ಮಹಾಬಲೇಶ್ವರ ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ಕರ್ನಾಟಕದಲ್ಲಿ ಹೇಗೆ ಕೊಡಗು ಮಹತ್ವ ಪಡೆದಿದೆಯೋ ಅದೇ ರೀತಿಯಾಗಿ ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರ ಸಾಕಷ್ಟು ಪ್ರವಾಸಿ ವಿಶೇಷತೆ ಪಡೆದಿರುವ ಗಿರಿಧಾಮವಾಗಿದೆ.
ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಎಲ್ಲರೂ ಗಿರಿಧಾಮದಂತಹ ತಾಣಗಳಿಗೆ ಹೊರಡಲು ಇಷ್ಟಪಡುತ್ತಾರಾದರೂ ಮಹಾಬಲೇಶ್ವರಕ್ಕೆ ವರ್ಷದ ಎಲ್ಲ ಸಮಯದಲ್ಲೂ ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ವರ್ಣನಾತೀತ ಪ್ರಕೃತಿ ಸೌಂದರ್ಯ, ಅದ್ಭುತ ವಾತಾವರಣ ಹಾಗೂ ಇದಕ್ಕಿರುವ ಧಾರ್ಮಿಕ ಮಹತ್ವ.
ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಈ ಪ್ರದೇಶವು ನವ ವಧುವಿನಂತಹ ಕಳೆಯನ್ನೆ ಪಡೆಯುತ್ತದೆ. ತಂಪಾದ ವಾತಾವರಣ, ಚುಮು ಚುಮು ಬೀಳುವ ಮಳೆ, ಮಂಜಿನಿಂದಾವೃತವಾದ ಕಣಿವೆಗಳು, ಎಲ್ಲೆಡೆ ದಟ್ಟ ಹಸಿರು ಹಾಗೂ ಅಲ್ಲಲ್ಲಿ ರೂಪಗೊಂಡ ನಯನಮನೋಹರ ಜಲಪಾತಗಳು ನೋಡುಗರ ಹೃದಯ ಕದಿಯುತ್ತದೆ.
ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ನಿತ್ಯ ಹರಿದ್ವರ್ಣದ ಕಾಡಿನಲ್ಲಿ ಗಂಭೀರ ಹಾಗೂ ಅಷ್ಟೆ ಪ್ರಶಾಂತವಾಗಿ ನೆಲೆಸಿರುವ ಮಹಾಬಲೇಶ್ವರ ಪುಣೆ ನಗರದಿಂದ ಸುಮಾರು 120 ಕಿ.ಮೀ ಹಾಗೂ ಮುಂಬೈನಿಂದ 250 ಕಿ.ಮೀ ಗಳಷ್ಟು ದೂರವಿದ್ದು ಈ ಎರಡೂ ನಗರಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮಹಾಬಲೇಶ್ವರಕ್ಕೆ ತೆರಳಲು ದೊರೆಯುತ್ತವೆ.

ಮಹಾಬಲೇಶ್ವರ ಏಕೆ ಜನಪ್ರೀಯ?
ಮಹಾಬಲೇಶ್ವರ ಮುಲತಃ ಎರಡು ದೇವಾಲಯಗಳಿಗೆ ಪ್ರಸಿದ್ಧವಾಗಿದೆ ಒಂದು ಪುರಾತನ ಮಹಾಬಲೇಶ್ವರ ದೇವಸ್ಥಾನವಾದರೆ ಇನ್ನೊಂದು ಕೃಷ್ಣ ಅಥವಾ ಪಂಚಗಂಗಾ ದೇವಾಲಯ.
ಚಿತ್ರಕೃಪೆ: Nishanth Jois

ಮಹಾಬಲೇಶ್ವರ ಏಕೆ ಜನಪ್ರೀಯ?
ಸ್ಥಳ ಪುರಾಣದಂತೆ, ಈ ಸ್ಥಳಕ್ಕೆ ಮಹಾಬಲೇಶ್ವರ ಎಂಬ ಹೆಸರು ಮಹಾಬಲಿ ಎಂದೂ ಕರೆಯಲಾಗುವ ಶಿವನಿಂದ ಬಂದಿದೆ ಎನ್ನಲಾಗಿದೆ. ಈಶ್ವರನು ಇಲ್ಲಿ ಮೂರು ಮುಖಗಳ ತ್ರಿಗುಣಾತ್ಮಕ ರುಪದ ರುದ್ರಾಕ್ಷನಾಗಿ ನೆಲೆಸಿರುವ ಕಾರಣ ಇದಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಚಿತ್ರಕೃಪೆ: Ankur P

ಮಹಾಬಲೇಶ್ವರ ಏಕೆ ಜನಪ್ರೀಯ?
ಆದರೆ ಇನ್ನೂ ಕೆಲವರು ಹೇಳುವ ಪ್ರಕಾರ, ಇಲ್ಲಿ ಸ್ಥಳೀಯವಾಗಿ ವಾಸಿಸುತ್ತಿದ್ದ ಮಾವಲ ಜನಾಂಗದವರ ಆರಾಧ್ಯ ದೈವ ಶಿವನ ರೂಪಿಯಾದ ಮಾಮಲೇಶ್ವರನಿಂದ ಇದಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಮರಾಠಿಯಲ್ಲಿ ಇದನ್ನು ಮಹಾಬಳೇಶ್ವರ ಎಂತಲೂ ಕರೆಯುತ್ತಾರೆ.
ಚಿತ್ರಕೃಪೆ: jalinder jag

ಮಹಾಬಲೇಶ್ವರ ಏಕೆ ಜನಪ್ರೀಯ?
ಮಹಾಬಲೇಶ್ವರದ ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ಒಟ್ಟು ಐದು ನದಿಗಳ ಉಗಮ ಸ್ಥಾನವಿದೆ ಎಂಬುದು. ಹೌದು ಇಲ್ಲಿ ವೆನ್ನಾ, ಸಾವಿತ್ರಿ, ಗಾಯಿತ್ರಿ, ಕೃಷ್ಣಾ ಹಾಗೂ ಕೊಯ್ನಾ ನದಿಗಳು ಉಗಮಗೊಂಡು ಹರಿಯುತ್ತವೆ. ಹೀಗಾಗಿಯೂ ಈ ಸ್ಥಳ ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿದೆ. ಕೃಷ್ಣಾ ಕಣಿವೆ ಪ್ರದೇಶ.
ಚಿತ್ರಕೃಪೆ: Ankur P

ಮಹಾಬಲೇಶ್ವರ ಏಕೆ ಜನಪ್ರೀಯ?
ಅಲ್ಲದೆ ಇಲ್ಲಿ ಪ್ರೇಕ್ಷಣೀಯ ಸ್ಥಳಗಳೂ ಸಹ ಸಾಕಷ್ಟಿರುವುದರಿಂದ ಇದೊಂದು ಪರಿಪೂರ್ಣ, ಪ್ರಾಕೃತಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣವಾಗಿದ್ದು ಕುಟುಂಬದೊಂದಿಗೆ ಕಲೆತು ಮಾಡಬಹುದಾದ ಉತ್ತಮ ಪ್ರವಾಸಿ ತಾಣವಾಗಿ ಎಲ್ಲರ ಗಮನ ಸೆಳೆಯುತ್ತದೆ.
ಚಿತ್ರಕೃಪೆ: Nishanth Jois

ಮಹಾಬಲೇಶ್ವರ ಏಕೆ ಜನಪ್ರೀಯ?
ಅಲ್ಲದೆ ಈ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಕಥೆಯೂ ಸಹ ವಿಶಿಷ್ಟವಾಗಿದೆ. ಒಂದೊಮ್ಮೆ ಬ್ರಹ್ಮ ದೇವರು ವಿಷ್ಣು ಹಾಗೂ ಶಿವನೊಡನೆ ಕಲೆತು ಯಜ್ಞವೊಂದನ್ನು ನಡೆಸುತ್ತಿದ್ದರು. ಈ ಯಜ್ಞಕ್ಕೆ ಬ್ರಹ್ಮನ ಪತ್ನಿಯ ಉಪಸ್ಥಿತಿ ಅವಶ್ಯವಾಗಿತ್ತು. ಆದರೆ ಬ್ರಹ್ಮನು ತನ್ನ ಮಡದಿ ಸಾವಿತ್ರಿ ದೇವಿಗೆ ಇದರ ಕುರಿತು ತಿಳಿಸಲು ಮರೆತಿದ್ದನಂತೆ.
ಚಿತ್ರಕೃಪೆ: Nishanth Jois

ಮಹಾಬಲೇಶ್ವರ ಏಕೆ ಜನಪ್ರೀಯ?
ಹೀಗಾಗಿ ತರಾತುರಿಯಲ್ಲಿ ಅಲ್ಲಿಯೆ ಸ್ಥಳೀಯವಾಗಿ ಗಾಯಿತ್ರಿ ಎಂಬ ಕನ್ಯಾಮಣಿಯನ್ನು ಬ್ರಹ್ಮನು ವಿವಾಹವಾಗಿ ಯಜ್ಞವನ್ನು ಪೂರ್ಣಗೊಳಿಸಲಾರಂಭಿಸಿದ. ಇದನ್ನರಿತ ಸಾವಿತ್ರಿ ಅಲ್ಲಿಗೆ ಬಂದು ಕೋಪದಿಂದ ಶಿವ, ವಿಷ್ಣು ಹಾಗೂ ಬ್ರಹ್ಮನನ್ನು ಶಪಿಸುತ್ತ ಅವರನ್ನು ನೀರಿನ ಮೂಲಗಳನ್ನಾಗಿ ಮಾಡಿದಳು.
ಚಿತ್ರಕೃಪೆ: Karthik Easvur

ಮಹಾಬಲೇಶ್ವರ ಏಕೆ ಜನಪ್ರೀಯ?
ಅಲ್ಲದೆ ಈ ಒಂದು ಕೃತ್ಯದಿಂದ ಬಾಧಿತಳಾಗಿ ತಾನೂ ಸಹ ಒಂದು ನೀರಿನ ಮೂಲವಾಗಿ ರೂಪಗೊಂಡಳು. ಹೀಗಾಗಿ ಸಾವಿತ್ರಿ ಸಾವಿತ್ರಿಯಾಗಿ, ಗಾಯಿತ್ರಿ ಗಾಯಿತ್ರಿಯಾಗಿ, ಬ್ರಹ್ಮ ವೆನ್ನಾ ನದಿಯಾಗಿ, ವಿಷ್ಣು ಕೃಷ್ಣಾ ನದಿಯಾಗಿ ಹಾಗೂ ಕೊನೆಯದಾಗಿ ಶಿವ ಕೊಯ್ನಾ ನದಿಯಾಗಿ ಇಲ್ಲಿಯೆ ಉಗಮಗೊಂಡು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿ ಮುಂದೆ ಮತ್ತೆ ಕೃಷ್ಣಾ ನದಿಯಲ್ಲೆ ಸಮಾಗಮಗೊಳ್ಳುತ್ತಾರೆ. ವೆನ್ನಾ ಕೆರೆ.
ಚಿತ್ರಕೃಪೆ: Rdglobetrekker

ಮಹಾಬಲೇಶ್ವರ ಏಕೆ ಜನಪ್ರೀಯ?
ಮಹಾಬಲೇಶ್ವರ ದೇವಾಲಯವೊಂದರಲ್ಲಿ ಆಕಳ ಮುಖದ ಪ್ರತಿಮೆಯ ಬಾಯಿಯಿಂದ ನೀರು ಜಿನುಗುವುದನ್ನು ಇಂದಿಗೂ ನೋಡಬಹುದು ಹಾಗೂ ಇದೆ ಜಲವೆ ನದಿಯ ಮೂಲವೆನ್ನಲಾಗುತ್ತದೆ. ಇದನ್ನೆ ಪಂಚಗಂಗಾ ದೇವಾಲಯ ಎನ್ನಲಾಗುತ್ತದೆ. ಅಂದರೆ ಐದು ನದಿಗಳ ಮೂಲ ಸ್ಥಾನ ಇದಾಗಿದೆ.
ಚಿತ್ರಕೃಪೆ: Karthik Easvur

ಮಹಾಬಲೇಶ್ವರ ಏಕೆ ಜನಪ್ರೀಯ?
ಬ್ರಿಟೀಷ್ ರಾಜ್ ಆಡಳಿತವಿದ್ದ ಸಮಯದಲ್ಲಿ ಬ್ರಿಟೀಷರಿಗೆ ಬೇಸಿಗೆಯ ರಾಜಧಾನಿಯಾಗಿದ್ದ ಮಹಾಬಲೇಶ್ವರದಲ್ಲಿ ಸಾಕಷ್ಟು ಇತರೆ ಪ್ರೇಕ್ಷಣೀಯ ಸ್ಥಳಗಳನ್ನು ಸಹ ನೋಡಬಹುದಾಗಿದೆ. ಹಳೆಯ ಮಹಾಬಲೇಶ್ವರ ಒಂದು ಸುಂದರ ಸ್ಥಳವಾಗಿದ್ದು ಮಹಾಬಲೇಶ್ವರದಿಂದ ಸುಮಾರು ಏಳು ಕಿ.ಮೀ ದೂರವಿದೆ. ಇಲ್ಲಿ ಮಹಾಬಲೇಶ್ವರನ ದೇವಾಲಯವಿದೆ.
ಚಿತ್ರಕೃಪೆ: Vikas Rana

ಮಹಾಬಲೇಶ್ವರ ಏಕೆ ಜನಪ್ರೀಯ?
ಇಲ್ಲಿ ಸಾಕಷ್ಟು ವೀಕ್ಷಣಾ ಕೇಂದ್ರಗಳು ಹಾಗೂ ಪುರಾತನ ದೇವಾಲಯಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಪಂಚಗಂಗಾ ದೇವಾಲಯ ಸುಮಾರು 4500 ವರ್ಷಗಳಷ್ಟು ಪುರಾತನವಾದ ದೇವಾಲಯ ಎನ್ನಲಾಗುತ್ತದೆ.
ಚಿತ್ರಕೃಪೆ: Vikas Rana

ಮಹಾಬಲೇಶ್ವರ ಏಕೆ ಜನಪ್ರೀಯ?
ಇನ್ನೂ ಕೆಲ ಪಂಡಿತರು ಹೇಳುವಂತೆ, ಪಂಚಗಂಗಾ ಸದಾ ಹರಿಯುವ ಐದು ನದಿಗಳ ಮೂಲ ಸ್ಥಾನವಾಗಿದ್ದರೂ ಸಹ ಸರಸ್ವತಿ ಮತ್ತು ಭಾಗೀರತಿ ನದಿಗಳೂ ಸಹ ಇಲ್ಲಿ ನಿರ್ದಿಷ್ಟ ಸಮಯಕ್ಕೆ ಜಿನುಗುತ್ತವಂತೆ. ಭಾಗೀರತಿ ಪ್ರತಿ 60 ವರ್ಷಕ್ಕೆ ಕಂಡರೆ, ಸರಸ್ವತಿ 12 ವರ್ಷಕ್ಕೆ ಕಾಣುತ್ತದಂತೆ.
ಚಿತ್ರಕೃಪೆ: Nishanth Jois

ಮಹಾಬಲೇಶ್ವರ ಏಕೆ ಜನಪ್ರೀಯ?
ಮರಾಠಿ ಕ್ಯಾಲೆಂಡರಿನ ಅನ್ವಯವಾಗಿ ಪಂಡಿತರು ಲೆಕ್ಕ ಹಾಕಿರುವಂತೆ ಭಾಗೀರತಿಯು 2034 ರಲ್ಲಿ ಹಾಗೂ ಸರಸ್ವತಿಯು 2016 ಶ್ರಾವಣ ಮಾಸದಲ್ಲಿ ಕಂಡುಬರುತ್ತದೆಂದು ಹೇಳಿದ್ದಾರಂತೆ!
ಚಿತ್ರಕೃಪೆ: niks49

ಮಹಾಬಲೇಶ್ವರ ಏಕೆ ಜನಪ್ರೀಯ?
ಕೃಷ್ಣಾಬಾಯಿ ದೇವಾಲಯ : ಪಂಚಗಂಗಾ ದೇವಾಲಯದ ಹಿಂಬದಿಯಲ್ಲಿ ಸ್ವಲ್ಪ ಏರುತ್ತ ಸಾಗಿದರೆ ತುದಿಯಲ್ಲಿ ದೇಗುಲದ ಪುರಾತನ ನಿರ್ಮಾಣವೊಂದಿದ್ದು, ಇದನ್ನೆ ಕೃಷ್ಣಾಬಾಯಿ ದೇವಾಲಯ ಎಂದು ಕರೆಯುತ್ತಾರೆ ಹಾಗೂ ಕೃಷ್ಣಾ ನದಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಕೃಷ್ಣಾ ಕಣಿವೆಗೆ ಅಭಿಮುಖವಾಗಿ ಈ ದೇವಾಲಯವಿದೆ.
ಚಿತ್ರಕೃಪೆ: Karthik Easvur

ಮಹಾಬಲೇಶ್ವರ ಏಕೆ ಜನಪ್ರೀಯ?
ಥ್ರೀ ಮಂಕಿ ಪಾಯಿಂಟ್ : ಮಹಾಬಲೇಶ್ವರದಲ್ಲಿರುವ ಒಂದು ಕೌತುಕಮಯ ಸ್ಥಳ. ಒಂದು ಬೃಹತ್ ಬಂಡೆಯಲ್ಲಿ ಮೂರು ಮಂಗಗಳು ಅಕ್ಕ ಪಕ್ಕದಲ್ಲಿ ಕುಳಿತಿರುವಂತೆ ಗೋಚರಿಸುವುದರಿಂದ ಇದಕ್ಕೆ ಮೂರು ಮಂಗಗಳ ಸ್ಥಳ ಎಂದು ಕರೆಯುತ್ತಾರೆ. ಇದು ಸಾಂಕೇತಿಕವಾಗಿ ಗಾಂಧೀಜಿಯ ಮೂರು ಮಂಗಗಳನ್ನು ನೆನಪಿಸುವಂತಿದೆ ಎಂದು ವಿನೋದಮಯವಾಗಿಯೂ ಹೇಳುತ್ತಾರೆ. ಸಾಂದರ್ಭಿಕ ಚಿತ್ರವಷ್ಟೆ!
ಚಿತ್ರಕೃಪೆ: Pramodkumartk

ಮಹಾಬಲೇಶ್ವರ ಏಕೆ ಜನಪ್ರೀಯ?
ಅರ್ಥರ್ ಸೀಟ್ : ಮಹಾಬಲೇಶ್ವರದಲ್ಲಿರುವ ಒಂದು ವೀಕ್ಷಣಾ ಕೇಂದ್ರ. ಬ್ರಿಟೀಷ ಅಧಿಕಾರಿ ಸರ್ ಅರ್ಥರ್ ಮಾಲೆಟ್ ಎಂಬುವವರು ಈ ಸ್ಥಳದಲ್ಲಿ ಕುಳಿತು ಸಾವಿತ್ರಿ ನದಿಯನ್ನು ಸದಾ ನೋಡುತ್ತಿದ್ದರು. ಏಕೆಂದರೆ ಆ ನದಿಯಲ್ಲಿ ನಡೆದ ಅಪಘಾತವೊಂದರಲ್ಲಿ ಅವರು ತನ್ನ ಮಡದಿ ಹಾಗೂ ಮಗನನ್ನು ಕಳೆದುಕೊಂಡಿದ್ದರು. ಹೀಗಾಗಿ ಈ ಕೇಂದ್ರಕ್ಕೆ ಅರ್ಥರ್ ಸೀಟ್ ಎಂದು ಕರೆಯುತ್ತಾರೆ.
ಚಿತ್ರಕೃಪೆ: Vikas Rana

ಮಹಾಬಲೇಶ್ವರ ಏಕೆ ಜನಪ್ರೀಯ?
ವೆನ್ನಾ ಕೆರೆ ಇಂದು ಮಹಾಬಲೇಶ್ವರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿದೆ. ಈ ಕೆರೆಯು ತನ್ನ ಸುತ್ತಲೂ ಸಾಕಷ್ಟು ಗಿಡ ಮರಗಳಿಂದ ಸುತ್ತುವರೆದಿದ್ದು ನಯಮನೋಹರ ಪ್ರಕೃತಿಯ ಸೊಬಗನ್ನು ಕರುಣಿಸುತ್ತದೆ.
ಚಿತ್ರಕೃಪೆ: Ganesh G

ಮಹಾಬಲೇಶ್ವರ ಏಕೆ ಜನಪ್ರೀಯ?
ಮಹಾಬಲೇಶ್ವರ ಧಾರ್ಮಿಕ ಹಾಗೂ ಹನಿಮೂನ್ ಪ್ರವಾಸಿ ಸ್ಥಳವಾಗಿಯೂ ಪ್ರಸಿದ್ಧಿ ಪಡೆದಿದೆ. ವೆನ್ನಾ ಕೆರೆಯ ಸುತ್ತಮುತ್ತಲಿನ ಪರಿಸರ ಹಾಗೂ ದೋಣಿ ವಿಹಾರಗಳು ನವದಂಪತಿಗಳಿಗೆ ಹೆಚ್ಚು ಮುದ ನೀಡುವಂತಿರುವುದು ವಿಶೇಷ.
ಚಿತ್ರಕೃಪೆ: Abdul Razzak

ಮಹಾಬಲೇಶ್ವರ ಏಕೆ ಜನಪ್ರೀಯ?
ಕೇಟ್'ಸ್ ಪಾಯಿಂಟ್ : ಇದು ಮಹಾಬಲೇಶ್ವರದಲ್ಲಿರುವ ಒಂದು ಸುಂದರ ವೀಕ್ಷಣಾ ಕೇಂದ್ರ. ಈ ವೀಕ್ಷಣಾ ಕೇಂದ್ರವು ಬಾಲಕ್ವಾಡಿ ಹಾಗೂ ಧೋಮ್ ಜಲಾಶಯಗಳ ಅದ್ಭುತ ನೋಟಗಳಿಗಾಗಿ ಪ್ರಸಿದ್ಧವಾಗಿದೆ.
ಚಿತ್ರಕೃಪೆ: Pauk

ಮಹಾಬಲೇಶ್ವರ ಏಕೆ ಜನಪ್ರೀಯ?
ವಿಲ್ಸನ್ ಪಾಯಿಂಟ್ : ಮಹಾಬಲೇಶ್ವರದಲ್ಲೆ ಅತಿ ಎತ್ತರದ ವೀಕ್ಷಣಾ ಕೇಂದ್ರ ಇದಾಗಿದೆ. ಇಲ್ಲಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತಗಳೆರಡರ ನೋಟಗಳನ್ನೂ ಕಾಣಬಹುದು. ಏಕೆಂದರೆ ಮಿಕ್ಕ ವೀಕ್ಷಣ ಕೇಂದ್ರಗಳಿಂದ ಇದು ಸಾಧ್ಯವಿಲ್ಲ. ಮಹಾಬಲೇಶ್ವರದ ಒಟ್ಟಾರೆ ನೋಟವನ್ನು ಎಲ್ಲ ದಿಕ್ಕಿನಿಂದಲೂ ಒದಗಿಸುತ್ತದೆ.
ಚಿತ್ರಕೃಪೆ: Ejaazali Khan

ಮಹಾಬಲೇಶ್ವರ ಏಕೆ ಜನಪ್ರೀಯ?
ನೀಡಲ್ ಪಾಯಿಂಟ್/ ಎಲಿಫಂಟ್ ಹೆಡ್ : ಇದೊಂದು ವಿಶಿಷ್ಟ ವೀಕ್ಷಣಾ ಕೇಂದ್ರವಾಗಿದೆ. ದೂರದಿಂದ ಒಂದು ನಿರ್ದಿಷ್ಟ ಕೋನದಲ್ಲಿ ಇದನ್ನು ನೋಡಿದಾಗ ಸೂಜಿ ಮನೆಯಂತಹ ಆಕಾರದಲ್ಲಿ ಇದು ಕಂಡುಬರುವುದರಿಂದ ಇದಕ್ಕೆ ನೀಡಲ್ ಪಾಯಿಂಟ್ ಅಥವಾ ಸೂಜಿ ಮನೆ ಕೇಂದ್ರ ಎಂದು ಕರೆಯುತ್ತಾರೆ.
ಚಿತ್ರಕೃಪೆ: Naiju.mathew

ಮಹಾಬಲೇಶ್ವರ ಏಕೆ ಜನಪ್ರೀಯ?
ಕೇವಲ ಸೂಜಿ ಮನೆಯಲ್ಲದೆ ಇದು ಬಹುತೇಕರಿಗೆ ಆನೆಯ ತಲೆ ಹಾಗೂ ಸೊಂಡಿಲಿನಂತೆ ಕಂಡುಬರುವುದರಿಂದ ಎಲಿಫಂಟ್ ಹೆಡ್ ಎಂದಾಗಿಯೂ ಇದನ್ನು ಕರೆಯುತ್ತಾರೆ.
ಚಿತ್ರಕೃಪೆ: The.sgr

ಮಹಾಬಲೇಶ್ವರ ಏಕೆ ಜನಪ್ರೀಯ?
ಇನ್ನೂ ಮಹಾಬಲೇಶ್ವರಕ್ಕೆ ಹತ್ತಿರದಲ್ಲಿರುವ ಎರಡು ಅದ್ಭುತ ತಾಣಗಳಿಗೆ ಚಾರಣವೂ ಸಹ ಮಾಡಬಹುದಾಗಿದೆ. ಸಹ್ಯಾದ್ರಿಯ ಬೆಟ್ಟ ಪರ್ವತಗಳ ನಡುವೆ, ಮೊನಚಾದ, ಕಡಿದಾಗ ಭೂಮಟ್ಟಗಳನ್ನು ಕ್ರಮಿಸುತ್ತ ಸಾಗುವುದೆ ಒಂದು ರೋಮಾಂಚನ ಅನುಭವ ನೀಡುತ್ತದೆ.
ಚಿತ್ರಕೃಪೆ: ସୁରଥ କୁମାର ପାଢ଼ୀ

ಮಹಾಬಲೇಶ್ವರ ಏಕೆ ಜನಪ್ರೀಯ?
ಲಿಂಗಮಾಲಾ ಮಹಾಬಲೇಶ್ವರದಿಂದ ಚಾರಣ ಮಾಡುತ್ತ ನೋಡಬಹುದಾದ ಆರು ನೂರು ಅಡಿಗಳಷ್ಟು ಎತ್ತರದ ಮನಮೋಹಕ ನೋಟ ನೀಡುವ ಅದ್ಭುತ ಜಲಪಾತವಾಗಿದೆ. ಇದರ ನೀರು ವೆನ್ನಾ ಕೆರೆಯಲ್ಲಿ ಸೇರುತ್ತದೆ.
ಚಿತ್ರಕೃಪೆ: wikimedia

ಮಹಾಬಲೇಶ್ವರ ಏಕೆ ಜನಪ್ರೀಯ?
ಮಹಾಬಲೇಶ್ವರವು ಸ್ಟ್ರಾವ್ ಬೆರಿ ಹಣ್ಣುಗಳ ಉತ್ಪಾದನೆಗೆ ದೇಶದಲ್ಲೆ ಅಗ್ರಗಣ್ಯ ಸ್ಥಾನದಲ್ಲಿದೆ. ಇಲ್ಲಿನ ಹಿತಕರವಾದ, ಕಲ್ಮಶರಹಿತ ವಾತಾವರಣವು ಈ ರೀತಿಯ ಹಣ್ಣುಗಳಿಗೆ ಅತಿ ಸೂಕ್ತವಾಗಿದೆ.
ಚಿತ್ರಕೃಪೆ: chirag_jog

ಮಹಾಬಲೇಶ್ವರ ಏಕೆ ಜನಪ್ರೀಯ?
ಕ್ರೀಮ್ ಕಾರ್ನರ್ ಮಹಾಬಲೇಶ್ವರದಲ್ಲಿರುವ ಅದ್ಭುತ ಉಪಹಾರಗೃಹವಾಗಿದೆ. ತಾಜಾ ಆಗಿ ಬೆಳೆದಿರುವ ವೈವಿಧ್ಯಮಯ ಹಣ್ಣುಗಳಿಂದ ತಯಾರಿಸಲಾಗುವ ಪಾನೀಯಗಳು, ಐಸ್ ಕ್ರೀಮ್ ಗಳಿಗಾಗಿ ಇದು ಸಾಕಷ್ಟು ಹೆಸರುವಾಸಿ. ಮಹಾಬಲೇಶ್ವರಕ್ಕೆ ಹೋದರೆ ಇಲ್ಲಿ ಭೇಟಿ ನೀಡದೆ ಬರಲೇಬಾರದು.
ಚಿತ್ರಕೃಪೆ: Ksunil87

ಮಹಾಬಲೇಶ್ವರ ಏಕೆ ಜನಪ್ರೀಯ?
ಇನ್ನೂ ಮಹಾಬಲೇಶ್ವರ ಪುಣೆ ನಗರದಿಂದ ಸುಮಾರು 120 ಕಿ.ಮೀ ಹಾಗೂ ಮುಂಬೈನಿಂದ 250 ಕಿ.ಮೀ ಗಳಷ್ಟು ದೂರವಿದ್ದು ಈ ಎರಡೂ ನಗರಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಮಹಾಬಲೇಶ್ವರಕ್ಕೆ ತೆರಳಲು ದೊರೆಯುತ್ತವೆ.
ಚಿತ್ರಕೃಪೆ: sudeep1106


Click it and Unblock the Notifications

















