ಕರ್ನಾಟಕದಲ್ಲಿ ಬಹುತೆಕರಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರಿಗೆ ನಂದಿ ಬೆಟ್ಟದ ಕುರಿತು ಸಾಕಷ್ಟು ಗೊತ್ತಿದೆ. ವಾರಾಂತ್ಯಗಳ ರಜೆ ಬಂದರೆ ಸಾಕು, ಅದೆಷ್ಟೊ ಜನರು ಸ್ನೇಹಿತರೊಂದಿಗೆ, ನೆಂಟರೊಂದಿಗೋ ಕಲೆತು ನಂದಿ ಬೆಟ್ಟಕ್ಕೆಂದು ಒಂದು ಧಿಡೀರ್ ಪ್ರವಾಸ ಮಾಡೆಬಿಡುತ್ತಾರೆ.
ಬೆಂಗಳೂರು ಬಳಿಯಿರುವ ಸುಂದರ ನಂದಿಬೆಟ್ಟ
ನಂದಿ ಬೆಟ್ಟ ನಿಜಕ್ಕೂ ಒಂದು ಸುಂದರವಾದ ತಾಣವಾಗಿದೆಯಾದರೂ ಇತ್ತೀಚಿನ ಕೆಲ ಸಮಯದಿಂದ ಈ ಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಹೆಚ್ಚು ಸದ್ದು-ಗದ್ದಲವಿಲ್ಲದ, ಏಕಾಂತ ಇಷ್ಟಪಡುವ, ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವಾಸ ತುಸು ಕಿರಿ ಕಿರಿ ಎನಿಸಿದರೂ ತಪ್ಪಲ್ಲ.
ಆದರೆ ನಂದಿ ಬೆಟ್ಟದ ರೀತಿಯಲ್ಲೆ ನಯನಮನೋಹರ ದೃಶ್ಯ ವೈಭವ ಕರುಣಿಸುವ, ಆದರೆ ಕಡಿಮೆ ಸಂಖ್ಯೆಯಲ್ಲಿ ಜನರಿಂದ ಮಾತ್ರವೆ ಭೇಟಿ ನೀಡಲ್ಪಡುವ, ವಿಶೇಷವೆಂದರೆ ಬೆಂಗಳೂರಿನಿಂದ ಸುಮಾರು 110 ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿರುವ ಒಂದು ವಿಶೇಷವಾದ ಬೆಟ್ಟ ತಾಣವಿದೆ.
ಅದರ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಒಂದೊಂದೆ ಸ್ಲೈಡುಗಳ ಮೂಲಕ ಆ ತಾಣದ ಚಿತ್ರಗಳ ಪ್ರವಾಸ ಮಾಡಿ ಹಾಗೂ ನಿಮ್ಮ ಮುಂದಿನ ವಾರಾಂತ್ಯ ರಜೆಯನ್ನು ಇಲ್ಲಿಗೆ ತೆರಳಲು ಯೋಜಿಸಿ.
ಲೇಖನಕ್ಕೆ ಚಿತ್ರಗಳನ್ನು ಒದಗಿಸಿದವರು : Akshatha Vinayak
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಈ ಬೆಟ್ಟ ನಂದಿ ಬೆಟ್ಟದ ರೀತಿಯಲ್ಲೆ ಏರಲು ಅನುಕೂಲವಾಗುವ ಮೆಟ್ಟಿಲುಗಳನ್ನು ಹೊಂದಿದೆ. ನಂದಿ ಬೆಟ್ಟದ ರೀತಿಯಲ್ಲೆ ಬೆಟ್ಟದ ಮೇಲೆ ದೇವಾಲಯಗಳಿವೆ. ಅಲ್ಲದೆ ಪವಿತ್ರವಾದ ಕೊಳವೂ ಇದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ನಂದಿಬೆಟ್ಟದ ರೀತಿಯಲ್ಲೆ ಅದ್ಭುತ ಪ್ರಾಕೃತಿಕ ದೃಶ್ಯಾವಳಿಗಳನ್ನು ಈ ಬೆಟ್ಟವು ನೀಡುತ್ತದೆ. ಆದರೆ ನಂದಿ ಬೆಟ್ಟದ ರೀತಿಯಲ್ಲಿ ಇಲ್ಲಿನ ಜನದಟ್ಟಣೆ ಇರುವುದಿಲ್ಲ. ಬಹಳಷ್ಟು ಜನರಿಗೆ ತಿಳಿಯದ ಕಾರಣ, ಇದಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬಲು ಕಡಿಮೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿದೆಯಾದರೂ ನಂದಿಬೆಟ್ಟದಿಂದ ಇನ್ನಷ್ಟು ದೂರದಲ್ಲಿ ಈ ಬೆಟ್ಟ ಸ್ಥಿತವಿದೆ. ಬೆಂಗಳೂರಿನಿಂದ ಸುಮಾರು 95 ಕಿ.ಮೀ ಗಳಷ್ಟು ದೂರದಲ್ಲಿ ಈ ತಾಣ ನೆಲೆಸಿದೆ ಅಂತ ಹೇಳಬಹುದು.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಇದನ್ನು ಮೂಲತಃ ಧೇನುಗಿರಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ಹಿಂದೊಮ್ಮೆ ಇಲ್ಲಿ ವಿಪರೀತವಾಗಿ ಗೋವುಗಳು ಮೇಯಲು ಈ ತಾಣಕ್ಕೆ ಬರುತ್ತಿದ್ದವು. ಹೀಗೆ ಆಕಳುಗಳಿ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರುವುದಕ್ಕೂ ಸಹ ಒಂದು ಹಿನ್ನಿಲೆಯಿದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಅದರ ಪ್ರಕಾರವಾಗಿ, ದೇವತೆ ಹಾಗೂ ಅಸುರರ ಮಧ್ಯೆ ನಡೆದ ಸಮುದ್ರ ಮಂಥನದ ಸಮಯದಲ್ಲಿ ಅನೇಕ ಒಳ್ಳೆಯ ಹಾಗೂ ಕೆಟ್ಟ ಉತ್ಪನ್ನಗಳು ಹೊರಬಂದವು. ಆ ರೀತಿಯ ಉತ್ಪನ್ನಗಳಲ್ಲಿ ಒಳ್ಳೆಯ ವಸ್ತುವಾಗಿ ಕಾಮಧೇನು ಸಹ ಬಂದಿತು.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಹೀಗೆ ಸಮುದ್ರ ಮಂಥನದಿಂದ ಉತ್ಪತ್ತಿಗೊಂಡ ಕಾಮಧೇನು ತನ್ನ ಮೊದಲ ಹೆಜ್ಜೆಯನ್ನು ಈ ತಾಣದಲ್ಲಿಟ್ಟಿದುದರಿಂದ ಈ ಕ್ಷೇತ್ರಕ್ಕೆ ಧೇನುಗಿರಿ ಎಂಬ ಹೆಸರುಬಂದಿತು ಹಾಗೂ ಬೆಟ್ಟವು ಆವಲಕೊಂಡ ಇಲ್ಲವೆ ಆವಲಬೆಟ್ಟ ಎಂಬ ಹೆಸರೂ ಸಹ ಪಡೆಯಿತು.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಇನ್ನೊಂದು ವಿಚಾರವೆಂದರೆ ಪ್ರದೇಶದ ಸುತ್ತಮುತ್ತಲು ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿದ್ದು ಇದಕ್ಕೆ ಆವಲು ಬೆಟ್ಟ ಎಂಬ ಹೆಸರು ಬಂದಿತೆನ್ನಲಾಗಿದೆ. ತೆಲುಗುವಿನಲ್ಲಿ ಆವಲು ಎಂದರೆ ಹಸು ಎಂದಾಗುತ್ತದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಇಂದಿಗೂ ಈ ಆವಲಬೆಟ್ಟದಲ್ಲಿ ಬಂಡೆಯೊಂದರ ಮೇಲೆ ಕಾಮಧೇನುವಿನ ಹೆಜ್ಜೆಗಳ ಅಚ್ಚು ಮೂಡಿರುವುದನ್ನು ಕಾಣಬಹುದೆನ್ನಲಾಗುತ್ತದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಇದೊಂದು ಲಕ್ಷ್ಮಿ ನರಸಿಂಹ ಕ್ಷೇತ್ರವಾಗಿದ್ದು ಇಲ್ಲಿ ನರಸಿಂಹನಿಗೆ ಹಾಗೂ ಲಕ್ಷ್ಮಿ ದೇವಿಗೆ ಮುಡಿಪಾದ ಎರಡು ದೇವಾಲಯಗಳನ್ನು ಕಾಣಬಹುದು. ಆದರೆ ಲಕ್ಷ್ಮಿ ದೇವಿಯು ನರಸಿಂಹ ದೇವರೊಂದಿಗಿರದೆ ಪ್ರತ್ಯೇಕವಾದ ದೇವಾಲಯದಲ್ಲಿರುವುದು ಕೌತುಕಮಯವಾಗಿದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಸ್ಥಳ ಪುರಾಣದಂತೆ, ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ ಘೋರವಾಗಿ ಅರಚುತ್ತ ಕಾಡುಗಳಲ್ಲಿ ತಿರುಗುವಾಗ ಅವನ ಭಯಂಕರತೆಯನ್ನು ಶಾಂತಗೊಳಿಸುವ ದೃಷ್ಟಿಯಿಂದ ಲಕ್ಷ್ಮಿಯು ಚೆಂಚು ಬುಡಕಟ್ಟಿನ ಸುಂದರ ಕನ್ಯೆಯಾಗಿ ನರಸಿಂಹನನ್ನು ಆಕರ್ಷಿಸುತ್ತಾಳೆ ಹಾಗೂ ಅವನ ಸಿಟ್ಟು ಶಾಂತಗೊಳಿಸಲು ಬೆಟ್ಟದ ಮೇಲೆ ತಪಸ್ಸನ್ನಾಚರಿಸುತ್ತಾಳೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಹೀಗಾಗಿ ಇಲ್ಲಿರುವ ಲಕ್ಷ್ಮಿಯು ಚೆಂಚು ಲಕ್ಷ್ಮಿಯಾಗಿದ್ದು ನರಸಿಂಹನ ದೇವಾಲಯವಿರುವ ಸ್ಥಳದಿಂದ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಚೆಂಚು ಲಕ್ಷ್ಮಿಯ ದೇವಾಲಯವು ಸ್ಥಿತವಿದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಅಲ್ಲದೆ ಇಲ್ಲಿರುವ ಕೊಳ ನೋಡಲು ಬಲು ಆಕರ್ಷಕವಾಗಿದೆ. ಭೇಟಿ ನೀಡುವ ಪ್ರವಾಸಿಗರು ಈ ಕೊಳದ ಬಳಿ ಅದ್ಭುತವಾದ ಸಮಯ ಕಳೆಯಲು ಇದು ಯೋಗ್ಯವಾಗಿದೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆವಲಬೆಟ್ಟವು ಪೆರೆಸಂದ್ರ ಎಂಬ ಗ್ರಾಮದ ಬಳಿ ಸ್ಥಿತವಿದೆ. ಇಲ್ಲಿಗೆ ತಲುಪಲು ಬೆಂಗಳೂರಿನ ಮುಲವಾಗಿ ರಾಷ್ಟ್ರೀಯ ಹೆದ್ದಾರಿ ಏಳನ್ನು ಬಳಸಿಕೊಂಡು ಚಿಕ್ಕಬಳ್ಳಾಪುರ ತೆರಳಿ ಅಲ್ಲಿಂದ ಹದಿನೈದು ಕಿ.ಮೀ ಸಾಗಿ ಪೆರೆಸಂದ್ರ ಎಂಬ ಹಳ್ಳಿಯ ಬಳಿ ಎಡ ತಿರುವು ಪಡೆದು ಸಾಗಬೇಕು.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಹೀಗೆ ಸಾಗುತ್ತ ಮಂಡಿಕಲ್ ಎಂಬ ಹಳ್ಳಿ ತಲುಪಿ ಅಲ್ಲಿಂದ ಇನ್ನೂ ಹನ್ನೊಂದು ಕಿ.ಮೀ ಸಾಗಿದರೆ ಆವಲಬೆಟ್ಟವು ದೊರಕುತ್ತದೆ. ಮಾರ್ಗಗೊಂದಲವಾದಲ್ಲಿ ಸ್ಥಳೀಯರನ್ನು ವಿಚಾರಿಸಬಹುದು. ಚಿಕ್ಕಬಳ್ಳಾಪುರ ಬಸ್ಸು ನಿಲ್ದಾಣದಿಂದ ಮಂಡಿಕಲ್ ಗ್ರಾಮಕ್ಕೆ ಬಸ್ಸುಗಳು ದೊರೆಯುತ್ತವೆ.
ಧೇನುಗಿರಿ ಲಕ್ಷ್ಮಿ-ನರಸಿಂಹ ಕ್ಷೇತ್ರ:
ಹಾಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಇನ್ನೇಕೆ ತಡ ಇಂದೆ ಯೋಜಿಸಿ, ನಿಮ್ಮ ಮುಂದಿನ ವಾರಾಂತ್ಯದ "ಬ್ರೆಕ್" ಅನ್ನು ಆವಲಬೆಟ್ಟದಲ್ಲಿ ಹಾಯಾಗಿ ಆಸ್ವಾದಿಸಿರಿ. ಗಮನವಿರಲಿ ಈ ಸ್ಥಳದಲ್ಲಿ ಯಾವುದೆ ಉಪಹಾರಗೃಹಗಳಿರುವುದಿಲ್ಲ.