ ತಡ ದೇವರಮನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿ...

ಬೆಟ್ಟದ ಮೇಲಿದೆ ಸುಂದರವಾದ ದೇವಾಲಯ

ಬೆಟ್ಟದ ಮೇಲಿದೆ ಸುಂದರವಾದ ದೇವಾಲಯ

ದೇವರಮನೆ ಗ್ರಾಮಕ್ಕೆತೆರಳಿದರೆ ನೀವು ಸಂಪೂರ್ಣವಾಗಿ ಹೊಸ ಅನುಭವವನ್ನು ಪಡೆಯುತ್ತೀರಿ. ರುದ್ರರಮಣೀಯ ನೋಟ, ಹಿತವಾದ ವಾತಾವರಣ, ದಟ್ಟವಾದ ಪಶ್ಚಿಮ ಘಟ್ಟಗಳಲ್ಲಿ ವಿಶಿಷ್ಟ ರೀತಿಯ ಸಸ್ಯ ಮತ್ತು ಪ್ರಾಣಿಗಳ ಸಮೂಹವನ್ನು ನೋಡಬಹುದಾದ್ದರಿಂದ ಇದು ವಿಸ್ಮಯಕಾರಿ ಸ್ಥಳವಾಗಿ ಮಾರ್ಪಟ್ಟಿದೆ. ದೇವರಮನೆ ಗ್ರಾಮದಲ್ಲಿ ಕಾಲಭೈರವೇಶ್ವರ ದೇವಸ್ಥಾನವಿದ್ದು, ಇದು ಸಾಕಷ್ಟು ಹೆಸರುವಾಸಿಯಾಗಿದೆ. ಬೆಟ್ಟದ ಮೇಲೆ ನೆಲೆಗೊಂಡಿರುವ ಈ ಸಣ್ಣ ಸುಂದರವಾದ ದೇವಾಲಯವು ಸಾಕಷ್ಟು ಹಳೆಯ ದೇವಾಲಯದಂತೆ ಕಾಣುತ್ತದೆ. ಜೊತೆಗೆ ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ.

ದೇವರಮನೆ ವ್ಯೂಪಾಯಿಂಟ್

ದೇವರಮನೆ ವ್ಯೂಪಾಯಿಂಟ್

'ದೇವರಮನೆ' ಪದವು ಸಾಮಾನ್ಯವಾಗಿ 'ದೇವರ ನಿವಾಸ' ಎಂದು ಅರ್ಥೈಸಲ್ಪಡುತ್ತದೆ. ಆದರೆ ಈ ಪ್ರದೇಶಕ್ಕೆ ದೇವರ ಮನೆ ಎಂಬ ಹೆಸರು ಹೇಗೆ ಬಂತು ಎಂದು ಖಚಿತವಾಗಿ ತಿಳಿಯದಿದ್ದರೂ, ಈ ಪ್ರದೇಶ ಪ್ರಶಾಂತವಾಗಿ, ಸ್ವಚ್ಛವಾಗಿ, ಭವ್ಯವಾಗಿರುವುದರಿಂದ ದೇವರ ಮನೆ ಎಂದು ಕರೆಯಬಹುದು. ಅಂದಹಾಗೆ ದೇವರ ಮನೆಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಒಂದು ಕೊಳ ಮತ್ತು ಹಿಂಭಾಗ ಬೆಟ್ಟವಿದೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ನಮಗೆ ಸುತ್ತಲೂ ಮೋಡಿಮಾಡುವ ಬೆಟ್ಟಗಳ ಸಾಲು ನೋಡಬಹುದು. ಇಲ್ಲಿನ ರಸ್ತೆಯು ಕೂಡ ಉತ್ತಮ ಸ್ಥಿತಿಯಲ್ಲಿದೆ. ದೇವಾಲಯದಿಂದ ಸುಮಾರು 200 ಮೀ ದೂರದಲ್ಲಿ, ದೇವರಮನೆ ವ್ಯೂಪಾಯಿಂಟ್ ಎಂಬ ವ್ಯೂಪಾಯಿಂಟ್ ಇದೆ. ಇಲ್ಲಿಂದ ಸುತ್ತಮುತ್ತಲಿನ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಸುಂದರವಾಗಿರುವ ಪ್ರಕೃತಿ, ಜಿನುಗುವ ತೊರೆಗಳು ಮತ್ತು ಹೊಳೆಯುವ ಸರೋವರಗಳನ್ನು ಕಣ್ತುಂಬಿಕೊಳ್ಳಬಹುದು.

ಚಾರಣಿಗರಿಗೆ ಸೂಕ್ತವಾದ ಸ್ಥಳ

ಚಾರಣಿಗರಿಗೆ ಸೂಕ್ತವಾದ ಸ್ಥಳ

ಈ ಮೊದಲೇ ಹೇಳಿದ ಹಾಗೆ ದೇವರಮನೆ ಚಾರಣಿಗರಿಗೆ ಸೂಕ್ತವಾದ ಸ್ಥಳವಾಗಿದೆ. ಸಾಹಸ ಪ್ರಿಯರಿಗಂತೂ ಹೇಳಿಮಾಡಿಸಿದ ತಾಣವಿದು. ಇದು ಆರಂಭಿಕರಿಗೆ ಮತ್ತು ಹಾರ್ಡ್‌ಕೋರ್ ಚಾರಣಿಗರಿಗೆ ಸೂಕ್ತವಾದ ಟ್ರೆಕ್ಕಿಂಗ್ ತಾಣವಾಗಿದೆ. ಇಲ್ಲಿ ನಿಮಗೆ ಏರಲು ಹಲವಾರು ಬೆಟ್ಟಗಳಿವೆ. ಹೌದು, ಜನಪ್ರಿಯ ಗುಡ್ಡ ಬುಲ್ಸ್ ಹಂಪ್ ಬ್ಯಾಕ್ ಅಥವಾ ಶಿಶಿಲಾ ಗುಡ್ಡ ಎಂದೂ ಕರೆಯಲ್ಪಡುವ ಎತ್ತಿನಭುಜ ಗುಡ್ಡವನ್ನೂ ನೀವು ನೋಡಬಹುದು. ವಾತವರಣವು ಬಹಳ ಪ್ರಶಾಂತವಾಗಿರುವುದರಿಂದ 3000 ಅಡಿ ಎತ್ತರದಿಂದ ಕೆಳಗೆ ಹರಿಯುವ ನದಿಯ ಘರ್ಜನೆ ಕೇಳಿಸುತ್ತದೆ. ಪ್ರಸಿದ್ಧ ಕಪಿಲಾ ಮೀನುಗಾರಿಕಾ ಶಿಬಿರವು ದೇವರಮನೆಯಿಂದ ಸುಮಾರು 15 ಕಿಮೀ ಪ್ಲಸ್ ದೂರದಲ್ಲಿದೆ. ಗುತ್ತಿ ಮತ್ತು ಮುಳರಹಳ್ಳಿ ದೇವರಮನೆಯಲ್ಲಿರುವ ಎರಡು ಅದ್ಭುತ ಸ್ಥಳಗಳಾಗಿದ್ದು, ನಿಮ್ಮ ಗಮನವನ್ನು ಸೆಳೆಯಬಹುದು.

ಬನ್ನಿರಿ ರಿಫ್ರೆಶ್ ಆಗಲು

ಬನ್ನಿರಿ ರಿಫ್ರೆಶ್ ಆಗಲು

ಖಂಡಿತವಾಗಿಯೂ ದೇವರಮನೆ ನಿಮ್ಮ ದೈನಂದಿನ ಜೀವನದ ಒತ್ತಡದ ವೇಳಾಪಟ್ಟಿಯಿಂದ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಮತ್ತು ಪುನರ್ಯೌವನಗೊಳಿಸುವಂತೆ ಮಾಡುತ್ತದೆ. ನದಿ, ಹಸಿರು, ಶಾಂತಿ, ಸೂರ್ಯಾಸ್ತ ಮತ್ತು ಹವಾಮಾನ ಎಲ್ಲವೂ ನಿಮಗಿಲ್ಲಿ ಸ್ವಾಗತ ಮಾಡುತ್ತವೆ. ಆದ್ದರಿಂದ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ಅದ್ಭುತ ಸ್ಥಳಕ್ಕೆ ನಿಮ್ಮ ಮುಂದಿನ ರಜಾದಿನವನ್ನು ಯಾವುದೇ ಮುಲಾಜಿಲ್ಲದೆ ಯೋಜಿಸಿ. ದೇವರಮನೆ ಗ್ರಾಮಕ್ಕೆ ತೆರಳಲು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸಮಯ ನಿಗದಿಪಡಿಸಬಹುದು. ಪ್ರವೇಶ ಸಹ ಉಚಿತವಾಗಿದೆ.

ಇಲ್ಲಿ ಏನೆಲ್ಲಾ ನೋಡಬಹುದು?

ಇಲ್ಲಿ ಏನೆಲ್ಲಾ ನೋಡಬಹುದು?

*ದೇವರಮನೆ ಕಾಲಭೈರವೇಶ್ವರ ದೇವಸ್ಥಾನ

* ಕಾಲಭೈರವೇಶ್ವರ ದೇವಾಲಯದ ಕೊಳ

* ತಾಜಾ ಗಾಳಿ, ಶಾಂತವಾದ ವಾತಾವರಣ ಮತ್ತು ಮಂಜು

* ಮುದಕೊಡುವ ಪರ್ವತ ವೀಕ್ಷಣೆ

* ಛಾಯಾಗ್ರಹಣ

* ಬೆಟ್ಟಗಳ ಕಡೆಗೆ ಸಣ್ಣ ನಡಿಗೆ

* ಕೊನೆಯದಾಗಿ ಹಳ್ಳಿಯ ಅನುಭವ

ದೇವರಮನೆಗೆ ತೆರಳುವುದು ಹೇಗೆ?

ದೇವರಮನೆಗೆ ತೆರಳುವುದು ಹೇಗೆ?

ಗುತ್ತಿಯಿಂದ 5 ಕಿಮೀ, ಮೂಡಿಗೆರೆಯಿಂದ 22 ಕಿಮೀ, ಚಿಕ್ಕಮಗಳೂರಿನಿಂದ 52 ಕಿಮೀ ಮತ್ತು ಸಕಲೇಶಪುರದಿಂದ 57 ಕಿಮೀ ದೂರದಲ್ಲಿದೆ ದೇವರಮನೆ ಗ್ರಾಮ. ಪ್ರತಿದಿನ, ಬೆಂಗಳೂರು ಮತ್ತು ಚಿಕ್ಕಮಗಳೂರು, ಬೆಂಗಳೂರು ಮತ್ತು ಧರ್ಮಸ್ಥಳ ನಡುವೆ ಬಸ್ಸುಗಳು ಸಂಚರಿಸುತ್ತವೆ. ಹಾಗಾಗಿ ನೀವು ಈ ಬಸ್ಸು ಹತ್ತಿ ಈ ಗ್ರಾಮ ತಲುಪಬಹುದು. ಧರ್ಮಸ್ಥಳದಿಂದ ಗುತ್ತಿ ಗ್ರಾಮಕ್ಕೆ ಸ್ಥಳೀಯ ಬಸ್ಸುಗಳು ಲಭ್ಯವಿದೆ. ಪರ್ಯಾಯವಾಗಿ, ಬೆಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ರಾತ್ರಿಯ ಬಸ್ ಹತ್ತಬಹುದು. ಇಲ್ಲಿಗೆ ತಲುಪಿದ ನಂತರ ಗುತ್ತಿ ತಲುಪಲು ಸ್ಥಳೀಯ ಸಾರಿಗೆಯನ್ನು ಹಿಡಿಯಬಹುದು. ಗುತ್ತಿ ಗ್ರಾಮದಿಂದ ಚಾರಣ ಅಥವಾ ಆಟೋ ಬಾಡಿಗೆ ಮೂಲಕ ದೇವರಮನೆ ಗ್ರಾಮವನ್ನು ತಲುಪಬಹುದು.

ಭೇಟಿ ನೀಡಲು ಸೂಕ್ತ ಸಮಯ

ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್ ತಾಣವಾದ ಚಿಕ್ಕಮಗಳೂರಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಆದರೆ ಚಿಕ್ಕಮಗಳೂರಿನ ನಿಜವಾದ ಸೌಂದರ್ಯವನ್ನು ಅನುಭವಿಸಲು ಅಕ್ಟೋಬರ್ ನಿಂದ ಜೂನ್ ಭೇಟಿ ನೀಡಲು ಉತ್ತಮ ಸಮಯ. ಟ್ರೆಕ್ಕಿಂಗ್, ಹೈಕಿಂಗ್ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಉತ್ತಮ ಸಮಯವಾಗಿದೆ. ಚಿಕ್ಕಮಗಳೂರಿಗೆ ಭೇಟಿ ನೀಡಲು ಬೇಸಿಗೆ ಉತ್ತಮ ಸಮಯವಾಗಿದ್ದರೂ, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಂದ ತುಂಬಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X