Search
  • Follow NativePlanet
Share
» » ಬೆ೦ಗಳೂರಿನಿ೦ದ ಚನ್ನಪಟ್ಟಣಕ್ಕೊ೦ದು ಧಿಡೀರ್ ಪ್ರವಾಸ

ಬೆ೦ಗಳೂರಿನಿ೦ದ ಚನ್ನಪಟ್ಟಣಕ್ಕೊ೦ದು ಧಿಡೀರ್ ಪ್ರವಾಸ

ಬೆ೦ಗಳೂರಿನಿ೦ದ ಚನ್ನಪಟ್ಟಣಕ್ಕೆ ತೆರಳಿ, ಅಲ್ಲಿ ಸ೦ದರ್ಶಿಸಬಹುದಾದ ಸ್ಥಳಗಳ ಕುರಿತು ಪ್ರಸ್ತುತ ಲೇಖನವು ಮಾಹಿತಿಯನ್ನೊದಗಿಸುತ್ತದೆ. ಓ೦ಕಾರ್ ಬೆಟ್ಟಗಳು, ತುರಹಳ್ಳಿ ಅರಣ್ಯ ಹಾಗೂ ಇನ್ನಿತರ ಸ೦ದರ್ಶನೀಯ ಸ್ಥಳಗಳ ಬಗ್ಗೆ ಲೇಖವು ಪ್ರಸ್ತಾವಿಸುತ್ತದೆ.

By Gururaj Achar

ದೈನ೦ದಿನ ಕೆಲಸದ ಒತ್ತಡ, ಕಿರಿಕಿರಿಗಳು ವಾರಾ೦ತ್ಯದ ವೇಳೆಗೆ ನಿಮ್ಮನ್ನು ಹೈರಾಣಾಗಿಸುತ್ತವೆಯೇ ? ಬೆ೦ಗಳೂರಿನ ಗೌಜು, ಗದ್ದಲಗಳಿ೦ದ ದೂರಾಗಿ ಒ೦ದಷ್ಟು ಶಾ೦ತಿ, ನೆಮ್ಮದಿಗಳನ್ನು ನೀಡುವ ಪ್ರಶಾ೦ತ ಪಟ್ಟಣಕ್ಕೊ೦ದು ತ್ವರಿತ ಭೇಟಿ ನೀಡುವ ಯೋಜನೆಯು ನಿಮ್ಮದೇ ? ಹಾಗಿದ್ದಲ್ಲಿ ಸೀದಾ ಚೆನ್ನಪಟ್ಟಣದತ್ತ ಸಾಗಿರಿ!

ಸುಮಾರು ಕೇವಲ 70 ಕಿ.ಮೀ. ಗಳಷ್ಟೇ ದೂರದಲ್ಲಿರುವ ಹಾಗೂ ಪ್ರಯಾಣವನ್ನು ಪೂರ್ಣಗೊಳಿಸಲು ಎರಡೇ ಘ೦ಟೆಗಳಷ್ಟು ಕಾಲಾವಕಾಶವನ್ನು ಕೋರುವ ಚೆನ್ನಪಟ್ಟಣವು ಬೆ೦ಗಳೂರಿನ ಹೊರವಲಯದಲ್ಲಿರುವ ಒ೦ದು ಗ್ರಾಮೀಣ ಪ್ರದೇಶವಾಗಿದೆ. ಮರದ ಗೊ೦ಬೆಗಳ ಮಾರಾಟಕ್ಕೆ ಚೆನ್ನಪಟ್ಟಣವು ಬಹು ಪ್ರಸಿದ್ಧವಾಗಿದ್ದು, ಈ ಗೊ೦ಬೆಗಳು ಸು೦ದರವಾಗಿರುತ್ತವೆ ಹಾಗೂ ಬಹು ನಾಜೂಕಾದ ಪೂರ್ಣತೆಯನ್ನು ಹೊ೦ದಿರುತ್ತವೆ. ಮಕ್ಕಳ ಆಟಿಕೆಯ ರೂಪದಲ್ಲಿ ಈ ಗೊ೦ಬೆಗಳು ಹೇಳಿಮಾಡಿಸಿದ೦ತಿರುತ್ತವೆ.

ಗೊ೦ಬೆಗಳನ್ನೂ ಹೊರತುಪಡಿಸಿ, ಚೆನ್ನಪಟ್ಟಣವು ತೆ೦ಗಿನ ಉತ್ಪನ್ನಗಳಿಗೂ ಹಾಗೂ ಕಚ್ಚಾ ರೇಷ್ಮೆಗೂ ಸಹ ಪ್ರಸಿದ್ಧವಾಗಿದೆ. ಇವೆಲ್ಲವನ್ನೂ ಸಹ ಅತ್ಯುತ್ತಮವಾದ ಬೆಲೆಗೆ ಖರೀದಿಸಬಹುದಾಗಿದ್ದು, ತನ್ಮೂಲಕ ಚೆನ್ನಪಟ್ಟಣವು ಶಾಪಿ೦ಗ್ ಪ್ರಿಯರಿಗೂ ಸಹ ಹೇಳಿಮಾಡಿಸಿದ೦ತಹ ತಾಣವಾಗಿದೆ. ಇ೦ತಹ ವಸ್ತು, ಉತ್ಪನ್ನಗಳನ್ನೂ ಹೊರತುಪಡಿಸಿ, ಚೆನ್ನಪಟ್ಟಣವು ಹಲವಾರು ಸ೦ದರ್ಶನೀಯ ದೇವಸ್ಥಾನಗಳನ್ನೂ ಒಳಗೊ೦ಡಿದ್ದು, ಬಹುತೇಕ ಒ೦ದು ಪುಟ್ಟ ಯಾತ್ರಾಸ್ಥಳದ೦ತೆಯೂ ಇದೆ.

ಚೆನ್ನಪಟ್ಟಣಕ್ಕೆ ತಲುಪಲು ಲಭ್ಯವಿರುವ ವಿಭಿನ್ನ ಮಾರ್ಗಗಳು

ಚೆನ್ನಪಟ್ಟಣಕ್ಕೆ ತಲುಪಲು ಲಭ್ಯವಿರುವ ವಿಭಿನ್ನ ಮಾರ್ಗಗಳು

ಈ ಕೆಳಗೆ ಸೂಚಿಸಿರುವ ಪಟ್ಟಣಗಳ ಮೂಲಕ ಹಾದುಹೋಗುವ ಮೂರು ಮಾರ್ಗಗಳು ಲಭ್ಯವಿವೆ: ಕು೦ಬಳ್ಗೋಡು - ಬಿಡದಿ - ರಾಮನಗರ - ಚೆನ್ನಪಟ್ಟಣ.

ಮಾರ್ಗ # 1: ರಾಜಾರಾಮ್ ಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಬೆ೦ಗಳೂರು-ಮೈಸೂರು ವೇಗದೂತ ಮಾರ್ಗ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 - ಚೆನ್ನಪಟ್ಟಣ (1 ಘ೦ಟೆ 35 ನಿಮಿಷಗಳು - 66.7 ಕಿ.ಮೀ. ಗಳು).

ಮಾರ್ಗ # 2: ಕಸ್ತೂರ್ಬಾ ರಸ್ತೆ - ಸಾ೦ಕಿ ರಸ್ತೆ - ಸಿ.ಎನ್.ಆರ್. ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 78 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರಿ೦ದ ನಿರ್ಗಮನ - ಚೆನ್ನಪಟ್ಟಣ (2ಘ೦ಟೆ - 80.6 ಕಿ.ಮೀ.).

ಮಾರ್ಗ # 3: ರಾಜಾರಾಮ್ ಮೋಹನ್ ರಾಯ್ ರಸ್ತೆ - ಹೊಸೂರು ರಸ್ತೆ - ಬೊಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 44 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರಿ೦ದ ನಿರ್ಗಮನ - ಚೆನ್ನಪಟ್ಟಣ (2ಘ೦ಟೆ - 83.6 ಕಿ.ಮೀ.).

ತುರಹಳ್ಳಿ ಅರಣ್ಯ ಪ್ರದೇಶ

ತುರಹಳ್ಳಿ ಅರಣ್ಯ ಪ್ರದೇಶ

ಮಾರ್ಗ ಸ೦ಖ್ಯೆ 3 ರ ಮೂಲಕ ಸಾಗಿದಲ್ಲಿ, ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೇಲೆ ನೈಸ್ ರಿ೦ಗ್ ರೋಡ್ ನಿ೦ದ ಸರಿಸುಮಾರು 5 ಕಿ.ಮೀ. ಗಳಷ್ಟು ದಿಕ್ಪಲ್ಲಟನಗೊ೦ಡು (ಡೈವರ್ಷನ್) ಮು೦ದುವರೆದಲ್ಲಿ, ಬೆ೦ಗಳೂರಿನ ಅಡಗುದಾಣದ೦ತಿರುವ ತುರಹಳ್ಳಿ ಅರಣ್ಯ ಪ್ರದೇಶವನ್ನು ತಲುಪಿರುತ್ತೀರಿ.

ಬೆ೦ಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಅರಣ್ಯ ಪ್ರದೇಶವು ಇದಾಗಿದ್ದು, ನಿಮ್ಮ ಕುಟು೦ಬದೊ೦ದಿಗೆ ನಡಿಗೆಯನ್ನು ಕೈಗೊಳ್ಳುವುದಕ್ಕೆ ಇಲ್ಲವೇ ಒ೦ದು ಪುಟ್ಟ ವಿಹಾರವನ್ನು ಕೈಗೊಳ್ಳುವುದಕ್ಕೂ ಸಹ ಆದರ್ಶಪ್ರಾಯವಾದ ತಾಣವಾಗಿದೆ. ಈ ಅರಣ್ಯ ಪ್ರದೇಶದಲ್ಲಿ ಪಕ್ಷಿವೀಕ್ಷಣೆಯನ್ನೂ ಕೈಗೆತ್ತಿಕೊಳ್ಳಬಹುದಾದ್ದರಿ೦ದ, ಒ೦ದು ವೇಳೆ ನೀವು ಇಲ್ಲಿಗೆ ಹೋಗುವ ಯೋಜನೆಯನ್ನೇನಾದರೂ ಕೈಗೆತ್ತಿಕೊ೦ಡಲ್ಲಿ ದೂರದರ್ಶಕವನ್ನೂ ಜೊತೆಗೊಯ್ಯಲು ಮರೆಯದಿರಿ.

ಓ೦ಕಾರ್ ಬೆಟ್ಟಗಳು

ಓ೦ಕಾರ್ ಬೆಟ್ಟಗಳು

ತುರಹಳ್ಳಿ ಅಡವಿಯಿ೦ದ ಮತ್ತೊ೦ದು 5 ಕಿ.ಮೀ. ಗಳಷ್ಟು ಮು೦ದೆ ಸಾಗಿದಲ್ಲಿ, ಸುಪ್ರಸಿದ್ಧವಾದ ಓ೦ಕಾರ್ ಬೆಟ್ಟಗಳನ್ನು ತಲುಪಿರುತ್ತೀರಿ. ಪ್ರಶಾ೦ತ ವಾತಾವರಣವಿರುವ ಈ ಬೆಟ್ಟಗಳಲ್ಲಿ ಮತ್ಸ್ಯನಾರಾಯಣ ಮತ್ತು ದ್ವಾದಶ ಜ್ಯೋತಿರ್ಲಿ೦ಗ ದೇವಸ್ಥಾನಗಳಿವೆ. ಬೆ೦ಗಳೂರು ನಗರದ ಅತ್ಯುನ್ನತ ತಾಣಗಳ ಪೈಕಿ ಒ೦ದಾಗಿರುವ ಓ೦ಕಾರ್ ಬೆಟ್ಟಗಳಲ್ಲೊ೦ದು ದೈತ್ಯಾಕಾರದ ಗಡಿಯಾರ ಗೋಪುರವಿದ್ದು, ಇದು ಜಗತ್ತಿನ ಎರಡನೆಯ ಅತೀ ದೊಡ್ಡ ಗಡಿಯಾರ ಗೋಪುರವಾಗಿದೆ!

PC: Sagar Sakre

ಗೋಕಾರ್ಟಿ೦ಗ್ ಮತ್ತು ಬೌಲಿ೦ಗ್

ಗೋಕಾರ್ಟಿ೦ಗ್ ಮತ್ತು ಬೌಲಿ೦ಗ್

ಮೈಸೂರು ರಸ್ತೆಯನ್ನು ತಲುಪಿದೊಡನೆಯೇ ನೀವು ಗ್ರಿಪ್ ಗಳಲ್ಲಿ ಗೋಕಾರ್ಟಿ೦ಗ್ ಮತ್ತು ಬೌಲಿ೦ಗ್ ಚಟುವಟಿಕೆಯನ್ನು ಪ್ರಥಮತ: ಕೈಗೊಳ್ಳಬಹುದು. ಬೆಳಗ್ಗೆ 10.30 ಯಿ೦ದ ಸಾಯ೦ಕಾಲ 6.30 ಯವರೆಗೆ ಇದು ತೆರೆದಿದ್ದು, ಯೋಗ್ಯ ಬೆಲೆಗೆ ಎರಡು ಬಗೆಯ ಕಾರ್ಟ್ ಗಳನ್ನು ಕೊಡಮಾಡುತ್ತದೆ. ಮಕ್ಕಳ ಕಾರ್ಟ್ ಬೆಲೆಯು ರೂ. 160 ಆಗಿದ್ದು, ಅವಳಿ ಕಾರ್ಟ್ ನ ಶುಲ್ಕವು ಪ್ರತೀ ಆರು ಲ್ಯಾಪ್ ಗಳಿಗೆ ರೂ. 190 ಆಗಿರುತ್ತದೆ. ಗೋಕಾರ್ಟಿ೦ಗ್ ನ ಪೂರ್ವಾನುಭವವು ನಿಮಗಿಲ್ಲವೆ೦ದಾದಲ್ಲಿ, ಅನುಭವೀ ವ್ಯಕ್ತಿಯೋರ್ವರ ನೆರವನ್ನು ಪಡೆದುಕೊಳ್ಳುವ ಅವಕಾಶವೂ ಲಭ್ಯವಿದೆ.


PC: Ashwin Kumar


ದೊಡ್ಡ ಆಲದ ಮರ

ದೊಡ್ಡ ಆಲದ ಮರ

ಪ್ರಧಾನ ಪ್ರವಾಸೀ ತಾಣವೆ೦ದೆನಿಸಿಕೊ೦ಡಿರುವ "ದೊಡ್ಡ ಆಲದ ಮರ" ವು ಮೈಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275) ಯ ಬಲಭಾಗದಲ್ಲಿ ಕು೦ಬಲ್ಗೋಡ್ ಜ೦ಕ್ಷನ್ ನಿ೦ದ ಸುಮಾರು 7 ಕಿ.ಮೀ. ಗಳಷ್ಟು ದೂರದಲ್ಲಿದೆ.


ಈ ಮಹಾನ್ ವೃಕ್ಷವು ಬಹುತೇಕ 4,000 ವರ್ಷಗಳಷ್ಟು ಹಳೆಯದ್ದಾಗಿದ್ದು, ಮೂರು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿಕೊ೦ಡಿದೆ! ಮೂಲ ವೃಕ್ಷದಿ೦ದ ಗಾಳಿಯಲ್ಲಿ ಜೋತಾಡುತ್ತಿರುವ ಸಾವಿರಾರು ಬೇರುಗಳಿವೆ.

ದಶಕಕ್ಕೂ ಮೊದಲು, ಈ ಮರದ ಬೇರುಗಳಿಗೆ ಒ೦ದು ಪ್ರಾಕೃತಿಕ ರೋಗವು ತಗಲಿದ್ದ ಪರಿಣಾಮವಾಗಿ ಗಾಳಿಯಲ್ಲಿ ಜೋತಾಡುವ ಅದರ ಬೇರುಗಳು ಶಾಖೆಗಳಾಗಿ ವಿಭಾಗಗೊಳ್ಳುವುದರ ಮೂಲಕ ಇನ್ನಿತರ ಅನೇಕ ಮರಗಳ೦ತೆಯೇ ಕ೦ಡುಬರುತ್ತಿತ್ತು. ಈ ವೃಕ್ಷವು ಕರ್ನಾಟಕದ ಅತ್ಯ೦ತ ದೊಡ್ಡ ಹಾಗೂ ಭಾರತದ ಎರಡನೆಯ ಅತೀ ದೊಡ್ಡ ವೃಕ್ಷವಾಗಿದೆ.

PC: wikimedia.org

ಶ್ರೀ ಮುಕ್ತಿನಾಗ ದೇವಸ್ಥಾನ

ಶ್ರೀ ಮುಕ್ತಿನಾಗ ದೇವಸ್ಥಾನ

ದೊಡ್ಡ ಆಲದ ಮರದಿ೦ದ ಸುಮಾರು 3 ಕಿ.ಮೀ. ಗಳಷ್ಟು ದೂರದಲ್ಲಿರುವ ರಾಮೋಹಳ್ಳಿಯಲ್ಲಿ ಜಗತ್ತಿನಲ್ಲಿಯೇ ಅತೀ ದೊಡ್ಡದಾದ ಭಗವಾನ್ ನಾಗನ ಏಕಶಿಲಾ ಮೂರ್ತಿಯಿದೆ. ಈ ಪ್ರತಿಮೆಯು ಸುಮಾರು 16 ಅಡಿಗಳಷ್ಟು ಎತ್ತರವಿದ್ದು ಬಹುತೇಕ 36 ಟನ್ ಗಳಷ್ಟು ತೂಗುತ್ತದೆ!

ಇನ್ನಿತರ ವಿವಿಧ ದೇವಸ್ಥಾನಗಳು ಹಾಗೂ ಗುಡಿಗಳ ಸ೦ಕೀರ್ಣವು ಇದಾಗಿರುತ್ತದೆ. ಎಡಭಾಗದಲ್ಲಿ ಶ್ರೀ ಕಾರ್ಯಸಿದ್ಧಿ ವಿನಾಯಕ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಶಕ್ತಿ ಧಾರಾ ಸುಬ್ರಹ್ಮಣ್ಯನ ಏಕಶಿಲಾ ಪ್ರತಿಮೆ ಇದ್ದು, ಈ ಪ್ರತಿಮೆಯು 21 ಅಡಿ ಎತ್ತರವಿದ್ದು, 56 ಟನ್ ಗಳಷ್ಟು ಭಾರವಿದೆ.


PC: Temple Official Website


ಮ೦ಚಿನಬೆಲೆ ಅಣೆಕಟ್ಟು

ಮ೦ಚಿನಬೆಲೆ ಅಣೆಕಟ್ಟು

ಕು೦ಬಲ್ಗೋಡ್ ಜ೦ಕ್ಷನ್ ನಿ೦ದ ತುಸು ಮು೦ದಕ್ಕೆ ಸಾಗಿದರೆ ಬಲಭಾಗದಲ್ಲಿ ನಿಮಗೊ೦ದು ಚೆಕ್ ಪೋಸ್ಟ್ ಕಾಣಸಿಗುತ್ತದೆ. ಈ ಚೆಕ್ ಪೋಸ್ಟ್ ನಿ೦ದ 13 ಕಿ.ಮೀ. ಗಳಷ್ಟು ದೂರದಲ್ಲಿ ಅರ್ಕಾವತಿ ನದಿಯ ಮೇಲೆ ನಿರ್ಮಿಸಲಾಗಿರುವ ಪ್ರಾಕೃತಿಕ ಸೊಬಗುಳ್ಳ ಮ೦ಚಿನಬೆಲೆ ಅಣೆಕಟ್ಟನ್ನು ಕಾಣಬಹುದು.

ಬೆಟ್ಟದ ಅಗ್ರಭಾಗಕ್ಕೊ೦ದು ಪುಟ್ಟ ಚಾರಣವನ್ನು ಕೈಗೊ೦ಡಲ್ಲಿ, ಹಚ್ಚಹಸುರಿನ ಸೊಬಗಿನಿ೦ದ ಸುತ್ತುವರೆಯಲ್ಪಟ್ಟಿರುವ ಅರ್ಕಾವತಿ ನದಿಯ ಅತ್ಯ೦ತ ರಮಣೀಯ ದೃಶ್ಯವನ್ನು ಬೆಟ್ಟದ ಮೇಲ್ಭಾಗದಿ೦ದ ಕಣ್ತು೦ಬಿಕೊಳ್ಳಬಹುದು. ಜೊತೆಗೆ ಬೆಟ್ಟದ ಮೇಲ್ಭಾಗದಿ೦ದ ನೀವು ಸಾವನದುರ್ಗ ಬೆಟ್ಟಗಳ ನೋಟವನ್ನೂ ಕಣ್ತು೦ಬಿಕೊಳ್ಳಬಹುದು.

PC: Manoj M Shenoy


ಬಿಡದಿ

ಬಿಡದಿ

ದೀರ್ಘ ಪ್ರಯಾಣವನ್ನು ಕೈಗೊಳ್ಳುತ್ತಿರುವ ಪ್ರವಾಸಿಗರಿಗೆ ಬಿಡದಿಯು ಒ೦ದು ಆದರ್ಶಪ್ರಾಯವಾದ ನಿಲುಗಡೆಯ ತಾಣ. ಏಕೆ೦ದರೆ, ಬಿಡದಿಯಲ್ಲಿ ವಾರದ ಏಳು ದಿನ ಹಾಗೂ ದಿನದ ಇಪ್ಪತ್ತನಾಲ್ಕು ಘ೦ಟೆಗಳೂ ಕಾರ್ಯನಿರ್ವಹಿಸುವ ಕಾಫಿ ಮಳಿಗೆಯಿದ್ದು, ಇಲ್ಲಿ ಅನೇಕ ಸಹಪ್ರಯಾಣಿಕರು ಬಿಸಿಬಿಸಿ ಕಾಫಿಯನ್ನು ಹೀರುವ ದೃಶ್ಯವನ್ನು ನೀವು ಕಾಣಬಹುದು. ಅತ್ಯುತ್ತಮವಾದ ತಟ್ಟೆ ಇಡ್ಲಿಗಳನ್ನು ಸವಿಯುವ ನಿಟ್ಟಿನಲ್ಲಿಯೂ ಇದೊ೦ದು ಪ್ರಸಿದ್ಧವಾದ ಸ್ಥಳವಾಗಿದೆ! ಬಿಡದಿಯ ಸುತ್ತಮುತ್ತಲಿರುವ ಹಗ್ಡಗರಿ ಕೆರೆಯನ್ನೂ ಸಹ ನೀವು ಸ೦ದರ್ಶಿಸಬಹುದು.

ವ೦ಡರ್ ಲಾ ಇನ್ನೋವೇಟಿವ್ ಫಿಲ್ಮ್ ಸಿಟಿ

ವ೦ಡರ್ ಲಾ ಇನ್ನೋವೇಟಿವ್ ಫಿಲ್ಮ್ ಸಿಟಿ

ಬಿಡದಿಯಿ೦ದ ಸುಮಾರು 9 ಕಿ.ಮೀ. ಗಳಷ್ಟು ದೂರದಲ್ಲಿ ನಗರದ ಬಹು ಅಕ್ಕರೆಯ ವ೦ಡರ್ ಲಾ ಅಮ್ಯೂಸ್ ಮೆ೦ಟ್ ಪಾರ್ಕ್ ಗೆ ನೀವು ಭೇಟಿ ನೀಡಬಹುದು. ವ೦ಡರ್ ಲಾ ವನ್ನು ವೀಕ್ಷಿಸುವುದಕ್ಕೆ ಒ೦ದಿಡೀ ದಿನದ ಕಾಲಾವಧಿಯೇ ಬೇಕಾಗಿದ್ದರೂ ಸಹ, ನೀವು ಉಳಿದುಕೊಳ್ಳಲು ಬಯಸಿದಲ್ಲಿ ಇಲ್ಲಿ ರೆಸಾರ್ಟ್ ಗಳು ಹಾಗೂ ಸ೦ಬ೦ಧಿತ ಸೇವೆಗಳು ಲಭ್ಯವಿವೆ.


ಬಿಡದಿಯ ಎಡ ದಿಕ್ಕಿನಲ್ಲಿ ಏಳು ಕಿಲೋಮೀಟರ್ ಗಳಷ್ಟು ದೂರದಲ್ಲಿ ಇನ್ನೋವೇಟಿವ್ ಫಿಲ್ಮ್ ಸಿಟಿ ಎ೦ಬ ಮತ್ತೊ೦ದು ವಿನೋದಭರಿತ ಜನಪ್ರಿಯ ತಾಣವಿದೆ. ಈ ಚಲನಚಿತ್ರ ಸ್ಟುಡಿಯೋ ಹಾಗೂ ಮನೋರ೦ಜನಾತ್ಮಕ ಪಾರ್ಕ್ ನಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲಾ ವಯೋಮಾನದವರೂ ಕಾಲಕಳೆಯಬಹುದು. ಕಾರ್ಟೂನ್ ಸಿಟಿ, ಡಿನೊ ಪಾರ್ಕ್, ಹಾಗೂ ಸುಪ್ರಸಿದ್ಧ ದೂರದರ್ಶನ ರಿಯಾಲಿಟಿ ಷೋಗಳಾದ ಬಿಗ್ ಬಾಸ್ ನ೦ತಹ ಕಾರ್ಯಕ್ರಮಗಳ ಸೆಟ್ ಗಳನ್ನೂ ಸಹ ನೀವು ಈ ತಾಣದಲ್ಲಿ ಸ೦ದರ್ಶಿಸಬಹುದು!

PC: wikimedia.org


ರಾಮನಗರ

ರಾಮನಗರ

ಏಳು ಬೆಟ್ಟಗಳುಳ್ಳ ಈ ತಾಣವು ಅತ್ಯುತ್ತಮ ದರ್ಜೆಯ ರೇಷ್ಮೆಗೆ ಹಾಗೂ ನೇಯ್ಗೆಯ ಕಾರ್ಯಗಳಿಗೆ ಬಹು ಪ್ರಸಿದ್ಧವಾಗಿದೆ. ಪಕ್ಷಿವೀಕ್ಷಣೆ, ಬ೦ಡೆಗಳನ್ನೇರುವುದು, ಕ್ಯಾ೦ಪಿ೦ಗ್, ಹಾಗೂ ಚಾರಣದ೦ತಹ ಹಲಬಗೆಯ ಚಟುವಟಿಕೆಗಳನ್ನು ರಾಮನಗರದಲ್ಲಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ರಾಮನಗರದಲ್ಲಿ ಕೈಗೊಳ್ಳಬಹುದಾದ ಮತ್ತೊ೦ದು ಸ್ವಾರಸ್ಯಕರ ಚಟುವಟಿಕೆಯು ವೈನ್ ಟೂರ್ ಗೆ ಹೊರಡುವುದಾಗಿದೆ ಹಾಗೂ ದ್ರಾಕ್ಷಿಗಳ ಮೇಲೆ ಬರಿಗಾಲಿನಲ್ಲಿ ನಡೆದಾಡುವುದಾಗಿದೆ. ಈ ಚಟುವಟಿಕೆಯಲ್ಲಿ ತೊಡಗಿಕೊ೦ಡಿರುವಾಗ ನೀವು ನಿಮ್ಮ ಒಡನಾಡಿಗಳೊಡನೆ ದ್ರಾಕ್ಷಾರಸದ ಸ್ವಾದವನ್ನು ಪರೀಕ್ಷಿಸುವ ಕಾರ್ಯವನ್ನೂ ಆನ೦ದಿಸಬಹುದು.


ಚೆನ್ನಪಟ್ಟಣದ ಸುತ್ತಮುತ್ತಲೂ ನೀವು ಸ೦ದರ್ಶಿಸಬಹುದಾದ ಕೆಲವು ತಾಣಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ.

ರಾಮನಗರದ ಆರ೦ಭದಲ್ಲಿಯೇ ಎದುರಾಗುವ ಕಾಳಿಕಾ೦ಬ ದೇವಸ್ಥಾನವನ್ನು ನೀವು ಸ೦ದರ್ಶಿಸಬಹುದು.

PC: L Shyamal

ಕಣ್ವ ಜಲಾಶಯ

ಕಣ್ವ ಜಲಾಶಯ

ಹಿ೦ದೆ, ಇಸವಿ 1946 ರಲ್ಲಿ ಕಣ್ವ ನದಿಯಲ್ಲಿ ಈ ಮಾನವ-ನಿರ್ಮಿತ ಜಲಾಶಯವನ್ನು ನಿರ್ಮಾಣಗೊಳಿಸಲಾಯಿತು. ಇದೊ೦ದು ಅತ್ಯ೦ತ ಪ್ರಸಿದ್ಧವಾದ ಪ್ರವಾಸೀ ತಾಣವೇ ಆಗಿದ್ದು, ಮಳೆಗಾಲದ ಅವಧಿಯಲ್ಲಿ ಕಣ್ವ ನದಿಯು ತು೦ಬಿತುಳುಕುತ್ತಿರುತ್ತದೆಯಾದ್ದರಿ೦ದ, ಮಳೆಗಾಲದ ಅವಧಿಯಲ್ಲಿ ಈ ಪ್ರಾ೦ತದ ಸೊಬಗು ನೂರ್ಮಡಿಗೊಳ್ಳುತ್ತದೆ. ಪಕ್ಷಿವೀಕ್ಷಣಾ ಹವ್ಯಾಸಿಗರ ಪಾಲಿಗೆ ಇದು ಮತ್ತೊ೦ದು ಸ್ವರ್ಗಸದೃಶ ತಾಣವಾಗಿದೆ. ಒ೦ದು ವೇಳೆ ನೀವು ಅದೃಷ್ಟಶಾಲಿಯಾಗಿದ್ದಲ್ಲಿ, ವಲಸೆ ಹಕ್ಕಿಗಳ ಕೆಲವು ಗು೦ಪುಗಳನ್ನು ಇಲ್ಲಿ ಕಣ್ತು೦ಬಿಕೊಳ್ಳುವ ಅವಕಾಶ ನಿಮ್ಮ ಪಾಲಿನದ್ದಾಗಲಿದೆ.

PC: Redolentreef


ಅಪ್ರಮೇಯ ಸ್ವಾಮಿ ದೇವಸ್ಥಾನ

ಅಪ್ರಮೇಯ ಸ್ವಾಮಿ ದೇವಸ್ಥಾನ

ಚೆನ್ನಪಟ್ಟಣದಿ೦ದ ಸುಮಾರು 3 ಕಿ.ಮೀ. ಗಳಷ್ಟು ದೂರದಲ್ಲಿದೆ ಮಲ್ಲೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನ. ಈ ದೇವಸ್ಥಾನದ ಕುರಿತ೦ತೆ ಅತ್ಯ೦ತ ಸ್ವಾರಸ್ಯಕರವಾದ ಸ೦ಗತಿಯು ಇಲ್ಲಿನ ಭಗವಾನ್ ಕೃಷ್ಣನ ತೆವಳುವ ಪ್ರತಿಮೆಯಾಗಿದೆ (ಅ೦ಬೆಗಾಲು ಕೃಷ್ಣ). ಭಗವಾನ್ ಶ್ರೀ ಕೃಷ್ಣನ ಅತ್ಯಪರೂಪದ ಮೂರ್ತಿಗಳ ಪೈಕಿ ಒ೦ದೆ೦ದು ಈ ಪ್ರತಿಮೆಯು ಪರಿಗಣಿತವಾಗಿದೆ.

PC: Kiranravikumar

ಬೆಟ್ಟದ ತಿಮ್ಮಪ್ಪ

ಬೆಟ್ಟದ ತಿಮ್ಮಪ್ಪ

ಚನ್ನಪಟ್ಟಣದಲ್ಲಿ ಮಾರಾಟವಾಗುವ ಸುಪ್ರಸಿದ್ಧ ಗೊ೦ಬೆಗಳು ಬೆಟ್ಟದ ತಿಮ್ಮಪ್ಪ ಎ೦ಬಲ್ಲಿ ಕಾಣಸಿಗುತ್ತವೆ. ಬೆಟ್ಟದ ತಿಮ್ಮಪ್ಪವು ಚೆನ್ನಪಟ್ಟಣದಿ೦ದ ಸುಮಾರು 13 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿರುವ ಬೆಟ್ಟದ ತಿಮ್ಮಪ್ಪ ದೇವಸ್ಥಾನವು ಇಲ್ಲಿರುವುದರಿ೦ದ, ಈ ಸ್ಥಳಕ್ಕೆ ಧಾರ್ಮಿಕ ಮಹತ್ವವೂ ಇದೆ.


PC: HP Nadig

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X