ತಮಿಳುನಾಡಿನಲ್ಲಿರುವ ಕಂಚೀಪುರಂ ಜಿಲ್ಲೆಯು ಸಾಕಷ್ಟು ಪಾವಿತ್ರ್ಯತೆ ಪಡೆದಿರುವ ಸ್ಥಳವಾಗಿದೆ. ಕಾಮಾಕ್ಷಿ ಅಮ್ಮನವರು ನೆಲೆಸಿರುವ ಈ ಜಿಲ್ಲೆಯಲ್ಲಿ ಸಾಕಷ್ಟು ಪೂಜ್ಯ ಎನ್ನಲಾಗುವ ದೇವಾಲಯಗಳನ್ನು ವಿವಿಧ ಸ್ಥಳಗಳಲ್ಲಿ ನೆಲೆಸಿರುವುದನ್ನು ಕಾಣಬಹುದು. ಅಂತಹ ಒಂದು ವಿಶೇಷ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ.
ಇದು ವಿಷ್ಣು ದೇವರಿಗೆ ಮುಡಿಪಾದ ದೇವಾಲಯ. ಅಲ್ಲದೆ ತಮಿಳಿನ ಪ್ರಖ್ಯಾತ ಪುರಾತನ ಅಳ್ವಾರ್ ಸಮ್ತರು ವಿಷ್ಣುವಿನನ್ನು ಕೊಂಡಾಡುತ್ತ ಅವನ ದರ್ಶನವನ್ನು 108 ಸ್ಥಳಗಳಲ್ಲಿ ಪಡೆದು ಆ ಸ್ಥಳಗಳನ್ನು ಪಟ್ಟಿ ಮಾಡಿರುವುದನ್ನು ಓದಬಹುದು. ಅವೆ ಇಂದು ದಿವ್ಯ ದೇಸಂ ಸ್ಥಳಗಳಾಗಿವೆ. ವಿಷ್ಣುವಿನ 108 ಪ್ರಮುಖ ದೇವಾಲಯ ಕ್ಷೇತ್ರಗಳು.
ಚಿತ್ರಕೃಪೆ: Ssriram mt
ಅಂತಹ ದಿವ್ಯ ದೇಸಂನಲ್ಲಿ ಒಂದಾಗಿದೆ ಈ ಲೇಖನದಲ್ಲಿ ತಿಳಿಸಲಾದ ದೇವಾಲಯ. ಸಾಮಾನ್ಯವಾಗಿ ವಿಷ್ಣುವಿನ ಯಾವುದೆ ದೇವಾಲಯಕ್ಕೆ ತೆರಳಿದಾಗ ಅಲ್ಲಿ ವಿಷ್ಣು ಶೇಷಾಸನದಲ್ಲೊ, ಕಮಲದ ಮೇಲೊ ನಿಂತಿರುವ ಭಂಗಿಯಲ್ಲಿರುತ್ತಾನೆ. ಆದರೆ ಇಲ್ಲಿ ವಿಷ್ಣು ಅದೆ ರೀತಿಯಲ್ಲಿ ಕಂಡುಬಂದರೂ ಒಂದು ವಿಶೇಷವಾದ ಬದಲಾವಣೆಯನ್ನು ಆತನಲ್ಲಿ ಕಾಣಬಹುದು.
ಅದೆಂದರೆ ಇಲ್ಲಿ ವಿಷ್ಣು ಎಂಟು ಭುಜಗಳನ್ನು ಹೊಂದಿರುವ ರೂಪದಲ್ಲಿದ್ದಾನೆ. ಹಾಗಾಗಿಯೆ ಈ ದೇವಾಲಯವು ಅಷ್ಟುಭುಜಾಕಾರಂ ದೇವಾಲಯ ಎಂದೆ ಪ್ರಸಿದ್ಧಿ ಪಡೆದಿದೆ. ಇದು ಪ್ರಾಚೀನ ದೇವಾಲಯವಾಗಿ ಎಂಟನೇಯ ಶತಮಾನದಲ್ಲಿ ಪಲ್ಲವ ದೊರೆಗಳಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗಿದೆ.
ಚಿತ್ರಕೃಪೆ: Ssriram mt
ತದನಂತರ ಈ ಪ್ರಾಂತ್ಯವನ್ನಾಳಿದ ಚೋಳರು ಹಾಗೂ ವಿಜಯನಗರದ ಅರಸರು ಸಾಕಷ್ಟು ನವೀಕರಣ ಕಾರ್ಯಗಳನ್ನು ಈ ದೇವಾಲಯಕ್ಕೆ ಕೈಗೊಂಡರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಪ್ರಸ್ತುತ, ದೇವಾಲಯದಲ್ಲಿ ದಿನಕ್ಕೆ ಆರು ಬಾರಿ ಪೂಜಾ ವಿಧಿಗಳು ಹಾಗೂ ವರ್ಷಕ್ಕೆ ಮೂರು ಬಾರಿ ಭಾರಿ ಉತ್ಸವಗಳು ಜರುಗುತ್ತವೆ.
ವಿಷ್ಣುವಿನನ್ನು ಇಲ್ಲಿ ಅಷ್ಟಭುಜ ಪೆರುಮಾಳನನ್ನಾಗಿ ಪೂಜಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ರೋಚಕ ದಂತಕಥೆಯೊಂದೂ ಇದೆ. ಅದರ ಪ್ರಕಾರವಾಗಿ, ಒಮ್ಮೆ ಯಾವುದೊ ಕಹಿ ಘಟನೆಯ ನಂತರ ಸರಸ್ವತಿಯು ಬ್ರಹ್ಮನ ಮೇಲೆ ಮುನಿಸಿಕೊಂಡು ದೂರವಾಗಿದ್ದಳು. ಆ ಸಮಯದಲ್ಲಿ ಬ್ರಹ್ಮನು ಯಾಗವೊಂದನ್ನು ಮಾಡಲು ನಿರ್ಧರಿಸಿದ್ದನು ಹಾಗೂ ವಿಷ್ಣುವಿನನ್ನು ತನ್ನ ಯಾಗ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಲು ಪ್ರಾರ್ಥಿಸಿದ್ದನು.
ಚಿತ್ರಕೃಪೆ: Ssriram mt
ಆದರೆ ಸರಸ್ವತಿಯು ಬ್ರಹ್ಮನು ತನ್ನ ಮಡದಿಯೆ ಇಲ್ಲದೆ ಯಾಗ ಮಾಡುತ್ತಿರುವುದರಿಂದ ಕೋಪಗೊಂಡು ಆ ಯಾಗವನ್ನು ನಿಲ್ಲಿಸುವ ಪ್ರಯತ್ನವಾಗಿ ಹಲವಾರು ರಾಕ್ಷಸರನ್ನು ಅಲ್ಲಿಗೆ ಕಳುಹಿಸಿದಳು. ವಿಷ್ಣು ಪ್ರತಿಯೊಬ್ಬ ರಾಕ್ಷಸನನ್ನು ಸಂಹರಿಸಿ ಬ್ರಹ್ಮನ ಯಾಗ ಯಾವ ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದನು.
ಶಿವಶಕ್ತಿಯ ರೂಪ ಕಂಚಿ ಕಾಮಾಕ್ಷಿಯ ಸನ್ನಿಧಿ!
ಕೊನೆಗೆ ಸರಸ್ವತಿಯು ಕೊನೆಯ ಅಸ್ತ್ರವಾಗಿ ಅತ್ಯುಗ್ರವಾದ, ವಿಷ ಕಕ್ಕುವ ಭಯಂಕರ ಸರ್ಪವೊಂದನ್ನು ಕಳುಹಿಸಿದಳು. ಆ ಭಯಂಕರ ಸರ್ಪವನ್ನು ಸಂಹರಿಸುವ ಉದ್ದೇಶದಿಂದ ವಿಷ್ಣು ಎಂಟು ಭುಜಗಳ ರೂಪ ಪಡೆದು ಅದರೊಂದಿಗೆ ಸೆಣೆಸಾಡಿ ಅದನ್ನು ಕೊಂದು ಹಾಕಿದನು.