ಶಿವಮೊಗ್ಗದಲ್ಲಿನ ಜೋಗ್ಫಾಲ್ಸ್ನ್ನು ಸಾಕಷ್ಟು ಮಂದಿ ನೋಡಿರುವಿರಿ. ಈ ಮಳೆಗಾಲದಲ್ಲಂತೂ ಜೋಗ್ಫಾಲ್ಸ್ ಇನ್ನೂ ಸುಂದರವಾಗಿ ಕಾಣಿಸುತ್ತಿದೆ. ಜೋಗ್ಫಾಲ್ಸ್ ಶರಾವತಿ ನದಿಯಿಂದ ಉಂಟಾಗಿರುವುದು ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಶರಾವತಿ ನದಿಯ ಉಗಮ ಸ್ಥಾನದ ಬಗ್ಗೆ ನಿಮಗೆ ಗೊತ್ತಾ? ಸಾಕಷ್ಟು ಮಂದಿಗೆ ಶರಾವತಿ ನದಿಯ ಉಗಮ ಸ್ಥಾನದ ಬಗ್ಗೆ ಗೊತ್ತಿರಲಿಕ್ಕಿಲ್ಲ. ಅದಕ್ಕೂ ಒಂದು ಪೌರಾಣಿಕ ಕಥೆ ಇದೆ.

ಅಂಬುತೀರ್ಥ
ಶರಾವತಿ ನದಿಯ ಉಗಮಸ್ಥಾನವೇ ಶಿವಮೊಗ್ಗದಲ್ಲಿರುವ ಅಂಬುತೀರ್ಥ. ಇದು ಶಿವಮೊಗ್ಗದ ತೀರ್ಥಹಳ್ಳಿಯಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಶರಾವತಿ ನದಿಯ ಮೂಲಸ್ಥಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಪೌರಾಣಿಕ ಕಥೆ
ರಾಮ, ಸೀತೆ ವನವಾಸದ ಸಂದರ್ಭದಲ್ಲಿ ಸೀತೆಗೆ ಬಾಯಾರಿಕೆಯಾಗುತ್ತದೆ. ರಾಮನು ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ. ಸಂಸ್ಕೃತದಲ್ಲಿ ಅಂಬು ಅಂದರೆ ಬಾಣ ಎಂದರ್ಥ.

ಶರದಿಂದ ಹುಟ್ಟಿದ್ದು ಶರಾವತಿ
ಶ್ರೀರಾಮನ ಶರದಿಂದ ಅಂದರೆ ಬಾಣದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ. ಇಲ್ಲಿನ ಶಿವಲಿಂಗವನ್ನು ರಾಮ ಸೀತೆಯರು ಪೂಜಿಸುತ್ತಿದ್ದರು ಎನ್ನಲಾಗುತ್ತದೆ.

ಲಿಂಗದ ಕೆಳಗಿನಿಂತ ಉದ್ಭವವಾಗುತ್ತದೆ
ಅಲ್ಲೊಂದು ಸಣ್ಣ ಶಿವಮಂದಿರವಿದೆ. ಲಿಂಗದ ಕೆಳಗಿನಿಂದ ಈ ನೀರು ಉದ್ಭವವಾಗುತ್ತದೆ. ಇಲ್ಲಿ ದುರ್ಗಾಪರಮೇಶ್ವರಿಯ ಮಂದಿವೂ ಇದೆ. ಬೆಟ್ಟದಲ್ಲಿ ರಾಮನ ಮಂದಿರವಿದೆ ಅಲ್ಲೇ ಬಳಿಯಲ್ಲಿ ಒಂದು ನೀರಿನ ಕುಂಡವಿದೆ. ಇಲ್ಲಿ ನೀರು ವರ್ಷವಿಡೀ ಒಂದೇ ಲೆವೆಲ್ನಲ್ಲಿ ಇರುತ್ತದೆ. ಯಾವತ್ತೂ ಕಡಿಮೆಯಾಗೋದಿಲ್ಲ. ಮಳೆಗಾಲದಲ್ಲಿ ಮಾತ್ರ ನೀರು ಹೆಚ್ಚಾಗುತ್ತದೆ.


Click it and Unblock the Notifications

















